Advertisement

ಎಣ್ಣೆ ಆಸೆಗೆ ತಿಂದರು ದೊಣ್ಣೆ ಏಟು!

03:23 PM May 06, 2020 | Naveen |

ವಾಡಿ: ಲಾಕ್‌ಡೌನ್‌, ಸೀಲ್‌ಡೌನ್‌ ಹಾಗೂ ಕಂಟೇನ್ಮೆಂಟ್‌ ಜೋನ್‌ ಸಂಕಷ್ಟದಲ್ಲಿರುವ ಪಟ್ಟಣದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲವಾದರೂ, ಮದ್ಯ ಪ್ರಿಯರು ಮೂರು ಕಿ.ಮೀ ದೂರದ ಇಂಗಳಗಿ ಗ್ರಾಮದ ಎಂಎಸ್‌ ಐಎಲ್‌ ಮದ್ಯದಂಗಡಿ ಎದುರು ಪಾಳೆ ಹಚ್ಚಿ ಪೊಲೀಸರಿಂದ ಲಾಠಿ ಏಟು ತಿಂದ ಪ್ರಸಂಗ ಮಂಗಳವಾರ ನಡೆದಿದೆ.

Advertisement

ವಾಡಿ ನಗರ ಸೇರಿದಂತೆ ಶಹಾಬಾದ, ರಾವೂರ, ಕುಂದನೂರು, ಹಳಕರ್ಟಿ, ಕಮರವಾಡಿ, ಲಕ್ಷ್ಮೀಪುರವಾಡಿ ಗ್ರಾಮಗಳಿಂದ ಇಂಗಳಗಿಗೆ ಆಗಮಿಸಿದ್ದ ಸಾವಿರಾರು ಜನರು ಸಾಮಾಜಿಕ ಅಂತರವನ್ನು ಗಾಳಿಗೆ ತೂರುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಕೆಲವರಂತೂ ಬೆಳಗ್ಗೆ 7 ಗಂಟೆಗೆ ಪಾಳಿ ಹಚ್ಚಿದ್ದರು. ಬೈಕ್‌ ಮತ್ತು ಕಾರುಗಳಲ್ಲಿ ಬರುತ್ತಿದ್ದ ಯುವಕರ ತೆಕ್ಕೆಯಲ್ಲಿ ಮದ್ಯದ ಬಾಟಲಿಗಳೇ ಕಾಣುತ್ತಿದ್ದವು. ನಮಗೆ ಎಣ್ಣೆ ಸಿಗುತ್ತೋ ಇಲ್ಲವೋ ಎಂಬಂತೆ ಜನರು ಕಿಕ್ಕಿರಿದು ಸೇರಿ ಗದ್ದಲಕ್ಕೆ ಕಾರಣವಾದರು. ಇದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮದ್ಯದಂಗಡಿಗೆ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮದ್ಯ ಖರೀದಿಸಲು ಉದ್ದದ ಸಾಲು ಒಂದೆಡೆಯಾದರೆ, ಗೆಳೆಯರನ್ನು ಪಾಳಿಗೆ ನಿಲ್ಲಲು ಹೇಳಿ ದೂರದಲ್ಲಿ ಜಮಾಯಿಸಿದ್ದ ಯುವಕರ ಗುಂಪು ಮತ್ತೂಂದೆಡೆ ನಿಂತಿತ್ತು. ಕೇವಲ ಮೂರು ತಾಸಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದು, ಮದ್ಯ ಸಿಗದೆ ಅನೇಕರು ನಿರಾಸೆಯಿಂದ ಊರಿಗೆ ಮರಳಿದರು. ಪಿಎಸ್‌ಐ ದಿವ್ಯಾ ಮಹಾದೇವ್‌, ಎಎಸ್‌ಐ ವೆಂಕಟೇಶ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.

ಮದ್ಯ ವಂಚಿತ ಗ್ರಾಮಸ್ಥರ ಅಳಲು
ನಮ್ಮೂರಿನಲ್ಲಿ ಎಂಎಸ್‌ಐಎಲ್‌ ಮದ್ಯದ ಅಂಗಡಿಯಿದ್ದು, ನಮಗೆ ಮದ್ಯ ಖರೀದಿಸಲು ಅವಕಾಶವಿಲ್ಲದಂತೆ ಆಗಿದೆ. ವಾಡಿ, ಶಹಾಬಾದ ಹಾಗೂ ಇನ್ನಿತರ ಗ್ರಾಮದ ಜನರೇ ಹೆಚ್ಚು ಸೇರಿದ್ದಾರೆ. ಇದು ಗ್ರಾಮದ ಮದ್ಯ ಪ್ರಿಯರಿಗೆ ಅನ್ಯಾಯ ಮಾಡಿದಂತಾಗಿದೆ. ಕೂಡಲೇ ಮದ್ಯ ಖರೀದಿಸಲು ಸ್ಥಳೀಯರಿಗೆ ಮೊದಲ ಆದ್ಯತೆ ನೀಡುವಂತೆ ಆದೇಶಿಸಬೇಕು ಎಂದು ಇಂಗಳಗಿಯ ಕೆಲ ಗ್ರಾಮಸ್ಥರು ಪಿಡಿಒ ರೇಶ್ಮಾ ಕೋತ್ವಾಲ್‌ ಅವರಿಗೆ
ಮೌಖೀಕವಾಗಿ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next