Advertisement

ಗಣೇಶ ಚತುರ್ಥಿ: ಗಣೇಶನಿಂದ ನಾವು ಕಲಿಯೋದೇನು ? ಹೇಗಿರಬೇಕು ಸಾಂಪ್ರದಾಯಿಕ ಆಚರಣೆ

10:42 AM Aug 29, 2022 | ದಿನೇಶ ಎಂ |

ಮಹಾ ಗಣಪತಿಯ ರೂಪ ಕೇವಲ ಆಕಾರವಲ್ಲ ಅದು ಜೀವನ ಸಂದೇಶಗಳ ಸಮೂಹ ಶಕ್ತಿ. ಜಗತ್ತನ್ನು ಜನರು ನೋಡುವ ಬಗೆ ಅವರವರ ದೃಷ್ಟಿಕೋನಗಳನ್ನು ಆಧರಿಸಿರುತ್ತವೆ. ದೃಷ್ಟಿಕೋನಗಳು ವೈಯಕ್ತಿಕ ಜೀವನಾನುಭವಗಳು ಮತ್ತು ಸುತ್ತಲಿನ ವಾತಾವರಣಗಳ ಪ್ರಭಾವವನ್ನು ಒಳಗೊಂಡಿರುತ್ತವೆ. ನಾವು ಕೂಡ ಗಣಪತಿಯನ್ನು ನೋಡುವ ಬಗೆ ಕೇವಲ ಮೇಲ್ನೋಟದ ನೋಟ ಸಾಲದು, ಆಂತರ್ಯದ ಅನುಭವಗಳ ಮಂಥನ ಮಾಡಿ ಒಳದೃಷ್ಟಿಯಿಂದ ನೋಡಿ ಕಲಿಯುವುದು ಗಣಪತಿಯಿಂದ ಬಹಳಷ್ಟಿದೆ.

Advertisement

ಗಣಪತಿಯ ಸಣ್ಣ ಕಣ್ಣು ಸೂಕ್ಷ್ಮ ದೃಷ್ಟಿಯ ಸಂಕೇತ, ಅಗಲವಾದ ಕಿವಿಗಳು ಎಲ್ಲವನ್ನೂ ತಾಳ್ಮೆಯಿಂದ ಆಲಿಸುವ ಗುಣದ ಸಂಕೇತ, ಉದ್ದವಾದ ಸೊಂಡಿಲು– ಕೇವಲ ವಾಸನೆಗಳ ಆಘ್ರಾಣಕಲ್ಲಾ. ಎಲ್ಲಾ ಬಗೆಯ ಜ್ಞಾನಗಳ ಆಘ್ರಾಣಿನಿಸಿಕೊಳ್ಳುವ ಮತ್ತು ಸುತ್ತಲಿನ ಪರಿಸರದ ಸ್ಪಂದನೆಯನ್ನು ಅರಿಯುವ ಅಗತ್ಯತೆಯ ಸೂಚಕ. ಗಣೇಶನ ದೊಡ್ಡ ಹೊಟ್ಟೆಯದ್ದು ಕೇವಲ ಹಸಿವಲ್ಲ, ಅದು ಜ್ಞಾನದ ಹಸಿವಿನ ಸೂಚಕ. ಮೋದಕಾದಿ ತಿನಿಸುಗಳು ಸಿಹಿ – ಸಂತೋಷಗಳನ್ನು ದಯಪಾಲಿಸುವ ಮಂಗಳಕರ ಮಹಾಗಣಪತಿಯ ಸೂಚಕ.

ವಿನಾಯಕ ಚೌತಿ ಎಂದೂ ಕರೆಯಲ್ಪಡುವ ಈ ಹಬ್ಬವು ಭಾರತದಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬವಾಗಿದೆ.  ಜಾತಿ – ಮತಗಳ ಬೇಧವಿಲ್ಲದೆ ಒಟ್ಟಾಗಿ ಭಾವೈಕ್ಯತೆಯ ಪ್ರತೀಕವಾದ ಹಬ್ಬವೆಂದರೆ ಅದು ಗಣೇಶ ಚತುರ್ಥಿ. ಗಣೇಶ ಹಬ್ಬವನ್ನು ಒಂದು ದಿನದಿಂದ 11 ದಿನಗಳವರೆಗೂ ಆಚರಿಸಲಾಗುತ್ತದೆ.  ಆಚರಣೆಯ ಬಳಿಕ ನಿಗದಿತ ದಿನಗಳಲ್ಲಿ ಮಾತ್ರ ಗಣೇಶನನ್ನು ವಿಸರ್ಜನೆ ಮಾಡಬೇಕು. ಅದರಲ್ಲೂ  ಗಣೇಶನನ್ನು ಗಣೇಶ ಚತುರ್ಥಿಯ 10 ದಿನಗಳವರೆಗೆ ಇಟ್ಟರೆ ಅತ್ಯಂತ ಶುಭ ಎಂಬ ನಂಬಿಕೆ ಇದೆ.   ಚತುರ್ಥಿಯಲ್ಲಿ 16 ಆಚರಣೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ  4 ಪ್ರಮುಖ ಆಚರಣೆಗಳು ಮುಖ್ಯವಾಗುತ್ತದೆ.

