Advertisement

ಈ ಎರಡು ರಾಶಿಯ ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರಲಿದೆ

10:05 AM Mar 16, 2020 | keerthan |

15-3-2020 ರಿಂದ 21-3-2020ರ ವರೆಗೆ

Advertisement

ಮೇಷ: ಈ ವಾರದಿಂದ ಶುಭಾಶುಭ ರೂಪವಾದ ಅಭಿವೃದ್ಧಿಯನು ಪಡೆಯಲಿದ್ದೀರಿ. ಆರ್ಥಿಕ ಸ್ಥಿತಿ ಉತ್ತಮವಿದ್ದರೂ ಆರ್ಥಿಕವಾಗಿ ಅತಿಯಾದ ಉದಾರತೆ ಬೇಡ. ಮುಖ್ಯವಾಗಿ ನಿಮ್ಮ ಪ್ರಗತಿಯ ಕಡೆ ಹೆಚ್ಚಿನ ಆದ್ಯತೆ ಕೊಡಿ. ಹಾಗೇ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬೇಕಾದೀತು. ಹಿರಿಯರ ಮಾರ್ಗದರ್ಶನ ಮುಂದಿನ ಮುನ್ನಡೆಗೆ ಸಾಧಕವಾಗಲಿದೆ. ಸಣ್ಣಪುಟ್ಟ ನಿರಾಸೆಗಳು ಸ್ವಾಭಾವಿಕ. ಎದೆಗುಂದದಿರಿ. ನಿಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಮುಂದುವರಿಯಿರಿ. ಸಾಂಸಾರಿಕವಾಗಿ ಸುಖ, ಸಹಕಾರಗಳು ಉತ್ತಮ.
ಶುಭವಾರ: ಮಂಗಳ, ಗುರು, ಶನಿವಾರ

ವೃಷಭ: ಹಿರಿಯರೊಡನೆ ಸಹನೆಯಿಂದ ವರ್ತಿಸಬೇಕಾಗುತ್ತದೆ. ಆಕಸ್ಮಿಕ ಧನ ವಿನಿಯೋಗದಿಂದ ನಷ್ಟವಾದೀತು. ಆರೋಗ್ಯದಲ್ಲಿ ಏರುಪೇರು ಕಂಡುಬಂದೀತು. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರ ನೆನಪಿರಲಿ. ನಿಮ್ಮ ವಿಶ್ವಾಸದ ದುರುಪಯೋಗ ವೃತ್ತಿರಂಗದಲ್ಲಿ ಚಲಾವಣೆಯಾಗಲಿದೆ. ಜಾಗ್ರತೆ ಇರಲಿ. ಆಗಾಗ ಸಂಚಾರಗಳು ತೋರಿಬಂದರೂ ಕಾರ್ಯಾನುಕೂಲಕ್ಕೆ ಸಾಧಕವಾಗಲಿದೆ. ಅವಿವಾಹಿತರು ವೈವಾಹಿಕ ವಿಚಾರದಲ್ಲಿ ಚಿಂತಿಸುವಂತಾದೀತು.
ಶುಭವಾರ: ಬುಧ, ಗುರು, ಶುಕ್ರವಾರ

