Advertisement

ನಮಗೆ ಬಸ್‌ ಬೇಕೇ ಬೇಕು: ಬಸ್‌ ಸಿಗದೆ ಸಾವಿರಾರು ವಿದ್ಯಾರ್ಥಿಗಳ ಪರದಾಟ

02:52 PM Jun 12, 2024 | Team Udayavani |

ಕರಾವಳಿ ಈಗ ಶಿಕ್ಷಣ ಕಾಶಿ. ದೇಶದ ನಾನಾ ಭಾಗ ಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ದುರಂತವೆಂದರೆ, ಕರಾವಳಿಯ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವು ದೇ ಸವಾಲಾಗುತ್ತಿದೆ. ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣ, ಇಲ್ಲವೇ ನಗರದ ಶಾಲೆ, ಕಾಲೇಜಿಗೆ ಬರುವುದು ಹರಸಾಹಸ. ಇದಕ್ಕೆ ಕಾರಣ ಬಸ್‌ ಸೌಲಭ್ಯದ ಸಮಸ್ಯೆ. ಅದೆಷ್ಟೋ ಹಳ್ಳಿಗಳಿಗೆ ಬಸ್ಸೇ ಇಲ್ಲ. ಇರುವ ಬಸ್‌ ಗಳು ಬೆಳಗ್ಗೆ ಸಂಜೆ, ಫುಲ್‌ ಆಗಿರುತ್ತವೆ.

Advertisement

ಹೀಗಾಗಿ ಅದೆಷ್ಟೋ ಕಿ.ಮೀ. ಗಟ್ಟಲೆ ನಡೆದು, ದುಬಾರಿ ಹಣ ತೆತ್ತು ಶಿಕ್ಷಣ ಪಡೆಯಬೇಕಾಗಿದೆ. ನಗರಗಳಲ್ಲಿ ತುಂಬಿದ ಬಸ್‌ ಗಳಲ್ಲಿ ಅನುಭವಿ ಸುವ ಕಿರಿಕಿರಿ, ನೇತಾಡಿಕೊಂಡೇ ಸಾಗುವ ಸಂಕಷ್ಟ . ಇಷ್ಟೆಲ್ಲ ಸಮಸ್ಯೆಗಳ ಸರಮಾಲೆ ಎದುರಿಸುತ್ತಿರುವ ನಮ್ಮದೇ ಮನೆಯ ಈ ಮಕ್ಕಳ ಕಷ್ಟಗ ಳಿಗೆ ಧ್ವನಿಯಾಗುವ ಮತ್ತು ಅವರ ಅಸು ರಕ್ಷಿತ ಬದುಕಿನ ಕಥೆಯನ್ನು ಆಡಳಿತ ವರ್ಗ, ಜನಪ್ರತಿನಿಧಿಗಳಿಗೆ ತಲುಪಿಸಿ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಉದಯ ವಾಣಿ ಪತ್ರಿಕೆ ಹೊಸ ಅಭಿಯಾನ ಶುರು ಮಾಡಿದೆ. ಇಂದಿನಿಂದ ಸುದಿನದಲ್ಲಿ ನಿಮ್ಮ ಕಷ್ಟಗಳು, ನಿಮ್ಮ ಧ್ವನಿ, ನಿಮ್ಮ ಆಕ್ರೋಶ, ನಿಮ್ಮ ಬೇಡಿಕೆಗಳು ತೆರೆದುಕೊಳ್ಳಲಿವೆ.

