Advertisement

ಮತದಾನ: ಕಡ್ಡಾಯ ಮಾಡಿದರೆ ಹೇಗೆ?

11:42 PM May 09, 2019 | mahesh |

ಚುನಾವಣೆಗಳು ನಮ್ಮ ದೇಶದಲ್ಲಿ ಪ್ರತೀ ವರ್ಷ ಎಂಬಂತೆ ಬರುತ್ತಲೇ ಇರುತ್ತವೆ. ಅದನ್ನು ಮಾಡಲು ಆಯೋಗವಿದೆ. ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ದಕ್ಷತೆ ಮತ್ತು ಪಾರದರ್ಶಕತೆಗಾಗಿ ಆಯೋಗ ಸಾಕಷ್ಟು ಜವಾಬ್ದಾರಿ ವಹಿಸುತ್ತದೆ. ಚುನಾವಣೆ ಮುಗಿದ ಬಳಿಕ ಮಾಧ್ಯಮಗಳು, “ಶೇ. 72ರಷ್ಟು ಮತದಾನ. ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಜನ ಪಾಲ್ಗೊಂಡರು’ ಎಂದು ವರದಿ ಮಾಡುತ್ತವೆ. ಆದರೆ ಉಳಿದ ಶೇಕಡ 28 ಮಂದಿ ಏಕೆ ಮತದಾನದಲ್ಲಿ ಪಾಲ್ಗೊಳ್ಳಲಿಲ್ಲ ಎಂಬುದನ್ನು ಯಾರೂ ಪ್ರಶ್ನಿಸುವುದಿಲ್ಲ. ಮತದಾನ ಮಾಡದೆ ಉಳಿದ ಒಂದಿಬ್ಬರಲ್ಲಿ ಕೇಳಿದರೆ, “ಹೋಗ್ರೀ, ರಾಮರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ ಅಂದ ಹಾಗೆ ಯಾರು ಗೆದ್ದರೂ ನಮ್ಮ ಉದ್ಧಾರ ಆಗೋದಿಲ್ಲ. ಇವರು ಗೆದ್ದು ಬಂದು ದುಡ್ಡು ಮಾಡ್ಕೊàತಾರೆ. ನಮ್ಮನ್ನು ಕೇಳ್ಳೋರಿರೋಲ್ಲ’ ಇದು ಅವರು ಮತದಾನ ಮಾಡದಿರುವುದಕ್ಕೆ ಮುಖ್ಯ ಕಾರಣವಂತೆ.

Advertisement

ಇನ್ನೊಬ್ಬರು ಹೇಳುವ ಕಾರಣ ಮತ್ತೂಂದು. “ಮೂರು ಪಕ್ಷಗಳಲ್ಲಿ ಕಳ್ಳ, ಸುಳ್ಳ, ಮಳ್ಳ ನಿಂತಿದ್ದಾರೆ. ಯಾರನ್ನೂ ಚುನಾ ಯಿಸಲು ಮನಸ್ಸಿಲ್ಲದೆ ಮತದಾನದಿಂದ ದೂರವುಳಿದೆ’ ಎನ್ನುವ ಅವರಿಗೆ ಇವರೊಬ್ಬರು ದೂರವುಳಿದರೂ ಅವರಲ್ಲೊಬ್ಬರು ಸಲೀಸಾಗಿ ಗೆಲ್ಲುತ್ತಾರೆಂಬುದು ತಿಳಿಯುವುದಿಲ್ಲವೆ? ಒಬ್ಬ ಅನಪೇಕ್ಷಿತ ವ್ಯಕ್ತಿ ನಿಂತರೆ ಅವನನ್ನು ಇಡೀ ಕ್ಷೇತ್ರದ ಜನತೆ ನೋಟಾ ಮತದಾನದ ಮೂಲಕ ನಿರಾಕರಿಸಬಹುದು. ಇವರಲ್ಲಿ ಯಾರನ್ನೂ ಚುನಾಯಿಸಲು ನಮಗೆ ಇಷ್ಟವಿಲ್ಲ ಎಂಬ ಅಭಿಮತ ಪ್ರಕಟಿಸಬಹುದು.

