Advertisement

ಭಾಷಾಭಿಮಾನ ಇರಲಿ, ಅನ್ಯ ಭಾಷೆಯ ಬಗ್ಗೆ ಅಸಹನೆ ಬೇಕೆ?

12:11 AM Sep 19, 2019 | mahesh |

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಕಾಲಿಟ್ಟ ಕೂಡಲೇ ಮಲೆಯಾಳಂ ವಾಸನೆ ಹೊಡೆಯುತ್ತದೆ. ಸಿಬ್ಬಂದಿ ಬಿಡಿ ಅಲ್ಲಿನ ವ್ಯಾಪಾರಿಗಳು ಕೂಡಾ ನಾವು ಕನ್ನಡದಲ್ಲಿ ಕೇಳಿದರೆ ಮಲಯಾಳಂನಲ್ಲೇ ಉತ್ತರಿಸುತ್ತಾರೆ. ಹಾಗೆಯೇ ಮಂಗಳೂರಿನಿಂದ ಕೇರಳಕ್ಕೆ ಹೊರಡುವ ಬಸ್ಸುಗಳ ಸಿಬ್ಬಂದಿ ಕೂಡಾ ತಪ್ಪಿಯೂ ಒಂದೇ ಒಂದು ಶಬ್ದ ಕನ್ನಡ ಅಥವಾ ತುಳು ಮಾತನಾಡಲಾರರು.

Advertisement

ಹಿಂದಿ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಭಾಷಣನ್ನು ಸರಿಯಾಗಿ ಅರ್ಥೈಸುವಲ್ಲಿ ತಪ್ಪಾಗಿಯೋ ಅಥವಾ ಎಂದಿನಂತೆ ಮೋದಿ ವಿರೋಧಿ ಧೋರಣೆಯೋ ವಿಷಯ ಎಲ್ಲಿಂದ ಎಲ್ಲಿಗೋ ಹೋಗುತ್ತಿರುವಂತೆ ಭಾಸವಾಗುತ್ತದೆ. ಹಿಂದಿಯನ್ನು ದಕ್ಷಿಣ ಭಾರತೀಯರ ಮೇಲೆ ಹೇರಲಾಗುತ್ತಿದೆ ಎನ್ನುವವರು ಸಂವಿಧಾನದ 344(1) ರಿಂದ 351ನೇ ಅನುಚ್ಛೇದಗಳನ್ನು ಸ್ವಲ್ಪ ಗಮನಿಸಬೇಕು. ಅದರಲ್ಲಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾದ ಎಲ್ಲಾ ಭಾಷೆಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಿ ಸೂತ್ರಗಳನ್ನು ವಿವರಿಸಲಾಗಿದೆ. ಎಲ್ಲಿಯೂ ಹಿಂದಿ ರಾಷ್ಟ್ರಭಾಷೆಯೆಂದಾಗಲಿ, ರಾಷ್ಟ್ರಾದ್ಯಂತ ಹಿಂದಿಯನ್ನೇ ಬಳಸಬೇಕೆಂದು ಹೇಳಿಲ್ಲ. ರಾಜ್ಯಗಳು ತಮ್ಮ ರಾಜ್ಯದ ಅಧಿಕೃತ ಭಾಷೆ ಯಾವುದಿರಬೇಕೆಂದು ನಿರ್ಧರಿಸುವ ಸ್ವಾತಂತ್ರ್ಯ ಹೊಂದಿವೆಯೆಂದು ಸ್ಪಷ್ಟವಾಗಿ ತಿಳಿಸಿದೆ. ಯಾವುದೇ ಬದಲಾವಣೆ ಅಗತ್ಯವೆನಿಸಿದರೆ ವಿಧಾನಮಂಡಲದ ಅನುಮೋದನೆ ಮತ್ತು ರಾಷ್ಟ್ರಪತಿಯವರ ಅಂಗೀಕಾರ ಪಡೆಯಬೇಕಾಗಿದೆ. ಹೀಗಿರುವಾಗ ಹಿಂದಿ ಹೇರಿಕೆ ಎಂಬ ವಾದ ತಪ್ಪು. ಆದರೂ ಕೆಲವೊಂದು ಇಲಾಖೆಗಳ ವರ್ತನೆ ನೋಡುವಾಗ ಇಂತಹ ವಾದದಲ್ಲಿ ಏನೋ ಸತ್ಯಾಂಶ ಇರಬಹುದೇ ಎಂಬ ಸಂಶಯ ಬರುವುದು ಸಹಜ. ರಾಷ್ಟ್ರಮಟ್ಟದ ಪರೀಕ್ಷೆಗಳಾದ ಬ್ಯಾಂಕಿಂಗ್‌, ರೈಲ್ವೇ ಮುಂತಾದವುಗಳನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅವಕಾಶ ನೀಡದಿರುವುದು ಅವುಗಳಲ್ಲಿ ಒಂದು. ಇಂತದ್ದನ್ನು ಪ್ರಶ್ನಿಸೋಣ, ವಿಷಯವಾರು ಪ್ರತಿಭಟಿಸಿ ನಮ್ಮ ಹಕ್ಕು ಪಡೆದುಕೊಳ್ಳೋಣ. ಹೊರತು ಸಾರಾಸಗಟಾಗಿ ಹಿಂದಿ ಹೇರಿಕೆ ಎಂಬುದು ಅರ್ಥಹೀನವೆನಿಸದೆ?

