Advertisement

ನಗರ ನೀರು ಪೂರೈಕೆ ಹೊಣೆ ನೀರು ಸರಬರಾಜು ಮಂಡಳಿಗೆ

02:41 AM Apr 30, 2019 | sudhir |

ಮಂಗಳೂರು: ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಹಂಚಿಕೆ ವ್ಯವಸ್ಥೆ ಸುಧಾರಣೆ, ಮೂಲ ಸ್ಥಾವರ ಸಮರ್ಪಕ ನಿರ್ವಹಣೆ ಮತ್ತು ಪಾರದರ್ಶಕತೆ ತರಲು ಜಲಾಶಯದಿಂದ ಸಂಗ್ರಹಾಗಾರದವರೆಗೆ ನೀರು ಪೂರೈಕೆ, ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂತರಿಸಲು ಸರಕಾರ ಮುಂದಾಗಿದೆ.

Advertisement

ನೀರಿನ ಸಮರ್ಪಕ ಹಂಚಿಕೆ ಯಲ್ಲಿನ ವ್ಯತ್ಯಯ, ಮೂಲಸ್ಥಾವರದ ನಿರ್ವಹಣೆ ಕೊರತೆ ಸಹಿತ ಹಲವು ಲೋಪಗಳನ್ನು ಸರಿಪಡಿಸುವುದು ಮತ್ತು ಎಲ್ಲ ನಗರ ಸ್ಥಳೀಯ ಸಂಸ್ಥೆ ಗಳಲ್ಲಿ ಸಗಟು ನೀರು ಪೂರೈಕೆ ಯೋಜನೆಗಳ ಸಮಗ್ರ ನಿರ್ವ ಹಣೆಯ ಹೊಣೆಯನ್ನು ಒಂದೇ ಮಂಡಳಿಗೆ ನೀಡಿ ಪಾರದರ್ಶಕತೆ ಕಾಯ್ದು ಕೊಳ್ಳುವ ಉದ್ದೇಶ ಹೊಂದಲಾಗಿದೆ.

ಮಂಡಳಿಯು ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ಸದ್ಯದ ನೀರು ಹಂಚಿಕೆ ವ್ಯವಸ್ಥೆಯ ಮಾಹಿತಿ ಪಡೆಯುತ್ತಿದೆ. ಮಂಡಳಿಯ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಮತ್ತು ಮುಂದೆ ಅನುಸರಿಸಬೇಕಾದ ಕ್ರಮ ಗಳ ಬಗ್ಗೆ ಪಟ್ಟಿ ಮಾಡಿ ಕೇಂದ್ರ ಕಚೇರಿಗೆ ವಿವರ ಒದಗಿಸುತ್ತಿದ್ದಾರೆ.

ತುಂಬೆ ಡ್ಯಾಂ ಸಹ ಪ್ರಸ್ತುತ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್‌ ಡ್ಯಾಂನಿಂದ ಪಾಲಿಕೆ ನೀರು ಪಡೆದು ನಗರದಲ್ಲಿ ಹಂಚಿಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಡ್ಯಾಂ ನಿರ್ವಹಣೆ, ಅಲ್ಲಿಂದ ಪಡೀಲ್‌-ಬೆಂದೂರ್‌ವೆಲ್‌ ಸಂಗ್ರಹ ಸ್ಥಾವರದ ವರೆಗೆ ಪೂರೈಕೆ ಹೊಣೆ ಮಂಡಳಿಯ ಹೆಗಲೇರುತ್ತದೆ. ಅಲ್ಲಿಂದ ಮನೆಗಳು ಮತ್ತುಇತರೆಡೆಗೆ ಸರಬರಾಜು ಮಾತ್ರ ಪಾಲಿಕೆಯ ಜವಾಬ್ದಾರಿ ಅಗಿದೆ.

ದ.ಕ., ಉಡುಪಿ ಜಾರಿ
ಮಂಗಳೂರು ನಗರಕ್ಕೆ ಕುಡಿ ಯುವ ನೀರಿಗಾಗಿ ನೇತ್ರಾವತಿ ನದಿಗೆ ತುಂಬೆಯಲ್ಲಿ 4 ಮೀ. ಎತ್ತರದ ಕಿಂಡಿ ಅಣೆಕಟ್ಟನ್ನು 1985ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿರ್ಮಿಸಲಾಗಿತ್ತು. 1994ರ ವರೆಗೆ ಮಂಡಳಿಯೇ ಈ ಡ್ಯಾಂ ನಿರ್ವಹಣೆ ಮಾಡಿತ್ತು. ಮಂಡಳಿಯು ಬಳಿಕ ಇದೇ ಜಾಗದಲ್ಲಿ 2ನೇ ಡ್ಯಾಂ ನಿರ್ಮಿಸಿ, ಪಾಲಿಕೆಗೆ ಹಸ್ತಾಂತರಿಸಿದೆ. ಈಗಿನ ಹೊಸ ಯೋಜನೆ ಜಾರಿಗೆ ಬಂದರೆ ಜವಾಬ್ದಾರಿ ಮತ್ತೆ ಮಂಡಳಿಯ ಕೈ ಸೇರಲಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಉಡುಪಿ, ಕುಂದಾಪುರಗಳಲ್ಲಿಯೂ ಇದೇ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಯಿದೆ.