ಮಿಥುನ: ನಿಮ್ಮ ಮೂಡ್‌ ಪದೇಪದೇ ಬದಲಾಗಬಹುದು. ಕೆಲವರಿಗೆ ನಿಮ್ಮ ವರ್ತನೆಯಿಂದ ಅಚ್ಚರಿಯಾಗಬಹುದು. ಆಪ್ತರ ಮೇಲೆ ವಿಶ್ವಾಸವಿಡಿರಿ. ಸಣ್ಣಪುಟ್ಟ ನಿರಾಸೆಗಳು ಆಗಾಗ ಒದಗಿಬಂದರೂ ಎದೆಗುಂದಬೇಡಿರಿ. ದೈವಾನುಗ್ರಹವು ನಿಮಗಿದ್ದು, ಯೋಗ್ಯತೆಗೆ ಸರಿಯಾದ ಸ್ಥಾನಮಾನ-ಗೌರವ ಸಿಗಲಿದೆ. ಜನಾಕರ್ಷಣೆಗಾಗಿ ಹರಸಾಹಸ ಪಡುವಿರಿ. ಆಗಾಗ ಸ್ವಾರ್ಥ ಮನೋಭಾವ, ಅಹಂ ಗೋಚರಕ್ಕೆ ಬಂದೀತು. ಹೊಗಳು ಭಟರ ಓಲೈಕೆ ಹಿತವೆನಿಸೀತು. ಆದರೆ ಅದು ಕ್ಷಣಿಕವೆಂದು ನಿಮಗೆ ತಿಳಿಯಲಿದೆ.
ಶುಭವಾರ: ಸೋಮ, ಗುರು, ಭಾನುವಾರ

ಕರ್ಕಾ: ಹೆಚ್ಚಿನ ಗ್ರಹಗಳ ಪ್ರತಿಕೂಲತೆಗಳಿಂದ ಮಾನಸಿಕ ಚಿಂತನೆಗಳ ತಾಕಲಾಟದಿಂದ ಸೊರಗುತ್ತೀರಿ. ಅಸಹನೆ ನಿಮ್ಮನ್ನು ಪೀಡಿಸಲಿದೆ. ತಾಳ್ಮೆ, ಸಮಾಧಾನ ಇಂದು ನಿಮಗೆ ಅತೀ ಅಗತ್ಯವಿದೆ. ಚಿಂತಿಸದಿರಿ. ಇದು ತಾತ್ಕಾಲಿಕ ಸ್ಥಿತಿ ಎನ್ನಬಹುದು. ವೃತ್ತಿರಂಗದಲ್ಲಿ ಕರ್ತವ್ಯಕ್ಕೆ ಆದ್ಯತೆ ಕೊಡಿರಿ. ಆರ್ಥಿಕವಾಗಿ ಧನಾಗಮನದಿಂದ ಸಮಾಧಾನವಿರುತ್ತದೆ. ಸಮತೋಲನವನ್ನು ಕಾಯ್ದುಕೊಳ್ಳಿರಿ. ಅವಿವಾಹಿತರಿಗೆ ಕಾಯುವ ಪ್ರಸಂಗವಿರುತ್ತದೆ. ಕೋರ್ಟು, ಕಚೇರಿ ಕಾರ್ಯದಲ್ಲಿ ಮಾನಹಾನಿಗೆ ಕಾರಣವಾಗದಂತೆ ಎಚ್ಚರವಿರಲಿ.
ಶುಭವಾರ: ಗುರು, ಶುಕ್ರ, ಶನಿವಾರ

Advertisement

ಸಿಂಹ: ಆರ್ಥಿಕವಾಗಿ ಕಾಲಮಿತಿಯನ್ನು ಸರಿಯಾಗಿ ಬಳಸಿಕೊಂಡರೆ ಸಾಕಷ್ಟು ಉಳಿತಾಯದಿಂದ ಹಣ ಕ್ರೋಢೀಕರಿಸುತ್ತೀರಿ. ದೈವಾನುಗ್ರಹ ನಿಮ್ಮ ಪರವಾಗಿದೆ. ಸಂಪತ್ತು ವೃದ್ಧಿಸುವುದು. ದೂರವಾದ ಆಪ್ತರ ಸಮಾಗಮದಿಂದ ನೆಮ್ಮದಿ, ಸಮಾಧಾನ ಸಿಗಲಿದೆ. ಜೀವನವೆಂಬುವುದು ಅನುಭವ. ಅದನ್ನು ವಿಸ್ತಾರಗೊಳಿಸುತ್ತ ಸಾಗಬೇಕು. ಕಠಿಣ ಪ್ರಯತ್ನ, ಆತ್ಮವಿಶ್ವಾಸದಿಂದ ಗುರಿಯನ್ನು ಸಾಧಿಸಲು ಶಕ್ತರಾಗುವಿರಿ. ಪ್ರವಾಸ ಯೋಗ, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿಶೇಷ ಯಶಸ್ಸು ತಂದುಕೊಡಲಿದೆ.
ಶುಭವಾರ: ಸೋಮ, ಶುಕ್ರ, ಶನಿವಾರ

