Advertisement

ಬೇಕಾಬಿಟ್ಟಿ ಬಡಾವಣೆಗಳಿಂದ ನೀರಿನ ಬವಣೆ

11:15 AM Oct 27, 2018 | |

ಬೆಂಗಳೂರು: ದಿನ ಕಳೆದಂತೆ ರಾಜಧಾನಿಯ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ನಗರ ಭರ್ತಿಯಾಗಿರುವುದರಿಂದ ಹೊರವಲಯದಲ್ಲಿ ನೂರಾರು ಹೊಸ ಫ್ಲಾಟ್‌ಗಳು, ಬಡಾವಣೆಗಳು ತಲೆ ಎತ್ತುತ್ತಿವೆ. ಅಲ್ಲಿಗೆ “ಕಾವೇರಿ” ನೀರು ತಲುಪಿಲ್ಲವಾದ್ದರಿಂದ ಕುಡಿಯುವ ನೀರಿಗೆ ಅಂತರ್ಜಲ ಅವಲಂಬಿಸಬೇಕಾಗಿದೆ. ಆದರೆ, ಅಂತರ್ಜಲಕ್ಕೆ ಕನ್ನ ಹೆಚ್ಚುತ್ತಿದ್ದಂತೆ ಭವಿಷ್ಯದಲ್ಲಿ ಭಾರೀ ಸಮಸ್ಯೆ ತಲೆದೋರುವ ಆತಂಕ ಕಾಣಿಸಿಕೊಳ್ಳಲಾರಂಭಿಸಿದೆ. 

Advertisement

ಆತಂಕದ ವಿಚಾರವೆಂದರೆ, ಬೆಂಗಳೂರು ಹೊರವಲಯದಲ್ಲಿ ನೀರು ಪೂರೈಕೆಗೆ ಅಪಾರ್ಟ್‌ಮೆಂಟ್‌, ಬಡಾವಣೆಗಳು ಕೊಳವೆಬಾವಿಗಳ ಮೊರೆ ಹೋಗುತ್ತಿರುವುದರಿಂದ ಅಂತರ್ಜಲ ಮಟ್ಟ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಮೂರ್ನಾಲ್ಕು ವರ್ಷದ ಹಿಂದೆ 200-300 ಅಡಿ ಆಳದಲ್ಲಿ ನೀರು ಲಭ್ಯವಾಗುತ್ತಿತ್ತು. ಪ್ರಸ್ತುತ ನೀರು ಸಿಗಬೇಕಾದರೆ 500ರಿಂದ 800 ಅಡಿ ಕೊಳವೆ ಬಾವಿ ಕೊರೆಯಬೇಕು. ಆದರೂ ನೀರು ಸಿಗುತ್ತದೆ ಎಂಬ ಖಾತರಿ ಇಲ್ಲ. 

ಸದ್ಯ ಕಾವೇರಿ ನೀರು ಪೂರೈಕೆಯಾಗುತ್ತಿರುವ ನಗರದ ಭಾಗಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಜಲ ಮಂಡಳಿ ಒದ್ದಾಡುತ್ತಿದೆ. ಅನೇಕ ಕಡೆ ಕೊಳವೆ ಬಾವಿಗಳ ನೀರನ್ನು ಅವಲಂಬಿಸಬೇಕಾಗಿದೆ. ಪ್ರಸ್ತುತ ಕಾವೇರಿಯಿಂದ ಪ್ರತಿನಿತ್ಯ 1450 ಎಂಎಲ್‌ಡಿ ನೀರು ಬರುತ್ತಿದ್ದು, ಐದನೇ ಹಂತದ ಯೋಜನೆ ಪೂರ್ಣಗೊಂಡರೆ ಹೆಚ್ಚುವರಿ 750 ಎಂಎಲ್‌ಡಿ ನೀರು ಸಿಗುತ್ತದೆ. ಇದರ ಜತೆಗೆ 400 ಎಂಎಲ್‌ಡಿ ನೀರು ಕೊಳವೆ ಬಾವಿಗಳಿಂದ ಒದಗಿಸಲಾಗುತ್ತಿದೆ.

