Advertisement

ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಮತ್ತೆ ಬಂತು ವಿಆರ್‌ಎಸ್‌!

08:21 PM Sep 14, 2020 | Suhan S |

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದ್ದ ವಿಆರ್‌ಎಸ್‌ ಯೋಜನೆ, ಎರಡು ದಶಕಗಳ ನಂತರ ಮತ್ತೆ ಸದ್ದು ಮಾಡತೊಡಗಿದೆ.

Advertisement

1999-2000 ರಲ್ಲಿ ಮೊದಲ ಬಾರಿಬ್ಯಾಂಕಿಂಗ್‌ ಉದ್ಯಮದಲ್ಲಿ ಸ್ವಯಂ ನಿವೃತ್ತಿ ಯೋಜನೆಯನ್ನು( ವಿ ಆರ್‌ಎಸ್‌ ) ಜಾರಿಗೆತರಲಾಯಿತು. ಈ ಯೋಜನೆಯಡಿಯಲ್ಲಿ ಆಗ 126714 ಸಿಬ್ಬಂದಿ ನಿವೃತ್ತಿ ಪಡೆದಿದ್ದರು. ಮಾನವ ಸಂಪನ್ಮೂಲದ ಗರಿಷ್ಠ ಬಳಕೆ ಮತ್ತು ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ಕಡಿತಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಹೀಗೆ ನಿವೃತ್ತಿ ಪಡೆದವರಿಗೆ ಒಳ್ಳೆಯ ಪ್ಯಾಕೇಜ್‌ ನೀಡಲಾಗಿತ್ತು ಎಂಬುದುಗಮನಿಸಬೇಕಾದ ಸಂಗತಿ.

ಎರಡು ದಶಕಗಳ ನಂತರ, ಈ ಸ್ವಯಂ ನಿವೃತಿ ಯೋಜನೆ ಬ್ಯಾಂಕಿಂಗ್‌ ಉದ್ಯಮವನ್ನು ಮರು ಪ್ರವೇಶಿಸಿದೆ. ಬ್ಯಾಂಕುಗಳ ದೊಡ್ಡಣ್ಣ ಎನಿಸಿದ “ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ’ಇದನ್ನು ಪ್ರಕಟಿಸಿದೆ. ಇದರ ಪ್ರಕಾರ 25 ವರ್ಷಗಳ ಸೇವೆಯನ್ನು ಪೂರ್ತಿ ಮಾಡಿದವರು ಮತ್ತು 55 ವರ್ಷ ದಾಟಿದವರು ಈಗ ವಿಆರ್‌ಎಸ್‌ ಪಡೆಯಲು ಅರ್ಹರು. ಈ ಯೋಜನೆ ಅಡಿಯಲ್ಲಿ, ಬಾಕಿ ಇರುವ ವರ್ಷಗಳ ಸೇವೆಯ 50% ಅಥವಾ ಗರಿಷ್ಠ 18 ತಿಂಗಳ ಸಂಬಳವನ್ನು ಎಕ್ಸ್‌ಗ್ರೇಶಿಯ ಎಂದು ಕೊಡಲಾಗುವುದು. ಜೊತೆಗೆ, ಪಿಂಚಣಿ, ಗ್ರಾಚುಯಿಟಿ, ಪ್ರಾವಿಡೆಂಟ್‌ ಫ‌ಂಡ್‌ ಮತ್ತು ಮೆಡಿಕಲ್‌ ಚಿಕಿತ್ಸಾ ವೆಚ್ಚವೂ ಸಿಗುತ್ತದೆ. ಈ ಯೋಜನೆ ಡಿಸೆಂಬರ್‌ 1, 2020 ರಿಂದ ಫೆಬ್ರವರಿ 2021ವರಗೆ ಓಪನ್‌ ಇರುತ್ತದೆ ಎನ್ನಲಾಗಿದೆ.