ಕನ್ಯಾ: ಆಗಾಗ ಮಾನಸಿಕ ಅಸ್ಥಿರತೆಯಿಂದ ಏಕಾಗ್ರತೆ ದೂರವಾಗುತ್ತದೆ. ಮನಸ್ಸು ಕೊರೆಯುವ ಪ್ರಸಂಗದಿಂದಾಗಿ ಮಾನಸಿಕ ವಿಶ್ರಾಂತಿಯುಅಗತ್ಯವಿದೆ. ಆಪ್ತರಿಂದ ದೂರವಾದ ಭಾವನೆಗಳು ಕಾಡಬಹುದು. ಸಂಬಂಧಗಳು ಉಸಿರುಗಟ್ಟಿಸುವಂತೆ ಅನಿಸಬಹುದು. ಮುಖ್ಯವಾಗಿ ಪ್ರಮುಖ ವಿಷಯಗಳಿಂದ ಮನಸ್ಸನ್ನು ವಿಮುಖಗೊಳಿಸದಿರಿ. ವಿದ್ಯಾರ್ಥಿಗಳಿಗೆ ಉದಾಸೀನತೆ, ಮರೆವು, ಅಭ್ಯಾಸದಲ್ಲಿ ಹಿನ್ನಡೆ ತಂದುಕೊಡಲಿದೆ. ಗಮನಹರಿಸಿರಿ. ಆರ್ಥಿಕವಾಗಿ ಬಂಧುಗಳಿಂದ ಧನಹಾನಿಯೋ, ಋಣಬಾಧೆಯೋ ಅನುಭವಕ್ಕೆ ಬರಲಿದೆ.
ಶುಭವಾರ: ಮಂಗಳ, ಗುರು, ಭಾನುವಾರ

ತುಲಾ: ದ್ರವ್ಯಾರ್ಜನೆಯಲ್ಲಿ ಅಭಿವೃದ್ಧಿ ತೋರಿಬಂದರೂ ಆಗಾಗ ಸ್ವಲ್ಪ ತೊಡಕುಗಳು ತೋರಿಬಂದಾವು. ಯುವತಿಯರಿಗೆ ವೈವಾಹಿಕ ಭಾಗ್ಯ ತೋರಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆಯಾಗಲಿದೆ. ಒಳ್ಳೆಯ ಫ‌ಲಗಳಿದ್ದರೂ ಚತುರ್ಥದ ಶನಿಯ ಪ್ರತಿಕೂಲತೆ ಅನುಭವವಾಗುತ್ತದೆ. ಮನೆಯಲ್ಲಿ ಸ್ತ್ರೀಯ ಸೂಕ್ತ ಸಲಹೆಗಳನ್ನು ಆಲಿಸಿರಿ. ಮಕ್ಕಳ ವಿಚಾರದಲ್ಲಿ ನಿರಾಸೆಗೊಳ್ಳುವಂಥ ಸಂದರ್ಭಗಳೇ ಜಾಸ್ತಿಯೆನ್ನಬಹುದು. ನ್ಯಾಯಾಲಯದ ಕೆಲಸಕಾರ್ಯಗಳು ಭರವಸೆ ಹುಟ್ಟಿಸಿದರೂ ವಿಳಂಬಗತಿಯಲ್ಲಿ ಸಮಸ್ಯೆಗಳಿರುತ್ತವೆ.
ಶುಭವಾರ: ಗುರು, ಶುಕ್ರ, ಭಾನುವಾರ

