Advertisement

ಯುದ್ಧ ಸ್ಮಾರಕಗಳು

09:00 AM Nov 11, 2018 | |

ಕಳೆದ ವರ್ಷ ಕೆಲವೇ ತಿಂಗಳುಗಳ ಅಂತರದಲ್ಲಿ ನಮ್ಮ ದೇಶದ ರಾಜಧಾನಿ ದೆಹಲಿ ಹಾಗೂ ಫ್ರಾನ್ಸ್‌ ದೇಶದ ಪ್ಯಾರಿಸ್‌ನಲ್ಲಿರುವ ಯುದ್ಧ ಸ್ಮಾರಕಗಳನ್ನು ನೋಡುವ ಅಪೂರ್ವವಾದ ಅವಕಾಶ ಒದಗಿ ಬಂತು.

Advertisement

ಇಲ್ಲಿ ನಮ್ಮ ರಾಜಧಾನಿ ನವದೆಹಲಿಗೆ ಹೋಗುವವರು ಅವಶ್ಯವಾಗಿ ನೋಡಬೇಕಾದ ಸ್ಥಳ ಇಂಡಿಯಾ ಗೇಟ್‌. ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಕಟ್ಟಲ್ಪಟ್ಟ ಸ್ಮಾರಕ. ರಾಜಪಥದ ಕೊನೆಯಲ್ಲಿದೆ. ಇದರ ವಿನ್ಯಾಸಕಾರ ಸರ್‌ ಎಡ್ವಿ ನ್‌ ಲೂಟೆನ್ಸ್‌.  ಕ್ರಿ.ಶ. 1921ರ ಫೆ. 10ರಂದು ಇಂಗ್ಲೆಂಡಿನ ರಾಜಕುಮಾರನು ಇದರ ಶಿಲಾನ್ಯಾಸ ನೆರವೇರಿಸಿದ. ಭಾರತೀಯ ಸೇನಾಪಡೆಯ ಮುಖ್ಯಸ್ಥ, ಅಧಿಕಾರಿಗಳು ಹಾಗೂ ವೈಸರಾಯ್‌ ಚೆಮ್‌ ಫೋರ್ಡ್‌ ಉಪಸ್ಥಿತರಿದ್ದರು. ವೀರಯೋಧರ ಸ್ಮಾರಕವು ಎಲ್ಲರಿಗೂ ತ್ಯಾಗಮಾಡಲು ಪ್ರೇರಣೆಯಾಗಲಿ ಎಂದು ವೈಸರಾಯ್‌ ತನ್ನ ಭಾಷಣದಲ್ಲಿ ಹೇಳಿದ. ರಾಜಕುಮಾರನು ಬ್ರಿಟನ್‌ ರಾಜನ ಸಂದೇಶವನ್ನು ಹೀಗೆ ಓದಿ ಹೇಳಿದ- ಭಾರತದ ರಾಜಧಾನಿಯಲ್ಲಿ ಸ್ಥಾಪಿಸಲಾಗುವ ಈ ಸ್ಮಾರಕವು ಮುಂದಿನ ಪೀಳಿಗೆಗೆ ಹುತಾತ್ಮ ಯೋಧರ ತ್ಯಾಗ-ಬಲಿದಾನಗಳ ಪಾಠವಾಗಲಿ’. ಈ ಸಮಾರಂಭದಲ್ಲಿ ವೀರಯೋಧರಿಗೆ ರಾಯಲ… ಪದವಿಯನ್ನು ಪ್ರದಾನಿಸಲಾಯಿತು. 

ಹತ್ತು ವರ್ಷಗಳ ನಂತರ ಪೂರ್ತಿಯಾದ ಈ ಸ್ಮಾರಕವು 1931ರ ಫೆಬ್ರವರಿ 12ರಂದು ಉದ್ಘಾಟಿಸಲ್ಪಟ್ಟಿತು. ಆಗಿನ ವೈಸರಾಯ್‌ ಆಗಿದ್ದ ಲಾರ್ಡ್‌ ಇರ್ವಿನ್‌ ಈ ಸ್ಮಾರಕವನ್ನು ಕಟ್ಟಿದ ಉದ್ದೇಶವನ್ನು ಮತ್ತೆ ತನ್ನ ಭಾಷಣದಲ್ಲಿ ಹೇಳಿದ.