ಪುತ್ತೂರು: ಮೊನ್ನೆಯಷ್ಟೇ ತಂದಿದ್ದ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಕೆಎಸ್‌ ಆರ್‌ಟಿಸಿ ನಿಗದಿಪಡಿಸಿದಂತೆ ಬೆಳಗ್ಗೆ 8.15 ಕ್ಕೆ ಬಸ್‌ ತಲುಪಬೇಕು, ಬಸ್‌ ಬರುವ ದಿಕ್ಕನ್ನೇ ದಿಟ್ಟಿಸುತ್ತಿದ್ದ ಮಕ್ಕಳು ಈಗ ಬರುತ್ತದೆ ಎಂದು ಜಡಿಮಳೆಯಲ್ಲಿ ಕಾದು ಕುಳಿತರೂ ಬಸ್‌ ಬರಲಿಲ್ಲ, ಕೆಲವರು ಅಟೋಗೆ ಪೋನ್‌ ಮಾಡಿ ಬನ್ನಿ ಎಂದರೂ ರೋಡ್‌ ಸರಿ ಅಲ್ಲ ಅನ್ನುವ ಉತ್ತರ ಬಂತು. ಅಷ್ಟಾಗಲೇ ಗಂಟೆ 9 ಆಗಿತ್ತು.

ಅಲ್ಲೇ ಇದ್ದ ಅಟೋ ಚಾಲಕ ರಸ್ತೆಯ ಸ್ಥಿತಿಯನ್ನು ಶಪಿಸುತ್ತಲೇ ಒಂದಷ್ಟು ವಿದ್ಯಾರ್ಥಿಗಳನ್ನು ಕರೆದುಕೊಂಡ ಹೋದ. ಇನ್ನೂ ಹೋದರೆ ಸುಖ ಇಲ್ಲ ಎಂದು ಕೆಲ ವಿದ್ಯಾರ್ಥಿಗಳು ಮನೆಗೆ ವಾಪಾಸು ಹೆಜ್ಜೆ ಹಾಕಿದರು. ಐದಾರೂ ಮಂದಿ ಅಲ್ಲೇ ಉಳಿದು ಮನೆ ಕಡೆ ಹೆಜ್ಜೆ ಹಾಕೋಣ ಅನ್ನುವಷ್ಟರ ಹೊತ್ತಿಗೆ ಬಸ್‌ ಬಂದೇ ಬಿಟ್ಟಿತ್ತು.! ಇದೇನೂ ಹಳೆಯ ಕಥೆ ಅಲ್ಲ. ಜೂ. 10ರಂದು ಪುತ್ತೂರು-ಸವಣೂರು ಮಾರ್ಗವಾಗಿ ಬೆಳ್ಳಾರೆಗೆ ಸಂಪರ್ಕಿಸುವ ಪರಣೆ, ಮುಕ್ಕೂರು, ಕುಂಡಡ್ಕ, ಪೆರುವಾಜೆ ರಸ್ತೆ ಬದಿಯಲ್ಲಿ ನಿಂತ
ವಿದ್ಯಾರ್ಥಿಗಳು ಪಟ್ಟ ಪಾಡು.

ಎರಡು ವರ್ಷದ ಹಿಂದೆ ನಡೆದ ಘಟನೆ ನೆನಪು ಮಾಡಿಕೊಳ್ಳೋಣ. ಪುತ್ತೂರಿನ ಪದವಿ ಕಾಲೇಜಿನ ವಿದ್ಯಾರ್ಥಿನಿ ನಿತ್ಯವೂ ದೇಲಂಪಾಡಿ ಭಾಗದ ಬಸ್‌ನಲ್ಲೇ ಬರಬೇಕಿತ್ತು. ಆ ಊರಿಗೆ ಬರುವ ಏಕೈಕ ಬಸ್‌ ಅದು. ಬಸ್‌ ಬಾರದೇ ಇದ್ದರೆ ಖಾಸಗಿ ವಾಹನದಲ್ಲಿ ಸಾವಿರಾರು ಬಾಡಿಗೆ ತೆತ್ತು ಪುತ್ತೂರಿಗೆ ಬರಬೇಕು. ಅದು ಪರೀಕ್ಷಾ ಸಮಯ. ಆಕೆ ರಾತ್ರಿಯೆಲ್ಲಾ ಓದಿ ಪರೀಕ್ಷೆಗೆ ಸಿದ್ಧಳಾಗಿ ಬೆಳಗ್ಗೆ ಬಸ್‌ಗಾಗಿ ಕಾಯುತ್ತಿದ್ದಳು. ಆದರೆ ಬಸ್‌ ಬರಲೇ ಇಲ್ಲ, ಆಕೆ ಗಾಬರಿ ಬಿದ್ದಳು. ಕೊನೆಗೂ ಸ್ಥಳೀಯ ನೆರವು ಪಡೆದು ಸಾವಿರಾರು ರೂಪಾಯಿ ತೆತ್ತು ಆಕೆ ಪುತ್ತೂರಿಗೆ ಬಂದಳು. ಅದಾಗಲೇ ಪರೀಕ್ಷೆ ಆರಂಭಗೊಂಡು ಅರ್ಧ ತಾಸು ಕಳೆದಿತ್ತು..!