ವೃಶ್ಚಿಕ: ಆಗಾಗ ವೃತ್ತಿರಂಗದಲ್ಲಿ ಕೆಲಸದೊತ್ತಡವಿದ್ದರೂ ಆರ್ಥಿಕವಾಗಿ ಮುನ್ನಡೆ, ಅಭಿವೃದ್ಧಿದಾಯಕ ವಾತಾವರಣದಿಂದ ನೆಮ್ಮದಿ ಇರುತ್ತದೆ. ನಿರುದ್ಯೋಗಿಗಳಿಗೆ, ಉದ್ಯೋಗಸ್ಥರಿಗೆ ಅವಕಾಶಗಳು ಹುಡುಕಿಕೊಂಡು ಬಂದಾವು. ಧನಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿರಿ. ಹಾಗೇ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿರಿ. ಇದರಿಂದ ದಿನವಹಿ ಚಟುವಟಿಕೆಗಳಿಗೆ ಭಾರವಾಗದು. ಅವಿವಾಹಿತರಿಗೆ ಸಂಗಾತಿಯ ಆಯ್ಕೆಗೆ ಹಲವು ರೀತಿಯಲ್ಲಿ ಅವಕಾಶಗಳು ಒದಗಿಬರುತ್ತವೆ. ವ್ಯಾಪಾರ, ವ್ಯವಹಾರಗಳಲ್ಲಿ ಬೇಡಿಕೆಗಳು ಹೆಚ್ಚಲಿವೆ.
ಶುಭವಾರ: ಗುರು, ಶನಿ, ಭಾನುವಾರ

ಧನು: ವಿದ್ಯಾರ್ಥಿಗಳಿಗೆ ಪ್ರಯತ್ನಬಲದಲ್ಲಿ ಬೆಲೆ ಬರಲಾರದು. ಆಗಾಗ ಆಕಸ್ಮಿಕ ಧನಹಾನಿಗಳು ಆತಂಕಕ್ಕೆ ಕಾರಣವಾದೀತು. ಉದ್ಯೋಗಿಗಳಿಗೆ ವರ್ಗಾವಣೆಯ ಅಸುಖ, ನವವಿವಾಹಿತರಿಗೆ ವಿವಾಹದ ದಳ್ಳುರಿ, ವೃತ್ತಿರಂಗದಲ್ಲಿ ಸ್ಥಾನಮಾನ ಪ್ರಭಾವ ಕಮ್ಮಿಯಾಗಲಿದೆ. ಆಕಸ್ಮಿಕ ರೂಪದಲ್ಲಿ ಧನಹಾನಿ, ಶೇರು ವ್ಯವಹಾರದಲ್ಲಿ ಭಾರೀ ಕುಸಿತ, ಭೂ ವ್ಯವಹಾರದಲ್ಲಿ ಸೋಲು ಇತ್ಯಾದಿಗಳಿರುತ್ತದೆ. ಪ್ರವಾಸ ಬೇಡ. ಶ್ರೀದೇವರ ಅನುಗ್ರಹಕ್ಕಾಗಿ ಸತತ ಪ್ರಾರ್ಥನೆ ಅಗತ್ಯ. ಇದರಿಂದ ಕ್ಲೇಶಗಳೆಲ್ಲ ಮರೆಯಾಗಿ ಜೀವನದಲ್ಲಿ ಸುಖ, ಸಮಾಧಾನ ಲಭಿಸಲಿದೆ.
ಶುಭವಾರ: ಗುರು, ಶನಿ, ಭಾನುವಾರ

