Advertisement

ಕರಾವಳಿಯಲ್ಲೂ “ವಾಸ್ಕಾ’ಮಾದರಿ ಜಲಸಂರಕ್ಷಣೆ 

12:14 AM Jul 22, 2022 | Team Udayavani |

ಮಂಗಳೂರು: ಹವಾಮಾನ ವೈಪರೀತ್ಯ ಗಮನದಲ್ಲಿರಿಸಿ ವೈಜ್ಞಾನಿಕ ಅಧ್ಯಯನದ ತಳಹದಿಯಲ್ಲಿ ನೀರಿನ ಭದ್ರತೆ ಕಾಪಾಡಲು ದೇಶದ ಕೆಲವು ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿರುವ “ವಾಸ್ಕಾ’ ಯೋಜನೆಗೆ ಕರಾವಳಿ ಜಿಲ್ಲೆಗಳೂ ಸಿದ್ಧಗೊಳ್ಳಲಿವೆ.

Advertisement

“ನೀರಿನ ಭದ್ರತೆ ಮತ್ತು ಹವಾಮಾನ ವೈಪರೀತ್ಯ ತಡೆ ವಿಧಾನ ಅನುಷ್ಠಾನ’ ಎಂಬುದು “ವಾಸ್ಕಾ’ (WASCA) ದ ವಿಸ್ತೃತ ರೂಪ. ಜರ್ಮನ್‌ ಕಾರ್ಪೊರೇಷನ್‌ ಸಹಯೋಗದಲ್ಲಿ (ತಾಂತ್ರಿಕ ನೆರವು) ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ತಮಿಳುನಾಡಿನ ತಲಾ ಎರಡು ಜಿಲ್ಲೆಗಳಲ್ಲಿ ಇದನ್ನು ಅನುಷ್ಠಾನಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಗತ್ಯ ಅನುದಾನ ಒದಗಿಸಲಿದೆ.

ರಾಜ್ಯದ ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಕೂಡ ವಿಶೇಷ ನೆಲೆಯಲ್ಲಿ ಯೋಜನೆಗೆ ಪರಿಗಣಿಸಲಾಗಿದೆ. ಮುಂದಿನ ಹೆಜ್ಜೆಯಾಗಿ ಕರಾವಳಿ ಜಿಲ್ಲೆಗಳಲ್ಲೂ ವಿಶೇಷ ಆದ್ಯತೆ ನೀಡಲು ಉದ್ದೇಶಿಸಲಾಗಿದ್ದು ಸಿದ್ಧತೆ ನಡೆದಿದೆ. ಪೂರಕವಾಗಿ ಈಗಾಗಲೇ ಇರಬಹುದಾದ ಜಲಸಂರಕ್ಷಣ ಚಟುವಟಿಕೆಗಳಿಗೆ ಇನ್ನಷ್ಟು ವೈಜ್ಞಾನಿಕ ರೂಪ ನೀಡಲು ತೀರ್ಮಾನಿಸಲಾಗಿದೆ.

ಏನೆಲ್ಲಾ ಒಳಗೊಂಡಿರುತ್ತದೆ? :

“ವಾಸ್ಕಾ’ ಯೋಜನೆಯು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಬಳಕೆ, ಗ್ರಾ.ಪಂ.ಗಳಿಗೆ ತರಬೇತಿ, ನೀರಿನ ಆಯವ್ಯಯ (ವಾಟರ್‌ ಬಜೆಟ್‌) ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಮಾಹಿತಿ, ನೀರಿನ ಬೇಡಿಕೆ ಮತ್ತು ಪೂರೈಕೆಯ ಪ್ರಮಾಣ, ಭೂಮಿಯ ಬಳಕೆ ಇತ್ಯಾದಿಗಳ ವೈಜ್ಞಾನಿಕ ಅಂಕಿ ಅಂಶಗಳ ಸಂಗ್ರಹ, ಮಳೆನೀರು ನಿರ್ವಹಣೆ ಮೊದಲಾದ ಚಟು ವಟಿಕೆ ಗಳನ್ನು ಹೊಂದಿರುತ್ತದೆ. ಗುಡ್ಡದಿಂದ ಹರಿಯುವ ನೀರನ್ನು ಇಂಗಿಸುವ ಸಾಧ್ಯತೆಗಳಿಗೆ ಹೆಚ್ಚು ಆದ್ಯತೆ ನೀಡುತ್ತದೆ. ಜತೆಗೆ ಮಣ್ಣಿನ ಸವಕಳಿ ತಡೆಯು ವುದು, ಅರಣ್ಯ ಬೆಳೆಸುವುದು, ಹಳ್ಳ, ನದಿಗಳಲ್ಲಿ ನೀರಿನ ಮಟ್ಟ ಕಾಪಾಡಿ ಪ್ರಾಣಿಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟು ಹವಾಮಾನ ವೈಪರೀತ್ಯದ ಪರಿಣಾಮ ಎದುರಿ ಸುವುದು ಇದರ ಉದ್ದೇಶವಾಗಿರುತ್ತದೆ.

Advertisement

ಇಷ್ಟು ಮಾತ್ರವಲ್ಲದೆ “ವಾಸ್ಕಾ’ದಡಿ ಅನುಷ್ಠಾನಗೊಳ್ಳುವ ಚಟುವಟಿಕೆ ಗಳಿಂದ ಆಗುವ ಪ್ರಯೋಜನದ ವರದಿಯನ್ನು ಕೂಡ ಅಂಕಿ-ಅಂಶ ಸಹಿತವಾಗಿ ಸಿದ್ಧಪಡಿಸಬೇಕಾಗುತ್ತದೆ. ಯೋಜನೆ ಕುರಿತು ದ.ಕ., ಉಡುಪಿ ಸಹಿತ ಮೈಸೂರು ವಲಯ ವ್ಯಾಪ್ತಿಯ ಜಿಲ್ಲೆಗಳ ಉನ್ನತ ಅಧಿಕಾರಿಗಳಿಗೆ ಈಗಾಗಲೇ ಸಮಗ್ರ ಮಾಹಿತಿ ನೀಡಲಾಗಿದೆ.

