Advertisement

ಮೊದಲೇ ಎಚ್ಚೆತ್ತುಕೊಳ್ಳಿ; ಮೂಲಭೂತವಾದಕ್ಕೆ ಕಡಿವಾಣ ಬೇಕು

06:15 AM Oct 06, 2017 | |

ಪೈಶಾಚಿಕ ಕೃತ್ಯಗಳಿಂದ ಜಗತ್ತಿಗೆ ಬೆದರಿಕೆಯಾಗಿ ಪರಿಣಮಿಸಿರುವ ಐಸಿಸ್‌ ಉಗ್ರ ಸಂಘಟನೆಯ ಬಾಹುಗಳು ವಿಸ್ತರಿಸುತ್ತಿವೆಯೇ? ಇದು ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್‌ ಮೀಡಿಯಾಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿರುವ ವಿಷಯ. 

Advertisement

ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ಹರಿದಾಡಿರುವ ಧಾರ್ಮಿಕ ಮುಖಂಡರೊಬ್ಬರ ಆಡಿಯೋ ತುಣುಕು ಮಂಗಳೂರಿನ ಬಂಟ್ವಾಳದ ಸುತ್ತಮುತ್ತ ಗುಪ್ತವಾಗಿ ಐಸಿಸ್‌ ಚಟುವಟಿಕೆಗಳು ನಡೆಯುತ್ತಿರುವ ಶಂಕೆ ಮೂಡಿಸಿದೆ. ಸೌತ್‌ ಕರ್ನಾಟಕ ಸಲಫಿ ಮೂವ್‌ಮೆಂಟ್‌ ಎಂಬ ಧಾರ್ಮಿಕ ಸಂಘಟನೆಯ ಮುಖ್ಯಸ್ಥರಾಗಿರುವ ಇಸ್ಮಾಯಿಲ್‌ ಶಾಫಿ ಆಡಿಯೊ ತುಣುಕು ತನ್ನದೇ ಮತ್ತು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಾನೇ ಯುವಕರಿಗೆ ಐಸಿಸ್‌ ಆಕರ್ಷಣೆಗೆ ಒಳಗಾಗದಂತೆ ಎಚ್ಚರಿಕೆ ನೀಡಿದ್ದೆ ಎಂದು ಒಪ್ಪಿಕೊಂಡಿರುವುದರಿಂದ ಈ ಶಂಕೆಗೆ ಪುಷ್ಟಿ ಒದಗಿದೆ.  

ಬಂಟ್ವಾಳ, ಕಾಟಿಪಳ್ಳ, ಬಿ.ಸಿ ರೋಡ್‌ ಮತ್ತು ಉಳ್ಳಾಲ ಕೆಲವೆಡೆ ಕೆಲವು ಅಪರಿಚಿತ ಯುವಕರು ಸ್ಥಳೀಯ ಯುವಕರೊಡನೆ ಮಾತುಕತೆ ನಡೆಸುತ್ತಿರುವುದು ತನ್ನ ಗಮನಕ್ಕೆ ಬಂದ ಬಳಿಕ ಅವರು ಈ ಎಚ್ಚರಿಕೆ ನೀಡಿದ್ದಾರೆ. ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲು ಕಾರಣವಿದೆ.

