Advertisement

ಅಂಗನವಾಡಿ ಎದುರಲ್ಲೇ ತ್ಯಾಜ್ಯ: ಸಾಂಕ್ರಾಮಿಕ ರೋಗ ಭೀತಿ

06:00 AM Jul 03, 2018 | Team Udayavani |

ಕಾಪು: ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕುಂಜೂರು ದುರ್ಗಾ ನಗರದಲ್ಲಿರುವ ಅಂಗನವಾಡಿಯ ಮುಂಭಾಗದಲ್ಲಿ ತ್ಯಾಜ್ಯದ ಕೊಂಪೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಅಂಗನವಾಡಿ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

Advertisement

ಕುಂಜೂರು ದುರ್ಗಾ ನಗರದಲ್ಲಿರುವ ನೂರಾರು ಮನೆಗಳಲ್ಲಿ ಸಂಗ್ರಹವಾಗುವ ಕಸ ತ್ಯಾಜ್ಯ ವಸ್ತುಗಳನ್ನು ಅಂಗನವಾಡಿ ಮುಂಭಾಗದಲ್ಲಿರುವ ರೈಲ್ವೇ ಟ್ರಾÂಕ್‌ ಬಳಿಯಿರುವ ಖಾಲಿ ಪ್ರದೇಶದಲ್ಲಿ ಎಸೆದು ಹೋಗುತ್ತಿರುವುದು ಇಲ್ಲಿ ತ್ಯಾಜ್ಯದ ಕೊಂಪೆ ಬೆಳೆಯಲು ಮುಖ್ಯ ಕಾರಣವಾಗಿದೆ.

ಅಂಗನವಾಡಿಯ ಮುಂಭಾಗದಲ್ಲಿ ಮೊದಲು ಸಣ್ಣದಾಗಿದ್ದ ತ್ಯಾಜ್ಯದ ಕೊಂಪೆ ಈಗ ವಿಸ್ತಾರವಾಗಿ ಬೆಳೆಯುತ್ತಿದ್ದು, ಪರಿಸರದ ಜನರಲ್ಲಿ ಅಸಹ್ಯಕರ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದೆ. 

ಕೇವಲ ಕಸ ಮಾತ್ರ ಅಲ್ಲ 
ಅಂಗನವಾಡಿ ಮುಂಭಾಗದ ಖಾಲಿ ಪ್ರದೇಶದಲ್ಲಿ ಜನ ಕೇವಲ ಕಸ ಮಾತ್ರ ಎಸೆದು ಹೋಗುತ್ತಿಲ್ಲ. ಬದಲಾಗಿ ಪ್ಲಾಸ್ಟಿಕ್‌ ತ್ಯಾಜ್ಯ, ಮನೆಯಲ್ಲಿ ಬಳಸಿ ಉಳಿಕೆಯಾಗುವ ಅನ್ನ, ಸಾಂಬಾರು ಇತ್ಯಾದಿ ತಿಂಡಿ ಪದಾರ್ಥಗಳು, ಡೈಪರ್ ಮತ್ತು ನ್ಯಾಪಿRನ್‌ಗಳು, ಹಳೇ ಬಟ್ಟೆಗಳು, ಮೀನು, ಕೋಳಿ, ಮಾಂಸದ ತ್ಯಾಜ್ಯಗಳನ್ನೂ ಇಲ್ಲಿಗೆ ತಂದು ಎಸೆದು ಹೋಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.ಮಕ್ಕಳು, ಪರಿಸರದ ಬಗ್ಗೆ ಜನರ ಕಾಳಜಿ ಬಹಿರಂಗ
ಗ್ರಾ.ಪಂ. ವತಿಯಿಂದ ಪಣಿಯೂರು ಶಾಲಾ ಕ್ರೀಡಾಂಗಣದ ಬಳಿಯಲ್ಲಿ ಅಧಿಕೃತವಾದ ಕಸದ ಹೊಂಡವನ್ನು ನಿರ್ಮಿಸಲಾಗಿದ್ದರೂ, ಅಲ್ಲಿವರೆಗೆ ಹೋಗಿ ಕಸ ಎಸೆಯಲು ಉದಾಸೀನತೆ ತೋರುವ ದುರ್ಗಾ ನಗರ ಕಾಲನಿಯ ಜನತೆ ಕಾಲೊನಿಯ ಮಕ್ಕಳು ತೆರಳುವ ಅಂಗನವಾಡಿಯ ಮುಂಭಾಗದಲ್ಲೇ ಎಸೆದು ಹೋಗುತ್ತಿರುವುದು ಜನತೆಯ ಪರಿಸರ ಮತ್ತು ಪುಟ್ಟ ಮಕ್ಕಳ ಬಗ್ಗೆ ಹೊಂದಿರುವ ಕಾಳಜಿಯನ್ನು ಎತ್ತಿ ತೋರಿಸುವಂತಿದೆ.