ಎಡ್ವಿನ್‌ ಲೂಟೆನ್‌ನ ವಿನ್ಯಾಸದಲ್ಲಿ ಯಾವುದೇ ಜಾತಿ-ಧರ್ಮದ ಕುರುಹುಗಳಿಲ್ಲ. ಇದರ ಅಗಲ 30 ಅಡಿ ಮತ್ತು ಎತ್ತರ 42 ಅಡಿ.  ಸಾಯಂಕಾಲದ ಹೊತ್ತು ದೀಪಾಲಂಕಾರದಿಂದ ಆಕರ್ಷಕವಾಗಿ ಕಾಣುವ ಈ ಸ್ಮಾರಕವು ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ದ್ವಾರದ ತುತ್ತತುದಿಯಲ್ಲಿ India ಎಂದು ಎರಡೂ ಬದಿಗಳಲ್ಲಿ ಬರೆದಿದೆ. ಅದರ ಇಕ್ಕೆಲಗಳಲ್ಲಿ MCMXIV (1914 ಎಡಬದಿಯಲ್ಲಿ) ಮತ್ತು MCMXIX  (1919 ಬಲಬದಿಯಲ್ಲಿ) ನಮೂದಿಸಲಾಗಿದೆ.  India ಎನ್ನುವುದರ ಕೆಳಗೆ ಫ್ರಾನ್ಸ್‌ ಮತ್ತು ಫಾಂಡರ್ಸ್‌, ಮೆಸಪೊಟೇಮಿಯ ಮತ್ತು ಪರ್ಷಿಯ, ಪೂರ್ವ ಆಫ್ರಿಕಾ, ಗಲ್ಲಿಪೊಲಿ, ಮೂರನೇ ಅಫ್ಘಾನ್‌ ಯುದ್ಧದಲ್ಲಿ ಮೃತರಾದ ಸೈನಿಕರ ಗೌರವಾರ್ಥ ಎಂದು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. 13,218 ಹುತಾತ್ಮರ ಹೆಸರುಗಳು ಈ ಸ್ಮಾರಕದ ಮೇಲೆ ನಮೂದಿಸಲ್ಪಟ್ಟಿವೆ. ತುಂಬಾ ಹತ್ತಿರ ಹೋಗಿ ಹೆಸರುಗಳನ್ನು ಓದಲಾಗುವುದಿಲ್ಲ. ಈ ಹೆಸರುಗಳು ಇಂಡಿಯಾ ಗೇಟ್‌ ಜಾಲತಾಣದಲ್ಲಿ ಪೂರ್ಣ ವಿವರಗಳೊಂದಿಗೆ ಲಭ್ಯವಿವೆ. ಹುತಾತ್ಮಳಾದ ದಾದಿಯೊಬ್ಬಳ ಹೆಸರೂ ಇದೆ.

