Advertisement

ನಿತೀಶ್‌ ಕುಮಾರ್‌ ರನ್ನು ಅಧಿಕಾರದಿಂದ ಇಳಿಸುತ್ತೇವೆ: ಚಿರಾಗ್‌ ಪಾಸ್ವಾನ್

09:12 AM Oct 08, 2020 | keerthan |

ನಾನು ರಾಜಕೀಯದಲ್ಲಿದ್ದೇನೆ ಮತ್ತು ನನಗೂ ಒಂದು ಕನಸಿದೆ. ಅದು, ಭಿನ್ನ ಬಿಹಾರದ ಕನಸು. ಮೊದಲೇ ಸ್ಪಷ್ಟ ಪಡಿಸುತ್ತೇನೆ- ಮುಂಬರುವ ಚುನಾವಣೆಯಲ್ಲಿ ಎನ್‌ಡಿಎ ದ ಪ್ರಮುಖ ಚಹರೆಯಾಗಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ವಿರುದ್ಧ ನನಗೆ ವ್ಯಕ್ತಿಗತ ಸಿಟ್ಟೇನೂ ಇಲ್ಲ. ಆದರೆ ಎನ್‌ಡಿಎ ಯಿಂದ ಬೇರೆಯಾಗಿ, ಪ್ರತ್ಯೇಕವಾಗಿ ಚುನಾವಣೆಯನ್ನು ಎದುರಿಸಬೇಕು ಎನ್ನುವ ನನ್ನ ಈ ನಿರ್ಧಾರದ ಹಿಂದೆ ಬಿಹಾರವು ಅಭಿವೃದ್ಧಿಯಾಗಬೇಕು ಎಂಬ ಆಸೆಯೇ ಕಾರಣ. ಈ ಗುರಿ ಈಡೇರಬೇಕಾದರೆ ಪ್ರಧಾನ ಮಂತ್ರಿ ಮೋದಿಯವರ ಆತ್ಮನಿರ್ಭರ ಭಾರತಕ್ಕೆ ಪೂರಕವಾಗುವಂಥ ಎರಡು ಯಂತ್ರಗಳ ಸರಕಾರ ಇರಬೇಕು. ಕೇಂದ್ರ ದಲ್ಲಿ ಬಿಜೆಪಿಯಿರುವಂತೆಯೇ, ರಾಜ್ಯದಲ್ಲೂ ಬಿಜೆಪಿಯ ನಾಯಕತ್ವ ಇರಬೇಕು.

Advertisement

2017ರಲ್ಲಿ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಒಕ್ಕೂಟಕ್ಕೆ ಹಿಂದಿರುಗಿದ ಅನಂತರ ಅವರ ಪ್ರದರ್ಶನ ಹೇಗಿದೆಯೋ ಪರೀಕ್ಷಿಸಿ ನೋಡಿ. ಅವರು ತಮ್ಮೊಳಗೇ ಮುಳುಗಿ ಹೋಗಿದ್ದಾರೆ ಮತ್ತು ಅವರ “ಸಾಥ್‌ ನಿಶ್ಚಯ್‌’ (ಉತ್ತಮ ಆಡಳಿತಕ್ಕಾಗಿ 7 ನಿರ್ಣಯಗಳು) ಯೋಜನೆಗಳು ಭ್ರಷ್ಟಾಚಾರದ ಕೂಪಗಳಾಗಿವೆ.

ಇವೆಲ್ಲ ತೆರಿಗೆದಾರರ ಹಣವನ್ನು ಲೂಟಿ ಮಾಡುವುದಕ್ಕಿಂತ ಕಡಿಮೆ ಕೆಲಸವೇನೂ ಅಲ್ಲ! ಕ್ಷಮಿಸಿ, ನಾನು ಈ ಅಜೆಂಡಾದ ಭಾಗವಾಗಲಾರೆ. ಕೇವಲ ನಮ್ಮನ್ನು ಪ್ರಚೋದಿಸುವ ಮತ್ತು ಅವಮಾನ ಮಾಡುವ ಏಕೈಕ ಉದ್ದೇಶದಿಂದ ಈಗ ನಿತೀಶ್‌ ಕುಮಾರ್‌ “ಸಾಥ್‌ ನಿಶ್ಚಯ್‌ ಪಾರ್ಟ್‌ 2′ ಅನಾವರಣಗೊಳಿಸಿದ್ದಾರೆ!

