Advertisement

ಬರಿದಾಗುತ್ತಿದೆ ಮಲಪ್ರಭೆ ಒಡಲು

07:17 AM May 27, 2019 | Suhan S |
ಬೆಳಗಾವಿ: ಸವದತ್ತಿ ತಾಲೂಕಿನ ನವಿಲುತೀರ್ಥದ ಬಳಿ 1972ರಲ್ಲಿ ನಿರ್ಮಾಣವಾಗಿರುವ ಮಲಪ್ರಭಾ ಜಲಾಶಯ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರ ನೀರಿನ ದಾಹ ತಣಿಸುವದಲ್ಲದೆ ನೀರಾವರಿ ಸೌಲಭ್ಯ ಒದಗಿಸಿದೆ. ಆದರೆ ಪ್ರತಿ ವರ್ಷ ಉಂಟಾಗುವ ಮಳೆಯ ಅಭಾವ ಇದನ್ನೇ ನಂಬಿಕೊಂಡಿರುವ ಪ್ರದೇಶಗಳ ಜನರಿಗೆ ಕುಡಿಯುವ ನೀರಿನ ಆತಂಕ ಉಂಟು ಮಾಡುತ್ತಲೇ ಇದೆ.

ನೀರಾವರಿ ನಿಗಮದ ಅಧಿಕಾರಿಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಜಲಾಶಯದಲ್ಲಿ ಸುಮಾರು ಒಂದು ಟಿಎಂಸಿ ನೀರಿನ ಕೊರತೆ ಇದೆ. ಆದರೆ ಜೂನ್‌ ಅಂತ್ಯದವರೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವದಿಲ್ಲ. ಈಗ ಇರುವ ನೀರಿನಿಂದ ನಿಭಾಯಿಸಬಹುದು. ನೀರಾವರಿಗೆ ನೀರು ಪೂರೈಕೆ ನಿಲ್ಲಿಸಿರುವದರಿಂದ ಅಂತಹ ಗಂಭೀರತೆ ಇದುವರೆಗೆ ನಿರ್ಮಾಣ ಆಗಿಲ್ಲ.

Advertisement

ನಾಲ್ಕು ದಶಕಗಳ ಹಿಂದೆ ನಿರ್ಮಾಣವಾಗಿರುವ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 37.73 ಟಿಎಂಸಿ ಜಲಾಶಯದಲ್ಲಿ ನೀರು ಸಂಗ್ರಹ ಆರಂಭವಾದಾಗಿನಿಂದ ಇದುವರೆಗೆ ನಾಲ್ಕು ಬಾರಿ ಮಾತ್ರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯ ಕೇವಲ ಮಲಪ್ರಭಾ ನದಿಯನ್ನು ಮಾತ್ರ ಅವಲಂಬಿಸಿರುವದರಿಂದ ನದಿಯಲ್ಲಿ ಹರಿಯುವ ನೀರು ಹಾಗೂ ಅದರ ವ್ಯಾಪ್ತಿಯಲ್ಲಿ ಆಗುವ ಮಳೆಯ ಪ್ರಮಾಣದ ಮೇಲೆ ನೀರಿನ ಲಭ್ಯತೆಯ ಬಗ್ಗೆ ಅಂದಾಜಿಸಬೇಕಾಗಿದೆ.

ಸದ್ಯ ಜಲಾಶಯದಲ್ಲಿ 1ಟಿಎಂಸಿ ನೀರು ಇರುವದರಿಂದ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಜಲಾಶಯದಲ್ಲಿ ಮೇ 26 ಅಂಕಿ ಅಂಶಗಳ ಪ್ರಕಾರ 1.408(ಬಳಕೆಗೆ) ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯೇ. 2018 ಮೇ 26ರಂದು ಜಲಾಶಯದಲ್ಲಿ 1.903 ಟಿಎಂಸಿ ನೀರು ಸಂಗ್ರಹವಿತ್ತು. ಮುಂದಿನ ತಿಂಗಳು ಮಳೆ ಆರಂಭವಾಗುವದರಿಂದ ಜಲಾಶಯಕ್ಕೆ ಹೊಸ ನೀರು ಬರುತ್ತದೆ ಎನ್ನುತ್ತಾರೆ ನೀರಾವರಿ ನಿಗಮದ ಅಧಿಕಾರಿಗಳು.

ಮಲಪ್ರಭಾ ಜಲಾಶಯದ ಪಕ್ಕದಲ್ಲೇ ಇರುವ ನೂರಾರು ಗ್ರಾಮಗಳಿಗೆ ನದಿಯ ಮೂಲಕವೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಬೇಸಿಗೆ ಸಮಯದಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವದರಿಂದ ಕೆಳಗಿನ ಹಳ್ಳಿಗಳಿಗೆ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಜನ ಮತ್ತು ಜಾನುವಾರುಗಳು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಜೂನ್‌ದಲ್ಲಿ ಸಕಾಲಕ್ಕೆ ಮಳೆಯಾಗದಿದ್ದರೆ ಜಲಾಶಯದ ಒಡಲು ಖಾಲಿಯಾಗಿದೆ.

•ಕೇಶವ ಆದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next