Advertisement

ಸೋಂಕಿನ ವಲಸೆ ಭೀತಿ! ಗುಳೆ ಹೊರಟ ಜನರಿಂದ ಸೋಂಕು ಹೆಚ್ಚಳವಾಗುವ ಆತಂಕ

01:45 AM Jan 07, 2022 | Team Udayavani |

ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ ಸೇರಿದಂತೆ ಹಲವು ಕಠಿನ ಕ್ರಮ ಕೈಗೊಂಡಿರು ವಂತೆಯೇ ನಗರದಲ್ಲಿ ನೆಲೆ ಯೂರಿದ್ದ ಹಲವರು ಗುರುವಾರವೇ ಊರಿನತ್ತ ಮುಖ ಮಾಡಿದ್ದಾರೆ.

Advertisement

ಬೆಂಗಳೂರಿನ ರೈಲು ನಿಲ್ದಾಣಗಳು, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಕಾರ್ಮಿಕರು ಸಹಿತ ಸಾರ್ವಜನಿಕರು ಊರುಗಳತ್ತ ಹೋಗುತ್ತಿದ್ದ ದೃಶ್ಯ ಕಂಡು ಬಂದಿದೆ. ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಸೋಂಕು ಪ್ರಕರಣಗಳು ಕಡಿಮೆ ಇದ್ದು, ಬೆಂಗಳೂರಿನಲ್ಲಿ ಐದು ಸಾವಿರದ ಗಡಿ ದಾಟಿದೆ. ಇಂತಹ ಸಂದರ್ಭದಲ್ಲಿ ಇಲ್ಲಿಂದ ಊರುಗಳಿಗೆ ಹೋದವರು ಅಲ್ಲಿನವರಿಗೆ ಸೋಂಕು ಹರಡಿಸಬಹುದು ಎಂಬ ಆತಂಕ ಹೆಚ್ಚಾಗಿದೆ.

ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಒಮಿಕ್ರಾನ್‌ ಮತ್ತು ಕೊರೊನಾ ಪ್ರಕರಣ ಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಹೀಗಾಗಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಜತೆಗೆ ಶಾಲಾ ಕಾಲೇಜುಗಳಿಗೂ ಸರಕಾರ ರಜೆ ಘೋಷಿಸಿದೆ. ಕೆಲವು ಕಂಪೆನಿಗಳು ವರ್ಕ್‌ ಫ್ರಂ ಹೋಂ ಕೂಡ ಆರಂಭಿಸಿವೆ. ಹೀಗಾಗಿ ಅನೇಕರು ಸಿಲಿಕಾನ್‌ ಸಿಟಿಯಿಂದ ಸ್ವಗ್ರಾಮ ಗಳತ್ತ ಮರಳುತ್ತಿದ್ದಾರೆ. ಗುರುವಾರ ತುಮ ಕೂರು ರಸ್ತೆಯ ಟೋಲ್‌ಗೇಟ್‌ ಮತ್ತು ಮೈಸೂರು ರಸ್ತೆಯ ಟೋಲ್‌ಗೇಟ್‌ ಗಳಲ್ಲಿ ವಾಹನ ದಟ್ಟಣೆ ಕಂಡು ಬಂದಿದೆ.

ಈ ಹಿಂದಿನ ಲಾಕ್‌ಡೌನ್‌ ವೇಳೆ ಭೀತಿ ಗೊಳಗಾಗಿದ್ದ ಜನರು ಅಧಿಕ ಸಂಖ್ಯೆಯಲ್ಲಿ ಹಳ್ಳಿಗಳತ್ತ ತೆರಳಿದ್ದರಿಂದ ರಾಜ್ಯದ ಮೂಲೆ ಮೂಲೆಗಳಲ್ಲೂ ಕೊರೊನಾ
ಸ್ಫೋಟಗೊಂಡಿತ್ತು.

ಬೆಂಗಳೂರಲ್ಲೇ ಪಾಸಿಟಿವಿಟಿ ದರ ಶೇ. 7.5ಕ್ಕೇರಿಕೆ
ರಾಜ್ಯದಲ್ಲಿ ಗುರುವಾರ 5,031 ಮಂದಿಗೆ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ. 3.95ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22,173ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 4,324 ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 18,913ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 7.5ಕ್ಕೆ ಏರಿಕೆಯಾಗಿದೆ.

