Advertisement

ಹೊಳೆಯುವ ಸೇಬನ್ನು ಹಾಗೇ ತಿಂದರೆ ಅದೆಷ್ಟು ಅಪಾಯ?

03:10 AM Dec 20, 2018 | Karthik A |

ಉಡುಪಿ: ಹಣ್ಣಿನ ಅಂಗಡಿಗಳಲ್ಲಿ ಪಳಪಳ ಹೊಳೆಯುವ ಸೇಬು ಹಣ್ಣಿನ ರಾಶಿಗಳನ್ನು ಕಂಡರೆ ಬಾಯಲ್ಲಿ ನೀರೂರುವುದು ಸಹಜ. ಅದರ ಒಳಗುಟ್ಟು ತಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ… ಸೇಬು ಹಣ್ಣಿಗೆ ವ್ಯಾಕ್ಸ್‌ ಹಾಕುವುದೇ ಪಳಪಳ ಹೊಳೆಯಲು ಕಾರಣ. ವ್ಯಾಕ್ಸ್‌ ಹಾಕಿದರೆ ಅದು ದೀರ್ಘ‌ಕಾಲ ಬಾಳಿಕೆ ಬರುತ್ತದೆ.

Advertisement

ಇದರಿಂದ ಎರಡು ಪ್ರಯೋಜನ: ಮೊದಲನೆಯದು ಜನರು ಆಕರ್ಷಣೆಗೆ ಒಳಗಾಗಿ ಕೊಂಡುಕೊಳ್ಳುತ್ತಾರೆ, ಇನ್ನೊಂದು ಬೇಗನೆ ಹಾಳಾಗಿ ನಷ್ಟ ಉಂಟಾಗುವುದಿಲ್ಲ. ವ್ಯಾಕ್ಸ್‌ನಲ್ಲಿಯೂ ಎರಡು ವಿಧವಿದೆ. ಒಂದು ನೈಸರ್ಗಿಕವಾದುದು, ಇನ್ನೊಂದು ರಾಸಾಯನಿಕ ಕೃತಕವಾದುದು. ಮರಗೆಣಸಿನಿಂದಲೂ ವ್ಯಾಕ್ಸ್‌ ತಯಾರಿಸಲು ಸಾಧ್ಯ. ಆದರೆ ಇದನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಾಧ್ಯವಿಲ್ಲ ಮತ್ತು ವೆಚ್ಚದಾಯಕವೂ ಹೌದು. ಹೀಗಾಗಿ ಬಹುತೇಕ ವ್ಯಾಪಾರಸ್ಥರು ಸಿಂಥೆಟಿಕ್‌ ಕೃತಕ ವ್ಯಾಕ್ಸ್‌ ಬಳಸುತ್ತಾರೆ. ಇದನ್ನು ಚೂರಿಯಿಂದ ಕೆರೆಸಿದರೆ ವ್ಯಾಕ್ಸ್‌ ಕಂಡು ಬರುತ್ತದೆ. ಈ ಕುರಿತು ಏನೂ ಗೊತ್ತಿಲ್ಲದೆ ಹಾಗೇ ಕತ್ತರಿಸಿ ತಿಂದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.


ಹೊಳೆಯುವ ಸೇಬು ಹಣ್ಣನ್ನು ಚೂರಿಯಿಂದ ಕೆರೆದರೆ ವ್ಯಾಕ್ಸ್‌ ಗೊತ್ತಾಗುತ್ತದೆ.

ಸೇಬು ಹಣ್ಣುಗಳನ್ನು 60 ಡಿಗ್ರಿ ಉಷ್ಣಾಂಶದಲ್ಲಿ (ನೀರಿನಲ್ಲಿ ಹೊಗೆ ಬರುವಷ್ಟು) ಕಾಯಿಸಿದರೆ ಈ ವ್ಯಾಕ್ಸ್‌ ಹೋಗುತ್ತದೆ. ಬ್ಲೇಡ್‌/ಚಾಕುವಿನಿಂದ ಕೆರೆದರೂ ಹೋಗುತ್ತದೆ. ಹೊರಭಾಗದ ಸಿಪ್ಪೆಯನ್ನು ಚಾಕುವಿನಿಂದ ತೆಗೆದರೂ ಆಗಬಹುದು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ಇಲಾಖೆ ಸಹಾಯಕ ಪ್ರಾಧ್ಯಾಪಕ ಡಾ| ವಿಕ್ರಮ್‌ ಅವರ ಪ್ರಕಾರ, ಕೃತಕ ವ್ಯಾಕ್ಸ್‌ ಹಾಕಿದ ಹಣ್ಣನ್ನು ಹಾಗೆಯೇ ತಿಂದರೆ ಉಸಿರಾಟದ ಸಮಸ್ಯೆ, ಅಲರ್ಜಿಗೆ ಕಾರಣವಾಗುತ್ತದೆ. ಕ್ಯಾನ್ಸರ್‌ಗೂ ಕಾರಣವಾಗಬಹುದು.