ತುಂಬಿದೆ ಕಸದ ಹೊಂಡ
ಎಲ್ಲೂರು ಗ್ರಾ.ಪಂ. ವತಿಯಿಂದ ಶಾಲಾ ಮೈದಾನದ ಬಳಿಯಲ್ಲಿ ವಾಟರ್‌ ಟ್ಯಾಂಕ್‌ ಬಳಿ ಸುಂದರವಾಗಿ ನಿರ್ಮಿಸಲಾಗಿರುವ ತ್ಯಾಜ್ಯದ ಗುಂಡಿ ಕೂಡಾ ತುಂಬಿ ತುಳುಕುತ್ತಿದೆ. ಅಲ್ಲಿ ಕೂಡಾ ಹೊಂಡದ ಹೊರ ಭಾಗದಲ್ಲೇ ಕಸವನ್ನು ಎಸೆದು ಹೋಗುತ್ತಿದ್ದು, ಎಸೆದು ಹೋದ ಕಸ ತ್ಯಾಜ್ಯಗಳನ್ನು ಬೆಕ್ಕು ಮತ್ತು ನಾಯಿಗಳು ಹೊರಗೆಳೆದು ಹಾಕುತ್ತಿವೆ. ಆ ಮೂಲಕ ಪರಿಸರ ಕುಲಗೆಡುತ್ತಿದೆ.

Advertisement

ರೋಗದ ಭೀತಿ 
ಅಂಗನವಾಡಿ ಮುಂಭಾಗದಲ್ಲಿ ಶೇಖರಣೆಯಾಗುತ್ತಿರುವ ತ್ಯಾಜ್ಯದಿಂದಾಗಿ ಎಳೆಯ ಮಕ್ಕಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ತ್ಯಾಜ್ಯದ ವಾಸನೆಯಿಂದ ಮಕ್ಕಳನ್ನು ಹೊರಗೆ ಬಿಡುವುದು ಅಸಾಧ್ಯವಾಗಿದೆ. ಇಲ್ಲಿನ ತ್ಯಾಜ್ಯವನ್ನು ಹಲವು ಬಾರಿ ಗ್ರಾ.ಪಂ. ಮೂಲಕವಾಗಿ, ಕೆಲವೊಮ್ಮೆ ಸ್ಥಳೀಯ ಕುಂಜೂರು ನ್ಪೋರ್ಟ್ಸ್ ಕ್ಲಬ್‌ ಮೂಲಕವಾಗಿ ಶುಚಿಗೊಳಿಸಲಾಗಿದ್ದರೂ  ಸ್ಥಳೀಯರು ಮತ್ತೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಇಲ್ಲಿ ಈಗ ಮತ್ತೆ ತ್ಯಾಜ್ಯ ಸಂಗ್ರಹಣೆಯಾಗಿರುವ ಬಗ್ಗೆ ಗ್ರಾಮ ಪಂಚಾಯತ್‌ಗೂ ಮಾಹಿತಿ ನೀಡಲಾಗಿದೆ.
–  ಜ್ಯೋತಿ,ದುರ್ಗಾ ನಗರ ಅಂಗನವಾಡಿ ಶಿಕ್ಷಕಿ

ವಿಲೇವಾರಿಗೆ ಕ್ರಮ 
ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣಾ ಘಟಕವನ್ನು ತೆರೆಯಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಸರಕಾರೀ ಸ್ಥಳ ಮಂಜೂರಾತಿ ಮಾಡುವಂತೆ ತಹಶೀಲ್ದಾರರಿಗೆ ಪತ್ರ ಬರೆಯಲಾಗುವುದು. ಸಂಸ್ಕರಣಾ ಘಟಕ ಮಂಜೂರಾದ ಬಳಿಕ ತ್ಯಾಜ್ಯವನ್ನು ಅಲ್ಲಿಗೆ ವರ್ಗಾಯಿಸಿ, ಅದನ್ನು ಸಂಪನ್ಮೂಲವಾಗಿ ಬಳಸಿ ಕೊಳ್ಳಲು ಅವಕಾಶವಿದೆ. ಕುಂಜೂರು ಅಂಗನವಾಡಿ ಬಳಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಕೂಡಲೇ ಶುಚಿಗೊಳಿಸಲು ಮತ್ತು ಅಲ್ಲಿ ಕಸ ಎಸೆಯದಂತೆ ನಿರ್ಬಂಧ ವಿಧಿಸಿ ಎಚ್ಚರಿಕೆ ಫಲಕ ಹಾಕಲಾಗುವುದು. 
– ಮಮತಾ ಶೆಟ್ಟಿ ,ಪಿಡಿಒ,ಎಲ್ಲೂರು 

Advertisement

Udayavani is now on Telegram. Click here to join our channel and stay updated with the latest news.

Next