Advertisement

ದೇಶದಲ್ಲಿ ಒಂದೇ ದಿನ 90,928 ಕೇಸು
ದೇಶದಲ್ಲಿ ಬುಧವಾರದಿಂದ ಗುರುವಾರದ ಅವಧಿಯಲ್ಲಿ 90,928 ಹೊಸ ಸೋಂಕು ದೃಢಪಟ್ಟಿವೆ. 325 ಮಂದಿ ಅಸುನೀಗಿದ್ದಾರೆ. ಕಳೆದ ವರ್ಷದ ಜೂ. 10ರ ಅನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣ ಪತ್ತೆಯಾಗಿವೆ. 2021ರ ಜೂ. 10ರಂದು 91,702 ಪ್ರಕರಣ ದೃಢಪಟ್ಟಿದ್ದವು. ಡಿ. 31ರ ಬಳಿಕ ದೈನಂದಿನ ಪ್ರಕರಣಗಳು 5 ಪಟ್ಟು ಹೆಚ್ಚಳವಾಗಿದೆ. 24 ಗಂಟೆಗಳ ಅವಧಿಯಲ್ಲಿ 495 ಒಮಿಕ್ರಾನ್‌ ಸೋಂಕುಗಳು ದೃಢಪಟ್ಟಿವೆ.

ಇಂದು ರಾತ್ರಿಯಿಂದ ಹೊರಗೆ ಬಾರದಿರಿ!
ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 10ರಿಂದ ಆರಂಭಗೊಳ್ಳಲಿದ್ದು ಸೋಮ ವಾರ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ. ಹಾಲು, ಔಷಧ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಹೊರತುಪಡಿಸಿ ಇತರ ಎಲ್ಲ ಸೇವೆಗಳು ಸ್ಥಗಿತವಾಗಲಿವೆ. ಜನ ಸಂಚಾರಕ್ಕೂ ನಿರ್ಬಂಧವಿದ್ದು ತುರ್ತು ಸೇವೆ ಹಾಗೂ ಸರಕಾರಿ ಸೇವೆಗಳಿಗೆ ಹೋಗುವವರು ಗುರುತಿನ ಚೀಟಿ ತೋರಿಸಿ ಸಂಚರಿಸಬಹುದಾಗಿದೆ. ಬಸ್‌ ಹಾಗೂ ರೈಲು ಸಂಚಾರ ವ್ಯವಸ್ಥೆ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಇರಲಿದ್ದು, ಉಳಿದಂತೆ ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಇರಲಿದೆ. ಕರ್ಫ್ಯೂ ಅವಧಿಯಲ್ಲಿ ಪ್ರತಿಭಟನೆ ಸೇರಿದಂತೆ ಯಾವುದೇ ರೀತಿಯ ಯಾತ್ರೆಗಳಿಗೆ ಅವಕಾಶ ಇರುವುದಿಲ್ಲ. ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ. ಜತೆಗೆ ರೆಸಾರ್ಟ್‌, ವಸತಿ ಗೃಹಗಳನ್ನೂ ಬಂದ್‌ ಮಾಡಲು ಸೂಚನೆ ಹೊರಡಿಸಲಾಗಿದೆ.

ಮದ್ಯ ಮಾರಾಟ ನಿರ್ಬಂಧ
ಮದ್ಯ ಮಾರಾಟಕ್ಕೆ ಸಂಬಂಧಿಸಿ ಕಡ್ಡಾಯವಾಗಿ ಅನುಸರಿಬೇಕಾದ ಕ್ರಮಗಳ ಕುರಿತು ಸರಕಾರ ಆದೇಶ ಹೊರಡಿ ಸಿದ್ದು, ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿ ಮದ್ಯ ಮಾರಾಟದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ರಾಜ್ಯದೆಲ್ಲೆಡೆ ಒಂದೇ ರೀತಿಯ ಮಾರ್ಗಸೂಚಿಯಿದ್ದು, ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬದಲಾಯಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಹಲವು ಸಂಘ ಸಂಸ್ಥೆಗಳು ನೈಟ್‌ ಕರ್ಫ್ಯೂ ಸಡಿಲಿಕೆಗೆ ಬೇಡಿಕೆ ಇಟ್ಟಿವೆ. ಈ ಕುರಿತು ಸೋಂಕಿನ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡಲಾಗುವುದು.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next