Advertisement

“ನಾವು ಹೊರಗೆ ಬಂದು ತಪ್ಪು ಮಾಡಿದ್ದೇವೆ; ನೀವು ಮನೆಯೊಳಗೇ ಇರಿ’

12:41 AM Mar 22, 2020 | Sriram |

ಮಣಿಪಾಲ: “ಇಂದು (ಮಾ. 22) ಆದಷ್ಟು ಒಳಗೇ ಇರಿ. ನೀವು ಇರುವುದು ದೇಶಕ್ಕಾಗಿ. ಪರಸ್ಪರ ನಮ್ಮೊಳಗೆ ಧೈರ್ಯವನ್ನು ತುಂಬಿಕೊಳ್ಳಲು ರಾಷ್ಟ್ರಗೀತೆಯನ್ನು ಹಾಡಿ, ಸಕಾರಾತ್ಮಕವಾಗಿ ಯೋಚಿಸಿ. ಸಕಾರಾತ್ಮಕವಾದುದನ್ನು ವೀಕ್ಷಿಸಿ. ನಾವೂ ಅದನ್ನೇ ನಿತ್ಯವೂ ಮಾಡುತ್ತಿದ್ದೇವೆ’.

Advertisement

ಇಟಲಿಯ ಸಿನೆಮಾ ನಿರ್ದೇಶಕ ಇಟಾಲೋ ಸ್ಪಿನೆಲಿ. ಉದಯವಾಣಿ ಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಭಾಷಿಸಿದ ಅವರು ಜನತಾ ಕಪ್ಯೂì ಸಂದರ್ಭದಲ್ಲಿ ಭಾರತೀಯರಿಗೆ ನೀಡಿದ ಎರಡು ಸಲಹೆ ಗಳೆಂದರೆ, ಒಂದು-ಮನೆಯೊಳಗೇ ಆದಷ್ಟು ಇರಿ, ಕಷ್ಟವಾಗುತ್ತದೆ ನಿಜ. ಆದರೂ ಹೊರಗೆ ಬರಬೇಡಿ.

ಎರಡು – ಸಕಾರಾತ್ಮಕವಾಗಿ ಯೋಚಿಸಿ, ಒಳ್ಳೆಯ ದಿನ ಬರುತ್ತದೆ. ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ, ಕತ್ತಲು ಕಳೆದು ಬೆಳಕು ಬರಲೇಬೇಕು, ಬಂದೇ ಬರುತ್ತದೆ.
ಇಟಾಲೋ ಕೆಲವೇ ದಿನಗಳ ಹಿಂದೆ ಭಾರತದಲ್ಲಿದ್ದರು. ಅದೂ ಇಟಲಿಯಲ್ಲಿ ಕೋವಿಡ್‌ 19 ಉಪಟಳ ಹೆಚ್ಚುತ್ತಿದ್ದ ಸಂದರ್ಭವದು. ಭಾರತ ದಲ್ಲಿ ಇನ್ನೂ ಅಷ್ಟೊಂದು ವೇಗ ಪಡೆದಿ ರಲಿಲ್ಲ. ಆಗ ಭಾರತದ ಜನಸಂಖ್ಯೆ, ತುಂಬಿ ತುಳುಕುತ್ತಿದ್ದ ರೈಲು ನಿಲ್ದಾಣಗಳು ಇತ್ಯಾದಿಗಳೆಲ್ಲವನ್ನೂ ಕಂಡವರು, “ಈ ವೈರಸ್‌ನ ಉಪಟಳ ಭಾರತಕ್ಕೇನಾದರೂ ಬಂದರೆ ಬಹಳ ಕಷ್ಟವಪ್ಪ’ ಎಂದುಕೊಂಡಿದ್ದರಂತೆ.

“ನಮ್ಮ ಇಟಲಿಯಂಥ ಪುಟ್ಟ ದೇಶದಲ್ಲೇ ಆಸ್ಪತ್ರೆಗಳು ತುಂಬಿ ಹೋಗಿವೆ. ಯಾವ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಹಾಸಿಗೆಗಳಿಲ್ಲ. ಕೋವಿಡ್‌ 19 ಪೀಡಿತರಿಗೆ ಚಿಕಿತ್ಸೆ ಕೊಟ್ಟ ವೈದ್ಯರುಗಳೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಇಂಥ ಆತಂಕದ ಸ್ಥಿತಿಯಲ್ಲಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಮಾತ್ರ ಬದುಕುಳಿಯಬಲ್ಲವು’.

“ಯಾರೂ ಹೊರಗೆ ಬರಬೇಡಿ, ಇದು ಯುದ್ಧ’ ಎಂದು ಹೇಳುವ ಇಟಾಲೋ, ನಗರ ಮಲಗಿ ಬಹು ದಿನಗಳಾಗಿವೆ. ಯುರೋಪಿನ ದೊಡ್ಡ ರೈಲು ನಿಲ್ದಾಣ ಮಿಲಾನೊ ದಲ್ಲಿ ಜನರೇ ಇಲ್ಲ. ಸಂಪೂರ್ಣ ಖಾಲಿ ಖಾಲಿ, ರೈಲುಗಳಿದ್ದರೂ ಪ್ರಯೋಜನವಿಲ್ಲ. ತುರ್ತು ಸ್ಥಿತಿ ಇದ್ದಲ್ಲಿ ಜನರುಅನುಮತಿ ಪಡೆದು ಬರಬೇಕು. ಇಲ್ಲವಾದರೆ ಪೊಲೀಸರು ಬಂಧಿಸುತ್ತಾರೆ’ ಎಂದು ವಿವರಿಸುತ್ತಾರೆ.

