Advertisement

Vitla: ಈ ಕಿಂಡಿ ಅಣೆಕಟ್ಟಲ್ಲಿ ನೀರೇ ನಿಲ್ಲುವುದಿಲ್ಲ, ಓಡಾಟಕ್ಕೂ ಭಯ!

01:00 PM Oct 17, 2024 | Team Udayavani |

ವಿಟ್ಲ: ಪುಣಚ ಗ್ರಾಮದ 3ನೇ ವಾರ್ಡಿನ ಆಲಂತಡ್ಕದಿಂದ 4ನೇ ವಾರ್ಡಿನ ಮಲ್ಯ ಪ್ರದೇಶವನ್ನು ಸಂಪರ್ಕಿಸುವ ಕಿಂಡಿ ಅಣೆಕಟ್ಟು ಸಹಿತ ಕಾಲು ಸಂಕವನ್ನು ಸುಮಾರು 30 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಸಮರ್ಪಕವಾದ ನಿರ್ವಹಣೆ ಇಲ್ಲದೆ ನಡೆದಾಡಲೂ ಆಗದ, ನೀರೂ ನಿಲ್ಲದ ಕಿಂಡಿ ಅಣೆಕಟ್ಟೆ ಅಪಾಯದ ಸನ್ನಿವೇಶಕ್ಕೆ ಕಾರಣವಾಗಿದೆ.

Advertisement

ಕಾಲು ಸಂಕದ ತಳ ಭಾಗದಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ಸರಳುಗಳು ಕಾಣಿಸಲಾರಂಭಿಸಿದೆ. ಹೀಗಾಗಿ ನಡೆದಾಡಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಎರಡು ಬದಿಯ ತಡೆಗೋಡೆಗಳೂ ಕುಸಿದುಬಿದ್ದಿದೆ. ಮಳೆಗಾ ಲದಲ್ಲಿ ನೀರು ತುಂಬಿ ಹರಿಯುವಾಗ ಪಾದಚಾರಿಗಳು ಕಾಲುಸಂಕ ಮುರಿದುಬಿದ್ದು ನೀರಿನಲ್ಲಿ ಕೊಚ್ಚಿಹೋಗುವ ಸಂಭವವಿದೆ. ಇದನ್ನು ಮನಗಂಡ ಗ್ರಾಮಸ್ಥರು ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ನೀರು ನಿಲ್ಲುವುದಿಲ್ಲ, ನಡೆದಾಡಲು ಭಯ
ಈ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿದಾಗ ಸುಮಾರು 3 ಕಿ.ಮೀ. ವ್ಯಾಪ್ತಿಯ ಕೃಷಿಕ‌ರಿಗೆ ಪ್ರಯೋಜನವಾಗುತ್ತಿತ್ತು. ಆದರೆ ಅಣೆಕಟ್ಟಿನ ಹಲಗೆಗಳು ಎರಡನೇ ವರ್ಷಕ್ಕೇ ಬರಲಿಲ್ಲ. ಆಮೇಲೆ ಸ್ಥಳೀಯರು ತಾವೇ ಖರ್ಚು ಮಾಡಿ, ಕೃಷಿ ಉಪಯೋಗಕ್ಕೆ ನೀರು ಬೇಕೆಂದು ತಡೆಕಟ್ಟುತ್ತಿದ್ದರು. ಅದು ಕೂಡಾ ಸುರಕ್ಷಿತವಾಗಿರಲಿಲ್ಲ. ನೀರು ಸೋರುತ್ತಿತ್ತು. ಶಾಲಾ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ಮಂದಿ ಪ್ರತೀ ದಿನ ಭಯದಲ್ಲೇ ಈ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಕಾಲು ಸಂಕದ ಹಾಗೂ ಅಣೆಕಟ್ಟಿನ ದುರಸ್ತಿಯನ್ನು ಪ್ರತೀವರ್ಷ ನಡೆಸದೇ ಇದ್ದುದರಿಂದ, ಸಂಪರ್ಕ ವ್ಯವಸ್ಥೆ ಕಡಿದುಹೋಗುವ ಸಾಧ್ಯತೆಯಿದೆ.

ಅಣೆಕಟ್ಟು ನಿರ್ವಹಣೆಗೆ ಆಗ್ರಹ
ಸ್ಥಳೀಯರ ಪ್ರಕಾರ ಕಲ್ಲಾಜೆ – ಮಲ್ಯ ಕಿಂಡಿ ಅಣೆಕಟ್ಟು 1995ರಲ್ಲಿ ನಿರ್ಮಾಣವಾಗಿದೆ. ಆಗಿನ ಜಿಲ್ಲಾ ಪಂಚಾಯತ್‌ ಸದಸ್ಯ ಕೃಷ್ಣ ನಾಯ್ಕ ಅವರು ಅನುದಾನ ಒದಗಿಸಿದ್ದರೆನ್ನಲಾಗಿದೆ. ಪುಣಚ ಗ್ರಾಮದ 3 ಮತ್ತು 4ನೇ ವಾರ್ಡ್‌ಗಳ ನಡುವೆ ಸಂಪರ್ಕ ಕಲ್ಪಿಸುವ ಈ ಕಾಲು ಸಂಕವನ್ನು ನಿರ್ವಹಣೆ ಮಾಡಬೇಕೆಂದು ಗ್ರಾಮಸ್ಥರಾದ ವಸಂತ ನಾಯಕ್‌ ಆಜೇರು ಅವರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ/ ಅಧ್ಯಕ್ಷರಿಗೆ ಮನವಿ ನೀಡಿದ್ದರು. ಆದರೆ ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಕಾಲುಸಂಕದ ಅಡಿ ಭಾಗದಲ್ಲಿ ತುಕ್ಕುಹಿಡಿದ ಕಬ್ಬಿಣ. 30 ವರ್ಷ ಹಳೆಯ ಅಣೆಕಟ್ಟಿನ ಒಂದು ಭಾಗ ಕುಸಿದಿದೆ.

