Advertisement

ಸರಣಿ ಕೆರೆಗಳ ಜಲ ಸ್ವರ್ಗ

10:14 AM Jan 07, 2020 | mahesh |

ಒಂದು ಪಾತ್ರೆಯಲ್ಲಿ ನೀರು ಭರ್ತಿಯಾದ ಬಳಿಕ ಇನ್ನೊಂದರಲ್ಲಿ ತುಂಬಿಡುವ ವಿಧಾನ ಗೊತ್ತಿದೆ. ಇದೇ ರೀತಿ ಕಣಿವೆಯ ಪ್ರಾಕೃತಿಕ ಅನುಕೂಲತೆಗೆ ತಕ್ಕಂತೆ ಜಲ ದಾರಿಯಲ್ಲಿ ಕೆರೆ ಸರಣಿಗಳನ್ನು ನಿರ್ಮಿಸಿ ಕೃಷಿ ಬದುಕು ಗೆಲ್ಲಿಸುವುದನ್ನು ಸಾವಿರಾರು ವರ್ಷಗಳಿಂದ ಅರಿತಿದ್ದೇವೆ. ಕೆರೆಗಳಲ್ಲಿ ಮಳೆ ಪ್ರವಾಹ ತಡೆದು ಬೇಸಿಗೆ ಬದುಕನ್ನು ಸುಂದರವಾಗಿಸುವ ಪರಿಕಲ್ಪನೆ ಎಷ್ಟು ಸೊಗಸಾಗಿದೆ!

Advertisement

ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್‌ ಮೇಜರ್‌ ಸ್ಯಾಂಕಿ ಕೆರೆಗಳ ಹೂಳೆತ್ತುವ ಸಂಬಂಧ ಸಮಗ್ರ ವರದಿ ಸಲ್ಲಿಸಿದವರು. ಕ್ರಿ,ಶ. 1866 ರಲ್ಲಿ ಭಾರತ ಸರಕಾರ ಜಲಕ್ಷಾಮ ಹಾಗೂ ಬರವನ್ನು ನಿವಾರಿಸಲು ಅಥವಾ ತೀವ್ರತೆಯನ್ನು ತಗ್ಗಿಸಲು ನೀರಾವರಿ ಕಾರ್ಯಗಳಲ್ಲಿ ಪೂರ್ಣಗೊಂಡವು ಹಾಗೂ ಮುಂದುವರಿಯುತ್ತಿರುವುದನ್ನು ಪರಾಮರ್ಶಿಸಬೇಕೆಂದು ಆದೇಶಿಸಿತು. ಮೈಸೂರು ಅರಸರು ಆಗ ಸ್ಯಾಂಕಿಯಿಂದ ಒಂದು ಅಧ್ಯಯನ ಮಾಡಿಸಿದರು. ಮೈಲಿಗೊಂದು ಕೆರೆಯಿರುವ ಮೈಸೂರು ರಾಜ್ಯದಲ್ಲಿ ಒಂದು ಕೆರೆ ತುಂಬಿದ ನೀರು ಕೆಳಗಡೆಯ ಇನ್ನೊಂದು ಕೆರೆಗೆ ಹರಿಯುವ ವ್ಯವಸ್ಥೆಯಿದೆ. ಕಾಲುವೆಗಳ ಮೂಲಕ ಕಣಿವೆ ಕೆರೆಗಳನ್ನು ಜೋಡಿಸಲಾಗಿದೆ. ಒಂದು ಕೆರೆಯ ಹೂಳು ತೆಗೆಯುವಾಗ ಆ ಕೆರೆಯ ನೀರು ಬಳಸುವ ಕೃಷಿಕರಿಗೆ ಕೆಲವು ಸಮಯ ನೀರಿನ ಕೊರತೆಯಾಗಬಹುದು. ಆಗ ಪಕ್ಕದ ಇನ್ನೊಂದು ಕೆರೆಯಿಂದ ನೀರಿನ ಅಗತ್ಯ ಪೂರೈಸಬಹುದೆಂದು ಸ್ಯಾಂಕಿ ಬರೆಯುತ್ತಾರೆ. 19,223 ಕೆರೆಗಳ ಹೂಳು ತೆಗೆಯಲು ಅವತ್ತು 48 ಲಕ್ಷ ರೂಪಾಯಿಯ ಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಿದ್ದರು.