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಕಾಲಿಟ್ಟ ಕೂಡಲೇ ಮಲೆಯಾಳಂ ವಾಸನೆ ಹೊಡೆಯುತ್ತದೆ. ಸಿಬ್ಬಂದಿ ಬಿಡಿ ಅಲ್ಲಿನ ವ್ಯಾಪಾರಿಗಳು ಕೂಡಾ ನಾವು ಕನ್ನಡದಲ್ಲಿ ಕೇಳಿದರೆ ಮಲಯಾಳಂನಲ್ಲೇ ಉತ್ತರಿಸುತ್ತಾರೆ. ಹಾಗೆಯೇ ಮಂಗಳೂರಿನಿಂದ ಕೇರಳಕ್ಕೆ ಹೊರಡುವ ಬಸ್ಸುಗಳ ಸಿಬ್ಬಂದಿ ಕೂಡಾ ತಪ್ಪಿಯೂ ಒಂದೇ ಒಂದು ಶಬ್ದ ಕನ್ನಡ ಅಥವಾ ತುಳು ಮಾತನಾಡಲಾರರು. ಇದೆಲ್ಲಾ ತಥಾಕಥಿತ ಹೋರಾಟಗಾರರಿಗೆ ಗೊತ್ತಿಲ್ಲವೆಂದೇನಲ್ಲ. ಇಲ್ಲಿ ಅವರದ್ದೇನೂ ನಡಿಯೋದಿಲ್ಲ, ಅಷ್ಟೇ. ಈ ಉದಾಹರಣೆಗೆ ವಿರುದ್ಧವಾದ ಮನಸ್ಥಿತಿ ಕನ್ನಡಿಗರದ್ದು. ಬೆಂಗಳೂರಿನ ಬಹುತೇಕ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಯವರು ಒಟ್ಟಾಗಿ ಮಾತನಾಡಲು ಸೇರಿದಾಗ ಆ ತಂಡದಲ್ಲಿ ಯಾರಾದರೂ ಒಬ್ಬರು ತೆಲುಗು, ತಮಿಳು ಅಥವಾ ಮಲಯಾಳಂ ಭಾಷೆಯವರು ಇದ್ದರೆ ಇಡೀ ತಂಡ ಕನ್ನಡ ಮರೆತು ಬಿಡುತ್ತದೆ. ಇಷ್ಟೇಕೆ ಬೆಂಗಳೂರಿನ ಚಿತ್ರರಂಗದ ಚಟುವಟಿಕೆಗಳ ಕೇಂದ್ರಸ್ಥಾನ ಗಾಂಧಿನಗರದ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ.

ಹಿಂದಿ ಉತ್ತರ ಭಾರತದ ಭಾಷೆ, ವಿಶ್ವವ್ಯಾಪಿ ಇಂಗ್ಲಿಷನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ನಮಗೆ ನಮ್ಮದೇ ದೇಶದ ಹಿಂದಿಯೇಕೆ ಅಪಥ್ಯ? ಕೊಡಗಿನ ಕೊಡವ ಭಾಷೆ, ಘಟ್ಟದಿಂದ ಇಳಿದರೆ, ಮೊದಲಿಗೆ ಸುಳ್ಯದಲ್ಲಿ ಅರೆಭಾಷೆ, ಪುತ್ತೂರು, ಬಂಟ್ವಾಳ, ಮಂಗಳೂರು ಕಡೆ ಸಾಗುತ್ತಾ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಕನ್ನಡ, ತುಳು ಜತೆಗೆ, ಮಂಗಳೂರಿನಿಂದ ಉತ್ತರಕ್ಕೆ ಉಡುಪಿಯಲ್ಲಿ ಮತ್ತೂಂದಿಷ್ಟು ಬದಲಾವಣೆಯೊಂದಿಗೆ ಕನ್ನಡ, ತುಳು. ಮುಂದುವರಿಯುತ್ತಾ, ಹವ್ಯಕ ಕನ್ನಡ, ಕುಂದಾಪುರ ಕನ್ನಡ, ನಡುನಡುವೆ ಕೊಂಕಣಿ. ಉತ್ತರ ಕನ್ನಡ ಜಿಲ್ಲೆಗೆ ಕಾಲಿಟ್ಟರೆ ಕೊಂಕಣಿಯದೇ ಅಧಿಪತ್ಯ. ಉ.ಕ.ಜಿಲ್ಲೆಯ ಭಟ್ಕಳದ ನವಾಯತರು, ಮುಸ್ಲಿಮರಾದರೂ ಮಾತನಾಡುವ ಭಾಷೆ ಕೊಂಕಣಿ. ಇಷ್ಟೆಲ್ಲಾ ಇದ್ದರೂ ನಾವೆಂದೂ ಇನ್ನೊಂದು ಭಾಷೆಯನ್ನು ದ್ವೇಷಿಸಿಲ್ಲ, ಅಸ್ಪೃಶ್ಯರಂತೆ ನೋಡಿಲ್ಲ. ಇನ್ನೊಂದು ವಿಶಿಷ್ಟ ವಿಷಯವೆಂದರೆ, ತುಳುವಿಗೆ ಸ್ವಂತ ಲಿಪಿಯಿದೆಯೆಂಬ ವಿಷಯ ಬಹುತೇಕ ತುಳುವರಿಗೇ ಗೊತ್ತಿಲ್ಲ, ಮಾತ್ರವಲ್ಲ ಸುಮಾರು ಏಳು ಶತಮಾನಗಳಿಗೂ ಹೆಚ್ಚಿನ ಇತಿಹಾಸವುಳ್ಳ ಉಡುಪಿಯ ಶ್ರೀ ಕೃಷ್ಣ ಮಠದ ಅಷ್ಟ ಮಠಾಧೀಶರು ಇಂದಿಗೂ ಬಳಸುವುದು, ಸಹಿ ಮಾಡುವುದು ತುಳುಲಿಪಿಯಲ್ಲಿ! ಆದರೆ ನಮ್ಮದೇ ರಾಜ್ಯದ ಕನ್ನಡ ಸಂಘಟನೆಗಳು ನೆರೆರಾಜ್ಯದ ಭಾಷೆಗಳ ಬಗ್ಗೆ ಧ್ವನಿ ಎತ್ತಲು ಆಗದಿದ್ದರೂ ನಮ್ಮದೇ ರಾಜ್ಯದ ತುಳುವನ್ನು ತುಚ್ಛಿಕರಿಸುತ್ತಾರೆ.

