Advertisement

ಸರ್ಕಾರಿ ವೈದ್ಯೆಗೆ ಧಮಕಿ, ಗೂಂಡಾ ವರ್ತನೆ: ಆರೋಪಿಗಳ ಬಂಧನ

04:51 AM May 13, 2020 | Suhan S |

ಚನ್ನಮ್ಮ ಕಿತ್ತೂರು: ಸ್ಥಳೀಯ ಸರಕಾರಿ ವೈದ್ಯೆ ಡಾ| ಅನ್ನಪೂರ್ಣಾ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಮುಖ ಆರೋಪಿ ಅಬ್ದುಲ್‌ ಮುಜಾವರ, ಹಾಗೂ ಸಮೀರ ಮುಜಾವರ, ಸರಫರಾಜ ಮುಜಾವರ, ಸುಹೇಲ್‌ ಇಮಾಮನವರ, ದಸ್ತಗೀರ ಇಮಾಮನವರ ವಿರುದ್ಧ ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕುರಿತಂತೆ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಸರಕಾರಿ ಹಿರಿಯ ವೈದ್ಯರಾದ ಡಾ| ಶಿವಾನಂದ ಮಾಸ್ತಿಹೊಳಿ, ಸುಮಾರು ಒಂದು ತಿಂಗಳಿನಿಂದ ನಿತ್ಯ ಸರಕಾರಿ ಆಸ್ಪತ್ರೆಗೆ ತನ್ನ ಸಹಚರರೊಂದಿಗೆ ಆಗಮಿಸುತ್ತಿದ್ದ ಅಬ್ದುಲ್‌ ಇಮಾಮಹುಸೇನ್‌ ಮುಜಾವರ ಎಂಬ ಯುವಕ ವೈದ್ಯರು ಕೋವಿಡ್ ಪರೀಕ್ಷೆ ಮಾಡುವ  ಸಂದರ್ಭದಲ್ಲಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದ. ಅಲ್ಲದೇ ನೀವು ಸುಮ್ಮನೇ ಎಲ್ಲ ರೋಗಿಗಳನ್ನು ಪರೀಕ್ಷೆ ಮಾಡುವುದೇಕೆ ಎಂದು ಬೆದರಿಸುತ್ತಿದ್ದ. ಯುವಕನ ಮನೆಗೆ ಕೊರೊನಾ ಪರೀಕ್ಷೆಗೆ ಆಶಾ ಕಾಯಕರ್ತೆಯರು ಹೋದಾಗಲೂ ಅಸಭ್ಯವಾಗಿ ವರ್ತಿಸಿದ್ದ. ಅಲ್ಲದೇ ನನಗೆ ನೀವು ತಿಂಗಳಾ ಹಫ್ತಾ ಕೊಡಬೇಕು ಎಂದು ಮಹಿಳಾ ವೈದ್ಯೆಗೆ ಬೇಡಿಕೆ ಇಟ್ಟು ಧಮಕಿ ಹಾಕಿದ್ದ. ಹಫ್ತಾ ಕೊಡದಿದ್ದರೆ ನಿನ್ನ ಉಳಿಸೊಲ್ಲ ಎಂದು  ಫೋನ್‌ನಲ್ಲಿ ಹೆದರಿಸುತ್ತಿದ್ದ. ಸೊಮವಾರ ರಾತ್ರಿ 1 ಗಂಟೆಗೆ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ಕು ಜನರೊಂದಿಗೆ ಆಗಮಿಸಿದ ಈ ಯುವಕ ವೈದ್ಯೆಯನ್ನು ಕರೆದಿದ್ದಾನೆ. ವೈದ್ಯರು ಡಿಲೆವರಿ ಪೇಶೆಂಟ್‌ ಬಂದಿದೆ. ಬೇರೆ ವೈದ್ಯರಿದ್ದಾರೆ ಅವರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ.

ಅಷ್ಟಕ್ಕೇ ವೈದ್ಯೆ ಡಾ| ಅನ್ನಪೂರ್ಣಾ ಅವರನ್ನು ಅವಾಚ್ಯ ಶಬ್ದಳಿಂದ ನಿಂದಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಆಸ್ಪತ್ರೆಯಲ್ಲಿನ ಆಶಾ ಕಾರ್ಯಕರ್ತೆಯರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಅವರ ಮೈಮೇಲೆ ಏರಿ ಹೋಗಿದ್ದಾನೆ. ಹೆದರಿದ ಆಶಾ ಕಾರ್ಯಕರ್ತೆಯರು ಪೊಲೀಸರಿಗೆ ´ಫೋನ್‌ ಮಾಡಿ ತಿಳಿಸಿದಾಗ ಅಲ್ಲಿಂದ ಓಡಿಹೋದ ಯುವಕ ಮತ್ತೆ ಮಂಗಳವಾರ ಬೆಳಿಗ್ಗೆ ಫೋನ್‌ ಮೂಲಕ ಧಮಕಿ ಹಾಕಿದ್ದಾನೆ. ಇದರಿಂದ ರೋಸಿ ಹೋಗಿ ಮಂಗಳವಾರ ಸಂಜೆ 5 ಯುವಕರ ಮೇಲೂ ಡಾ| ಅನ್ನಪೂರ್ಣಾ ಅಂಗಡಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ಡಾ. ವೆಂಕಟೇಶ ಉಣಕಲ್ಲಕರ, ಉಪಾಧ್ಯಕ್ಷ ಡಾ. ಲಾಡಖಾನ್‌ ಹಾಗೂ ಕಾರ್ಯದರ್ಶಿ ಡಾ. ಬಸವರಾಜ ಪರವನ್ನವರ ಮಾತನಾಡಿ, ಮಹಿಳಾ ವೈದ್ಯೆ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಗೂಂಡಾಗಳ ಮೇಲೆ ಸರಕಾರ ಕೂಡಲೇ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಜೈಲಿಗೆ ಅಟ್ಟಬೇಕು ಎಂದು ಒತ್ತಾಯಿಸಿದರು. ಕಿತ್ತೂರು ಹಾಗೂ ಸುತ್ತಲಿನ ಖಾಸಗಿ ವೈದ್ಯರ ಸಂಘದವರು ಪ್ರಕರಣವನ್ನು ಖಂಡಿಸಿ ಆರೋಪಿಗಳನ್ನು ಬಂಧಿಸುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.

ತುಂಬಾ ಒತ್ತಡದಲ್ಲಿ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ವಿನಾಕಾರಣ ಕಳೆದ 15 ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆ. ಪದೇ ಪದೇ ಆಸ್ಪತ್ರೆಗೆ ಆಗಮಿಸಿ ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ತಿಂಗಳು ಹಫ್ತಾ ನೀಡಬೇಕು, ಇಲ್ಲದಿದ್ದರೆ ಜೀವಕ್ಕೆ ತೊಂದರೆ ಮಾಡುತ್ತೇವೆ ಎಂದು ಧಮಿಕಿ ಹಾಕುತ್ತಿದ್ದಾರೆ. –ಡಾ| ಅನ್ನಪೂರ್ಣ ಅಂಗಡಿ, ಕಿತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next