ಸ್ಯಾಂಕಿ ವರದಿಯಂತೆ ಕೆರೆಯ ಹೂಳು ತೆಗೆಯುವ ಕಾರ್ಯವನ್ನು ಇಂಜಿನಿಯರಿಂಗ್‌ ಇಲಾಖೆ ಮಾಡಬೇಕೆ? ಕಂದಾಯ ಇಲಾಖೆ ಮಾಡಬೇಕೇ? ಸರಕಾರೀ ಚರ್ಚೆಗಳು ಶುರುವಾದವು. ಮುಂದಿನ ಹತ್ತು ವರ್ಷದವರೆಗೂ ಇದರ ನಿರ್ಧಾರವಾಗಲಿಲ್ಲ. ಕ್ರಿ,ಶ. 1876-78 ರಲ್ಲಿ ಮೈಸೂರು ರಾಜ್ಯಕ್ಕೆ ತೀವ್ರ ಬರಗಾಲ ಕಾಡಿತು. ಕೆರೆ ಹೂಳು ತೆಗೆಯಲು ಬಳಸಬೇಕಿದ್ದ 48 ಲಕ್ಷ ರೂಪಾಯಿಯನ್ನು ಗಂಜಿ ಕೇಂದ್ರಗಳಿಗೆ ಮೈಸೂರು ಅರಸರು ವಿನಿಯೋಗಿಸಿದರು. ಸ್ಯಾಂಕಿ ವರದಿ ಮೂಲೆ ಸೇರಿತು. ವರದಿ ಓದಿದರೆ ಸರಣಿ ಕೆರೆಗಳಲ್ಲಿ ಮಳೆ ನೀರು ಹಿಡಿದು ಪ್ರವಾಹ ಸಮಸ್ಯೆ ತಡೆದು ಜಲಕ್ಷಾಮ ಗೆಲ್ಲುವ ತಂತ್ರ ಅರ್ಥವಾಗುತ್ತದೆ.

ಸುಸಜ್ಜಿತ ಕೆರೆ ಸರಣಿ ರಚನೆ
ಕೃಷ್ಣಾ, ತುಂಗಭದ್ರಾ, ಕಾವೇರಿ, ವೇದಾವತಿ, ಮಲಪ್ರಭಾ, ಘಟಪ್ರಭಾ, ಬೆಣ್ಣೆಹಳ್ಳ, ನೇತ್ರಾವತಿ, ಗಂಗಾವಳಿ ಸೇರಿದಂತೆ ರಾಜ್ಯದ ಹಲವು ನದಿಗಳಲ್ಲಿ ಈ ವರ್ಷ ಪ್ರವಾಹ ಉಕ್ಕೇರಿತ್ತಲ್ಲವೇ? ಲಕ್ಷಾಂತರ ಮನೆಗಳು, ಕೃಷಿ ಭೂಮಿ ಮುಳುಗಡೆಯಾಗಿ ಸಹಸ್ರಾರು ಕೋಟಿ ನಷ್ಟವನ್ನು ಅನುಭವಿಸಿದ್ದೇವೆ. ಪ್ರವಾಹ ಸಂದರ್ಭ ಹಾಗೂ ಪೂರ್ವದಲ್ಲಿ ನದಿ ಕಣಿವೆಗಳ ಕೆರೆಗಳನ್ನು ನೋಡುತ್ತ ಸುತ್ತಾಡಿದ್ದೇನೆ. ನದಿ ತುಂಬಿ ಹರಿಯುತ್ತಿದ್ದರೂ ನದಿಯಂಚಿನ ಹತ್ತು ಹದಿನೈದು ಕಿಲೋ ಮೀಟರ್‌ ದೂರದ ಕೆರೆಗಳಲ್ಲಿ ಸ್ವಲ್ಪವೂ ನೀರಿರಲಿಲ್ಲ. ಹೂಳು ಭರ್ತಿಯಾಗಿ ಜಾಲಿ ಕಂಟಿಗಳು ಬೆಳೆದಿದ್ದವು. ನೀರು ಒಳ ಬರುವ ಕಾಲುವೆಗಳು ಹಾಳಾಗಿದ್ದರಿಂದ ಮಳೆ ಸುರಿದರೂ ನೀರು ಬರಲಿಲ್ಲ. ನದಿಗಳಲ್ಲಿ ಅಪಾರ ಹೂಳು ತುಂಬಿದ್ದರಿಂದ ಬಹುಬೇಗ ಪ್ರವಾಹದಿಂದ ಇಕ್ಕೆಲಗಳ ಹಳ್ಳಿಗಳು ಜಲಾವೃತವಾದವು. ಈಗ ಪ್ರವಾಹ ಬಂದಿದ್ದು, ಮಳೆ ಸುರಿದದ್ದು ಸುಳ್ಳೆನ್ನುವಂತೆ ಕೆರೆಗಳು ಒಣಗಿವೆ.