Advertisement

ನವೀಕರಣ ಇಲ್ಲವೇ ಮರು ನಿರ್ಮಾಣ
ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲಾಗುತ್ತಿಲ್ಲ. ಹಲವು ವರ್ಷಗಳ ಹಿಂದೆಯೇ ಹಲಗೆ ಹಾಕುವುದನ್ನು ನಿಲ್ಲಿಸಲಾಗಿದ್ದು, ನೀರುಣಿಸುವ ದೃಷ್ಟಿಯಿಂದ ಪ್ರಯತ್ನ ಮಾಡಿದ್ದೇವೆ. ಕಾಲುಸಂಕದ ಅಡಿಭಾಗದಲ್ಲಿ ಕಬ್ಬಿಣ ತುಕ್ಕುಹಿಡಿದು ಕುಸಿದು ಬೀಳುವ ಸಂಭವವಿದೆ. ನಡೆದಾಡುವವರು ಸೂಕ್ಷ್ಮವಾಗಿ ಗಮನಿಸಿ, ಹೆಜ್ಜೆಯೂರುವ ಸ್ಥಿತಿಯಿದೆ. ಇದನ್ನು ತತ್‌ಕ್ಷಣ ನವೀಕರಣಗೊಳಿಸಬೇಕಾಗಿದೆ ಅಥವಾ ಮರು ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಬೇಕಾಗಿದೆ.
-ವಸಂತ ನಾಯಕ್‌ ಆಜೇರು, ಕೃಷಿಕರು

ಕೃಷಿಕರಿಗೆ ಅನುಕೂಲವಾದೀತು
ಎರಡು ಬದಿಯ ತಡೆಗೋಡೆಗಳೂ ಕುಸಿದುಬಿದ್ದಿದೆ. ಸಂಕವೂ ಶಿಥಿಲಗೊಂಡಿದೆ. ಎಪ್ರಿಲ್‌ 15ರ ವರೆಗೆ ನೀರು ನಿಂತು ಸ್ಥಳೀಯ ಕೃಷಿಕರ ತೋಟಕ್ಕೆ ನೀರುಣಿಸುವ ಕಿಂಡಿ ಅಣೆಕಟ್ಟು ಅತ್ಯಂತ ಉಪಯುಕ್ತವಾಗಿದೆ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
-ಶಂಕರನಾರಾಯಣ ಭಟ್‌ ಮಲ್ಯ, ಕೃಷಿಕರು

ಎರಡೂ ಬದಿ ಕುಸಿದುಬಿದ್ದಿದೆ!
ಕಿಂಡಿ ಅಣೆಕಟ್ಟಿನ ಎರಡೂ ಬದಿಯಲ್ಲಿ ಕಪ್ಪುಕಲ್ಲು ಕಟ್ಟಿ ತಡೆಗೋಡೆ ನಿರ್ಮಿಸಲಾಗಿತ್ತು. ನೀರಿನ ಒತ್ತಡಕ್ಕೆ ಅದು ಕೂಡ ಕುಸಿದುಬಿದ್ದಿದೆ. ರಭಸದಿಂದ ಬರುವ ನೀರು ಪಕ್ಕದ ಕೃಷಿಕರ ತೋಟ, ಭೂಮಿಯನ್ನು ಕೊಚ್ಚಿಕೊಂಡು ಹೋಗುವ ಸಂಭವವಿದೆ. ಮಳೆಗಾಲದಲ್ಲಿ ಪ್ರವಾಹ ಮತ್ತು ನೀರು ಅಪಾಯದ ಮಟ್ಟಕ್ಕೆ ತಲುಪುತ್ತದೆ ಮತ್ತು ಅದಕ್ಕೆ ತಡೆಗೋಡೆ, ಅಣೆಕಟ್ಟು, ಕಾಲುಸಂಕ ಎಲ್ಲವೂ ನಾಶವಾಗಬಹುದಾಗಿದೆ.

ಮುಂದಿನ ವರ್ಷಕ್ಕಾದರೂ ಆದೀತು!
ಈ ಕಿಂಡಿ ಅಣೆಕಟ್ಟಿನ ಬಗ್ಗೆ ಈಗಲೇ ಸರಕಾರ ಕ್ರಮ ಕೈಗೊಂಡರೆ ಮುಂದಿನ ಬೇಸಗೆ ಹೊತ್ತಿಗಾದರೂ ನಿರ್ಮಾಣವಾದೀತು. ಆ ಮೂಲಕ ಜನರು ಮಳೆಗಾಲದಲ್ಲಿ ನಿರ್ಭಯವಾಗಿ ಈ ಅಣೆಕಟ್ಟಿನ ಮೇಲೆ ಓಡಾಡಬಹುದು. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ.

-ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next