Advertisement

ಇದು ಸವಣೂರು-ಬೆಳ್ಳಾರೆಗೆ ರಸ್ತೆಯಲ್ಲಿ ಬಸ್‌ಗಾಗಿ ಕಾದು ಕುಳಿತವರ, ದೇಲಂಪಾಡಿ ಬಸ್‌ಗಾಗಿ ಕಾದ ವಿದ್ಯಾರ್ಥಿನಿಯ ಕಥೆ ಮಾತ್ರ
ಅಲ್ಲ, ಪುತ್ತೂರು -ಸುಳ್ಯ -ಕಡಬ -ಬೆಳ್ತಂಗಡಿ -ಬಂಟ್ವಾಳ ತಾಲೂಕಿನ ಗ್ರಾಮಾಂತರ ರಸ್ತೆಗಳಲ್ಲಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಎದುರಿಸುತ್ತಿರುವ ವಾಸ್ತವ ಸ್ಥಿತಿಗೊಂದು ಸಣ್ಣ ಉದಾಹರಣೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಿದ್ಧರಾಗಿ ಬರುತ್ತಾರೆ. ಆದರೆ, ಬಸ್‌ ಇರುವುದು ಬೆರಳೆಣಿಕೆಯಷ್ಟು ಮಾತ್ರ.

ಬಸ್‌ ಸಿಗದಿದ್ದರೆ ಹೆಚ್ಚಿನವರು ಮನೆಗೆ
ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ ತಾಲೂಕಿನ ಗ್ರಾಮಾಂತರ ರೂಟ್‌ಗಳಲ್ಲಿ ಬಸ್‌ ಕೊರತೆ ಹೆಚ್ಚಿದೆ. ದಿನಕ್ಕೆ ಒಂದು ಹೊತ್ತು ಬಸ್‌ ಓಡಾಟ ನಡೆಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಐದು ಬಸ್‌ಗಳಷ್ಟು ಇದೆ. ಇರುವ ಒಂದು ಬಸ್‌ ಕೂಡ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಆಗಾಗ ಕೈ ಕೊಡುತ್ತದೆ. ಹೆಚ್ಚಿನ ರೂಟ್‌ಗಳಲ್ಲಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯು ಇರುವುದಿಲ್ಲ. ಹೀಗಾಗಿ ಒಂದೋ ಮನೆಗೆ, ಇಲ್ಲದಿದ್ದರೆ ಬಾಡಿಗೆ ವಾಹನ ಗತಿ. ಹೆಚ್ಚುವರಿ ಬಸ್‌ಗಾಗಿ ಬೇಡಿಕೆ ಇದ್ದರೂ ಅವಿನ್ನು ಮನವಿಯಲ್ಲೇ ಬಾಕಿ ಇದೆ. ಐದು ಡಿಪೋ ವ್ಯಾಪ್ತಿಯಲ್ಲಿ 30 ಅನೂಸೂಚಿಗಳ ಬೇಡಿಕೆ ಸಲ್ಲಿಕೆಯಾಗಿದ್ದು ಅವಿನ್ನೂ ಅನುಷ್ಠಾನಗೊಂಡಿಲ್ಲ.