ಧಾರವಾಡ ಸೀಮೆಯಲ್ಲಿ ಜನಿಸುವ ಗಂಗಾವಳಿ ನದಿ ಉತ್ತರಕನ್ನಡದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ನದಿ ಕಣಿವೆಯ ತಡಸದಿಂದ ಕಲಘಟಗಿ ಸೀಮೆಯಲ್ಲಿ ಕೆರೆಗಳ ದೊಡ್ಡ ಸರಣಿಗಳಿವೆ. ಒಂದು ಕೆರೆಗೆ ತುಂಬಿದ ನಂತರ ಇನ್ನೊಂದು ಕೆರೆಗೆ ನೀರು ಹರಿಯುವಂತೆ ಸುಸಜ್ಜಿತ ಕೆರೆ ಸರಣಿ ರಚನೆಯಾಗಿವೆ. ಹತ್ತರಿಂದ ಐವತ್ತು ಎಕರೆ ವಿಶಾಲ ಕೆರೆಗಳಿವು. ತಡಸ ಸನಿಹದ ಬಡಗಿ ಹಳ್ಳದ ಮೂಲಕ ಹರಿಯುವ ನೀರು ಬೈಲಗೇರಿ ಕೆರೆ, ಬಿ.ಯಲ್ಲಾಪುರ ಕೆರೆ, ಹೊನ್ನಾಳಿ ಕೆರೆ, ಕಾಮಶೆಟ್ಟಿ ಕೆರೆ, ಗಂಜಿಗಟ್ಟಿ ಕೆರೆ, ಬಗಡಗೇರಿ ಕೆರೆ, ಹಿಂಡಸಗೇರಿ ಕೆರೆ ಮೂಲಕ ಹರಿಯುತ್ತದೆ. ಕೆರೆ ಅತಿಕ್ರಮಣ, ನೀರಾವರಿ ಕಾಲುವೆ ನಾಶ, ಹೂಳು, ಕೆರೆದಂಡೆಗಳು ಶಿಥಿಲವಾಗಿದ್ದರಿಂದ ಬಹುತೇಕ ಕೆರೆಗಳಲ್ಲಿ ನೀರು ನಿಲ್ಲದೇ ಪ್ರವಾಹವಾಯಿತು. ಇಲ್ಲಿನ ಕೆಲವು ಕೆರೆಗಳು ಮಸಾರಿ ಅಥವಾ ಕಪ್ಪು ಎರೆ ಮಣ್ಣಿನಲ್ಲಿವೆ. ಎರೆ ಮಣ್ಣಿನ ನೆಲೆಯ ಕೆರೆಗಳಂತೂ ಒಮ್ಮೆಗೆ ಭರ್ತಿಯಾದರೆ ಮೂರು ವರ್ಷಗಳ ಕಾಲ ನೀರಿರುತ್ತವೆ. ಕೆರೆಗಳನ್ನು ಸರಿಯಾಗಿ ನಿರ್ವಹಿಸಿದ ಕಾರಣ ಪ್ರವಾಹ ನೆಲದಲ್ಲಿ ಬೇಸಿಗೆ ನೀರಿನ ಸಮಸ್ಯೆಯಿಂದ ಬಳಲುವಂತಾಗಿದೆ.