ಹೀಗೆ ಮಾಡದೆ ಮತದಾನದ ಹಕ್ಕನ್ನು ನಿರರ್ಥಕಗೊಳಿಸುವ ಬುದ್ಧಿವಂತರಿಂದಾಗಿಯೇ ನಮ್ಮನ್ನಾಳುವ ಮಂದಿಯ ಯೋಗ್ಯತೆಯಲ್ಲಿ ಕುಂದು ಕೊರತೆಗಳನ್ನು ಹೆಚ್ಚಿಸುತ್ತ ಹೋಗುತ್ತಿದ್ದೇವೆ. ನಿಜವಾಗಿ ತೀರ್ಪು ಕೊಟ್ಟು ಅದಕ್ಷರನ್ನು ದೂರ ಸರಿಸಬೇಕಾದವರೇ ಮತದಾನವನ್ನು ತಿರಸ್ಕರಿಸಿ ಸುಮ್ಮನೆ ಉಳಿಯುವ ಪರಂಪರೆಯನ್ನು ನಮ್ಮ ಮತದಾರರು ಮುಂದುವರೆಸಿದ ಪ್ರತಿಫ‌ಲವಾಗಿ ರಾಜಕೀಯ ಕ್ಷೇತ್ರದಲ್ಲಿ ಪರಿಶುದ್ಧತೆಯ ಕೊರತೆಯನ್ನು ಕಾಣಬೇಕಾಗಿದೆ.

ಮತದಾನವನ್ನು ತಿರಸ್ಕರಿಸುವ ಪ್ರವೃತ್ತಿಯನ್ನು ಜನಮನ ದಿಂದ ದೂರವಿಡುವಂತಹ ಕಾನೂನುಗಳ ಮೂಲಕವಾದರೂ ಶೇ. 99ರಷ್ಟು ಮಂದಿಯಾದರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮಾಡುವುದು ಮುಂದಿನ ದಿನಗಳಲ್ಲಿ ಅಗತ್ಯವಾಗಿದೆ. ಅಭ್ಯರ್ಥಿಗಳಿಂದ ಕ್ಷಣಿಕ ಲಾಭ ಹೊಂದುವ ಜನರು ತಪ್ಪದೆ ಅರ್ಹತೆಯನ್ನು ಪರಿಗಣಿಸಿ ಮತದಾನ ಮಾಡುತ್ತಾರೆ. ತನಗೇನೂ ಲಾಭವಿಲ್ಲ, ಯಾರಿಂದಲೂ ಏನೂ ಆಗಬೇಕಾದ್ದಿಲ್ಲ ಎಂಬ ಭಾವನೆಯಿರುವವರು ಪ್ರಜಾಪ್ರಭುತ್ವದ ಆಶಯಕ್ಕೆ ಭಂಗ ತರುವುದರ ಜೊತೆಗೆ ಹದಗೆಟ್ಟ ಆಡಳಿತದ ಸ್ಥಾಪನೆಗೂ ಪರೋಕ್ಷವಾಗಿ ಕಾರಣವಾಗುತ್ತಾರೆ. ಅಂಗವಿಕಲರಿಗೆ ಕೂಡ ಮತದಾನದಲ್ಲಿ ಭಾಗವಹಿಸಲು ಬೇಕಾದ ಸೌಲಭ್ಯಗಳನ್ನು ನೀಡಿ ಒಬ್ಬನು ಕೂಡ ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸದೆ ಇರಬಾರದೆಂಬ ಸದಾಶಯ ಆಯೋಗದ ನಡೆಯಲ್ಲಿದೆ. ಭಾಗವಹಿಸದೆ ಇರುವವನಿಗೆ ಯಾವುದೇ ಅಂಗಾಂಗ ನ್ಯೂನತೆಯಿರದೆ, ನಿರಾಸಕ್ತಿಯೊಂದೇ ಕಾರಣವಾಗಿದ್ದರೆ ಬಹುಜನ ಹಿತದ ಮಹತ್ಕಾರ್ಯದ ವೈಫ‌ಲ್ಯಕ್ಕೆ ಅವನಂಥವರು ಕಾರಣವಾಗುತ್ತಾರೆ.

