Advertisement

ಹೆಲ್ಮೆಟ್‌ ಹಾಕಿದರಷ್ಟೇ ಸಿಗುತ್ತೆ ಪೆಟ್ರೋಲ್

01:08 PM Oct 12, 2019 | Team Udayavani |

ಗದಗ: ಮೋಟಾರು ವಾಹನ ದಂಡ ಕಾಯ್ದೆ ತಿದ್ದುಪಡಿ, ಪರಿಷ್ಕೃತ ದಂಡದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ಅದಕ್ಕಿಂತ ಮತ್ತೂಂದು ಹೆಜ್ಜೆ ಮುಂದಿಟ್ಟಿರುವ ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲೆಯಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಹಾಕಲು ಬೈಕ್‌ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿದೆ. ಈ ನಿಯಮ ಶುಕ್ರವಾರದಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಜಿಲ್ಲೆಯಾದ್ಯಂತ ಬಹುತೇಕ ಪೆಟ್ರೋಲ್‌ ಬಂಕ್‌ ಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಎಂಬ ನಿಮಯ ಜಾರಿಗೆ ಬಂದಿತ್ತು. ಜಿಲ್ಲೆಯಲ್ಲಿ ಎಚ್‌ಪಿ, ಭಾರತ, ಇಂಡಿಯನ್‌, ಎಸ್ಸಾರ್‌ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಮಾರು 73ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ನಗರ ಹಾಗೂ ಪಟ್ಟಣ ಪ್ರದೇಶದ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಯಿತು. ಎಂದಿನಂತೆ ಬೆಳಗ್ಗೆಯೇ ಎದ್ದು ಹೆಲ್ಮೆಟ್‌ ಇಲ್ಲದೇ ಪೆಟ್ರೋಲ್‌ ಬಂಕ್‌ಗೆ ಬಂದವರು ಶಿರಸ್ತ್ರಾಣಕ್ಕಾಗಿ ಮನೆಗೆ ಮರಳುವಂತಾಯಿತು.

ಜಿಲ್ಲಾ ಕೇಂದ್ರವಾದ ಗದಗ-ಬೇಟಗೇರಿ ಅವಳಿ ನಗರದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಪೆಟ್ರೋಲ್‌ ಬಂಕ್‌ಗಳಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿತ್ತು. ಶಿರಸ್ತ್ರಾಣ ಧರಿಸಿದವರ ದ್ವಿಚಕ್ರ ವಾಹನಗಳಿಗೆ ಮಾತ್ರ ಪೆಟ್ರೋಲ್‌ ಹಾಕಲಾಗುತ್ತಿತ್ತು. ಹೆಲ್ಮೆಟ್‌ ಇಲ್ಲದವರಿಗೆ ಪೆಟ್ರೋಲ್‌ ಹಾಕಲು ಸಿಬ್ಬಂದಿ ನಿರಾಕರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಅವಳಿ ನಗರದಲ್ಲಿ ಉತ್ತಮ ಪ್ರತಿಕ್ರಿಯೆ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಹೆಲ್ಮೆಟ್‌ ಇಲ್ಲದಿದ್ದರೆ ಬೈಕ್‌ಗಳಿಗೆ ಪೆಟ್ರೋಲ್‌ ಹಾಕುವುದಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಬೈಕ್‌ಗಳಿಗೆ ಪೆಟ್ರೋಲ್‌ ಹಾಕಿಸಬೇಕಿದ್ದವರು ಹೆಲ್ಮೆಟ್‌ ಧರಿಸಿ ವಾಹನವೇರುತ್ತಿದ್ದರು. ಈ ನಿಮಯಮದ ಬಗ್ಗೆ ಅರಿಯದವರು ಸಮೀಪದ ಪರಿಚಿತರ ಮನೆ ಹಾಗೂ ಗ್ಯಾರೇಜ್‌ಗಳಿಗೆ ತೆರಳಿ ಹೆಲ್ಮೆಟ್‌ ಧರಿಸಿಕೊಂಡು ಬಂದು ಪೆಟ್ರೋಲ್‌ ಹಾಕಿಸಿಕೊಳ್ಳುವಂತಾಯಿತು. ಈ ನಡುವೆ ನಗರದ ಗಾಂಧಿ ವೃತ್ತ ಹಾಗೂ ಮುಳಗುಂದ ನಾಕಾದಲ್ಲಿರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಬೆಳಗ್ಗೆಯೇ ಕೆಲ ಬೈಕ್‌ ಸವಾರರು ವಾಗ್ವಾದಕ್ಕಿಳಿದರು.