ಬಸ್‌ ಪಾಸ್‌ ಸಂಖ್ಯೆಗೂ ಬಸ್‌ಗೂ ಸಂಬಂಧವೇ ಇಲ್ಲ !
ಅತಿ ಹೆಚ್ಚು ವಿದ್ಯಾರ್ಥಿ ಬಸ್‌ ಪಾಸ್‌ ವಿತರಣೆ ಆಗುವ ಡಿವಿಜನ್‌ಗಳಲ್ಲಿ ಪುತ್ತೂರು ಕೆಎಸ್‌ಆರ್‌ಟಿಸಿ ಡಿವಿಜನ್‌ ಕೂಡ ಒಂದು. ಆದರೆ, ಅಷ್ಟೊಂದು ವಿದ್ಯಾರ್ಥಿಗಳನ್ನು, ಇತರೆ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಬೇಕಾದಷ್ಟು ಬಸ್‌ ಇವೆಯೇ ಎಂದು ಪರಿಶೀಲಿಸಿದರೆ ಅಂಕಿ ಅಂಶ ಇಲ್ಲ ಅನ್ನುತ್ತಿದೆ. ಉದಾಹರಣೆಯೊಂದನ್ನು ಗಮನಿಸಿ, 2023-24 ನೇ ಸಾಲಿನಲ್ಲಿ ಪುತ್ತೂರು ವಿಭಾಗದ ಐದು ಡಿಪೋ ವ್ಯಾಪ್ತಿಯಲ್ಲಿ ವಿತರಣೆಯಾದ ಒಟ್ಟು ಬಸ್‌ ಪಾಸ್‌ 21,272. ಪುತ್ತೂರು ವಿಭಾಗದಲ್ಲಿ ಇರುವ ಒಟ್ಟು ಬಸ್‌ ಸಂಖ್ಯೆ 485. ಇಷ್ಟೊಂದು ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ಅದೇ ಬಸ್‌ ನಲ್ಲಿ ಹೋಗಬೇಕು. ಕೆಲವೊಂದು ಭಾಗ ಗಳಲ್ಲಿ 200ಕ್ಕೂ ಅಧಿಕ ಪಾಸ್‌ ಪಡೆದ ವಿದ್ಯಾರ್ಥಿಗಳಿರುತ್ತಾರೆ. ಆದರೆ, ಬಸ್ಸಿರುವುದು ಒಂದೇ! ಅವರೆಲ್ಲರೂ ಹೋಗುವುದು ಹೇಗೆ?

ಗಡಿಭಾಗದ ಸಮಸ್ಯೆ
ಇನ್ನು ಕರ್ನಾಟಕ ಗಡಿಭಾಗದಿಂದ ಬರುವ ವಿದ್ಯಾರ್ಥಿಗಳ ಗೋಳು ಹೇಳ ತೀರದು. ವಿಟ್ಲ, ಮಂಜೇಶ್ವರ, ಪಕಳಕುಂಜ, ಸಾಲೆತ್ತೂರು, ಬುಲೇರಿಕಟ್ಟೆ, ಪುಣಚ, ಅಡ್ಯನಡ್ಕ, ಅಡ್ಕಸ್ಥಳ, ಪಂಚೋಡಿ, ಕೇರಳ ರಾಜ್ಯದ ಅಡ್ಕಸ್ಥಳ, ಪೆರ್ಲ, ಬದಿಯಡ್ಕ, ಕರ್ನೂರು ಮೊದಲಾದ ಕಡೆಗಳಿಂದ ಪುತ್ತೂರು ಉಪವಿಭಾಗಕ್ಕೆ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿ ಬೆಳಗ್ಗೆ, ಸಂಜೆ ಸೀಮಿತ ಬಸ್‌ಗಳು ಮಾತ್ರ ಸಂಚರಿಸುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಪುತ್ತೂರು ಡಿಪೋದಿಂದ ಬೆಳಗ್ಗೆ ಹಾಗೂ ಸಂಜೆ ಕೇರಳ ಭಾಗಕ್ಕೆ ಹೋಗುವ ಬಸ್ಸಿನ ಸಂಖ್ಯೆ ಕಡಿಮೆ. ಇರುವ ಬಸ್‌ಗಳಲ್ಲಿ ನೇತಾಡಿಕೊಂಡೇ ವಿದ್ಯಾರ್ಥಿಗಳು ಮನೆಗೆ,ಶಾಲೆಗೆ ಸೇರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸಮಸ್ಯೆಗಳು ಹತ್ತಾರು!
1)ವಿದ್ಯಾರ್ಥಿಗಳ ಬೇಡಿಕೆಯಷ್ಟು ಬಸ್‌ ಸೌಲಭ್ಯ ಇಲ್ಲ.

