Advertisement

ವಾರ್ಡ್‌ ಮಾರುಕಟ್ಟೆ ನಿರ್ಮಾಣಕ್ಕೆ ಸಕಾಲ

05:50 PM May 17, 2021 | Team Udayavani |

ವೀರೇಶ ಮಡ್ಲೂರ

Advertisement

ಹಾವೇರಿ: ಕೊರೊನಾ ಮಹಾಮಾರಿಯಿಂದ ಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯಲ್ಲಿ ಹಾಗೂ ಭವಿಷ್ಯದ ದಿನಗಳಲ್ಲಿ ಜನದಟ್ಟಣೆ ತಪ್ಪಿಸಿ ಜನಾರೋಗ್ಯ ಕಾಪಾಡುವ ಹಿನ್ನೆಲೆ ವಾರ್ಡ್‌ಗೊಂದು ಮಾರುಕಟ್ಟೆ ನಿರ್ಮಿಸಲು ನಗರಸಭೆ ಗಂಭೀರ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಹಾವೇರಿ ಸುತ್ತಲಿನ ಗ್ರಾಮೀಣ ಜನರು ಹಾಗೂ ನಗರದ ಜನರು ಹಣ್ಣು, ತರಕಾರಿ, ಆಹಾರ ಧಾನ್ಯಗಳಿಗಾಗಿ ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇದರಿಂದಾಗಿ ಈ ಮಾರುಕಟ್ಟೆ ಹಾವೇರಿಯ ಪ್ರಮುಖ ವ್ಯಾಪಾರಿ ಸ್ಥಳ ಎನಿಸಿಕೊಂಡಿದೆ. ಮಾರುಕಟ್ಟೆ ಪ್ರದೇಶದಲ್ಲಿ ಹಣ್ಣು, ತರಕಾರಿ, ಧಾನ್ಯ ವ್ಯಾಪಾರ ಭರಪೂರ ನಡೆಯುತ್ತದೆ. ಅಲ್ಲದೇ ನಗರದ ಎಂ.ಜಿ.ರಸ್ತೆಯ ಪ್ರದೇಶದಲ್ಲಿಯೇ ಹೆಚ್ಚು ಜವಳಿ ಅಂಗಡಿಗಳು, ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳ ಮಾರಾಟ ಅಂಗಡಿಗಳು ಸಹ ಇರುವುದರಿಂದ ಇಲ್ಲಿ ನಿತ್ಯ ಜನಜಾತ್ರೆ ಕಂಡು ಬರುತ್ತದೆ. ಅಲ್ಲದೇ ಈಗಾಗಲೇ ನಗರಸಭೆಯಿಂದ ಎರಡ್ಮೂರು ಬಡಾವಣೆಗಳಲ್ಲಿ ಮಾತ್ರ ತರಕಾರಿ ಸಂತೆ ಆಯೋಜಿಸಲಾಗುತ್ತಿದೆ. ಸದ್ಯ ಅದನ್ನು ಸಹ ಕೊರೊನಾ ಹಿನ್ನೆಲೆ ತಾತ್ಕಾಲಿಕ ಬಂದ್‌ ಮಾಡಲಾಗಿದೆ. ಭವಿಷ್ಯದ ಹಿನ್ನೆಲೆಯಲ್ಲಿ ನಗರದಲ್ಲಿರುವ ಕೇಂದ್ರೀಕೃತ ಮಾರುಕಟ್ಟೆ ಪ್ರದೇಶವನ್ನು ವಿಕೇಂದ್ರೀಕರಿಸಿ ವಾರ್ಡ್‌ ವಾರು ಮಾರುಕಟ್ಟೆ ಸ್ಥಾಪಿಸಿದರೆ ಜನರಿಗೆ ಅನುಕೂಲವಾಗಲಿದೆ.