ಇಷ್ಟೂ ನೀರು ಬೆಂಗಳೂರು ನಗರಕ್ಕೆ (ಹೊಸದಾಗಿ ಸೇರಿರುವ 110 ಹಳ್ಳಿಗಳು ಸೇರಿ) ಬೇಕಾಗಿದ್ದು, ಹೊರಭಾಗದ ಅಪಾರ್ಟ್‌ಮೆಂಟ್‌, ಬಡಾವಣೆಗಳಿಗೆ ಕಾವೇರಿ ನೀರು ಗಗನ ಕುಸುಮವೇ ಆಗಿದೆ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ನಿಗದಿಯಂತೆ ಯೋಜನೆಯಿಂದ ನಗರಕ್ಕೆ 1.7 ಟಿಎಂಸಿ ಲಭ್ಯವಾದರೆ ಆ ನೀರನ್ನು ಹೊರವಲಯದ ಅಪಾರ್ಟ್‌ಮೆಂಟ್‌, ಬಡಾವಣೆಗಳಿಗೆ ಒದಗಿಸಬಹುದು. ಇಲ್ಲವಾದರೆ ಅಂತರ್ಜಲವೇ ಅವರಿಗೆ ಆಧಾರ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ಕಳೆದ ನಾಲ್ಕು ದಶಕಗಳಲ್ಲಿ ನಗರದಲ್ಲಿ ಕಾಂಕ್ರಿಟ್‌ ಪ್ರಮಾಣ ಶೇ. 1028ರಷ್ಟು ಬೆಳೆದಿದ್ದರೆ ಶೇ. 88ರಷ್ಟು ಗಿಡ-ಮರಗಳು, ಶೇ. 78ರಷ್ಟು ಕೆರೆ-ಕುಂಟೆಗಳು ನಾಶವಾಗಿವೆ. ಇದರ ಮಧ್ಯೆಯೂ ಶೇ. 40ರಷ್ಟು ಮಂದಿ ಅಂತರ್ಜಲವನ್ನೇ ನೆಚ್ಚಿಕೊಂಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಇದೀಗ ಕೆರೆ-ಕುಂಟೆಗಳು ನಾಶವಾಗಿ ಅಪಾರ್ಟ್‌ಮೆಂಟ್‌, ಬಡಾವಣೆಗಳಿಂದ ತುಂಬಿ ಅಂತರ್ಜಲ ಮರುಪೂರಣಕ್ಕೂ ಅವಕಾಶವಿಲ್ಲದಂತಾಗಿದೆ.

Advertisement

ಈ ಭಾಗದಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕಿದ್ದರೆ ಕೈಗಾರಿಕೆಗಳನ್ನು ದೂರದ ಊರುಗಳಿಗೆ ಸ್ಥಳಾಂತರಿಸಿ ಅವು ಬಳಸುತ್ತಿರುವ ನೀರನ್ನು ಜನರಿಗೆ ಒದಗಿಸಬೇಕು. ಇಲ್ಲವಾದಲ್ಲಿ ನೀರು, ಶುದ್ಧ ಗಾಳಿಯ ಸಮಸ್ಯೆಯುಂಟಾಗಿ ಜನ ಅಲ್ಲಿಂದ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ತಲೆದೋರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.

ಜನರ  ತಕ್ಷಣದ ಅವಶ್ಯಕತೆಗೆ ತಕ್ಕಂತೆ ಅಪಾರ್ಟ್‌ಮೆಂಟ್‌, ಬಡಾವಣೆಗಳು ನಿರ್ಮಾಣವಾಗುತ್ತಿವೆಯೇ ಹೊರತು ಭವಿಷ್ಯದ ಸವಾಲುಗಳನ್ನು ಎದುರಿಸಲು ಯಾವುದೇ ಯೋಜನೆಗಳನ್ನು ರೂಪಿಸಲಾಗುತ್ತಿಲ್ಲ. ಹಣ ಮಾಡುವ ಉದ್ದೇಶದಿಂದ ಖಾಸಗಿಯವರು ಬಡಾವಣೆ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಜನರಿಗೆ ಹಂಚಿಕೆ ಮಾಡುತ್ತಿದ್ದರೆ,