ಕಳೆದ ವರ್ಷ­ವಷ್ಟೇ ಪಕ್ಕದ ಕಾಸರಗೋಡು ಜಿಲ್ಲೆಯಿಂದ 21 ಯುವಕರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅನಂತರ ಅವರು ಐಸಿಸ್‌ ಸೇರಿ ಅಪಾ^ನಿಸ್ಥಾನಕ್ಕೆ ಪ್ರಯಾಣಿಸಿರುವ ಮಾಹಿತಿ ಬಹಿರಂಗವಾಗಿತ್ತು. ಹೀಗೆ ಬೇರೆಲ್ಲೋ ದೂರದ ಐಸಿಸ್‌ ಸೇರುತ್ತಿರುವ ಸುದ್ದಿ­ ಓದುತ್ತಿದ್ದವರು ಅದು ನೆರೆ ರಾಜ್ಯಕ್ಕೆ ಬಂದಾಗ ಬೆಚ್ಚಿ ಬಿದ್ದಿದ್ದರು. ಆದರೆ ಇದೀಗ ಐಸಿಸ್‌ ನಮ್ಮ ಮನೆಯಂಗಳಕ್ಕೆ ಬಂದಿರುವ ಗುಮಾನಿಯಿದೆ. ಶಾಫಿಯವರು ಹೇಳಿರುವ ಊರುಗಳೆಲ್ಲ ಕೋಮು ಸೂಕ್ಷ್ಮ ಪ್ರದೇಶಗಳು. ಕೆಲ ಸಮಯದ ಹಿಂದೆ ಇಲ್ಲಿ ಹತ್ತಿಕೊಂಡಿದ್ದ ಕೋಮು ದಳ್ಳುರಿ ಶಮನವಾಗಲು ಎರಡು ತಿಂಗಳೇ ಹಿಡಿದಿತ್ತು. ಪರಿಸ್ಥಿತಿಗೆ ತುಸು ಸಹಜ ಸ್ಥಿತಿಗೆ ಬಂತು ಎನ್ನುವಾಗ ಈಗ ಐಸಿಸ್‌ ಗುಮ್ಮ ಎದುರಾಗಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. 

ಭಾರತದಲ್ಲಿ ಐಸಿಸ್‌ ಸೇರಿದ ಮೊದಲ ಪ್ರಕರಣ ವರದಿಯಾಗಿದ್ದು 2013ರಲ್ಲಿ. ಒಬ್ಬ ವ್ಯಕ್ತಿ ಐಸಿಸ್‌ ಸೇರಿದ್ದೇ ದೊಡ್ಡ ಸುದ್ದಿಯಾಗಿತ್ತು. ಆದರೆ ಬಳಿಕ ವರ್ಷದಿಂದ ವರ್ಷಕ್ಕೆ ಐಸಿಸ್‌ ಸೇರುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇರಾಕ್‌ ಮತ್ತು ಸಿರಿಯಾದಲ್ಲಿ ಐಸಿಸ್‌ ಬಲಗುಂದಿರುವುದು ನಿಜ. ಆದರೆ ಅದಿನ್ನೂ ಪೂರ್ಣವಾಗಿ ನಾಶವಾಗಿಲ್ಲ. ಈಗಲೂ ಐಸಿಸ್‌ನ ಕಠೊರ ವಹಾಬಿ ಸಿದ್ಧಾಂತದತ್ತ ಆಕರ್ಷಿತರಾಗುತ್ತಿರುವವರ ಸಂಖ್ಯೆ ದೊಡ್ಡದಿದೆ. 

Advertisement

ಐಸಿಸ್‌ ಉಳಿದ ಉಗ್ರ ಸಂಘಟನೆಗಳಿಗಿಂತ ಭಿನ್ನವಾಗಿ ಹೊಸಬರನ್ನು ಸೇರಿಸಿಕೊಳ್ಳಲು ತನ್ನದೇ ಆದ ವಿಧಾನವನ್ನು ಅನುಸರಿಸುತ್ತಿದೆ. ಸೋಷಿಯಲ್‌ ಮೀಡಿಯಾಗಳನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಂಡು ಮೊದಲು ಬ್ರೈನ್‌ವಾಶ್‌ ಮಾಡಿ ಸೇರಿಸಿಕೊಳ್ಳುವ ವ್ಯವಸ್ಥಿತ ಕಾರ್ಯತಂತ್ರ ಐಸಿಸ್‌ನದ್ದು. ಕೇರಳದಲ್ಲಿ ಅನೇಕ ವಿದ್ಯಾವಂತ ಯುವಕರು ಐಸಿಸ್‌ ಪ್ರತಿಪಾದಿಸುವ ಪವಿತ್ರ ಜೀವನದ ಆಕರ್ಷಣೆಗೆ ಬಿದ್ದಿರುವುದು ಪದೇ ಪದೇ ವರದಿಯಾಗುತ್ತಿದೆ. ಎರಡು ರೀತಿಯ ಉಗ್ರರನ್ನು ಐಸಿಸ್‌ ತಯಾರು ಮಾಡುತ್ತಿದೆ. ಸಿರಿಯಾ ಅಥವಾ ಇರಾಕ್‌ಗೆ ಹೋಗಿ ಕಾಲಾಳುಗಳಾಗಿ ಹೋರಾಡಲು ಪ್ರೇರೇಪಿಸುವುದು, ಇಲ್ಲವೇ ಇಲ್ಲಿಯೇ ಇದ್ದುಕೊಂಡು ಸಮಯ ನೋಡಿ ದಾಳಿ ಮಾಡಲು ತಯಾರಾಗಿರುವುದು. 