ಇಂದು ಪ್ರಪಂಚ ವಿಸ್ತೀರ್ಣದಲ್ಲಿ ಅಲ್ಲ ಅವಕಾಶಗಳಲ್ಲಿ ವಿಶಾಲವಾಗಿದೆ. ಆದ್ದರಿಂದ ನಮಗೆ ಇನ್ನಷ್ಟು ಮತ್ತಷ್ಟು ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಷ್ಟು ಅವಕಾಶಗಳು, ಅದು ಉದ್ಯೋಗವಿರಲಿ, ಉದ್ದಿಮೆ ಅಥವಾ ವ್ಯವಹಾರವಿರಲಿ ತೆರೆದುಕೊಳ್ಳುತ್ತದೆ. ಅಮೆರಿಕ, ಕೆನಡಾ ಮತ್ತಿತರ ದೇಶಗಳಲ್ಲಿ ಮಿತ್ರರು, ಸಹೋದ್ಯೋಗಿಗಳು ಒಟ್ಟು ಸೇರಿದಾಗ, ಮಾತುಕತೆಯಲ್ಲಿ ಇಂಗ್ಲೀಷಿಗಿಂತ ಭಾರತೀಯರೆಂದು ತಿಳಿದರೆ ಸಂವಹನಕ್ಕೆ ಬಳಸುವ ಭಾಷೆ ಹಿಂದಿ. ಹಾಗಾದರೆ ನಮ್ಮ ದೇಶದಲ್ಲಿ ಇದೇಕೆ ಅಪಥ್ಯ?

Advertisement

1977ರಲ್ಲಿ ಅಟಲ್‌ ಬಿಹಾರಿ ವಾಜಪೇಯಿಯವರು ವಿದೇಶಾಂಗ ಸಚಿವರಾಗಿದ್ದಾಗ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಇತಿಹಾಸ. ಅವರನ್ನು ಯಾರೂ ಆಕ್ಷೇಪಿಸಲಿಲ್ಲ. ಅಂಕಿಅಂಶಗಳು ಹೇಳುವಂತೆ ಹಿಂದಿ ವಿಶ್ವದಲ್ಲಿ ಅತಿ ಹೆಚ್ಚು ಜನರು ಮಾತನಾಡುವ ಎರಡನೇ ಭಾಷೆ. ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ದೇಶದ ಭಾಷೆಯ ಬಗ್ಗೆ ತಪ್ಪು ಕಲ್ಪನೆ ತೊಲಗಬೇಕಾಗಿದೆ.

ಜತೆಗೆ ಅದು ಮಲಯಾಳಂ ಇರಲಿ, ತಮಿಳು, ತೆಲುಗೇ ಇರಲಿ ಭಾಷೆಯ ಹೆಸರಿನಲ್ಲಿ ಅಸಹನೆ, ದ್ವೇಷದ ವಾತಾವರಣದ ಬದಲು ಸೌಹಾರ್ದತೆ ಒಗ್ಗೂಡಿಸಿ ಎಲ್ಲರೂ ಒಟ್ಟಾಗಿ ಬೆಳೆದರೆ ಒಳ್ಳೆಯದಲ್ಲವೇ?

ಮೋಹನದಾಸ ಕಿಣಿ, ಕಾಪು

Advertisement

Udayavani is now on Telegram. Click here to join our channel and stay updated with the latest news.

Next