ಜನದಟ್ಟಣೆ ನಿಯಂತ್ರಣಕ್ಕೆ ಸಹಕಾರಿ: ನಗರದಲ್ಲಿ ವಾರ್ಡ್‌ಗೊಂಡು ಮಾರುಕಟ್ಟೆ ನಿರ್ಮಾಣವಾಗಿದರೆ ಜನಸಂದಣಿ ತಪ್ಪುವ ಜತೆಗೆ ಜನರಿಗೂ ದೂರದ ಮಾರುಕಟ್ಟೆಗೆ ಹೋಗಿ ಬರಲು ವ್ಯಯಿಸುವ ವಾಹನ ಇಂಧನ ಹಾಗೂ ಅಮೂಲ್ಯ ಸಮಯವೂ ಉಳಿತಾಯವಾಗುತ್ತದೆ. ಈ ವ್ಯವಸ್ಥೆಯಿಂದ ಹಲವರಿಗೆ ವಾರ್ಡ್‌ಗಳಲ್ಲಿ ಉದ್ಯೋಗ ಸೃಷ್ಟಿ ಮಾಡಿಕೊಟ್ಟಂತೆಯೂ ಆಗುತ್ತದೆ. ಈ ವ್ಯವಸ್ಥೆ ಜಾರಿಯಾದರೆ ಭವಿಷ್ಯದಲ್ಲಿ ಜನದಟ್ಟಣೆಯಿಂದ ಬರಬಹುದಾದ ವೈರಾಣುಗಳಿಂದ ಜನರು ತಮ್ಮನ್ನ ತಾವು ಸುಲಭವಾಗಿ ರಕ್ಷಿಸಿಕೊಳ್ಳಲು ಸಹ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿವೆ.

ವಾರ್ಡ್‌ಗೊಂಡು ಮಾರುಕಟ್ಟೆ: ನಗರದಲ್ಲಿ 31 ವಾಡ್‌ ìಗಳಿದ್ದು ಪ್ರತಿ ವಾರ್ಡ್‌ನಲ್ಲಿ 2-3 ಸಾವಿರದವರೆಗೂ ಜನಸಂಖ್ಯೆ ಇದೆ. ಪ್ರತಿ ವಾರ್ಡ್‌ನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ನಗರಸಭೆ ಮನಸ್ಸು ಮಾಡಿದರೆ ಕಷ್ಟದ ಕೆಲಸವೇನು ಅಲ್ಲ. ವಾರ್ಡ್‌ಗಳಲ್ಲಿರುವ ಬಯಲು ಜಾಗೆಗಳನ್ನು ಮಾರುಕಟ್ಟೆಗಾಗಿ ಬಳಸಿಕೊಂಡು ವ್ಯಾಪಾರಿಗಳಿಗೆ ನೀರು, ಶೌಚಾಲಯದಂಥ ಮೂಲಸೌಲಭ್ಯ ಹಾಗೂ ಗ್ರಾಹಕರಿಗೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿದರೆ ಸಾಕಾಗುತ್ತದೆ. ಇನ್ನು ಇದರ ನಿರ್ವಹಣೆಗಾಗಿ ನಗರಸಭೆಗೆ ಒಂದಿಷ್ಟು ಆದಾಯವೂ ಸಂಗ್ರಹವಾಗುತ್ತದೆ.

Advertisement

ಹೊಸ ಉದ್ಯೋಗ ಸೃಷ್ಟಿ: ನಗರದಲ್ಲಿ ವಾರ್ಡ್‌ಗೊಂದು ಮಾರುಕಟ್ಟೆ ಮಾಡಿದರೆ ಸಾವಿರಾರು ಜನರಿಗೆ ವ್ಯಾಪಾರದ ಹೊಸ ಉದ್ಯೋಗ ಸೃಷ್ಟಿಸಿದಂತೆಯೂ ಆಗುತ್ತದೆ. ಜನರಿಗೂ ತಮ್ಮ ವಾರ್ಡ್‌ನಲ್ಲಿಯೇ ಹಣ್ಣು, ತರಕಾರಿ, ಧಾನ್ಯ ಸಿಗುವ ಜತೆಗೆ ಒಂದೇ ಕಡೆ ಜನದಟ್ಟಣೆ ಆಗುವುದು ತಪ್ಪಿದಂತಾಗುತ್ತದೆ. ರೈತರಿಗೂ ವಾರ್ಡ್‌ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟರೆ ವಾರದ ಒಂದು ದಿನ ವಾರ್ಡಗಳಲ್ಲಿಯೂ ರೈತ ಸಂತೆಯೂ ಮಾಡಬಹುದಾಗಿದೆ. ಅಲ್ಲದೇ ರೈತರಿಗೆ ತಮ್ಮ ಉತ್ಪನ್ನ ಮಾರಾಟಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಒಟ್ಟಾರೆ ವಾರ್ಡ್ವಾರು ಮಾರುಕಟ್ಟೆ ನಿರ್ಮಾಣ ಮಾಡುವ ಬಗ್ಗೆ ನಗರಸಭೆ ಶೀಘ್ರ ಚಿಂತನೆ ಮಾಡಿ ಭವಿಷ್ಯದ ದಿನಗಳಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದ ದಿಟ್ಟ ಹೆಜ್ಜೆ ಇಡಲು ಇದು ಸಕಾಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next