ಹೆಲ್ಮೆಟ್‌ ಇಲ್ಲವೆಂದರೆ ಪೆಟ್ರೋಲ್‌ ಹಾಕುವಂತಿಲ್ಲ ಎಂಬ ಕಾನೂನು ಎಲ್ಲಿದೆ ಎಂದು ಬಂಕ್‌ ಸಿಬ್ಬಂದಿಗೆ ಪ್ರಶ್ನಿಸಲು ಮುಂದಾದರು. ಆದರೆ, ಇದೇ ವೇಳೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ಮಧ್ಯ ಪ್ರವೇಶಿಸಿ, ಪೆಟ್ರೋಲ್‌ ಹಾಕಿಸಲು ಹೆಲ್ಮೆಟ್‌ ಅಗತ್ಯವಿಲ್ಲ. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್‌ನಿಂದಾಗುವ ಅನುಕೂಲವನ್ನು ಮನದಟ್ಟು ಮಾಡಿ ಹೆಲ್ಮೆಟ್‌ ಇಲ್ಲದಕ್ಕೆ ದಂಡ ತೆರುವಂತೆ ಸೂಚಿಸುತ್ತಿದ್ದಂತೆ ಸವಾರರು ಜಾಗ ಖಾಲಿ ಮಾಡಿದರು.

Advertisement

ಎಲ್ಲೆಡೆ ಖಾಕಿ ಪಡೆ: ಅವಳಿ ನಗರದ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿ ಹಾಗೂ ಓರ್ವ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೀಗಾಗಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಹಾಕಿಸಲು ಹೆಲ್ಮೆಟ್‌ ಕಡ್ಡಾಯವೆಂಬ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಜೊತೆಗೆ

ಪ್ಲಾಸ್ಟಿಕ್‌ ಬಾಟಲ್‌ಗ‌ಳಲ್ಲಿ ಪೆಟ್ರೋಲ್‌ ನೀಡಲು ನಿಕಾರಿಸುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದಿತು. ಹೀಗಾಗಿ ಅವಳಿ ನಗರದೆಲ್ಲೆಡೆ ಪೆಟ್ರೋಲ್‌ ಬಂಕ್‌ ಗಳಲ್ಲಿ ಹೆಲ್ಮೆಟ್‌ ಬೇಕೇ ಬೇಕು ಎಂಬ ವಿಷಯ ತೀವ್ರ ಚರ್ಚೆಯೊಂದಿಗೆ ಪೊಲೀಸ್‌ ಇಲಾಖೆಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಮಾತುಗಳು ಕೇಳಿ ಬಂದವು.

ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಓಡಿಸುವವರ ವಿರುದ್ಧ ದೂರು ದಾಖಲಿಸಿ, ದಂಡ ವಸೂಲಿ ಮಾಡಲಾಗುತ್ತಿದೆ. ದಂಡ ವಿಧಿಸುವುದಕ್ಕಿಂತ ಜನರಲ್ಲಿ ಅರಿವು ಮೂಡಿಸಬೇಕಿದೆ. ಸುರಕ್ಷಿತ ಪ್ರಯಾಣಕ್ಕಾಗಿ ಬೈಕ್‌ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಅದಕ್ಕಾಗಿ ಹೆಲ್ಮೆಟ್‌ ಧರಿಸದ ಸವಾರರ ದ್ವಿಚಕ್ರಗಳಿಗೆ ಪೆಟ್ರೋಲ್‌ ಹಾಕದಂತೆ ಸೂಚಿಸಿದ್ದೇವೆ. ಇದಕ್ಕೆ ಪೆಟ್ರೋಲ್‌ ಬಂಕ್‌ ಅಸೋಸಿಯೇಷನ್‌ ಸಹಕರಿಸಿದ್ದು, ಸಾರ್ವಜನಿಕರಿಂದಲೂ ಬೆಂಬಲ ಸಿಗುತ್ತಿದೆ. –ಶ್ರೀನಾಥ ಜೋಶಿ, ಎಸ್‌ಪಿ

ಗದುಗಿನಲ್ಲಿ ಕಟ್ಟುನಿಟ್ಟು, ಇತರೆಡೆ ಅಷ್ಟಕ್ಕಷ್ಟೇ :  ಬೈಕ್‌ಗಳಿಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿರಬೇಕೆಂಬ ನಿಯಮ ಅವಳಿ ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಇನ್ನುಳಿದಂತೆ ನರೇಗಲ್‌, ಲಕ್ಷ್ಮೇಶ್ವರ, ಶಿಹರಟ್ಟಿ ಹಾಗೂ ಮುಳಗುಂದ ಸೇರಿದಂತೆ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಈ ಮೂಲಕ ಎಲ್ಲೆಡೆ ಹೆಲ್ಮೆಟ್‌ ಕಡ್ಡಾಯವಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next