ವ್ಯಾಕ್ಸ್‌ಗಿಂತಲೂ ಅಪಾಯಕಾರಿ!
ಕೃತಕ ವ್ಯಾಕ್ಸ್‌ಗಳನ್ನು ಮಾವು ಮೊದಲಾದ ಹಣ್ಣುಗಳಿಗೂ ಬಳಸುತ್ತಾರೆ. ಚಿಕ್ಕುವನ್ನು ತತ್‌ಕ್ಷಣ ಹಣ್ಣು ಮಾಡಲು ಸೈನಡ್‌ ತರಹದ ರಾಸಾಯನಿಕಯುಕ್ತ ಹೊಗೆ ಹಾಕುತ್ತಾರೆ. ಆಕರ್ಷಕವಾಗಿ ಮೃದುವಾಗಿ ಮೂಡಲು ಹೀಗೆ ಮಾಡುತ್ತಾರೆ. ಬಾಳೆಕಾಯಿಗಳನ್ನು ಹಣ್ಣು ಮಾಡಲೂ ಇದನ್ನು ಉಪಯೋಗಿಸುವುದಿದೆ. ಒಂದು ಬಾರಿ ಅಲೆವೂರು ಬಳಿ ಇಂತಹ ಕೇಂದ್ರಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದೂ ಇದೆ. ಈ ರಾಸಾಯನಿಕ ನಿಷೇಧಕ್ಕೆ ಒಳಗಾದರೂ ಬಳಕೆಯಾಗುತ್ತಿದೆ. ಮುಸುಂಬಿ, ಕಿತ್ತಳೆ, ಬಾಳೆ ಹಣ್ಣುಗಳಿಗೆ ಹೀಗೆ ಮಾಡಿದರೆ ಸಿಪ್ಪೆ ತೆಗೆಯುವುದರಿಂದ ಅದರ ಅಪಾಯ ಒಂದಿಷ್ಟು ಪ್ರಮಾಣದಲ್ಲಿ ತಗ್ಗಿರುತ್ತದೆ. ಆದರೆ ಚಿಕ್ಕುವಿನ ಸಿಪ್ಪೆ ತೆಗೆಯುವುದು ಕಷ್ಟ. ಇದು ವ್ಯಾಕ್ಸ್‌ಗಿಂತಲೂ ಅಪಾಯಕಾರಿ ಎನ್ನುತ್ತಾರೆ ವಿಕ್ರಮ್‌.

Advertisement


ಮರದಲ್ಲಿರುವ ತಾಜಾ ಹಣ್ಣು. 

ಆರೋಗ್ಯ ಸಮಸ್ಯೆ
ಕೃತಕ ವ್ಯಾಕ್ಸ್‌ ಹಾಕಿ ದೀರ್ಘ‌ ಕಾಲ ಹಣ್ಣು ಕೆಡದಂತೆ ಮಾಡುವುದು, ರಾಸಾಯನಿಕಯುಕ್ತ ಹೊಗೆ ಹಾಕಿ ಕೃತಕವಾಗಿ ಮಾಗಿಸಿದ ಹಣ್ಣು ತಿಂದರೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. 
-ಡಾ| ವಿಕ್ರಮ್‌, ತೋಟಗಾರಿಕಾ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ

ಆರೋಗ್ಯ ಸಮಸ್ಯೆ
ಕೆಲವು ವ್ಯಾಕ್ಸ್‌ಗಳನ್ನು ಹಾಕಲು ಅನುಮತಿ ಇದೆ. ಇದನ್ನು ಪರ್ಮಿಟೆಡ್‌ ವ್ಯಾಕ್ಸ್‌ ಎಂದು ಕರೆಯುತ್ತೇವೆ. ಇದನ್ನು ನೀರಿನಲ್ಲಿ ಹಾಕಿ ಕುದಿಸಿದರೆ ಹೋಗುತ್ತದೆ. ಹಾಗೇ ತಿಂದರೆ ಹೊಟ್ಟೆ ನೋವು ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಕೃತಕವಾಗಿ ಹಣ್ಣು ಮಾಡುವ ಕಾರ್ಬೈಡ್‌ ಪ್ರಕ್ರಿಯೆಗೆ ಅನುಮತಿ ಇಲ್ಲ. ಇಂತಹ ಕ್ರಮಗಳನ್ನು ನಿಯಂತ್ರಿಸಲು ಆಹಾರ ಸುರಕ್ಷಾ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ತಾ|ನ ಆರೋಗ್ಯಾಧಿಕಾರಿಗಳನ್ನು, ಜಿಲ್ಲಾ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸುರಕ್ಷಾಧಿಕಾರಿಗಳನ್ನು ಆಹಾರ ಸುರಕ್ಷಾಧಿಕಾರಿಗಳೆಂದು ನಿಯೋಜನೆ ಮಾಡಲಾಗಿದೆ. ಇವರು ಪ್ರತಿ ತಿಂಗಳು ಹಣ್ಣು ಮಾತ್ರವಲ್ಲದೆ ಎಲ್ಲ ಆಹಾರಗಳ ಸುರಕ್ಷೆ ಕುರಿತು ಮಾದರಿಗಳನ್ನು ಸಂಗ್ರಹಿಸುತ್ತಾರೆ. ಎಲ್ಲಿ ಯಾದರೂ ನಿಷೇಧಿತ ಚಟುವಟಿಕೆಗಳು ಕಂಡು ಬಂದರೆ ಸಾರ್ವಜನಿಕರು ತಾಲೂಕಿನ ಆಹಾರ ಸುರಕ್ಷಾಧಿಕಾರಿಗಳಿಗೆ ದೂರು ನೀಡಬಹುದು. 
-ಡಾ| ವಾಸುದೇವ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಮತ್ತು ಆಹಾರ ಸುರಕ್ಷಾ ಅಂಕಿತಾಧಿಕಾರಿ, ಉಡುಪಿ

