Advertisement

ರಸ್ತೆ ಬದಿ ತ್ಯಾಜ್ಯ ಎಸೆತ: ಸ್ವಚ್ಛ ಭಾರತ ಕಲ್ಪನೆಗೆ ಮಾರಕ

10:27 AM Nov 10, 2018 | |

ಪುಂಜಾಲಕಟ್ಟೆ: ಸ್ವಚ್ಛ ಭಾರತ ಪರಿಕಲ್ಪನೆಯಿಂದ ಸ್ವಚ್ಛತೆ ಬಗ್ಗೆ ಅದೆಷ್ಟೋ ಜಾಗೃತಿ ಕಾರ್ಯಕ್ರಮಗಳು ನಡೆದರೂ ಜನತೆ ಸ್ವಇಚ್ಛೆಯಿಂದ ಸ್ವತ್ಛತೆ ಬಗ್ಗೆ ಗಮನ ಕೊಡದಿದ್ದರೆ ಸ್ವಚ್ಛ ಭಾರತ ಕಲ್ಪನೆ ಕನಸಾಗಿಯೇ ಉಳಿಯುತ್ತದೆ.

Advertisement

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪರಿಸರ ಸ್ವತ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತೀ ಮನೆಯ ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿಗೆ ವಿವಿಧ ಜಾಥಾ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿದು ಪರಿಸರ ಹಾಳು ಮಾಡುವವರಿಗೆ ದಂಡದ ಜತೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ಇದ್ದರೂ ರಸ್ತೆ ಬದಿ ಕಸ ಎಸೆಯುವವರು ನಿರಾತಂಕವಾಗಿ ತಮ್ಮ ಕಾರ್ಯ ನಡೆಸುತ್ತಲೇ ಇದ್ದಾರೆ.

ಗ್ರಾ.ಪಂ.ಗಳು ಮತ್ತು ಪುರಸಭೆ ಸ್ವಚ್ಛತೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ತ್ಯಾಜ್ಯ ವಿಲೇವಾರಿಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತದೆ. ಮನೆಮನೆಯ ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿಗೆ ಸೂಚನೆ ನೀಡುತ್ತದೆ. ಅದೇ ರೀತಿ ಗ್ರಾಮಸ್ಥರು ಒಣ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಿಸಿ ಪಂ., ಪುರಸಭೆ ಸೂಚಿಸಿದ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ. ಪೇಟೆ, ಪಟ್ಟಣಗಳ ರಸ್ತೆ ಬದಿಯ ಕಸವನ್ನು ಗುಡಿಸಿ ಸ್ವಚ್ಛಗೊಳಿಸಲಾಗುತ್ತದೆ. ಆದರೆ ಸಮಸ್ಯೆ ಇರುವುದು ಹೆದ್ದಾರಿ ಬದಿಗಳಲ್ಲಿ. ವಾಹನ ಪ್ರಯಾಣಿಕರು ಪ್ಲಾಸ್ಟಿಕ್‌ ಬಾಟಲಿ, ಪ್ಲಾಸ್ಟಿಕ್‌ ಚೀಲಗಳನ್ನು ರಸ್ತೆ ಬದಿ ಎಸೆಯುವುದು ಜತೆಗೆ ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಜನರಹಿತ ರಸ್ತೆ ಬದಿಗಳಲ್ಲಿ ಬಿಸಾಡುತ್ತಾರೆ. ಇದರಲ್ಲಿ ಕೋಳಿ ತ್ಯಾಜ್ಯಗಳೂ ತುಂಬಿರುತ್ತವೆ. ಬಳಿಕ ಸಂಬಂಧಿಸಿದ ಗ್ರಾ.ಪಂ. ಗಳು ಇದರ ವಿಲೇವಾರಿ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ.

ಇದು ಗ್ರಾ.ಪಂ.ಗಳ ವ್ಯಾಪ್ತಿಯ ರಸ್ತೆಗಳಲ್ಲಷ್ಟೇ ಅಲ್ಲ. ಪುರಸಭಾ ವ್ಯಾಪ್ತಿಗಳಲ್ಲೂ ಕಂಡು ಬರುತ್ತದೆ. ರಾ.ಹೆ.ಗಳಲ್ಲಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಜನರಹಿತ ಪ್ರದೇಶಗಳು ಇಂತಹ ಅಕ್ರಮ ತ್ಯಾಜ್ಯ ವಿಲೇವಾರಿಯ ತಾಣಗಳಾಗಿವೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟೊ ರಸ್ತೆಯ ಕಮಲ್‌ಕಟ್ಟೆ, ಬಂಟ್ವಾಳ-ಬೆಳ್ತಂಗಡಿ ರಾ.ಹೆ.ಯ ಜಕ್ರಿಬೆಟ್ಟು, ಮಣಿಹಳ್ಳ, ಹಂಚಿಕಟ್ಟೆ, ವಗ್ಗ, ಕಾವಳಕಟ್ಟೆ, ಮೂರ್ಜೆ, ಸಿದ್ದಕಟ್ಟೆ ರಸ್ತೆ ಬದಿಗಳಲ್ಲಿ ಇಂತಹ ತ್ಯಾಜ್ಯಗಳು ಕಂಡು ಬರುತ್ತದೆ. ಇತ್ತೀಚೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವೆಡೆ ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