ಅವರಿಗೆ ಪೈಪೋಟಿ ನೀಡಲು ಬಿಡಿಎ ಕೂಡ ಹೊಸ ಪ್ರದೇಶಗಳನ್ನು ವಿಸ್ತರಿಸಿಕೊಂಡು ಬಡಾವಣೆ, ಮನೆಗಳನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಇನ್ನು ಹತ್ತು ವರ್ಷಗಳ ಬಳಿಕ ಆ ಭಾಗದಲ್ಲಿ ನೀರು ಸೇರಿದಂತೆ ಜೀವಿಸಲು ಸಾಧ್ಯವಾಗುವ ಪರಿಸರ ಒದಗಿಸುವುದು ಹೇಗೆ ಎಂಬ ಆತಂಕ ಕಾಣಿಸಿಕೊಂಡಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಬೇಕಾಬಿಟ್ಟಿ ಬೆಳೆಯುತ್ತಿರುವ ನಗರದಿಂದಾಗಿ ಬೆಂಗಳೂರು ಹೊರವಲಯದಲ್ಲಿ ಈಗಾಗಲೇ ಉದ್ಭವಿಸಿರುವ ನೀರಿನ ಸಮಸ್ಯೆಗೆ ಪರಿಹಾರ ಕಷ್ಟಸಾಧ್ಯ. ಕಾಂಕ್ರಿಟ್‌ ಕಾಡುಗಳ ನಿರ್ಮಾಣಕ್ಕೆ ಕಡಿವಾಣ ಹಾಕಿ ಇರುವ ಸಂಪನ್ಮೂಲವನ್ನೇ ಬಳಸಿಕೊಳ್ಳಲು ಆದ್ಯತೆ ನೀಡುವುದೊಂದೇ ಭವಿಷ್ಯದಲ್ಲಿ ಮಾಡಬೇಕಾದ ಕೆಲಸ ಎನ್ನುತ್ತಾರೆ ಐಐಎಸ್‌ಸಿ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ.

ಹೊರವಲಯಕ್ಕೆ “ಶಿಫ್ಟ್’: ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಯಾಗುತ್ತಿರುವುದರಿಂದ ಜನರು ವಸತಿಗಾಗಿ ನಗರದ ಹೃದಯ ಭಾಗಕ್ಕಿಂತ ಹೊರವಲಯವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ನೂರಾರು ಖಾಸಗಿ ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು ನಿರ್ಮಾಣಗೊಳ್ಳುತ್ತಿದೆ.

ಸರ್ಕಾರದ ಅಂಗ ಸಂಸ್ಥೆಯಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಹೊಸ ಮನೆ, ಬಡಾವಣೆಗಳ ನಿರ್ಮಾಣಕ್ಕೆ ಈ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ. ನಗರಕ್ಕೆ ಹೋಲಿಸಿದರೆ ಇಲ್ಲಿ ಮನೆ, ಫ್ಲಾಟ್‌ಗಳ ದರ ಕಡಿಮೆ ಇರುವುದರಿಂದ ಜನರೂ ಅವುಗಳಿಗೆ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಾವೇರಿ ನೀರು ಹೊರತಾಗಿ ಅತಿ ಹೆಚ್ಚು ಬಳಕೆಯಾಗುತ್ತಿರುವುದು ಅಂತರ್ಜಲ. ಅದರಲ್ಲೂ ಬೆಂಗಳೂರು ಹೊರವಲಯದಲ್ಲಿ ಬೋರ್‌ವೆಲ್‌ಗ‌ಳಿಂದಲೇ ನೀರು ಪೂರೈಕೆಯಾಗುತ್ತವೆ. ಹೊಸದಾಗಿ ತಲೆ ಎತ್ತಿರುವ ಅಪಾರ್ಟ್‌ಮೆಂಟ್‌, ಬಡಾವಣೆಗಳಿಗೂ ಕೊಳವೆಬಾವಿ ನೀರೇ ಜೀವಾಳ. ಏಕೆಂದರೆ, ಇಲ್ಲಿ ಕಾವೇರಿ ನೀರು ಲಭ್ಯವಿಲ್ಲ ಮತ್ತು ಪೂರೈಕೆ ಮಾಡುವ ಸ್ಥಿತಿಯಲ್ಲೂ ಜಲ ಮಂಡಳಿ ಇಲ್ಲ.