ಗಣೇಶ ಚತುರ್ಥಿಯ 4 ಪ್ರಮುಖ ಆಚರಣೆಗಳು ಹೀಗಿವೆ:

ಆವಾಹನೆ ಮತ್ತು ಪ್ರಾಣ ಪ್ರತಿಷ್ಠಾಪನೆ : -ಪ್ರಜ್ವಲನ’ ಮತ್ತು ‘ಸಂಕಲ್ಪ’ ಮಾಡಿದ ನಂತರ ಇದು ಮೊದಲ ಹೆಜ್ಜೆಯಾಗಿದೆ. ಮಂತ್ರ ಪಠಣದೊಂದಿಗೆ, ಗಣಪತಿಯನ್ನು ಸ್ಥಾಪಿಸಿದ ಮೂರ್ತಿಗೆ ಭಕ್ತಿ ಪೂರ್ವಕವಾಗಿ ಆಹ್ವಾನಿಸಲಾಗುತ್ತದೆ, ಇದು ‘ಮೂರ್ತಿ’ ಅಥವಾ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಆಚರಣೆಯಾಗಿದೆ.

Advertisement

ಷೋಡಶೋಪಚಾರ:  ಷೋಡಶೋಪಚಾರದ ಪೂಜೆಯು 16 ಬಗೆಯ ಪೂಜೆಯ ವಿಧಾನಗಳನ್ನು ಒಳಗೊಂಡಿರುತ್ತದೆ, ಈ 16 ಬಗೆಯ ಉಪಚಾರಗಳೆಂದರೆ… ಗಣೇಶನ ಪಾದಗಳನ್ನು ತೊಳೆದ ನಂತರ, ವಿಗ್ರಹವನ್ನು ಹಾಲು, ತುಪ್ಪ, ಜೇನುತುಪ್ಪ, ಮೊಸರು, ಸಕ್ಕರೆಯಿಂದ ಕೂಡಿದ ಪಂಚಾಮೃತ ಅಭಿಷೇಕ ನಂತರ ಪರಿಮಳಯುಕ್ತ ಎಣ್ಣೆ ಮತ್ತು ಗಂಗಾಜಲದಿಂದ ಅಭಿಷೇಕ. ನಂತರ ಹೊಸ ವಸ್ತ್ರ, ಹೂವುಗಳು, ಮುರಿಯದ ಅಕ್ಷತೆಯ ಅಕ್ಕಿ, ಹಾರ, ಸಿಂಧೂರ ಮತ್ತು ಚಂದನದ ಜೊತೆಗೆ ಗಣೇಶನನ್ನು ಅಲಂಕರಿಸಿ.  ಮೋದಕ, ವೀಳ್ಯದೆಲೆ, ತೆಂಗಿನಕಾಯಿ (ನೈವೇದ್ಯ)  ಧೂಪ, ದೀಪ, ಸ್ತೋತ್ರಗಳು, ಮಂತ್ರಗಳನ್ನು ಪಠಿಸುವ ಮೂಲಕ ಪೂಜಿಸಲಾಗುತ್ತದೆ.

ಉತ್ತರಪೂಜೆ : ಈ ಆಚರಣೆಯನ್ನು ವಿಸರ್ಜನಕ್ಕೆ ಮೊದಲು ನಡೆಸಲಾಗುತ್ತದೆ. ಅತ್ಯಂತ ಸಂತೋಷ ಮತ್ತು ಭಕ್ತಿಯಿಂದ, ಎಲ್ಲಾ ವಯೋಮಾನದ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ.  ಜನರು ಹಾಡುತ್ತಾ, ನೃತ್ಯ ಮಾಡುತ್ತಾ… ಮಂತ್ರಗಳ ಪಠಣ, ಆರತಿ, ಹೂವುಗಳ ಜೊತೆಗೆ ವಿದಾಯ ಹೇಳುವ ವಿಶೇಷ ಆಚರಣೆ.

ಗಣಪತಿ ವಿಸರ್ಜನೆ : ಮುಂದಿನ ವರ್ಷ ಜ್ಞಾನ ರೂಪಿಯಾಗಿ ಭಗವಂತ ಹಿಂತಿರುಗಲಿ ಎಂದು ಹಾರೈಸಿ ಗಣೇಶನ ಮೂರ್ತಿಯನ್ನು ಜಲಮೂಲಗಳಲ್ಲಿ ವಿಸರ್ಜಿಸಲಾಗುತ್ತದೆ.

 “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗುಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ।। ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆಜಸವು ಜನಜೀವನಕೆ”  – ಮಂಕುತಿಮ್ಮ

ಡಿ.ವಿ.ಜಿಯ ಈ ಕಗ್ಗದಂತೆ, ಹಿರಿಯರ ಪ್ರತಿ ಆಚರಣೆಗಳ ಹಿಂದೆ ಜೀವನ ಸಾರ ಸಾರುವ ಮತ್ತು ವೈಜ್ಞಾನಿಕ, ತಾತ್ವಿಕ ಸತ್ಯಗಳನ್ನೊಳಗೊಂಡ ದೈವಿಕ ಜ್ಞಾನದ ಸ್ಪರ್ಶವಿರುತ್ತದೆ. ಹೊಸ ತಲೆಮಾರು ಅದನ್ನರಿತು ಮೂಲ ಉದ್ದೇಶ, ಆಚರಣೆಗಳಿಗೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಆಚರಣೆಗಳನ್ನು ಆಡಂಬರದ ಡಂಬಾಚಾರಿಕೆ ಇಲ್ಲದೆ ಆಚರಿಸುವ ಕಡೆ ಗಮನಕೊಡಬೇಕಿದೆ, ಇದನ್ನು ಅರಿಯೋಣ, ಅರಿತು ಬಾಳೋಣ, ಅರಿವೇ ಗುರು, ಗುರುವೇ ದೇವರು.

  • ದಿನೇಶ ಎಂ
Advertisement

Udayavani is now on Telegram. Click here to join our channel and stay updated with the latest news.

Next