Advertisement

ಗ್ರಾ.ಪಂ. ವ್ಯಾಪ್ತಿಗಳಲ್ಲಿ ಇಂತಹ ಆಯಕಟ್ಟಿನ ಸ್ಥಳಗಳಲ್ಲಿ ಕಸ ಬಿಸಾಡದಂತೆ ಎಚ್ಚರಿಕೆ ಬೋರ್ಡ್‌ ಹಾಕಿದ್ದರೂ ಅಲ್ಲಿಯೇ ಕಸ ಎಸೆಯುವುದನ್ನು ತಡೆಯುವುದು ಸವಾಲಾಗಿದೆ. ಇಂತಹ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಿ ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ವಿಧಿಸಬೇಕಾಗಿದೆ.

ತ್ಯಾಜ್ಯ ಮುಕ್ತ ಹಸಿರು ಗ್ರಾಮ, ಅರಳ ಗ್ರಾಮಸ್ಥರ ಸಂಕಲ್ಪ
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಎಲ್ಲ ಮನೆಗಳಲ್ಲಿ ಶೌಚಾಲಯಗಳಿರುವುದನ್ನು ಖಾತರಿ ಪಡಿಸಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸುಡದೆ, ಸಮರ್ಪಕವಾಗಿ ನಿರ್ವಹಿಸಿ ತ್ಯಾಜ್ಯ ಮುಕ್ತ ಹಸಿರು ಗ್ರಾಮ ನಿರ್ಮಾಣಕ್ಕೆ ಜಾಗೃತಿ ವೇದಿಕೆ ಮಹಿಳೆಯರು ಸಂಕಲ್ಪಿಸಿದ್ದಾರೆ. ಮಹಿಳಾ ಜಾಗೃತಿ ಹಾಗೂ ಸ್ವಚ್ಛತೆಯೇ ಸಮೃದ್ಧಿ ಸ್ವಚ್ಛತೆಯೇ ಸಂಸ್ಕೃತಿ ಅರಿವಿನ ಅಭಿಯಾನದಲ್ಲಿ ಭಾಗವಹಿಸಿದ ಮಹಿಳೆಯರು ಈ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ. ಪ್ಲಾಸ್ಟಿಕ್‌ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಸಹಕಾರ ಅಗತ್ಯ
ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ಲಾಸ್ಟಿಕ್‌ ಮುಂತಾದ ಒಣ ಕಸಗಳನ್ನು ಚೀಲದಲ್ಲಿ ತುಂಬಿಸಿ ಅಂಗನವಾಡಿ ಕೇಂದ್ರಕ್ಕೆ ತಲುಪಿಸಲು ಗ್ರಾಮಸ್ಥರಿಗೆ ಸೂಚಿಸಲಾಗಿದೆ. ತಿಂಗಳ 3ನೇ ಶನಿವಾರ ಇವುಗಳನ್ನು ವಿಲೇವಾರಿ ಮಾಡಲಾಗುತ್ತದೆ. ಹೆದ್ದಾರಿ ಬದಿ ಕಸ ಎಸೆಯದಂತೆ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಆದರೂ ಕಸ ಎಸೆಯುತ್ತಾರೆ. ಜನತೆ ಸ್ವಇಚ್ಛೆಯಿಂದ ಸ್ವಚ್ಛತೆಗೆ ಸಹಕಾರ ನೀಡಬೇಕು.
– ವೇದವ, ಪಿಡಿಒ
ಕಾವಳಪಡೂರು,
ಕಾವಳಮೂಡೂರು ಗ್ರಾ.ಪಂ.

ಜಾಗೃತಿ ಕಾರ್ಯಕ್ರಮ
ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರದಲ್ಲಿ ಜಾಥಾ, ಕರಪತ್ರ ಹಂಚುವಿಕೆ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ತ್ಯಾಜ್ಯ ವಿಲೇವಾರಿಗೆ ತೊಟ್ಟಿಗಳನ್ನಿರಿಸಲಾಗಿದ್ದು, ಪ್ರತೀ ವಾರ ವಿಲೇವಾರಿ ನಡೆಸಲಾಗುತ್ತಿದೆ.
ಚಂದ್ರಶೇಖರ ಶೆಟ್ಟಿ ಅಧ್ಯಕ್ಷರು,
  ಪಿಲಾತಬೆಟ್ಟು ಗ್ರಾ.ಪಂ.

 ರತ್ನದೇವ್‌ ಪುಂಜಾಲಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next