ಯಾರು ಮತದಾನದಲ್ಲಿ ಭಾಗವಹಿಸಲಿಲ್ಲ ಎಂಬುದು ಲೆಕ್ಕ ಮಾಡುವುದು ಮತದಾನದ ಅವಧಿ ಮುಗಿದ ತಕ್ಷಣ ಕಷ್ಟವೇನಿಲ್ಲ. ಇದರಲ್ಲಿ ವಿಮುಖರಾದವರಿಗೆ ಸೂಕ್ತವಾದ ದಂಡನೆ ವಿಧಿಸುವ ಯೋಚನೆಯೂ ಅಪೇಕ್ಷಣೀಯವಾಗಿದೆ. ಸರಕಾರದ ಅಂಗವಾಗಿ ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದವನ ಜನಹಿತವಲ್ಲದ ಯೋಚನೆಗಳನ್ನು ತಿರಸ್ಕರಿಸಲು, ಮತದಾರನ ಹಿತ ಕಾಯದವನನ್ನು ಪರಿಮಾರ್ಜನೆಯ ಪಾಠಶಾಲೆಗೆ ಕಳುಹಿಸಲು ಮತದಾನಕ್ಕಿಂತ ದೊಡ್ಡ ಅವಕಾಶ ಇನ್ನೊಂದಿಲ್ಲ. ಸ್ಪರ್ಧಿಸಿದ ವ್ಯಕ್ತಿ ಎಂಥವನೇ ಇರಬಹುದು, ಬಹುಜನರ ಒಲವಿನಿಂದ ಆತ ಗೆದ್ದು ಬರುತ್ತಾನೆ. ಅವನು ಗೆಲ್ಲಬಾರದು ಎಂಬ ಇಚ್ಛೆಯಿದ್ದರೆ ಬಹುಜನರೂ ಇದೇ ಅಪೇಕ್ಷೆ ಹೊಂದಿದ್ದರೆ ಒಬ್ಬರನ್ನೂ ಬಿಡದೆ ಪ್ರತಿಯೊಬ್ಬನೂ ಮತದಾನ ಮಾಡಲು ಮುಂದಾಗುವುದು ಒಂದೇ ಪರಿಹಾರದ ಮಾರ್ಗ. ಅದರ ಬದಲು ಸಂನ್ಯಾಸನ ಸ್ವೀಕರಿಸಿ ಮನೆಯೊಳಗೆ ಉಳಿದರೆ ಅಲ್ಪ ಮತದಾನದಿಂದ ಅವನು ಗೆದ್ದು ಬಂದು, ಇದು ತನ್ನ ನೀಚ ಕೆಲಸಗಳಿಗೆ ಜನ ನೀಡಿದ ಸನ್ನದು ಎಂದು ತಿಳಿದು ತಪ್ಪು ಹಾದಿಯಲ್ಲಿ ನಡೆಯುತ್ತ ಹೋಗುತ್ತಾನೆ.

Advertisement

ಕೆಲವೆಡೆ ಶೇ. 56ರಷ್ಟು ಮತದಾನವಾಯಿತೆಂಬ ಸುದ್ದಿ ನಿಜಕ್ಕೂ ಹೆಮ್ಮೆ ತರುವಂಥದ್ದಲ್ಲ. ಉದ್ಯೋಗಿಗಳಿಗೆ ಅಂದು ಸಂಬಳಸಹಿತ ರಜೆ ನೀಡಬೇಕೆಂಬುದನ್ನು ಸರಕಾರ ಕಡ್ಡಾಯ ಮಾಡಿದೆ. ಮಾಧ್ಯಮಗಳ ಮೂಲಕ ಮತದಾರನ ಕರ್ತವ್ಯವನ್ನು ಮತ್ತೆ ಮತ್ತೆ ನೆನಪಿಸುವ ಕಾರ್ಯ ನಡೆಯುತ್ತದೆ. ಮದುವೆಯಂತಹ ಕಾರಣ ಹೇಳುವುದಾದರೆ ಮದುಮಗಳು ಧಾರೆ ಮುಗಿಸಿ ನೇರವಾಗಿ ಮತದಾನ ಮಾಡಲು ಬಂದುದು, ನೂರು ದಾಟಿದ ವ್ಯಕ್ತಿ ಸ್ಟ್ರೆಚರ್‌ ಮೇಲೆ ಮಲಗಿಕೊಂಡು ಬಂದು ಮತ ಚಲಾಯಿಸಿದುದು ಸುದ್ದಿಯಾಗುವಾಗ ಸದ್ದಿಲ್ಲದೆ, ಸುದ್ದಿ ಮಾಡದೆ ಮತಗಟ್ಟೆಗೆ ಸೋಕಿ ನೋಡದ ಮಂದಿ ಪ್ರಜಾಪ್ರಭುವಿನ ಕರ್ತವ್ಯದಲ್ಲಿ ತಪ್ಪಿದ ಕೀರ್ತಿಗೆ ಭಾಜನರಲ್ಲವೆ?

ಸವಲತ್ತುಗಳನ್ನು ಪಡೆಯುವಾಗ ಹೇಗೆ ಮತದಾರರ ಗುರುತಿನ ಚೀಟಿ ಕಡ್ಡಾಯವಾಗುತ್ತದೆಯೋ ಮತದಾನದಲ್ಲಿ ಭಾಗವಹಿಸಿದ ಬಗೆಗೆ ದಾಖಲೆಯೂ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣ ವಾಗಬೇಕು. ಬಹುಮತ ಬಹುಹಿತದ ಆಯ್ಕೆ ಮಾಡಬೇಕಿದ್ದರೆ ಕಾನೂನಾತ್ಮಕವಾಗಿಯೇ ಮತದಾನವನ್ನು ಮಾಡದೆ ಇರುವುದು ಅಪರಾಧವೆಂಬ ಪ್ರಜ್ಞೆಯನ್ನು ಮೂಡಿಸಲೇಬೇಕಾಗಿದೆ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next