Advertisement

ಉತ್ತರದಾಯಿತ್ವ ಪ್ರಶ್ನೆ
ಮಂಡಳಿಯೇ ನಿರ್ವಹಣೆ ಮತ್ತು ಪೂರೈಕೆ ಮಾಡಿದರೆ ಅದರ ವೆಚ್ಚವನ್ನು ಎಸ್‌ಎಫ್‌ಸಿ ಅನುದಾನದಡಿ ಭರಿಸಲು ಸರಕಾರ ಉದ್ದೇಶಿಸಿದೆ. ಇದನ್ನು ಆಯಾ ಸ್ಥಳೀಯ ಸಂಸ್ಥೆಗಳೇ ನೀಡುವುದಾದರೆ ಆರ್ಥಿಕ ಹೊರೆಯಾಗಬಹುದು. ಸದ್ಯ ತುಂಬೆ ಡ್ಯಾಂ ನಿರ್ವಹಣೆಗೆ ವಾರ್ಷಿಕ 11 ಕೋ.ರೂ. ಬೇಕು. ಅದೇ ಮಂಡಳಿ ನಿರ್ವಹಿಸಿದರೆ ವೆಚ್ಚ ದುಪ್ಪಟ್ಟಾಗುತ್ತದೆ. ಅಂತಿಮವಾಗಿ ಈ ಹೊರೆ ಜನರ ಹೆಗಲೇರಲೂ ಬಹುದು. ಈಗಾಗಲೇ ಮಂಡಳಿಯ ಕೆಲವೆಡೆ ಹುದ್ದೆಗಳು ಖಾಲಿ ಇದ್ದು, ಈ ದೃಷ್ಟಿಯಿಂದಲೂ ನಿರ್ವಹಣೆ ಸವಾಲಾಗಬಹುದು. ಜತೆಗೆ ನೀರು ಸರಬರಾಜಿಗೆ ಎರಡು ಸಂಸ್ಥೆಗಳು (ಮಂಡಳಿ- ಸ್ಥಳೀಯ ಸಂಸ್ಥೆ) ಬರುವ ಕಾರಣ ನೀರಿನ ಸಮಸ್ಯೆ ಉದ್ಭವಿಸಿದಾಗ ಅವು ಪರಸ್ಪರ ಬೊಟ್ಟು ಮಾಡಿ ಉತ್ತರದಾಯಿತ್ವದಿಂದ ನುಣುಚಿಕೊಳ್ಳುವ ಸಾಧ್ಯತೆಯೂ ಇದೆ.

61 ನಗರಗಳ ಒಳಚರಂಡಿ ನಿರ್ವಹಣೆಯೂ ಮಂಡಳಿಗೆ
ಮಹಾನಗರ ಪಾಲಿಕೆಗಳನ್ನು ಬಿಟ್ಟು ಉಳಿದ ಎಲ್ಲ ನಗರ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣ ಘಟಕಗಳ ನಿರ್ವಹಣೆಯೂ ಭವಿಷ್ಯದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂತರಗೊಳ್ಳಲಿದೆ. ರಾಜ್ಯದಲ್ಲಿ ಒಟ್ಟು 68 ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇದ್ದು, ಈ ಪೈಕಿ ಮನಪಾ ಬಿಟ್ಟು ಉಳಿದ 61 ನಗರ ಪ್ರದೇಶಗಳಲ್ಲಿ ವೆಟ್‌ವೆಲ್‌, ಏರುಕೊಳವೆ ಮಾರ್ಗ, ಮಲಿನ ನೀರಿನ ಶುದ್ಧೀಕರಣ ಘಟಕ ಮತ್ತು ಔಟ್‌ಫಾಲ್‌ ಕೊಳವೆ ಮಾರ್ಗ ನಿರ್ವಹಣೆಯ ಹೊಣೆ ಮಂಡಳಿಯ ಪಾಲಾಗಲಿದೆ. ಇದಕ್ಕಾಗಿ ವಿದ್ಯುತ್‌ ವೆಚ್ಚ ಬಿಟ್ಟು ಅಂದಾಜು ಪಟ್ಟಿ ಸಿದ್ಧಗೊಳಿಸಲು ಸೂಚಿಸಲಾಗಿದೆ.

ಶೀಘ್ರವೇ ಅಂತಿಮ ನಿರ್ಧಾರ
ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಉನ್ನತಿಗೇರಿಸಲು ಮೂಲಸ್ಥಾವರ ದಿಂದ ಜಲ ಸಂಗ್ರಹಗಾರಗಳವರೆಗೆ ಪೂರೈಕೆ ಹೊಣೆಯನ್ನು ನಗರ ನೀರು ಸರಬರಾಜು ಮಂಡಳಿಗೆ ನೀಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸರಕಾರ ಶೀಘ್ರವೇ ಅಂತಿಮ ನಿರ್ಧಾರ ಪ್ರಕಟಿಸಲಿದೆ.
– ಯು.ಟಿ. ಖಾದರ್‌, ನಗರಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next