Advertisement

Warn Governor: ಬಾಂಗ್ಲಾ ಸ್ಥಿತಿ ಬರಬಹುದು ಎಂದ ಎಂಎಲ್‌ಸಿ ಐವನ್‌; ಸಿಡಿದೆದ್ದ ಬಿಜೆಪಿ

08:32 PM Aug 19, 2024 | Team Udayavani |

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ    ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ರನ್ನು ಕೇಂದ್ರ ವಾಪಸ್ ಕರೆಸಿಕೊಳ್ಳದಿದ್ದರೆ, ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು ಎಂದ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಿವಾದಾತ್ಮಕ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯಪಾಲರ ವಿರುದ್ಧ ಸೋಮವಾರ ಹಮ್ಮಿಕೊಂಡಿದ್ದ ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ವೇಳೆ ಎಂಎಲ್‌ಸಿ ಐವನ್‌ ಡಿಸೋಜಾ ಮಾತನಾಡಿ  ಕರ್ನಾಟಕದಲ್ಲಿಯೂ ರಾಜ್ಯಪಾಲರ ಕಿತ್ತು ಹಾಕಲು ಬಾಂಗ್ಲಾ ಸ್ಥಿತಿ ಬರಬಹುದು ಎನ್ನುವ ಮೂಲಕ ಬಾಂಗ್ಲಾ ಪರಿಸ್ಥಿತಿಯ ಎಚ್ಚರಿಕೆ‌ ನೀಡುವ ಮೂಲಕ ರಾಜ್ಯದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ನಡೆಸಲು ಪ್ರೇರಣೆ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಟೀಕಿಸಿದೆ.

ಐವನ್‌ ಹೇಳಿಕೆಗೆ ಬಿಜೆಪಿ ನಾಯಕರ ತೀವ್ರ ಆಕ್ಷೇಪ, ವಾಗ್ದಾಳಿ:
ಶ್ರೀಲಂಕಾ, ಬಾಂಗ್ಲಾ ಮಾದರಿಯಲ್ಲಿ ದೇಶವನ್ನು ಅರಾಜಕತೆಗೆ ಕೊಂಡೊಯ್ಯಬೇಕೆನ್ನುವ ಮನಸ್ಥಿತಿ ಬಿಂಬಿಸುವ ರೀತಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಗೂಂಡಾಗಿರಿಯ ಮಾತು ಮತ್ತು ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಸಂವಿಧಾನ ರಕ್ಷಣೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ಸಿಗರು ರಾಜ್ಯದ ಸಾಂವಿಧಾನಿಕ ಹುದ್ದೆಯ ಮುಖ್ಯಸ್ಥರಾದ ರಾಜ್ಯಪಾಲರನ್ನು ಬೆದರಿಸಲು ರಾಜಭವನಕ್ಕೆ ನುಗ್ಗುತ್ತೇವೆ ಎಂಬ ಗೂಂಡಾಗಿರಿಯ ಮಾತನಾಡಿ, ಬಾಂಗ್ಲಾ ಘಟನೆ ಉಲ್ಲೇಖಿಸಿರುವುದು ನೋಡಿದರೆ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿ ಭಾರತದ ಬಗೆಗಿನ ಕಲ್ಪನೆ ಏನಿದೆ ಎಂಬುದು ವೇದ್ಯವಾಗುತ್ತದೆ   ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಪಶ್ಚಿಮ ಬಂಗಾಳ, ಬಾಂಗ್ಲಾ ದೇಶ ಮಾದರಿಯಾಗಿರುವುದು ನೋಡಿದರೆ ‘ಕರುನಾಡು’ ಇವರ ಕೈಲಿರುವುದು ಎಷ್ಟು ಅಪಾಯಕಾರಿ ಎಂಬುದನ್ನು ಸೂಚಿಸುತ್ತಿದೆ ಎಂದರು.

ಹೇಳಿಕೆಯ ಹಿಂದಿನ ಮರ್ಮವೇನು?: ಸಿ.ಟಿ.ರವಿ ಪ್ರಶ್ನೆ
ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ‌ ಐವಾನ್‌ ಡಿಸೋಜಾ  ಹೇಳಿಕೆ ಖಂಡಿಸಿದ ಬಿಜೆಪಿ ವಿಧಾನ ಪರಿಷತ್‌ ಸದಸ್ಯ‌ ಸಿ.ಟಿ.ರವಿ ಮಾತನಾಡಿ  ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಕೆಳಗಿಳಿಸುತ್ತೇವೆ ಎಂಬ ಹೇಳಿಕೆಯ ಹಿಂದಿನ ಮರ್ಮವೇನು?, ರಾಜಭವನಕ್ಕೆ ಕಾಂಗ್ರೆಸ್‌ ಪುಡಾರಿಗಳ ನುಗ್ಗಿಸುತ್ತೀರಾ? ಎಂದು ಪ್ರಶ್ನಿಸಿದ್ಧಾರೆ.

Advertisement

ಕಾಂಗ್ರೆಸ್ಸಿನ ಹತಾಶ ಮನಸ್ಥಿತಿಗಳು ಹೇಗೆಲ್ಲ ಕಾರ್ಯಾಚರಿಸುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ‌ ಐವಾನ್‌ ಡಿಸೋಜಾ ಅವರು ಬಿಚ್ಚಿಟ್ಟಿದ್ದಾರೆ. ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ವಿರುದ್ದ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಿ.ಟಿ.ರವಿ ಆಗ್ರಹಿಸಿದರು.


ಐವನ್ ಡಿಸೋಜಾ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಸಂವಿಧಾನ ವಿರೋಧಿ ಹೇಳಿಕೆ‌ ನೀಡಿದ್ದಾರೆ. ಇದರ ವಿರುದ್ದ ಪೊಲೀಸರು  ಸ್ವಯಂ ಪ್ರೇರಿತ  ಪ್ರಕರಣ ದಾಖಲಿಸಿಕೊಳ್ಳಬೇಕು. ಸಂವಿಧಾನ ವಿರೋಧಿ ಕೆಲಸ ಮಾಡಿದರೆ ತನಿಖೆ ಆಗಬೇಕು. ಮತ್ತೊಂದೆಡೆ ಆರೋಪ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next