Advertisement

ವಿಷನ್‌-2050: ಕರಡು ಸಿದ್ಧತೆಗೆ ಆತುರ ಬೇಡ

06:47 PM Jul 01, 2021 | Team Udayavani |

ಕಲಬುರಗಿ: ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಕೋನದಿಂದ ವಿಷನ್‌-2050 ಕರಡು ಸಿದ್ಧಪಡಿಸಲು ಆತುರ ಪಡದೇ ಯಾವುದೇ ಕ್ಷೇತ್ರ ಬಿಟ್ಟು ಹೋಗದಂತೆ ಪ್ರತಿ ಕ್ಷೇತ್ರವಾರು ಸಮಿತಿ ರಚಿಸಿ ಕಾರ್ಯೋನ್ಮುಖ ಆಗಬೇಕೆಂದು ಗಣಿ ಮತ್ತು ಭೂವಿಜ್ಞಾನ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

Advertisement

ಕಲಬುರಗಿ ವಿಷನ್‌-2050 ಕುರಿತಂತೆ ಬುಧವಾರ ಬೆಂಗಳೂರಿನ ವಿಕಾಸಸೌಧದಿಂದ ಶಿಕ್ಷಣ ವಿಷಯದ ಕುರಿತು ವಿಡಿಯೋ ಸಂವಾದದ ಮೂಲಕ ಶಿಕ್ಷಣ ತಜ್ಞರು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಪ್ರಸ್ತುತ 14 ಉಪ ಸಮಿತಿ ರಚಿಸಲಾಗಿದೆ. ಇದರ ಹೊರತಾಗಿ ಯಾವುದೇ ಕ್ಷೇತ್ರಗಳು ಬಿಟ್ಟುಹೋದಲ್ಲಿ ಅದನ್ನು ಪರಿಗಣಿಸಬೇಕು. 30 ವರ್ಷ ದೀರ್ಘ‌ಕಾಲದ ಯೋಜನೆ ಸಿದ್ಧ ಮಾಡಬೇಕಿರುವುದರಿಂದ ಆತುರ ಬೇಡ. ಇನ್ನು ಸಮಿತಿವಾರು ಎರಡೂ¾ರು ಸಭೆ ನಡೆಸಿ, ಪ್ರತಿ ಕ್ಷೇತ್ರದ ತಜ್ಞರ ಅಭಿಪ್ರಾಯ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನದಲ್ಲಿ ಪ್ರತಿ ವಾರ ಎರಡೆರಡು ವಿಷಯಗಳ ಕುರಿತು ಸಭೆ ನಡೆಸಿ ತಜ್ಞರ ಸಲಹೆ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಹಿರಿಯ ಐಎಎಸ್‌ ಅಧಿಕಾರಿ ಕೆ.ಎಂ.ಜಾನಕಿ ಮಾತನಾಡಿ, ಜಿಲ್ಲೆಯಲ್ಲಿ ಈಗಿರುವ ಮೂಲಸೌಕರ್ಯ ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಾಲಾಭಿವೃದ್ಧಿಯ ಸಾಮಾಜಿಕ ಹೊಣೆಗಾರಿಕೆ ನೀಡಬೇಕು. ಒಟ್ಟಿನಲ್ಲಿ ನಿಸ್ವಾರ್ಥವಾಗಿ ಒಂದು ತಂಡವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಿದಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಸಾಧ್ಯ ಎಂದರು.

ಹಿಂದೆ ತಾವು 2017-18ರಲ್ಲಿ ಹಾಸನ ಜಿಲ್ಲಾ ಪಂಚಾಯತ್‌ ಸಿಇಒ ಆಗಿದ್ದಾಗ ಶೇ.50ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳ ಪಟ್ಟಿ ಮಾಡಿ ಅಂತಹ ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವು. ಮಕ್ಕಳಿಗೆ ಸ್ಫೂ ರ್ತಿ ತುಂಬುವುದು, ಆಕಾಶವಾಣಿ ಫೋನ್‌-ಇನ್‌ ಕಾರ್ಯಕ್ರಮ, ವಾಟ್ಸಾಪ್‌ ಗ್ರೂಪ್‌ ಮಾಡಿ ವಿಷಯಗಳ ಹಂಚುವಿಕೆ, ತಿಂಗಳಿಗೊಮ್ಮೆ ತಾಯಂದಿರ ಸಭೆ ನಡೆಸಲಾಗುತ್ತಿತ್ತು. ಹೀಗೆ ಅನೇಕ ಕಾರ್ಯಕ್ರಮಗಳ ಫಲವಾಗಿ ಹಾಸನ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಂ-1 ಸ್ಥಾನ ಬರಲು ಸಾಧ್ಯವಾಯಿತು ಎಂದರು.