Advertisement

ಕೊಳವೆ ಬಾವಿ ಕೃಷಿ
ಚಿಕ್ಕಮಗಳೂರಿನ ಕಡೂರಿನಿಂದ ಸುಮಾರು 20 ಕಿಲೋ ಮೀಟರ್‌ ದೂರದಲ್ಲಿ ಮದಗದ ಕೆರೆಯಿದೆ. ಮದಗದ ಕೆಂಚಮ್ಮನ ಜೀವತ್ಯಾಗದ ಐತಿಹ್ಯದ ಈ ವಿಶಾಲ ಕೆರೆ ಬಯಲು ಪ್ರದೇಶದ ಜೀವನಾಡಿ. ಬಾಬಾಬುಡನ್‌ ಬೆಟ್ಟದಲ್ಲಿ ಸುರಿಯುವ 78.8 ಚದರ್‌ ಕಿಲೋಮೀಟರ್‌ ಜಲಾನಯನ ಕ್ಷೇತ್ರದ ನೀರು ಇಲ್ಲಿ ಸಂಗ್ರಹವಾಗುತ್ತದೆ. ಒಮ್ಮೆ ಕೆರೆ ಭರ್ತಿಯಾದರೆ ಕೋಡಿ/ತೂಬಿನ ಮೂಲಕ ಹರಿಯುವ ನೀರು ಸುಮಾರು 28 ಕಿಲೋಮೀಟರ್‌ ಉದ್ದದ ಕಡೂರು ಪ್ರದೇಶದಲ್ಲಿ ಹರಿಯುತ್ತ ಸುಮಾರು 15 ಕೆರೆಗಳಿಗೆ ನೆರವಾಗುತ್ತದೆ. ದೊಡ್ಡಬುಕ್ಕಸಾಗರ, ಬಿಸ್ಲೇಹಳ್ಳಿ, ಹಳೆಮದಗ, ಚಿಕ್ಕಂಗಳ ಊರಮುಂದಿನ ಕೆರೆ, ಚಿಕ್ಕಂಗಳ ಕೆಗ್ಗೆರೆ, ಹಿರಿಯಂಗಳ ಕೆರೆ, ಹಿರಿಯಂಗಳ ತುಂಬೆ ಹೊಲದ ಕೆರೆ, ಬೀರೂರು ದೇವರ ಕೆರೆ, ಹನುಮಾಪುರ ಕೆರೆ, ಗಾಳಿಹಳ್ಳಿ ಕೆರೆ, ಕಡೂರು ದೊಡ್ಡ ಕೆರೆ ಹೀಗೆ ಸರಣಿ ಕೆರೆಗಳ ಸೊಬಗು ಇಲ್ಲಿದೆ. ಪ್ರತಿ ವರ್ಷ ಅಗಸ್ಟ್‌ ಹೊತ್ತಿಗೆ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.

ಮದಗದ ಸರಣಿ ಕೆರೆಗಳ ವ್ಯಾಪ್ತಿಯಲ್ಲಿ ಸುಮಾರು 35,000ಕ್ಕೂ ಹೆಚ್ಚು ಕೊಳವೆ ಬಾವಿಗಳಿಂದ ಕೃಷಿ ನಡೆದಿದೆ. ಶೇಕಡಾ 60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ತೋಟವಿದೆ. 150-400 ಅಡಿ ಆಳದ ಕೊಳವೆ ಬಾವಿಗಳಿಂದ ನೀರೆತ್ತುತ್ತ ಬೇಸಾಯ ನಡೆದಿದೆ. ಫೆಬ್ರುವರಿ-ಮಾರ್ಚ್‌ ಹೊತ್ತಿಗೆ ಕೆರೆಗಳು ಒಣಗುತ್ತವೆ. ಮದಗ ಸರಣಿ ಕೆರೆಗಳ ಲಾಭ ಕೃಷಿಕರಿಗೆ ಅರ್ಥವಾಗಿದೆ. ಕಳೆದ ವರ್ಷ ಮದಗದ ಕೆರೆ ತುಂಬಿ 60 ದಿನ ಕೋಡಿ ಹರಿದು ನಂತರ ತೂಬಿನಿಂದ ನೀರು ಬಿಡಲಾಯ್ತು. ಕಡೂರಿನ ಕೆರೆಗಳಿಗೆ ಮದಗದ ನೀರು ಬಂದಾಗ ಅಡಿಕೆ ತೋಟಿಗರ ನೆಲೆಯಲ್ಲಿ ಹೊಸ ಉತ್ಸಾಹ ಮೂಡಿತ್ತು. ತರಿಕೆರೆಯ ದೊಡ್ಡಕೆರೆಗೆ ಕಲ್ಲತ್ತಿಗಿರಿ ಜಲಪಾತದಿಂದ ಹರಿಯುವ ನೀರು ಬರುತ್ತದೆ. ಜಲಕ್ಷಾಮದ ಹೊತ್ತಿನಲ್ಲಿ ಭದ್ರಾ ನದಿಯಿಂದ ಟ್ಯಾಂಕರ್‌ ನೀರು ಪಡೆದ ಈ ಪ್ರದೇಶಗಳು ಕೆರೆ ಭರ್ತಿಯಾದಾಗ ಕೇವಲ ನೂರಡಿಗೆ ಕೊಳವೆ ಬಾವಿಯ ನೀರು ಕಂಡಿವೆ. ಆದಿಕೆರೆಗೆ ನೀರು ಬಂದ ಹೊತ್ತಿನಲ್ಲಿ ಜಲ ಸಂಕಟಗಳು ಮಾಯವಾಗಿ 50 ಕೃಷಿಕರು ದೀಪಾವಳಿಗೆ ಹೊಸ ಕಾರು ಖರೀದಿಗೆ ಹೊರಟಿದ್ದನ್ನು ಕೆರೆ ಪಯಣದಲ್ಲಿ ಕಂಡಿದ್ದೇನೆ.