ಮಳೆ ಕೊಯ್ಲು ಅಳವಡಿಸದಿರುವುದೇ ಸಮಸ್ಯೆಗೆ ಕಾರಣ: ಹೊರವಲಯದಲ್ಲಿ ತಲೆ ಎತ್ತುತ್ತಿರುವ ಅಪಾರ್ಟ್‌ಮೆಂಟ್‌, ಬಡಾವಣೆಗಳಲ್ಲಿ ಕೊಳವೆ ಬಾವಿ ಮೂಲಕ ನೀರೊದಗಿಸಲು ಆದ್ಯತೆ ನೀಡಲಾಗುತ್ತದೆಯೇ ಹೊರತು ಅಂತರ್ಜಲ ಮರುಪೂರಣಕ್ಕೆ ಆದ್ಯತೆ ನೀಡುತ್ತಿಲ್ಲ. ಈ ಪ್ರದೇಶಗಳಲ್ಲಿ ಮಳೆನೀರು ಕೊಯ್ಲು ಮೂಲಕ ಅಂತರ್ಜಲ ಮರುಪೂರಣಕ್ಕೆ ಸಾಕಷ್ಟು ಅವಕಾಶಗಳಿವೆ. ಬೆರಳೆಣಿಕೆಯಷ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಮಾತ್ರ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಆದರೆ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. 

ಹೊರವಲಯದಲ್ಲಿ ಹೆಚ್ಚುತ್ತಿರುವ ಕಾಂಕ್ರಿಟೀಕರಣದಿಂದ ಆಗಬಹುದಾದ ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಅಥವಾ ಸ್ಥಳೀಯ ಆಡಳಿತ ಮತ್ತು ಜಲ ಮಂಡಳಿಯೇ ಗಮನಹರಿಸಬೇಕಾಗುತ್ತದೆ. ಜಲ ಮಂಡಳಿ ಪೈಪ್‌ಲೈನ್‌ ಇದ್ದರೆ ಮಾತ್ರ ನೀರು ಪೂರೈಸುತ್ತೇವೆ ಎನ್ನುವ ಬದಲು ಮನೆ ಮನೆಗೆ ನೀರು ಪೂರೈಸುವ ಜವಾಬ್ದಾರಿ ವಹಿಸಿಕೊಳ್ಳಬೇಕು.
-ಡಾ.ಅಶ್ವಿ‌ನ್‌, ನಗರ ತಜ್ಞ

ಬೇಕಾಬಿಟ್ಟಿ ಮತ್ತು ಅವೈಜ್ಞಾನಿಕವಾಗಿ ಬಡಾವಣೆ, ಅಪಾರ್ಟ್‌ಮೆಂಟ್‌ ನಿರ್ಮಾಣದ ಮೂಲಕ ಬೆಂಗಳೂರು ಸುತ್ತಲೂ ವಿಷದ ವರ್ತುಲ ನಿರ್ಮಾಣ ಮಾಡಲಾಗುತ್ತಿದೆ. ಅದರ ಬದಲು ಬಡಾವಣೆ ಅಥವಾ ಅಪಾರ್ಟ್‌ಮೆಂಟ್‌ ಯೋಜನೆ ಮಂಜೂರಾತಿಗೆ ಮುನ್ನವೇ ನೀರು, ಒಳಚರಂಡಿ, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸವಾಗಬೇಕು. ನಂತರವಷ್ಟೇ ಮಂಜೂರಾತಿ ನೀಡಬೇಕು.
-ಅ.ನ.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ

* ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next