Advertisement

ಹಿಡಕಲ್‌ ಜಲಾಶಯದಲ್ಲಿ ಕುಡಿವ ನೀರಿಗಿಲ್ಲ ಚಿಂತೆ

11:20 PM May 13, 2019 | Lakshmi GovindaRaj |

ಬೆಳಗಾವಿ: ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗೆ ಕುಡಿಯಲು ಹಾಗೂ ನೀರಾವರಿಗೆ ನೀರು ಪೂರೈಸುವ ಹಿಡಕಲ್‌ ಜಲಾಶಯದಲ್ಲಿ ತೃಪ್ತಿಪಡುವಷ್ಟು ನೀರಿನ ಸಂಗ್ರಹವಿಲ್ಲ. ಆದರೆ ಜೂನ್‌ವರೆಗೆ ಕುಡಿಯುವ ನೀರು ಪೂರೈಸಲು ಯಾವುದೇ ಸಮಸ್ಯೆ ಇಲ್ಲ.

Advertisement

ಇದು ಹಿಡಕಲ್‌ ಜಲಾಶಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ಅಭಯ. ಈಗಿರುವ ಸ್ಥಿತಿಯಲ್ಲಿ ಜಲಾಶಯದಿಂದ ಕುಡಿಯುವ ನೀರು ಸರಬರಾಜಿಗೆ ಯಾವುದೇ ಅಡ್ಡಿ ಇಲ್ಲ. ಮೇ ತಿಂಗಳಲ್ಲಿ ಉತ್ತಮ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರಬಹುದು ಎಂಬುದು ಅಧಿಕಾರಿಗಳ ವಿಶ್ವಾಸ.

ಹುಕ್ಕೇರಿ ತಾಲೂಕಿನ ಹಿಡಕಲ್‌ ಬಳಿ ಘಟಪ್ರಭಾ ನದಿಗೆ ಕಟ್ಟಿರುವ ಹಿಡಕಲ್‌ ಜಲಾಶಯ ಒಟ್ಟು 51 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 7 ಟಿಎಂಸಿ ಅಡಿ ಹಾಗೂ ಬಾಕಿ ಉಳಿದ 44 ಟಿಎಂಸಿ ಅಡಿ ನೀರನ್ನು ನೀರಾವರಿಗೆ ಬಳಸಲಾಗುತ್ತಿದೆ. ಬೆಳಗಾವಿ ಹಾಗೂ ಬಾಗಲಕೊಟೆ ಜಿಲ್ಲೆಗಳ ಕುಡಿಯುವ ನೀರು ಹಾಗೂ ನೀರಾವರಿಗೆ ಇದು ಪ್ರಮುಖ ಆಸರೆ.

ಮಹಾರಾಷ್ಟ್ರದ ಅಂಬೋಲಿ ಘಟ್ಟ ಪ್ರದೇಶದ ಕಡೆಯಿಂದ ಕರ್ನಾಟಕಕ್ಕೆ ಬರುವ ಈ ನದಿ ತುಂಬಿಕೊಂಡಾಗ ಬಹಳ ಆಕರ್ಷಕವಾಗಿ ಕಾಣುತ್ತದೆ. ಬಹುತೇಕ ಅರಣ್ಯ ಪ್ರದೇಶವೇ ಜಲಾನಯನ ಪ್ರದೇಶವಾಗಿರುವ ಕಾರಣ ಜಲಾಶಯಕ್ಕೆ ಹೂಳಿನ ಆತಂಕ ಇದುವರೆಗೆ ಕಾಡಿಲ್ಲ. 10 ವರ್ಷಗಳ ಹಿಂದೆ ಸಮೀಕ್ಷೆ ಮಾಡಿಸಿದಾಗ ಜಲಾಶಯದಲ್ಲಿ ಆತಂಕ ಪಡುವಷ್ಟು ಹೂಳಿನ ಅಂಶ ಕಂಡುಬಂದಿರಲಿಲ್ಲ.

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಒಟ್ಟು 3.51 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು ಉಣಿಸುವ ಜಲಾಶಯ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಮುಖ್ಯ ಕಾಲುವೆಗಳನ್ನು ಹೊಂದಿದೆ. ಇದಲ್ಲದೇ ಚಿಕ್ಕೋಡಿ, ನಿಪ್ಪಾಣಿ, ಕೌಜಲಗಿ, ಮಮದಾಪುರ ಭಾಗಗಳಲ್ಲಿ ಬಲದಂಡೆ ಉಪಕಾಲುವೆ, ಘಟಪ್ರಭಾ, ರಾಯಬಾಗ, ಕುಡಚಿ, ಜಮಖಂಡಿ, ರಬಕವಿ, ಮಹಾಲಿಂಗಪುರ ಪ್ರದೇಶಗಳಲ್ಲಿ ಎಡದಂಡೆ ಉಪಕಾಲುವೆಗಳಿವೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸುಮಾರು 2 ಟಿಎಂಸಿ ಅಡಿ ನೀರು ಕಡಿಮೆಯಿದೆ. 2018ರಲ್ಲಿ ಜಲಾಶಯದಲ್ಲಿ ಈ ವೇಳೆಗೆ ಬಳಸಲು ಯೋಗ್ಯವಾದ 6.04 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈ ವರ್ಷ ಇದೇ ಅವಧಿಗೆ ಜಲಾಶಯದಲ್ಲಿ 4.28 ಟಿಎಂಸಿ ಅಡಿ ನೀರು ಉಳಿದುಕೊಂಡಿದೆ.

ಈ ಬಾರಿ ಬಿಸಿಲಿನ ಪ್ರಖರತೆ ಹಾಗೂ ಭೀಕರ ಬರಗಾಲ ಎದುರಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ನೀರಾವರಿಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿದೆ. ಜೂನ್‌ವರೆಗೆ ಎರಡೂ ಜಿಲ್ಲೆಗಳಿಗೆ ಯಾವ ತೊಂದರೆಯೂ ಆಗದು ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಾದೇಶಿಕ ಆಯುಕ್ತರ ಆದೇಶದಂತೆ ಮಾತ್ರ ಕುಡಿಯಲು ನೀರು ಬಿಡುಗಡೆ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಗೆ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ 2 ಟಿಎಂಸಿ ಅಡಿ ನೀರು ಬಿಡಲಾಗಿದೆ. ಹೀಗಾಗಿ ಅಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶದ ನೀರಾವರಿಗೆ ಈ ಜಲಾಶಯವೇ ಮುಖ್ಯ ಆಸರೆ. ಜಲಾಶಯ ನಿರ್ಮಾಣವಾದ ನಂತರ ನಾಲ್ಕೈದು ಬಾರಿ ಹೊರತುಪಡಿಸಿ ಉಳಿದ ಯಾವ ಅವಧಿಯಲ್ಲೂ ಕುಡಿಯಲು ಹಾಗೂ ನೀರಾವರಿಗೆ ನೀರು ಕೊಡುವಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಜಲಾಶಯ ಸಹ ಭರ್ತಿಯಾಗಿದೆ.
-ಎಸ್‌.ಎಂ. ಮಾಡಿವಾಲೆ, ಸಹಾಯಕ ಇಂಜಿನಿಯರ್‌, ಹಿಡಕಲ್‌ ಜಲಾಶಯ

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next