ಈ ಕಾರಣಕ್ಕಾಗಿಯೇ ಎನ್‌ಡಿಎ ದ ಆಡಳಿತ ವೈಖರಿಗೆ ಪೂರಕವಾಗುವಂಥ ಬಿಜೆಪಿ ನೇತೃತ್ವದ ಸರಕಾರ ಬಿಹಾರದಲ್ಲಿ ಬರಬೇಕು ಎನ್ನುವುದು ನನ್ನ ಗುರಿಯಾಗಿದೆ. ನಾವು ನಿತೀಶ್‌ ಸರಕಾರದ ಭಾಗ ಆಗಿದ್ದಾಗಲೂ ಸಹ, ಅವರು ಎಂದಿಗೂ ತಮ್ಮ ಮೈತ್ರಿ ಪಕ್ಷಗಳ ಜತೆ ಒಡನಾಟ ಇರಲಿಲ್ಲ. ಯಾವ ಸರಕಾರದಲ್ಲಿ ನಮ್ಮ ಅಜೆಂಡಾಗಳನ್ನು ಅವಗಣಿಸಲಾಗುತ್ತದೋ, ಅದರ ಭಾಗವಾಗಿ ಇರಲು ನಾನು ಬಯಸುವುದಿಲ್ಲ.

“ಬಿಹಾರ ಮೊದಲು, ಬಿಹಾರಿ ಮೊದಲು’ ಮಿಷನ್‌ ನಡಿಯಲ್ಲಿ ನಾವು ರಾಜ್ಯದ 4 ಲಕ್ಷಕ್ಕೂ ಅಧಿಕ ಜನರ ಅಭಿಪ್ರಾಯ ಸಂಗ್ರಹಿಸಿ ಎಲ್‌ಜೆಪಿಯ ಚುನಾವಣ ಪ್ರಣಾಳಿಕೆಯಲ್ಲಿ ಈ ಪ್ರತಿಯೊಂದು ಸಲಹೆಯನ್ನೂ ಸೇರಿಸಿದ್ದೇವೆ. ಬಿಹಾರದ ಕಾರ್ಮಿಕರು ಅನ್ಯ ರಾಜ್ಯಗಳಿಗೆ ವಲಸೆ ಹೋಗುತ್ತಿರುವುದು ಪ್ರಮುಖ ಸಮಸ್ಯೆ ಎಂದಾದರೆ, ದಯವಿಟ್ಟೂ ಒಮ್ಮೆ ನಮ್ಮ ಪ್ರಣಾಳಿಕೆಯನ್ನು ಗಮನಿಸಿ. ಈ ಸಮಸ್ಯೆಗೆ ನಾವು ಅದರಲ್ಲಿ ಪರಿಹಾರ ಸೂಚಿಸಿದ್ದೇವೆ. ಅಂತೆಯೇ ಅಭಿವೃದ್ಧಿಯ ಕೊರತೆ ಮತ್ತು ಕೈಗಾರಿಕೀಕರಣದ ಸಮಸ್ಯೆಯ ವಿಚಾರವಾಗಿರಲಿ, ನೆರೆ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳ ವಿಚಾರವಿರಲಿ ಅಥವಾ ಶಿಕ್ಷಣವನ್ನು ಸುಧಾರಿಸುವ ವಿಷಯದಲ್ಲಾಗಲಿ ನಮ್ಮ ಪ್ರಣಾಳಿಕೆಯಲ್ಲಿ ಪರಿಹಾರ ಸೂಚಿಸಿದ್ದೇವೆ. ಒಂದೊಮ್ಮೆ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲ ಸವಾಲುಗಳಿಗೂ ನಮ್ಮ ಬಳಿ ಆ್ಯಕ್ಷನ್‌ ಪ್ಲ್ರಾನ್‌ ಸಿದ್ಧವಿದೆ.

Advertisement

ನಿತೀಶ್‌ ಕುಮಾರ್‌ ಅವರ ಮಾನದಂಡ ಬಹಳ ಕೆಳಕ್ಕಿದೆ. ಅವರು ಕೆಟ್ಟ ಪರಿಸ್ಥಿತಿಯನ್ನು ಅತೀ ಕೆಟ್ಟ ಪರಿಸ್ಥಿತಿಗೆ ಹೋಲಿಕೆ ಮಾಡುತ್ತಾರೆ. ಈ ರೀತಿಯ ಆಡಳಿತವನ್ನು ನಾನು ಸಮರ್ಥಿಸಲಾರೆ.

ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಗೆ ಕೆಲಸ ಮಾಡುತ್ತಾರೋ ಗಮನಿಸಿ. ಆಡಳಿತದ ವಿಷಯದಲ್ಲಿ ಅವರು ನನ್ನ ರೋಲ್‌ ಮಾಡೆಲ್‌. ಮೋದಿಯವರ ಕಾರಣದಿಂದಾಗಿಯೇ ನಾವು 2014ರಿಂದ ಎನ್‌ ಡಿಎ ಜತೆಗಿದ್ದೇವೆ. ನಾವು ನಿತೀಶ್‌ ಕುಮಾರ್‌ರಂತೆ ಒಕ್ಕೂಟದಿಂದ ಹೊರನ ಡೆದು, ಪ್ರಧಾನಿಗೆ ಸವಾಲೆಸೆದವರಲ್ಲ. ನಿತೀಶ್‌ ಅಂದು ನಂಬಿಕೆ ದ್ರೋಹ ಎಸಗಿದ್ದರು. ಮುಂದೆ ಜನರೇ ಅವರಿಗೆ ಪಾಠ ಕಲಿಸಿದರು. ಕೊನೆಗೆ ನಿತೀಶ್‌ ಪ್ರಧಾನಿ ಮೋದಿಯವರ ಆಶ್ರಯ ಪಡೆಯಬೇಕಾಯಿತು ಎನ್ನುವುದು ಬೇರೆ ವಿಷಯ.

ಹೌದು, ನಾನು ಪ್ರಧಾನ ಮಂತ್ರಿ ಮೋದಿಯವರ ಜತೆಗೆ ಅಚಲವಾಗಿ ನಿಲ್ಲುತ್ತೇನೆ. ಆದರೆ ಪ್ರತ್ಯೇಕವಾಗಿ ಸ್ಪರ್ಧಿಸಬೇಕು ಎಂದು ಈಗ ನಾವು ತೆಗೆದುಕೊಂಡಿರುವ ನಿರ್ಧಾರವು ನನ್ನ ಜನರ ಶ್ರೇಯೋಭಿವೃದ್ಧಿ ಮಾಡಲು ಅವಕಾಶ ಕಲ್ಪಿಸುತ್ತದೆ. ಯಾರಾದರೂ “ಅದೇಕೆ ನೀವು ಬಿಹಾರದಲ್ಲಿ ಎನ್‌ ಡಿಎಯಿಂದ ದೂರವಾದಿರಿ?’ ಎಂದು ಪ್ರಶ್ನಿಸಿದಾಗ ನಾನು ಹೇಳುವುದಿಷ್ಟೆ- ನನ್ನ ಈ ನಿರ್ಧಾರಕ್ಕೆ ಸೀಟು ಹಂಚಿಕೆಯ ವಿಚಾರ ಕಾರಣವಾಗಲಿಲ್ಲ. ಸತ್ಯವೇನೆಂದರೆ, ಆ ವಿಷಯದ ಬಗ್ಗೆ ನಾವು ಹೆಚ್ಚು ಚರ್ಚೆಯನ್ನೂ ಮಾಡಿಲ್ಲ. ನನ್ನ ಪಕ್ಷದ ಕಾರ್ಯಕರ್ತರು, “ಬಿಹಾರ ಮತ್ತು ಬಿಹಾರಿಗಳ’ ಹಿತರಕ್ಷಣೆಯನ್ನು ಕಾಪಾಡಿ ಎಂದು ನನ್ನನ್ನು ಒತ್ತಾಯಿಸಿದರು. ಒಂದು ವಿಷಯದಲ್ಲಂತೂ ನಾನು ನಿಮಗೆ ಖಾತ್ರಿ ನೀಡುತ್ತೇನೆ- ನಿತೀಶ್‌ ಕುಮಾರ್‌ರನ್ನು ಅಧಿಕಾರದಿಂದ ಹೊರಹಾಕುತ್ತೇವೆ!

(ಕೃಪೆ- ಎನ್‌ಡಿಟಿವಿ)

ಅಂದು ಆರ್‌ ಜೆಡಿಯನ್ನು ಕೆಡವಿದ್ದರು ರಾಂ ವಿಲಾಸ್‌, ಅವರ ಮಗ ಚಿರಾಗ್‌ ಜೆಡಿಯುಗೆ ಪೆಟ್ಟು ಕೊಡಬಲ್ಲರಾ? 

