Advertisement

ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನಕ್ಕೆ ನುಗ್ಗಿದ ಕುಬ್ಜಾ ನದಿ ನೀರು

01:21 AM Jul 06, 2022 | Team Udayavani |

ಸಿದ್ದಾಪುರ: ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಕುಬ್ಜಾ ನದಿ ಉಕ್ಕಿ ಹರಿದು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ
ದೇವ ಸ್ಥಾನದ ಒಳಪ್ರಾಂಗಣಕ್ಕೆ ಪ್ರವೇಶಿಸಿತು.

Advertisement

ಗರ್ಭಗುಡಿಯ ಪ್ರವೇಶಕ್ಕೆ ಕೆಲವೇ ಅಡಿಗಳ ನೀರು ಬಾಕಿ ಇದ್ದು, ಕುಬ್ಜಾ ನದಿಯ ನೀರು ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದಲ್ಲಿ ಪ್ರತೀ ವರ್ಷದಂತೆ ಕುಬ್ಜಾ ನದಿಯು ಶ್ರೀ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀಯನ್ನು ಸ್ನಾನಗೈಯುವ ಸಾಧ್ಯತೆ ಇದೆ. ಪಶ್ಚಿಮಘಟ್ಟದ ತಪ್ಪಲಲ್ಲಿ ಮಳೆ ಮುಂದುವರಿದಿದೆ.

ಮಾರಣಕಟ್ಟೆ ದೇಗುಲ ಜಲಾವೃತ
ವಂಡ್ಸೆ: ಕಳೆೆದ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿದ್ದು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇಗುಲವು ಮಂಗಳವಾರ ಸಂಪೂರ್ಣವಾಗಿ ಜಲಾವೃತಗೊಂಡಿತು.ದೇಗುಲ ಸನಿಹದ ಬ್ರಹ್ಮಕುಂಡ ನದಿಯೂ ಉಕ್ಕಿ ಹರಿಯುತ್ತಿದ್ದು, ಬೃಹತ್‌ ಭೋಜನಶಾಲೆಯೂ ಜಲಾವೃತ ಗೊಂಡಿದೆ.

ಪಶ್ಚಿಮಘಟ್ಟದ ತಪ್ಪಲಿನ ಜನಜೀವನ ಅಸ್ತವ್ಯಸ್ತ
ಸಿದ್ದಾಪುರ: ನಿರಂತರ ಮಳೆಯಿಂದಾಗಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮರಗಳು ಹಾಗೂ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಹೆದ್ದಾರಿಗಳ ಮೇಲೆ ಬಿದ್ದ ಮರಗಳಿಂದಾಗಿ ರಸ್ತೆ ಸಂಚಾರ ಸ್ಥಗಿತವಾಗಿದೆ.

ಪಂಚಗಂಗಾವಳಿಯಲ್ಲಿ ಸಮುದ್ರ ಸೇರುವ ಪಂಚ ನದಿಗಳು ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತ ಗೊಂಡಿವೆ. ಶಾನ್ಕಟ್ಟು ಬಳಿ ಹತ್ತಾರು ಎಕರೆ ಭತ್ತದ ಗದ್ದೆ ಹಾಗೂ ಕೃಷಿ ಭೂಮಿ ಜಲಾವೃತಗೊಂಡಿವೆ. ಸಿದ್ದಾಪುರ- ಅಮಾಸೆಬೈಲು ಮುಖ್ಯ ರಸ್ತೆ ಕಾನುಹೊಳೆ ಎಂಬಲ್ಲಿ ರಸ್ತೆ ಮಳೆ ನೀರಿನಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿವೆ.

Advertisement

ಬಾಳೆಬರೆ ಘಾಟಿ ಜರ್ಝರಿತ: ಭಾರೀ ಮಳೆಯ ಪರಿಣಾಮ ಬಾಳೆಬರೆ ಘಾಟಿರಸ್ತೆ ಜರ್ಜರಿತವಾಗಿದೆ. ಅಲ್ಲಲ್ಲಿ ಹೊಂಡ ಗುಂಡಿಗಳು ಬಿದ್ದಿವೆ. ರಸ್ತೆಯ ಇಕ್ಕೆಲಗಳ ಮರಗಳ ಬುಡದ ಮಣ್ಣು ಸಡಿಲಗೊಂಡು ಬೀಳುವ ಭೀತಿ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next