ಲಂಡನ್‌ ಮತ್ತು ಪ್ಯಾರಿಸ್‌ನಲ್ಲಿ ಇತ್ತೀಚೆಗೆ ದಾಳಿ ಮಾಡಿರುವುದು ಎರಡನೇ ಮಾದರಿಯ ಉಗ್ರರು. ಇವರನ್ನು ಒಂಟಿ ತೋಳಗಳೆಂದು ಕರೆಯುತ್ತಾರೆ. ಅಂದರೆ ಏಕಾಂಗಿಯಾಗಿ ಹೋಗಿ ದಾಳಿ ಮಾಡುವವರು. 

ಕರಾವಳಿ ಭಾಗದಲ್ಲಿ ಕಳೆದ ಕೆಲ ಸಮಯಗಳಿಂದ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಸ್ವರೂಪ ಮಾಮೂಲಿಯಾಗಿಲ್ಲ ಎನ್ನುವುದು ಅರಿವಾಗುತ್ತದೆ. ಚಿಕ್ಕಪುಟ್ಟ ವಿಷಯಗಳೂ ಕೋಮು ಸ್ವರೂಪ ಪಡೆದುಕೊಂಡು  ಮಾರಾ­ಮಾರಿ­ಯಾಗುವ ಗಂಭೀರ ಸ್ಥಿತಿಗೆ ಪದೇ ಪದೇ ಕರಾವಳಿ ಸಾಕ್ಷಿಯಾಗುತ್ತಿದೆ. ಯುವ ಜನತೆ ಧಾರ್ಮಿಕ ಮೂಲಭೂತವಾದದತ್ತ ಆಕರ್ಷಿತರಾಗುತ್ತಿರುವುದು ಢಾಳಾಗಿ ಕಾಣಿಸುತ್ತಿದೆ. ಹೀಗಾಗಿ ಈ ಶಂಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಐಸಿಸ್‌ಗೆ ಸೇರಿಸಿಕೊಳ್ಳುವವರು, ಹಣಕಾಸಿನ ಸಹಾಯ ಮಾಡುವವರು, ಪ್ರಚಾರ ಮಾಡುವವರು ಮತ್ತು ಸಂಚು ಮಾಡುವವರ ಮೇಲೂ ಕಣ್ಣಿಡುವ ಅಗತ್ಯ­ವಿದೆ. ಗುಪ್ತಚರ ಪಡೆಯನ್ನು ಚುರುಕುಗೊಳಿಸುವುದರಿಂದ ಪೊಲೀಸರು ಇನ್ನಷ್ಟು ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸಿದರೆ ಐಸಿಸ್‌ ಪ್ರಭಾವವನ್ನು ಕೊಂಚ ಮಟ್ಟಿಗೆ ತಡೆಯಬಹುದು. ಇದಕ್ಕೂ ಮೊದಲು ಎಲ್ಲ ಧಾರ್ಮಿಕ ಮುಖಂಡರು ತಮ್ಮ ತಮ್ಮ ಧರ್ಮಗಳ ಮೂಲಭೂತವಾದದತ್ತ ಯುವಕರ ಮನಸ್ಸು ತಿರುಗದಂತೆ ಮಾಡಬೇಕು. ಅನಾಹುತವಾಗುವ ಮೊದಲು ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next