ಮಕರ: ವ್ಯಾಪಾರ, ವ್ಯವಹಾರಗಳಲ್ಲಿನ ಲೆಕ್ಕಾಚಾರಗಳನ್ನು ಸರಿಯಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳಬೇಕಾದೀತು. ಗ್ರಹಗತಿಗಳು ನೀವು ತಿಳಿದ ಮಟ್ಟಿಗೆ ಪರಿಹಾರಗೊಂಡಾವು. ಹಲವು ಕಾರ್ಯಗಳನ್ನು ಹಮ್ಮಿಕೊಂಡರೂ ಅರ್ಧದಲ್ಲೇ ಕೈಬಿಡುವ ಕಾಲವಿದು. ಸಾಲಿಗರ ಕಾಟವೂ ಜತೆಗೂಡೀತು. ವೈವಾಹಿಕ ಮಾತುಕತೆಗಳು ಚಾಡಿಮಾತಿನಿಂದ ತಪ್ಪಿಹೋದಾವು. ವಾರಾಂತ್ಯ ಅನಿರೀಕ್ಷಿತ ರೂಪದಲ್ಲಿ ಅಭಿವೃದ್ಧಿ ಗೋಚರಕ್ಕೆ ಬಂದರೂ ಸಮಾಧಾನವಿರದು.
ಶುಭವಾರ: ಗುರು, ಶನಿ, ಭಾನುವಾರ

ಕುಂಭ: ದಿನವಹಿ ಕರ್ತವ್ಯ ಅಭಾದಿತವೆನ್ನಬಹುದು. ನಿಮ್ಮ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನಹರಿಸಿರಿ. ಕೆಲವು ಸಮಯ ಸ್ವಾರ್ಥವೂ ಒಳ್ಳೆಯದು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಹಣ ಸಂಗ್ರಹಿಸಬಹುದಾಗಿದೆ. ಆದರೆ ನಿಯತ್ತು ಇರಲಿ. ಹಿಂದಿನ ಋಣಭಾರ ಮುಕ್ತಾಯವಾಗಲಿದೆ. ಕಾರ್ಯಕ್ಷೇತ್ರದಲ್ಲಿ ನೂತನ ವೃತ್ತಿಯಿಂದ ಕಾರ್ಯಾನುಕೂಲವಾಗಲಿದೆ. ತೋಟದ ಫ‌ಸಲು ವಿತರಣೆಯಿಂದ ಲಾಭವಿದೆ. ಮಹತ್ವಾಕಾಂಕ್ಷಿಗಳಾಗಿ ಮುಂದುವರಿಯಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಧಾರ್ಮಿಕ ಕೃತ್ಯಗಳು ತಡೆಯಿಲ್ಲದೆ ನಡೆದಾವು.
ಶುಭವಾರ: ಗುರು, ಶನಿ, ಭಾನುವಾರ.

ಮೀನ: ಸಾಂಸಾರಿಕವಾಗಿ ಸಂಬಂಧಗಳು ಇನ್ನೂ ಗಟ್ಟಿಯಾಗಲಿವೆ. ಅವಿವಾಹಿತರಿಗೆ ಹೊಂದಾಣಿಕೆಗೆ ಸಿದ್ಧರಾಗುವುದು ಅಗತ್ಯವಿದೆ. ವೃತ್ತಿರಂಗದಲ್ಲಿ ದಮನ ಪ್ರವೃತ್ತಿ ಅನುಭವಕ್ಕೆ ಬಂದೀತು. ಗೃಹನಿರ್ಮಾಣದಂತಹ ಮಹತ್ಕಾರ್ಯಗಳು ಸದ್ಯದಲ್ಲೇ ಚಾಲನೆಗೆ ಬರಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಜಾಗ್ರತೆ ವಹಿಸುವುದು ಅಗತ್ಯವಿದೆ.
ದುಡುಕಿ ಕೆಲಸ ಹಾಳುಗೈಯದಿರಿ.
ಶುಭವಾರ: ಶುಕ್ರ, ಶನಿ, ಭಾನುವಾರ

ಎನ್‌. ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next