ಏಕೆ ಈ ನಿರ್ಧಾರ? :  ಬ್ಯಾಂಕಿಂಗ್‌ ಉದ್ಯಮದಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದೆ (over staff ed) ನಿರ್ವಹಣಾ ವೆಚ್ಚ ಕಡಿಮೆ ಆಗಬೇಕೆಂದರೆ, ಸಿಬ್ಬಂದಿಯ ಸಂಖ್ಯೆ ಕೂಡ ತಗ್ಗಬೇಕಾದದ್ದು ಅನಿವಾರ್ಯ. ಸ್ಟೇಟ್‌ ಬ್ಯಾಂಕ್‌ ಸಹವರ್ತಿ ಬ್ಯಾಂಕ್‌ ಗಳ ವಿಲೀನದ ನಂತರ, ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದೆ ಎಂಬ ಮಾತೂ ಇದೆ. ಅದಕ್ಕಿಂತ ಹೆಚ್ಚಾಗಿ, ಈಗ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಡಿಜಿಟಲೀಕರಣ ಆಳವಾಗಿ ಬೇರು ಬಿಡುತ್ತಿದ್ದು, ಆಫೀಸುಗಳಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚು ಬೇಕಾಗುತ್ತಿಲ್ಲ. ಸ್ಟೇಟ್‌ ಬ್ಯಾಂಕಿನಲ್ಲಿ ಪ್ರತಿ ಒಂದು ನೂರು ವ್ಯವಹಾರದಲ್ಲಿ ಕೇವಲ 9 ವ್ಯವಹಾರ ಬ್ರಾಂಚ್‌ನಲ್ಲಿ ನಡೆಯುತ್ತದೆಯಂತೆ. ಒಟ್ಟು ವ್ಯವಹಾರದಲ್ಲಿ 55% ಮೊಬೈಲ್‌ನಲ್ಲಿ ನಡೆಯುತ್ತದೆಯಂತೆ. ಸುಮಾರು 30% ನಗದು ವ್ಯವಹಾರ ಎಟಿಎಂನಲ್ಲಿ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.

ಹೊರೆ ತಗ್ಗಿಸುವ ಪ್ರಯತ್ನ :  ಶಾಖೆಯಲ್ಲಿ ಒಂದು ವ್ಯವಹಾರಕ್ಕೆ 60 ರೂ. ವೆಚ್ಚವಾದರೆ, ಎಟಿಎಂನಲ್ಲಿ 9 ರೂಪಾಯಿ ಮತ್ತು ಮೊಬೈಲ್‌ನಲ್ಲಿ 1 ರುಪಾಯಿ ವೆಚ್ಚ ಆಗುತ್ತದಂತೆ. ಮಾನವ ಸಂಪನ್ಮೂಲಗಳಿಗಿಂತ ಯಂತ್ರಗಳ ಬಳಕೆ ಹೆಚ್ಚಾಗುತ್ತಿರುವದನ್ನು ನೋಡಿ ಮತ್ತು ತನ್ಮೂಲಕ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಇಂಥ ಕ್ರಮಗಳು ಒಂದು ರೀತಿಯ

Advertisement

ಸಮೂಹ ಸನ್ನಿ ಇದ್ದಂತೆ. ಇಂದು ಸ್ಟೇಟ್‌ ಬ್ಯಾಂಕ್‌ನಲ್ಲಿ ಬಂದಿದ್ದು, ನಾಳೆ ಉಳಿದ ಬ್ಯಾಂಕ್‌ಗಳಿಗೆ ಹರಡುತ್ತದೆ. ಕೊರೊನಾ ಕಾಟದ ಈ ದಿನಗಳಲ್ಲಿ ಬ್ಯಾಂಕುಗಳು ತೀವ್ರ ಸಂಕಷ್ಟದಲ್ಲಿ ಇವೆ. ಸುಸ್ತಿ ಸಾಲ ಗಗನಕ್ಕೇರುತ್ತಿದೆ. ಸಾಲ ವಸೂಲಾತಿ ನಿರೀಕ್ಷೆಯಂತೆ ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲೇಬೇಕಾದ ಅಗತ್ಯವಿದೆ. ವಿಆರ್‌ಎಸ್‌ ಯೋಜನೆಯನ್ನು ಮತ್ತೆ ಜಾರಿಗೆ ತಂದಿರುವುದು ಸರಿಯಲ್ಲ. ಇದು ಬ್ಯಾಂಕುಗಳ ಖಾಸಗೀಕರಣದ ಮೊದಲ ಹಂತ ಎಂಬುದು ಕಾರ್ಮಿಕ ಸಂಘಗಳ ಆಪಾದನೆ. ಅದರೆ, ಪ್ರತಿಭೆ ಉಳ್ಳವರಿಗೆ ಇನ್ನೊಂದು ಉನ್ನತ ಸ್ಥಾನಕ್ಕೆಜಿಗಿಯಲು ವಿಆರ್‌ ಎಸ್‌ ಅವಕಾಶ ಮಾಡಿಕೊಡುತ್ತದೆ ಎಂಬ ವಾದವೂ ಇದೆ. ಒಂದು ಸಮಾಧಾನ ಎಂದರೆ, ವಿಆರ್‌ಎಸ್‌ ಪಡೆವ ಬ್ಯಾಂಕ್‌ ನೌಕರರು ಒಂದು ದೊಡ್ಡ ಗಂಟಿನೊಂದಿಗೇ ಮನೆಗೆ ಬರುತ್ತಾರೆ. ­

 

 

-ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next