Advertisement
ಈ ಬಾರಿ ನಿರೀಕ್ಷಿತ ಮಳೆಯಾಗದೆ ಸೊರಗಿದ್ದ ತಾಲೂಕಿನ ವಿವಿಧ ಜಲಪಾತಗಳಲ್ಲಿ ಎರಡು ದಿನಗಳಿಂದ ನಿಧಾನವಾಗಿ ನೀರಿನ ಹರಿವು ಆರಂಭಗೊಂಡಿದೆ. ಬಿರುಸು ಮಳೆ ಪರಿಣಾಮ ಜಲಪಾತದ ಒಡಲಿನಲ್ಲಿ ಜಲಲ ಜಲಧಾರೆ ನರ್ತಿಸಲು ಆರಂಭಿಸಿದೆ. ಮಳೆ ಪ್ರಮಾಣ ಇನ್ನಷ್ಟು ಹೆಚ್ಚಳ ಗೊಂಡರೆ ನೋಡುಗರ ಮನ ಸೆಳೆಯಬಹುದು.
Related Articles
Advertisement
ಅಮರಮುಟ್ನೂರು ಗ್ರಾಮದ ಚಾಮಡ್ಕ ಜಲಪಾತ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ಕೆಲ ವರ್ಷಗಳಿಂದ ಇದು ಪ್ರಖ್ಯಾತಿ ಪಡೆದಿದೆ. ಬಂಟಮಲೆಯಲ್ಲಿ ಹುಟ್ಟುವ ತೊರೆ ಎತ್ತರದಿಂದ ಧುಮ್ಮಿಕ್ಕಿ ಜಲಧಾರೆಯಾಗಿ ಸಾಗುತ್ತದೆ. ಸುಳ್ಯದಿಂದ 11 ಕಿ.ಮೀ. ದೂರದಲ್ಲಿದೆ. ಸಿನೆಮಾ, ಕಿರುಚಿತ್ರ, ಆಲ್ಬಂ ಶೂಟಿಂಗ್ಗೆ ಇದು ಅತ್ಯಂತ ಪ್ರಸಿದ್ದಿ ಸ್ಥಳ. ಹಾಗಾಗಿ ಚಾಮಡ್ಕ ಕಿರು ಜಲಪಾತ ನೋಡಲೆಂದೂ ಹೊರ ತಾಲೂಕಿನಿಂದಲೂ ಜನರು ಆಗಮಿಸುತ್ತಾರೆ.
ಇವಲ್ಲದೆ ಚಾಮಡ್ಕ, ದೇವರಕೊಲ್ಲಿ, ಲೈನ್ಕಜೆ, ನಿಡ್ಯಮಲೆ, ಕಾಂತಬೈಲು, ಕಲ್ಯಾಳ, ಮೂಕಮಲೆ, ಹೊಸಗದ್ದೆ, ಜಾಕೆ, ಪಳಂಗಾಯ, ಬಿಳಿಮಲೆ, ಕೆಮನಬಳ್ಳಿ ಮೊದಲಾದ ಜಲಪಾತಗಳು ಮಳೆಗಾಲ ದಲ್ಲಿ ಚಾರಣಿಗರ ನೆಚ್ಚಿನ ತಾಣವಾಗಿವೆ.
ಧುಮ್ಮಿಕ್ಕಲು ಮಳೆ ಕೊರತೆ
ಕಾಡಂಚಿನಲ್ಲಿ ಬಿರು ಬೇಸಗೆಯಲ್ಲೂ ಒರತೆ ನೀರು ಇರುತ್ತದೆ. ನೀರ ಸೆಲೆ ಬತ್ತುವುದು ಕಡಿಮೆ. ಕೆಲ ವರ್ಷದಿಂದ ಒರತೆ ನೀರು ಇಳಿಮುಖವಾಗಿದೆ. ಮಳೆ ಬಿದ್ದಿಲ್ಲವೇನೂ ಎಂಬಂತಿದೆ ಅಲ್ಲಿನ ಚಿತ್ರಣ. ಅಂರ್ತಜಲಕ್ಕೆ ಮಳೆ ನೀರು ಇಳಿಯದ ಕಾರಣ ನೀರು ಒರತೆ ರೂಪದಲ್ಲಿ ಜಿನುಗುತ್ತಿಲ್ಲ. ಜತೆಗೆ ಮಳೆಯೂ ಸುರಿಯುತ್ತಿಲ್ಲ. ಜೂನ್ ತಿಂಗಳಲ್ಲೇ ಉಕ್ಕೇರುವ ಜಲಪಾತಗಳು ಜುಲೈ ಅಂತ್ಯದಲ್ಲಿ ಹರಿವು ಆರಂಭಿಸಿರುವುದು ಮಳೆ ಕಡಿಮೆ, ನೀರಿನ ಹರಿವಿಲ್ಲದಿರುವುದಕ್ಕೆ ಉದಾಹರಣೆ.
– ಕಿರಣ್ ಪ್ರಸಾದ್ ಕುಂಡಡ್ಕ