ಅಮರ ಜವಾನ ಜ್ಯೋತಿ:  ಇದು ಇಂಡಿಯಾ ಗೇಟಿನ ಕೆಳಗೆ ಇರುವ ಕಪ್ಪು ಅಮೃತಶಿಲೆಯಲ್ಲಿ ರಚಿಸಿದ ಸಮಾಧಿ.  ಇದರ ಮೇಲೆ ತಲೆಕೆಳಗಾಗಿರಿಸಿರುವ ಔ1ಅ1 ಬಂದೂಕಿದೆ.  ಬಂದೂಕಿನ ಮೇಲೆ ಸೈನಿಕನ ಶಿರಸ್ತ್ರಾಣ ಇದೆ. ಇದರ ನಾಲ್ಕೂ ಮೂಲೆಗಳಲ್ಲಿ ಸತತವಾಗಿ ಉರಿಯುವ ಜ್ಯೋತಿ ಇದೆ.  1971ರ ಬಾಂಗ್ಲಾ ಯುದ್ಧದಲ್ಲಿ ಮಡಿದ ಸೈನಿಕರ ಗೌರವಾರ್ಥ ಇದನ್ನು ಸ್ಥಾಪಿಸಲಾಯಿತು. 1972ರ ಜನವರಿ 26ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಇದರ ಉದ್ಘಾಟನೆ ನೆರವೇರಿಸಿದರು. ಭಾರತೀಯ ಸೇನಾಪಡೆಯ ಮೂರೂ ವಿಭಾಗಗಳ ಸೈನಿಕರು ಸತತವಾಗಿ ಇದನ್ನು ಕಾಯುತ್ತಾರೆ. ದೇಶದ ಪ್ರಧಾನಮಂತ್ರಿ ಪ್ರತಿ ಗಣರಾಜ್ಯ ದಿನದಂದು ಹೂಗುತ್ಛವನ್ನರ್ಪಿಸಿ ಗೌರವ ಸಲ್ಲಿಸುತ್ತಾರೆ. ವಿಜಯದಿವಸದಂದು ಗೌರವ ಸಲ್ಲಿಸುವ ಸರದಿ ಸೇನಾವಿಭಾಗಗಳ ಮುಖ್ಯಸ್ಥರದು.

Advertisement

ಅಲ್ಲಿ 
ಪ್ಯಾರಿಸ್‌ ನಗರದಲ್ಲಿ ಇರುವ ಯುದ್ಧದ ಸ್ಮಾರಕವು (ಆರ್ಕ್‌ ಡ್ಯು ಟ್ರಿಯುಂಫ್) ಅಲ್ಲಿನ ಪ್ರಮುಖವಾದ ಆಕರ್ಷಣೆ ಆಗಿದೆ. ಸೈನ್‌ ನದಿಯ ಬಲದಂಡೆಯಲ್ಲಿರುವ ಈ ಸ್ಮಾರಕದ ವರ್ತುಲಕ್ಕೆ ಹನ್ನೆರಡು ರಸ್ತೆಗಳು ಬಂದು ಕೂಡುತ್ತವೆ. ಫ್ರೆಂಚ್‌ ಕ್ರಾಂತಿ ಮತ್ತು ನೆಪೋಲಿಯನ್‌ ಯುದ್ಧದಲ್ಲಿ ಫ್ರಾನ್ಸ್‌ ಪರವಾಗಿ ಹೋರಾಡಿ ಮಡಿದ ಯೋಧರ ಸ್ಮಾರಕವಾಗಿ ಕಟ್ಟಲಾಗಿದೆ.
ಜೀನ್‌ ಚಾಲ್‌ ಗ್ರಿನ್‌ ಎಂಬಾತನು ಕ್ರಿ.ಶ. 1806ರಲ್ಲಿ ನೆಪೋಲಿಯನ್ನನ ಅಣತಿಯಂತೆ ಇದರ ನಕ್ಷೆಯನ್ನು ತಯಾರಿಸಿದ. ಮರದ ಮಾದರಿಯೊಂದು ಈ ಸ್ಥಳದಲ್ಲಿ ಕೆಲವು ವರ್ಷಗಳ ಕಾಲ ಪ್ರದರ್ಶನಕ್ಕಿತ್ತು. 1811ರಲ್ಲಿ ಚಾಲ್‌ ಗ್ರಿನ್‌ ಮೃತನಾದ. ಇದರ ನಂತರ ಪದೇಪದೇ ವಿಘ್ನಗಳುಂಟಾದವು. ಕೊನೆಗೂ ಲೂಯಿ ಫಿಲಿಪ್‌ ರಾಜನ ಕಾಲದಲ್ಲಿ ಪೂರ್ಣಗೊಂಡು 1836ರಲ್ಲಿ ಈ ಯುದ್ಧ ಸ್ಮಾರಕ ಉದ್ಘಾಟಿತವಾಯಿತು.