Advertisement

ಡಿಸಿ ವಾಸಿರೆಡ್ಡಿ ವಿಜಯಾ ಜ್ಯೋತ್ಸಾಮಾತನಾಡಿ, ಈಗಾಗಲೇ ಪ್ರವಾಸೋದ್ಯಮ,ಆರೋಗ್ಯ, ಶಿಕ್ಷಣ, ನೀರಾವರಿ, ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕ್ರೀಡಾ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕೌಶಲ್ಯಾಭಿವೃದ್ಧಿ ಸೇರಿ 14 ಉಪ ಸಮಿತಿ ರಚಿಸಲಾಗಿದೆ. ಅಲ್ಲದೇ, ಆರಂಭಿಕ ಸಭೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಶಿಕ್ಷಣ ಕ್ಷೇತ್ರ ಸುಧಾರಣೆಗೆ ಸಾಕಷ್ಟು ಮೂಲ ಸೌಕರ್ಯಗಳಿದ್ದು, ಇದರ ಸದ್ಬಳಕೆಗೆ ಯೋಜನೆ ರೂಪಿಸಬೇಕಿದೆ. “ಎಜುಕೇಷನ್‌ ಹಬ್‌’ ಆಗುವ ಎಲ್ಲ ಅರ್ಹತೆಯನ್ನು ಜಿಲ್ಲೆ ಹೊಂದಿದೆ. ಐಎಎಸ್‌, ಐಪಿಎಸ್‌ ಸೇರಿದಂತೆ ನಾಗರಿಕ ಸೇವೆಗಳ ಪರೀಕ್ಷೆಗೆ ಸ್ಥಳೀಯ ಅಭ್ಯರ್ಥಿಗಳು ದೂರದ ಬೆಂಗಳೂರು, ದೆಹಲಿ, ಹೈದರಾಬಾದ್‌ಗೆ ಹೋಗುವುದನ್ನು ತಪ್ಪಿಸಲು ಇಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆಯುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಪಂ ಸಿಇಒ ಡಾ| ದಿಲೀಷ್‌ ಸಸಿ ಮಾತನಾಡಿ, ಶಿಕ್ಷಣ ಕ್ಷೇತ್ರ ಸುಧಾರಣೆ ನಿಟ್ಟಿನಲ್ಲಿ ಮುಂದಿನ ಐದು ವರ್ಷದಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಒಳಗೊಂಡಂತೆ ಮೂಲಭೂತ ಸೌಕರ್ಯ, ಆಟದ ಮೈದಾನ ಒದಗಿಸುವುದು ಹೀಗೆ ಹಂತ-ಹಂತವಾಗಿ ಕಾಲಮಿತಿಯಲ್ಲಿ ಆಗಬೇಕಿದೆ.

ಶಿಕ್ಷಕರ ನೇಮಕಾತಿಗೂ ಚಾಲನೆ ನೀಡಬೇಕಿದೆ ಎಂದರು. ಡಿಡಿಪಿಐ ಅಶೋಕ ಭಜಂತ್ರಿ ಮಾತನಾಡಿ, ಕಳೆದ 2019-20ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 28ನೇ ಸ್ಥಾನದಿಂದ 22ನೇ ಸ್ಥಾನಕ್ಕೇರಿದ್ದು, ಶೇ.74.3ರಷ್ಟು ಫಲಿತಾಂಶ ಬಂದಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನೊಂದಿಗೆ ಜಿಲ್ಲೆಯನ್ನು ಟಾಪ್‌ 10ರಲ್ಲಿ ಕೊಂಡೊಯ್ಯುವ ವಿಶ್ವಾಸವಿದೆ ಎಂದರು.

ಶಿಕ್ಷಣ ತಜ್ಞ ಡಾ| ಗುರುರಾಜ ಕರಜಗಿ, ಶಾಸಕ ಡಾ| ಅಜಯಸಿಂಗ್‌, ವಿಧಾನ ಪರಿಷತ್‌ ಸದಸ್ಯ ಶಶಿಲ್‌ ನಮೋಶಿ, ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌. ರವಿಕುಮಾರ ಮಾತನಾಡಿದರು. ವಿಡಿಯೋ ಸಂವಾದದಲ್ಲಿ ಸಂಸದ ಡಾ| ಉಮೇಶ ಜಾಧವ, ಕೆಕೆಆರ್‌ಡಿಬಿ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಎಂ.ವೈ. ಪಾಟೀಲ, ಸುಭಾಷ ಗುತ್ತೇದಾರ, ಖನೀಜ್‌ ಫಾತಿಮಾ, ಡಾ| ಅವಿನಾಶ ಜಾಧವ, ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯ ಸುನೀಲ ವಲ್ಯಾಪುರೆ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ, ಎಸ್‌ಪಿ ಡಾ| ಸಿಮಿ ಮರಿಯಂ ಜಾರ್ಜ್‌, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ್‌ ಲೋಖಂಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next