2)ಹಲವಾರು ಗ್ರಾಮಾಂತರ ಭಾಗಗಳಿಗೆ ಬಸ್‌ ಸೌಕರ್ಯವೇ ಇಲ್ಲ.

3)ಕೆಲವು ಕಡೆ ಬೆಳಗ್ಗೆ, ಸಂಜೆ ಬಸ್‌ ಇದ್ದರೂ ಕೆಲ ವೊಮ್ಮೆ ಬರುವುದೇ ಇಲ್ಲ. ಬಂದರೂ ಜಾಗ ಇರುವುದಿಲ್ಲ.

4)ಕೆಲವು ಕಡೆ ಮಕ್ಕಳನ್ನು ನೋಡಿದ ಕೂಡಲೇ ಬಸ್‌ಗಳು ವೇಗವಾಗಿ ಸಾಗುತ್ತವೆ, ನಿಲ್ಲಿಸುವುದೇ ಇಲ್ಲ.

5)ಹೆಚ್ಚಿನ ಕಡೆ ಒಂದು ಬಸ್‌ ಮಿಸ್‌ ಆದರೆ ಇನ್ನೊಂದು ಬಸ್‌ ಬರುವುದೇ ಇಲ್ಲ. ಬಂದರೂ ಒಂದೆರಡು ಗಂಟೆ ಬಿಟ್ಟು.

6)ಬಸ್‌ ಹತ್ತಲು ಸಾಧ್ಯವಾಗದಿದ್ದರೆ ಒಂದೋ ಮನೆಗೆ ಮರಳಬೇಕು, ಇಲ್ಲದಿದ್ದರೆ ದುಬಾರಿ ಬಾಡಿಗೆ ಕೊಟ್ಟು ರಿಕ್ಷಾದಲ್ಲಿ ಹೋಗಬೇಕು.

7)ಬಸ್‌ ಸಿಗದಿದ್ದರೆ ರಿಕ್ಷಾ, ಜೀಪುಗಳಲ್ಲಿ ನೇತಾಡಿ ಕೊಂಡು ಹೋಗಬೇಕಾದ ಅನಿವಾರ್ಯತೆ

8)ಕಿಕ್ಕಿರಿದ ಬಸ್‌ ಗಳಲ್ಲಿ ಹೆಣ್ಣು ಮಕ್ಕಳಿಗಂತೂ ಯಮಯಾತನೆ

9)ಬೆಳಗ್ಗೆ ಬೇಗ ಮನೆಯಿಂದ ಹೊರಟರೂ ಫ‌ಸ್ಟ್‌ ಪೀರಿಯೆಡ್‌ ಸಿಗುತ್ತದೆ ಎಂಬುದು ಖಾತ್ರಿಯಲ್ಲ.

10)ಒಂದು ವೇಳೆ ಮಧ್ಯಾಹ್ನ ಕಾಲೇಜು ಬಿಟ್ಟರೂ ಮನೆಗೆ ಹೋಗಲು ಸಂಜೆವರೆಗೆ ಕಾಯಬೇಕು!

*ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next