Advertisement

ರುಸ್ತುಂ ಜತೆ ವಿವೇಕ್‌ ಒಬೆರಾಯ್‌,ಮತ್ತೊಬ್ಬ ಬಾಲಿವುಡ್ ನಟ ಕನ್ನಡಕ್ಕೆ

03:43 PM Jul 16, 2018 | Sharanya Alva |

ಶಿವರಾಜಕುಮಾರ್‌ ಅವರ “ರುಸ್ತುಂ’ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್‌ನ‌ ಖ್ಯಾತ ನಟರೊಬ್ಬರನ್ನು ಕರೆತರುವ ಆಲೋಚನೆ ಇದೆ ಎಂದು ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಸಂಜಯ್‌ ದತ್‌, ಅನಿಲ್‌ ಕಪೂರ್‌, ಸುನೀಲ್‌ ಶೆಟ್ಟಿ ಹಾಗೂ ಮನೋಜ್‌ ಬಾಜ್‌ಪೇಯಿ ಅವರಲ್ಲಿ ಒಬ್ಬರನ್ನು “ರುಸ್ತುಂ’ಗೆ ಕರೆತರುವ ಯೋಚನೆ ಇದೆ ಎಂದಿತ್ತು ಚಿತ್ರತಂಡ. ಆದರೆ, ಈಗ ಅಂತಿಮವಾಗಿ ಬಾಲಿವುಡ್‌ ನಟರೊಬ್ಬರು “ರುಸ್ತುಂ’ಗೆ ಸೈ ಅಂದಿದ್ದಾರೆ. ಆ ನಟ ಬೇರಾರು ಅಲ್ಲ, ವಿವೇಕ್‌ ಒಬೆರಾಯ್‌. ಹೌದು, “ರುಸ್ತುಂ’ ಚಿತ್ರದಲ್ಲಿ ವಿವೇಕ್‌ ಒಬೆರಾಯ್‌ ನಟಿಸಲು ಒಪ್ಪಿಕೊಂಡಿದ್ದಾರೆ. 

Advertisement

ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವಿವೇಕ್‌ ಈ ಹಿಂದೆಯೇ ಕನ್ನಡ ಸಿನಿಮಾವೊಂದರಲ್ಲಿ ನಟಿಸಬೇಕಿತ್ತು. ರಾಮ್‌ಗೋಪಾಲ್‌ ವರ್ಮಾ ಅವರ “ರೈ’ ಚಿತ್ರದಲ್ಲಿ ವಿವೇಕ್‌ ನಟಿಸುತ್ತಾರೆಂದು ಸುದ್ದಿಯಾಗಿತ್ತು. ಆದರೆ, ಸದ್ಯಕ್ಕೆ ಆ ಸಿನಿಮಾದ ಯಾವುದೇ ಪ್ರತಿಕ್ರಿಯೆ ಆರಂಭವಾಗಿಲ್ಲ. ಹೀಗಿರುವಾಗ ವಿವೇಕ್‌ “ರುಸ್ತುಂ’ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. 

ಚಿತ್ರದಲ್ಲಿ ಶಿವಣ್ಣ ಎದುರು ನಿಲ್ಲುವ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಅದಕ್ಕಾಗಿ ನಟರ ಹುಡುಕಾಟ ನಡೆಸಿದ ಚಿತ್ರತಂಡಕ್ಕೆ ವಿವೇಕ್‌ ಒಬೆರಾಯ್‌ ಸೂಕ್ತ ಎನಿಸಿದೆ. ಅದಕ್ಕೆ ಸರಿಯಾಗಿ ಕಥೆ ಕೇಳಿದ ವಿವೇಕ್‌ ಕೂಡಾ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ರವಿವರ್ಮ ನಿರ್ದೇಶಿಸುತ್ತಿದ್ದು, ಜಯಣ್ಣ ನಿರ್ಮಿಸುತ್ತಿದ್ದಾರೆ.  ಈ ಸಂಸ್ಥೆಗೆ ಶಿವರಾಜಕುಮಾರ್‌ ಮಾಡುತ್ತಿರುವ ಮೂರನೆಯ ಚಿತ್ರ ಇದಾಗಿದೆ. ಇದಕ್ಕೂ ಮುನ್ನ ಜಯಣ್ಣ ಫಿಲಮ್ಸ್‌ನ “ಬಂಗಾರ – ಸನ್‌ ಆಫ್ ಬಂಗಾರದ ಮನುಷ್ಯ’ ಹಾಗೂ “ಮಫ್ತಿ’ ಚಿತ್ರಗಳಲ್ಲಿ ಶಿವರಾಜಕುಮಾರ್‌ ನಟಿಸಿದ್ದರು. ಈಗ ಇದೇ ಸಂಸ್ಥೆಯ “ರುಸ್ತುಂ ಚಿತ್ರದಲ್ಲೂ ಶಿವರಾಜಕುಮಾರ್‌ ನಟಿಸುತ್ತಿದ್ದಾರೆ. 

 ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ಕೂಡಾ ನಟಿಸುತ್ತಿದ್ದಾರೆ. ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರ “ರುಸ್ತುಂ’. ಈ ಚಿತ್ರದಲ್ಲಿ ಶಿವಣ್ಣ ಪಾತ್ರ ತುಂಬಾ ಭಿನ್ನವಾಗಿದೆ. ಹೊಸ ಶೈಲಿಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರಂತೆ. ಉಳಿದಂತೆ ಚಿತ್ರದಲ್ಲಿ ತೆಲುಗು ನಟ ಶತ್ರು ಕೂಡಾ ವಿಲನ್‌ ಆಗಿ ನಟಿಸುತ್ತಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next