ಅದು 2004. ಯುಪಿ ಎ-1 ಸರಕಾರ ಅಧಿಕಾರಕ್ಕೆ ಬಂದಾಗ ಮೈತ್ರಿಕೂಟದ ಭಾಗವಾಗಿದ್ದ ಲಾಲೂ ಪ್ರಸಾದ್‌ ಯಾದವ್‌ ತಮ್ಮನ್ನು ರೈಲ್ವೇ ಸಚಿವರಾಗಿಸಬೇಕೆಂದು ಪಟ್ಟು ಹಿಡಿದು ಆ ಖಾತೆಯನ್ನು ಪಡೆದರು. ಇದರಿಂದಾಗಿ ಆ ಖಾತೆಯ ಮೇಲೆ ಕಣ್ಣಿಟ್ಟಿದ್ದ ರಾಂ ವಿಲಾಸ್‌ ಪಾಸ್ವಾನ್‌ ರಿಗೆ ಲಾಲೂ ಮೇಲೆ ದ್ವೇಷ ಹುಟ್ಟಿ ಕೊಂಡಿತು. ಹೀಗಾಗಿ ಯುಪಿಎಯ ಭಾಗವಾಗಿದ್ದುಕೊಂಡೇ ಅವರು ಬಿಹಾರದಲ್ಲಿ