ವ್ಯಾಕ್ಸ್‌ನಿಂದ ಕ್ಯಾನ್ಸರ್‌: ಸಾಬೀತು ಕಷ್ಟ
ಸಿಗರೇಟ್‌ ಸೇದಿದರೆ ಶ್ವಾಸಕೋಶ ಕ್ಯಾನ್ಸರ್‌ ಬರುತ್ತದೆ ಎಂದು ದೃಢಪಟ್ಟಂತೆ ಕೃತಕ ವ್ಯಾಕ್ಸ್‌ ಇತ್ಯಾದಿಗಳಿಂದ ಕ್ಯಾನ್ಸರ್‌ ಬರುತ್ತದೆ ಎಂದು ಅಧ್ಯಯನ ನಡೆದಿಲ್ಲ. ಕ್ಯಾನ್ಸರ್‌ಗೆ ನೂರೆಂಟು ಬಗೆಯ ಕಾರಣಗಳಿವೆ. ಪೆಟ್ರೋಲಿಯಂ ಉತ್ಪನ್ನಗಳ ಮಾಲಿನ್ಯವೂ ಇದರಲ್ಲಿ ಒಂದು. ನಾವು ಈಗ ಏನೇನನ್ನೋ ತಿನ್ನುತ್ತೇವೆ. ಹೀಗಾಗಿ ನಿರ್ದಿಷ್ಟ ಆಹಾರದಿಂದಲೇ ಬರುತ್ತದೆ ಎಂದು ಸಾಬೀತುಪಡಿಸುವುದು ಕಷ್ಟ. ಅಪಾಯ ಬರಬಹುದು ಎಂದು ಹೇಳಬಹುದಷ್ಟೆ. ಅಲರ್ಜಿ ಬರುವ ಸಾಧ್ಯತೆ ಇದೆ. 
-ಡಾ| ಶಶಿಕಿರಣ್‌ ಉಮಾಕಾಂತ್‌, ಇಂಟರ್ನಲ್‌ ಮೆಡಿಸಿನ್‌ ವಿಭಾಗದ ವೈದ್ಯರು, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

ವ್ಯಾಕ್ಸ್‌ನಿಂದ ಕ್ಯಾನ್ಸರ್‌: ಪುರಾವೆ ಸಿಕ್ಕಿಲ್ಲ
ವ್ಯಾಕ್ಸ್‌ ಬಳಕೆಯಿಂದ ಹಣ್ಣಿನ ಬಾಳಿಕೆ ಜಾಸ್ತಿಯಾಗುತ್ತದೆ. ಇದರರ್ಥ ಅದು ಮತ್ತೆ ಹಣ್ಣೂ ಆಗುವುದಿಲ್ಲ, ಹಾಳೂ ಆಗುವುದಿಲ್ಲ. ವಾತಾವರಣಕ್ಕೆ ಅದು ತೆರೆದುಕೊಳ್ಳದಿರುವುದು ಇದಕ್ಕೆ ಕಾರಣ. ನಿಶ್ಚಿತವಾಗಿ ಕ್ಯಾನ್ಸರ್‌ಗೆ ಇದು ಕಾರಣ ಎಂದು ಹೇಳಲು ಪುರಾವೆಗಳು ಸಿಗದಿದ್ದರೂ ಆರೋಗ್ಯಕ್ಕೆ ಒಟ್ಟಾರೆ ಹಾನಿ ಇದೆ. 
-ಡಾ| ಕಿರಣ್‌ ಐತಾಳ್‌, ಕ್ಯಾನ್ಸರ್‌ ವಿರೋಧಿ ಔಷಧ ಸಂಶೋಧನ ವಿಭಾಗ, ಅರ್ಜಿನ್‌ ಡಿಸ್ಕವರಿ ಟೆಕ್ನಾಲಜೀಸ್‌ ಲಿ., ಬೆಂಗಳೂರು

— ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next