ಜಲಶಕ್ತಿ ಕೇಂದ್ರ ಸ್ಥಾಪನೆ :

ನೀರಿನ ಸಂರಕ್ಷಣೆಯನ್ನು ಎಲ್ಲಿ, ಹೇಗೆ ನಡೆಸ ಬೇಕು, ವೈಜ್ಞಾನಿಕ ವಿಧಾನಗಳು ಯಾವುವು, ಯಾವ ಪ್ರದೇಶದಲ್ಲಿ ಯಾವ ವಿಧಾನ ಅನುಸರಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಸಾರ್ವಜನಿಕರು, ರೈತರಿಗೆ ನೀಡುವುದಕ್ಕಾಗಿ ಪ್ರತೀ ಜಿಲ್ಲಾ ಕೇಂದ್ರ ಗಳಲ್ಲಿಯೂ ಜಲಶಕ್ತಿ ಕೇಂದ್ರ ಸ್ಥಾಪನೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು ಅದರಂತೆ ದ.ಕ.ದಲ್ಲಿಯೂ ಶೀಘ್ರದಲ್ಲೇ ಆರಂಭವಾಗಲಿದೆ.

ಇದು “ವಾಸ್ಕಾ’ ಯೋಜನೆಗೆ ಪೂರಕವಾಗಿರುತ್ತದೆ. ಜಲಶಕ್ತಿ ಕೇಂದ್ರ ಎಂಬುದು “ನಾಲೆಜ್‌ ಸೆಂಟರ್‌’ ಆಗಿರುತ್ತದೆ. ಇಲ್ಲಿ ತಜ್ಞರು ಮಾಹಿತಿ ನೀಡುತ್ತಾರೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವರ್ಷಗಳಲ್ಲಿ ಅನುಷ್ಠಾನದ ನಿರೀಕ್ಷೆ  :

ದ.ಕ., ಉಡುಪಿ ಜಿ.ಪಂ.ಗಳು ಜಲಸಂರಕ್ಷಣೆಯಲ್ಲಿ “ವಾಸ್ಕಾ’ ಪರಿಕಲ್ಪನೆಗೆ ಆದ್ಯತೆ ನೀಡಲು ಮುಂದಾಗಿದ್ದು ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಡಿ ಲಭ್ಯವಿರುವ ಅನುದಾನ ಬಳಸಿಕೊಳ್ಳಲಿವೆ. ಮುಂದಿನ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳುವ ನಿರೀಕ್ಷೆ ಇದೆ.

ನೀರಿನ ವೈಜ್ಞಾನಿಕ ಸಂರಕ್ಷಣ ವಿಧಾನಗಳಿಗೆ “ವಾಸ್ಕಾ’ ವಿಶೇಷ ಆದ್ಯತೆ ನೀಡುತ್ತದೆ. ಜಲಶಕ್ತಿ ಅಭಿಯಾನದಡಿ ಜಿಲ್ಲೆಯಲ್ಲಿ ಈಗಾಗಲೇ ಕೆರೆಗಳ ಅಭಿವೃದ್ಧಿ, ಮಳೆ ನೀರು ಕೊçಲು ಘಟಕ, ಕೃಷಿ ಹೊಂಡ, ಕೊಳವೆ ಬಾವಿ ಮರುಪೂರಣ ಮೊದಲಾದವು ನಡೆಯುತ್ತಿದೆ. ಜಲಶಕ್ತಿ ಕೇಂದ್ರವನ್ನು ಕೂಡ ಆರಂಭಿಸಲಾಗುತ್ತಿದೆ. ಯಥೇತ್ಛ ಮಳೆ ಬಿದ್ದರೂ ಬೇಸಗೆಯಲ್ಲಿ ಕೆಲವೆಡೆ ಉಂಟಾಗುವ ನೀರಿನ ಕೊರತೆಯನ್ನು ನೀಗಿಸಲು ಇಂತಹ ಯೋಜನೆಗಳು ಸಹಕಾರಿಯಾಗಲಿವೆ.ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

ಗ್ರಾಮದ ಜನಸಂಖ್ಯೆ, ಕೃಷಿಭೂಮಿ, ಪ್ರಾಣಿಗಳಿಗೆ ಅನುಗುಣವಾಗಿ ಲಭ್ಯವಿರುವ ನೀರು, ವಾರ್ಷಿಕ ಮಳೆಯ ಪ್ರಮಾಣದ ಬಗ್ಗೆ ವೈಜ್ಞಾನಿಕ ಅಂಕಿ-ಅಂಶ ಸಂಗ್ರಹಿಸಿ ಅದರ ಮೇಲೆ ಭವಿಷ್ಯದ ಯೋಜನೆ ರೂಪಿಸಬೇಕು. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಬಿದ್ದರೂ ಬೇಸಗೆ ಕಾಲದಲ್ಲಿ ನೀರಿನ ಕೊರತೆ ಉಂಟಾಗುವ ಕೆಲವು ಗ್ರಾಮಗಳಲ್ಲಿ ವಾಸ್ಕಾ ಪರಿಕಲ್ಪನೆಯಡಿ ಕ್ರಮ ಕೈಗೊಳ:Ûಲಾಗುವುದು. ಪ್ರಸನ್ನ ಎಚ್‌., ಉಡುಪಿ ಜಿ.ಪಂ. ಸಿಇಒ

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next