ಆರ್‌ಜೆಡಿಯಿಂದ ದೂರವಾಗಿಬಿಟ್ಟರು. 2005ರಲ್ಲಿ ನಡೆದ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಆರ್‌ಜೆಡಿ ಸ್ಪರ್ಧೆಗಿಳಿದಿದ್ದ 175 ಕ್ಷೇತ್ರಗಳಲ್ಲಿ ಪಾಸ್ವಾನ್‌ ತಮ್ಮ ಎಲ್‌ಜೆಪಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಇನ್ನೊಂದೆಡೆ ಲಾಲೂ ಆಡಳಿತವನ್ನು ಕಿತ್ತೆಸೆಯಬೇಕೆಂದು ಪ್ರಯತ್ನಿಸುತ್ತಿದ್ದ ನಿತೀಶ್‌ರ ಜೆಡಿಯು ಮತ್ತು ಬಿಜೆಪಿ ಮೈತ್ರಿಯು, ತಮ್ಮ ಜತೆ ಕೈಜೋಡಿಸಬೇಕೆಂದು ಪಾಸ್ವಾನ್‌ ರನ್ನು ವಿನಂತಿಸಿತು. ಆದರೆ ಪಾಸ್ವಾನ್‌ ಈ ಆಹ್ವಾನವನ್ನು ನಿರಾಕರಿಸಿಬಿಟ್ಟರು. ಚುನಾವಣೆಯಲ್ಲಿ ಅತಂತ್ರ ವಿಧಾನ ಸಭೆ ನಿರ್ಮಾಣವಾಯಿತು. ಆಗ ನಿತೀಶ್‌ ನೇತೃತ್ವದ ತಂಡ ಮತ್ತೆ ಪಾಸ್ವಾನ್‌ರ ಬೆಂಬಲ ಕೇಳಿತು. ಆದರೆ, ಪಾಸ್ವಾನ್‌ ಅವರು ಮುಸ್ಲಿಂ ಮುಖ್ಯಮಂತ್ರಿಯನ್ನು ಅಧಿಕಾರಕ್ಕೆ ತಂದರೆ ಮಾತ್ರ ತಾವು ಬಿಜೆಪಿ-ಜೆಡಿಯು ಮೈತ್ರಿ ಕೂಟವನ್ನು ಬೆಂಬಲಿಸುವುದಾಗಿ ಪಟ್ಟು ಹಿಡಿದರು. ಇದರಿಂದಾಗಿ ಯಾರಿಗೂ ಸರಕಾರ ರಚಿಸಲು ಆಗಲೇ ಇಲ್ಲ. ಆರು ತಿಂಗಳುಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಅನಂತರ ಮಧ್ಯಂತರ ಚುನಾವಣೆ ನಡೆದಾಗ ಪಾಸ್ವಾನ್‌ರ ಜತೆಗಿದ್ದ ಕೆಲವು ಪ್ರಮುಖ ನಾಯಕರು ನಿತೀಶ್‌ ಅವರಿಗೆ ಬೆಂಬಲ ನೀಡಿಬಿಟ್ಟರು! ನಿತೀಶ್‌ ಕುಮಾರ್‌ ಕುತಂತ್ರದಿಂದ ತಮ್ಮ ಪಕ್ಷವನ್ನು ಒಡೆದಿದ್ದಾರೆ ಎಂದು ಪಾಸ್ವಾನ್‌ ಆರೋಪಿಸಲಾರಂಭಿಸಿದರು. ಪರಿಣಾಮವಾಗಿ, ನಿತೀಶ್‌ ಹಾಗೂ ಪಾಸ್ವಾನ್‌ ನಡುವೆ ದೊಡ್ಡ ಬಿರುಕು ಮೂಡಿತು. ಮಧ್ಯಂತರ ಚುನಾವಣೆಯ ಫ‌ಲಿತಾಂಶ ಬಂದಿತು. ಸರ್ವಾಧಿಕಾರಿ ಆಡಳಿತ ಹಾಗೂ ಭ್ರಷ್ಟಾಚಾರದಿಂದ ಕುಖ್ಯಾತಿ ಪಡೆದಿದ್ದ ಲಾಲೂರ ಆರ್‌ಜೆಡಿ ಮೂಲೆ ಗುಂಪಾಗಿಬಿಟ್ಟಿತು. ಎನ್‌ ಡಿಎ ಮೈತ್ರಿ ಕೂಟ ಸರಕಾರ ರಚಿಸಿ, ನಿತೀಶ್‌ ಕುಮಾರ್‌ರನ್ನು ಮುಖ್ಯಮಂತ್ರಿಯಾಗಿಸಿತು. ಅಧಿಕಾರಕ್ಕೆ ಬಂದದ್ದೇ ತಡ ನಿತೀಶ್‌, ಪಾಸ್ವಾನ್‌ಮೇಲೆ ಪ್ರತೀಕಾರ ತೀರಿಸಿ ಕೊಳ್ಳುವುದಕ್ಕೆ ಮುಂದಾದರು. “ಮಹಾ ದಲಿತ’ ಎಂಬ ಕೆಟಗರಿ ತೆರೆದರು. ಅದರಲ್ಲಿ ಪಾಸ್ವಾನ್‌ರ ಜಾತಿಯನ್ನು ಹೊರಗಿಟ್ಟು ಉಳಿದ ಎಲ್ಲ ದಲಿತ ವರ್ಗಗಳನ್ನೂ ಸೇರಿಸಿದರು. ಇದರಿಂದಾಗಿ ಒಂದು ಸಮಯದಲ್ಲಿ ಪಾಸ್ವಾನ್‌ರ ಪ್ರಮುಖ ಮತದಾರ ವರ್ಗವಾಗಿದ್ದ ದಲಿತರು ನಿತೀಶ್‌ರ ಬತ್ತಳಿಕೆ ಗೆ ಸೇರಿಬಿಟ್ಟರು. ಈ ಕಾರಣದಿಂದಾಗಿ ಎಲ್‌ ಜೆಪಿ ರಾಜಕೀಯ ರಂಗದಲ್ಲಿ ಹಿಂದುಳಿದುಬಿಟ್ಟಿತು. ಅದೇನೇ ಇದ್ದರೂ ಪಾಸ್ವಾನ್‌ರಿಂದಾಗಿ ಅಂದು ಆರ್‌ ಜೆಡಿ ಮೂಲೆ ಗುಂಪಾಯಿತು. ಈಗ ಅವರ ಮಗ ಜೆಡಿಯು ವಿರುದ್ಧ ಅಂಥದ್ದೇ ಪ್ರಯತ್ನಕ್ಕಿಳಿದಿದ್ದಾರೆ. ಆದರೆ ಚಿರಾಗ್‌ ಪಾಸ್ವಾನ್‌ ಇನ್ನೂ ಹೊಸಬರು, ತಂದೆ ರಾಮ್‌ ವಿಲಾಸ್‌ ರಂಥ ರಾಜಕೀಯ ಪಟ್ಟುಗಳಾಗಲಿ ಅಥವಾ ವರ್ಚಸ್ಸಾಗಲಿ ಅವರಿಗೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next