Advertisement

“ನಮ್ಮ ತಪ್ಪಿಗೆ ಎರಡು ಕಾರಣಗಳಿವೆ ಎನ್ನುವುದಕ್ಕಿಂತಲೂ ಎರಡು ರೀತಿ ಯಲ್ಲಿ ನಮ್ಮಿಂದ ತಪ್ಪುಗಳಾಗಿವೆ. ಮೊದಲನೆ ಯದು – ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಾಗ ಸ್ವಲ್ಪ ಎಡವಿದೆವು. ಎರಡನೆಯದು- ಹಲವು ಸಲಹೆಗಳನ್ನು ಲಘುವಾಗಿ ತೆಗೆದುಕೊಂಡೆವು. ಹಾಗಾಗಿ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಂಕ್ರಾ ಮಿಕ ವೈರಾಣುಗಳ ಹರಡುವಿಕೆಗೆ ನಾವೂ ಸಹ ಕಾರಣರಾಗಬಾರದೆಂದರೆ ಮನೆಯೊಳಗೆ ಇರುವುದೇ ಕ್ಷೇಮ. ಆ ಮೂಲಕವೇ ನಾವು ವೈರಾಣುವನ್ನು ಸೋಲಿಸಿ ಈ ಯುದ್ಧದಲ್ಲಿ ಗೆಲ್ಲಬಹುದು ಎನ್ನುತ್ತಾರೆ ಅವರು.

ನಾವು ಅದನ್ನೇ ಮಾಡುತ್ತಿದ್ದೇವೆ
ನಾವೂ ನಮ್ಮ ನಮ್ಮ ವಸತಿ ಸಮುಚ್ಚಯಗಳಲ್ಲಿ ಏಕಾಂತದಲ್ಲಿದ್ದೇವೆ. ಮನೆಯಿಂದ ಹೊರಗೆ ಬಾರದೇ ಹಲವು ದಿನಗಳು ಆಗಿವೆ. ಆದರೂ ಹತಾಶರಾಗಿಲ್ಲ. ಒಂದಿಷ್ಟು ಓದು, ಬರಹ ಹೀಗೆ ಕಾಲ ಕಳೆಯುತ್ತಿದ್ದೇವೆ. ಜೀವನ ಪ್ರೀತಿ ಉಳಿಸಿಕೊಳ್ಳಲು ಸ್ಪೀಕರ್‌ಗಳಲ್ಲಿ ದೊಡ್ಡದಾಗಿ ರಾಷ್ಟ್ರಗೀತೆಯನ್ನು ಕೇಳುತ್ತೇವೆ. ಅದು ನಮ್ಮೊಳಗೆ ಸ್ಫೂರ್ತಿ ತುಂಬುತ್ತದೆ. ಇನ್ನೂ ಬದುಕಬೇಕೆಂಬ ಪ್ರೀತಿಯನ್ನು ಉಕ್ಕಿಸುತ್ತದೆ. ನೀವೂ ಹಾಗೆಯೇ ಮಾಡಿ.

ಮನೆಯೊಂದರ ಬಾಗಿಲಿನ ಮೇಲೆ ಬರೆದ “ಎಲ್ಲವೂ ಸರಿಯಾಗುತ್ತದೆ, ಒಳ್ಳೆಯ ದಿನ ಬರುತ್ತದೆ’ (ಇಟಾಲಿಯನ್‌ ಭಾಷೆಯಲ್ಲಿ ಬರೆದ ಸಾಲು) ಎಂಬುದನ್ನು ನೋಡಿಯೇ ಬದುಕುತ್ತೇವೆ. ಇಂಥ ಸಾಲುಗಳು ಹಲವಾರು ಮನೆಗಳ ಬಾಗಿಲುಗಳನ್ನು ಸುಂದರಗೊಳಿಸುತ್ತಾ ಸಕಾರಾತ್ಮಕ ದೃಷ್ಟಿಕೋನವನ್ನು ಬೆಂಬಲಿಸುತ್ತಿದೆ. ಇಡೀ ಜಗತ್ತು ಸ್ತಬ್ಧಗೊಳ್ಳುತ್ತಿದೆ ಎನಿಸುತ್ತಿರುವ ಹೊತ್ತಿನಲ್ಲಿ ಇಂಥ ಕೆಲವು ಸಾಲುಗಳೇ ನಮ್ಮೊಳಗೆ ಬದುಕಿನ ಬಗೆಗಿನ ಪ್ರೀತಿಯನ್ನು ಉಳಿಸಬಲ್ಲವು. ಬದುಕಿನ ಸೌಂದರ್ಯವನ್ನು ತಿಳಿಸಬಲ್ಲವು.
– ಇಟಾಲೋ ಸ್ಪಿನೆಲಿ.
ಸಿನೆಮಾ ನಿರ್ದೇಶಕ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next