ಸೈನಿಕ ಪಡೆಗಳ ವಿಜಯದ ಪಥ ಸಂಚಲನಗಳು, ವಾರ್ಷಿಕ ಪೆರೇಡುಗಳು ಇಲ್ಲಿ ನಡೆಯುತ್ತಿದ್ದವು.  ನೆಪೋಲಿಯನ್ನನ ಅಂತಿಮಯಾತ್ರೆಯು ಈ ನಿರ್ಮಾಣದ ಕೆಳಗೆ ಸಾಗಿ ಸಮಾಧಿ ಸ್ಥಳಕ್ಕೆ ರವಾನೆಯಾಯಿತು (1840ರಲ್ಲಿ). ಮೇ 22, 1885ರ ರಾತ್ರಿ ವಿಕ್ಟರ್‌ ಹ್ಯೂಗೋನ ಶವವನ್ನು ಇದರ ಕೆಳಗೆ ಇಡಲಾಗಿತ್ತು. ಚಾಲ್ಸ…ì ಗಾಡ್‌ ಫ್ರೈ ಎಂಬ ವಿಮಾನ ಚಾಲಕ 1919ರಲ್ಲಿ ಈ ನಿರ್ಮಾಣದ ಕೆಳಗಿನಿಂದ ತನ್ನ ಯುದ್ಧ ವಿಮಾನವನ್ನು ಹಾರಿಸಿಕೊಂಡು ಹೋಗಿದ್ದ. ಈ ಸಂದರ್ಭವನ್ನು ಚಿತ್ರೀಕರಿಸಲಾಯಿತು.

50 ಮೀ. ಎತ್ತರ, 45 ಮೀ. ಅಗಲವಿರುವ ಈ ಸ್ಮಾರಕದ ಒಳಭಾಗದಲ್ಲಿ 30 ಫ್ರೆಂಚ್‌ ವಿಜಯಗಳನ್ನು ನಮೂದಿಸಲಾಗಿದೆ.  ಹಾಗೆಯೇ 660 ಫ್ರೆಂಚ್‌ ಸೈನ್ಯದ ಪ್ರಮುಖರ ಹೆಸರುಗಳನ್ನು ಬರೆಯಲಾಗಿದೆ.  ರೋಮನ್‌ ಮಾದರಿಯ ಈ ಕಟ್ಟಡದ ಹೊರಮೈಯಲ್ಲಿ ಪ್ರಸಿದ್ಧವಾದ ಶಿಲ್ಪಿಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಅಡಕವಾಗಿವೆ.  ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಅನಾಮಧೇಯ ಸೈನಿಕನ ಸಮಾಧಿ ಇದರ ಕೆಳಗಿದೆ. ಇದಲ್ಲದೆ ಸತತವಾಗಿ ಉರಿಯುವ ಜ್ಯೋತಿಯೊಂದನ್ನು ಎರಡೂ ಮಹಾಯುದ್ಧಗಳಲ್ಲಿ ಮಡಿದ ಯೋಧರ ಸ್ಮರಣಾರ್ಥ ಇಡಲಾಗಿದೆ.

ಕಟ್ಟಡದ ಮೇಲ್ಛಾವಣಿಗೆ ಮೆಟ್ಟಿಲುಗಳ ಮೂಲಕ ಅಥವಾ ಲಿಫ್ಟಿನ ಮೂಲಕ ಹೋಗಬಹುದು. ಮೇಲ್ಛಾವಣಿಯ ಒಂದು ಅಂತಸ್ತು ಕೆಳಗೆ ಈ ಸ್ಮಾರಕವನ್ನು ವಿವರಿಸುವ ವಸ್ತು ಸಂಗ್ರಹಾಲಯವಿದೆ.  ಮೇಲ್ಛಾವಣಿಯಲ್ಲಿ ನಿಂತು ನೋಡಿದರೆ ಇಡೀ ಪ್ಯಾರಿಸ್‌ ನಗರದ ಮನಮೋಹಕ ದೃಶ್ಯ ಲಭ್ಯ. 

ಉಮಾಮಹೇಶ್ವರಿ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next