ಕೃಷಿಕಪರ ಅರಿವು
ಸರಣಿ ಕೆರೆಗಳು ಪಾರಂಪರಿಕ ನೀರಾವರಿ ವ್ಯವಸ್ಥೆಯ ತಜ್ಞತೆಯ ಅನನ್ಯ ಸಾಕ್ಷಿ. ನಾನೀಗ ಹೇಳುವುದರಲ್ಲಿ ಹೊಸತೇನೂ ಇಲ್ಲ, ಸಾವಿರಾರು ವರ್ಷಗಳ ಹಳೆಯ ವಿಚಾರ ನೆನಪಿಸಿದ್ದೇನೆ. ನಮ್ಮ ದೊಡ್ಡ ಸಮಸ್ಯೆಯೆಂದರೆ ಪುರಾತನ ಕೆರೆಗಳಲ್ಲಿ ಮಾತ್ರ ಹೂಳು ತುಂಬಿಲ್ಲ. ಸಚಿವರು, ಅಧಿಕಾರಿಗಳು, ರೈತರ ತಲೆಗಳಲ್ಲಿ ಕೆರೆಗಳಿಗಿಂತ ಜಾಸ್ತಿ ಹೂಳಿದೆ. ಕೃಷಿಕಪರ ವಿಚಾರವಾಗಿ ಜನರಲ್ಲಿ ಹೇಗೆ ಅರಿವು ಮೂಡಿಸಬೇಕೆಂಬುದನ್ನು ಮರೆತಿದ್ದೇವೆ. ಕೆರೆ ನೀರಾವರಿ ಮೂಲ ಸೂತ್ರ ಅರ್ಥಮಾಡಿಕೊಳ್ಳದೇ ಆಡಳಿತದ ಪ್ರಜ್ಞೆ ತಪ್ಪಿದೆ. ಪ್ರವಾಹ ಬಂದಾಗ ಕೆರೆ ಭರ್ತಿಮಾಡುವುದಕ್ಕೆ ಕಾಳಜಿವಹಿಸಿದ ನಾವು ಅಧಿಕ ವಿದ್ಯುತ್‌ ವ್ಯಯಿಸಿ ಅಣೆಕಟ್ಟೆ ನೀರಿನಿಂದ ಕೆರೆ ತುಂಬಿಸುವ ಕೋಟ್ಯಂತರ ರೂಪಾಯಿ ಕಾಮಗಾರಿ ಮಾಡುತ್ತಿದ್ದೇವೆ. ಜಲ ಜ್ಞಾನವಿಲ್ಲದವರ ಆಡಳಿತದ ದರ್ಬಾರಿನಲ್ಲಿ ಎತ್ತಿನಹೊಳೆ, ಮಹದಾಯಿಯ ಸಾವಿರಾರು ಕೋಟಿ ಹಣ ಮುಖ್ಯವಾಗುತ್ತದೆಯೇ ಹೊರತೂ ಕಾಲುಬುಡದ ನೀರು ನೋಡುತ್ತಿಲ್ಲ. ನದಿ ಪ್ರವಾಹವಾಗಿ ನೆರೆಯ ರಾಜ್ಯಕ್ಕೆ ಹರಿಯುತ್ತಿದೆ. ನೀರಿನ ವಿಚಾರಗಳನ್ನು ನೆಲದಲ್ಲಿ ನೋಡದೇ ನ್ಯಾಯಾಲಯಗಳಲ್ಲಿ ಮಾತಾಡುತ್ತ ಇನ್ನೆಷ್ಟು ವರ್ಷ ಕಾಲ ಕಳೆಯೋಣ?

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next