Advertisement

ಬಸವನಾಡು ಯೋಗಮಯ

10:19 AM Jun 22, 2019 | Naveen |

ವಿಜಯಪುರ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಂಗವಾಗಿ ಶುಕ್ರವಾರ ಜಿಲ್ಲೆಯಾದ್ಯಂತ ಸರ್ಕಾರದ ಆಡಳಿತ ವ್ಯವಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮಗಳಿಗಾಗಿ ಸೂರ್ಯೋದಯಕ್ಕೆ ಮುನ್ನವೇ ಬಸವನಾಡಿನ ಜನರು ವಿವಿಧ ಕಡೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನೀಡಿದರು.

Advertisement

ಶುಕ್ರವಾರ ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ಯೋಗ ಸಮಿತಿಗಳು, ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ಯೋಗ ಸಾಮೂಹಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ ಜನರು, ಯೋಗ ಪ್ರದರ್ಶನದಲ್ಲಿ ಯೋಗಾಭ್ಯಾಸದ ಸಂದರ್ಭದಲ್ಲಿ ಯೋಗ ಗುರುಗಳ ಮಾರ್ಗದರ್ಶನದಲ್ಲಿ ತ್ರಿಕೋನಾಸನ, ಅರ್ಧಚಕ್ರಾಸನ, ವಜ್ರಾಸನ, ವೃಕ್ಷಾಸನ, ತಾಡಾಸನ, ಪಾದಹಸ್ತಾಸನ, ಭದ್ರಾಸನ, ಮಕರಾಸನ, ಮರೀಚ್ಯಾಸನ ಸೇರಿದಂತೆ ವಿವಿಧ ಯೋಗಾಸನ ಮಾಡಿದರು.

ಗುಮ್ಮಟ ನಗರಿ ವಿಜಯಪುರದಲ್ಲಿ ವಿವಿಧ ಯೋಗ ಸಮಿತಿಗಳ ಸಹಯೋಗದಲ್ಲಿ ಜಿಲ್ಲಾಡಳಿತದಿಂದ ಆಯುಷ್‌ ಇಲಾಖೆ, ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ದರ್ಬಾರ್‌ ಹೈಸ್ಕೂಲ್ ಮೈದಾನದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಮನುಷ್ಯನ ಆರೋಗ್ಯಯುತ ಜೀವನಕ್ಕೆ ಯೋಗ ಉತ್ತಮ ಸಾಧನ. ನೆಮ್ಮದಿ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲು ಯೋಗಾಭ್ಯಾಸ ರೂಢಿಸಿಕೊಳ್ಳುವುದು ಸೂಕ್ತ. ಯೋಗ ಮಾಡುವುದು ಕೇವಲ ವರ್ಷದಲ್ಲಿ ಒಂದು ದಿನ ಆಚರಣೆಗೆ ಸೀಮಿತವಾಗದೇ ನಿತ್ಯದ ಬದುಕಿನಲ್ಲಿ ಯೋಗಾಭ್ಯಾಸ ಮಾಡಬೇಕು. ಯೋಗದಿಂದ ರೋಗ ದೂರವಾಗುತ್ತದೆ, ಆರೋಗ್ಯ ಹತ್ತಿರವಾಗುತ್ತದೆ, ಮಾನಸಿಕ ನೆಮ್ಮದಿ, ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಜಿಲ್ಲಾಡಳಿತದ ಯೋಗ ಶಿಬಿರಕ್ಕೆ ಚಾಲನೆ ನೀಡಿದರು. ಜಿಪಂ ಸಿಇಒ ವಿಕಾಸ್‌ ಸುರಳ್ಕರ, ಪತಂಜಲಿ ಯೋಗ ಸಮಿತಿಯ ರಾಜಶೇಖರ ಮಗಿಮಠ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ವಜ್ರಾಸನ, ಪರ್ವತಾಸನ, ಪದ್ಮಾಸನ, ಅರ್ಧಪದ್ಮಾಸನ, ಸರ್ವಂಗಾಸನ, ವಕ್ರಾಸನ, ವೀರಾಸನ, ಶವಾಸನ, ವಿವಿಧ ಆಸನ ಪ್ರದರ್ಶನ ನೀಡಿದರು.

Advertisement

ನಂತರ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿ ಯೋಗ ಶಿಕ್ಷಕ ಸಂಜಯ ಸ್ವಾಮೀಜಿ ಯೋಗಾಸನ ಪ್ರದರ್ಶನದಲ್ಲಿ ಯೋಗಾಸನ ಪ್ರದರ್ಶಿಸಿ, ಕಾರ್ಯಕ್ರಮದಲ್ಲಿ ಪ್ಲಾಲ್ಗೊಂಡಿದ್ದ ಜರಿಗೆ ಯೋಗದ ಕುರಿತು ಮಾರ್ಗದರ್ಶನ ನೀಡಿದರು.

•ಇಟ್ಟಂಗಿಹಾಳ ಎಕ್ಸ್‌ಲೆಂಟ್ ಆಂಗ್ಲ ಮಾಧ್ಯಮ ಶಾಲೆ: ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. 600 ವಿದ್ಯಾರ್ಥಿಗಳಿಂದ ಯೋಗ ಮತ್ತು ಆಸನ ಪ್ರದರ್ಶನ ನಡೆಯಿತು. ಸೂರ್ಯ ನಮಸ್ಕಾರ, ಪ್ರಾಣಾಯಾಮ, ವಜ್ರಾಸನ, ಪರ್ವತಾಸನ, ಪದ್ಮಾಸನ, ಅರ್ಧಪದ್ಮಾಸನ, ಸರ್ವಂಗಾಸನ, ವಕ್ರಾಸನ, ವೀರಾಸನ, ಶವಾಸನ ಸೇರಿದಂತೆ ವಿವಿಧ ಆಸನಗಳನ್ನು ಮಕ್ಕಳು ಮಾಡಿದರು.

ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಯೋಗದ ಮಹತ್ವದ ಕುರಿತು ವಿವರಿಸಿದರು. ರಾಜಶೇಖರ ಕೌಲಗಿ, ಸುನೀಲ ನಾವಲಗಿ, ಅಮರೇಶ ಅಲಗುಂಡಗಿ, ಎಸ್‌.ಎಸ್‌. ದೊಡಮನಿ, ಎಸ್‌.ಬಿ. ಹೆಗಳಾಡಿ ಯೋಗ ಗುರು ಗಳಾದ ಪ್ರೀತಿ ಕಾಳೆ, ದಾನಮ್ಮ ವಾಲಿ, ಮಹೇಶ ಸಂಗಮ, ಸಂಗಮೇಶ ಆಲಮೇಲ ಇದ್ದರು.

•ದರ್ಬಾರ್‌ ಶಿಕ್ಷಣ ಸಂಸ್ಥೆ: ನಗರದ ದರ್ಬಾರ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮಕ್ಕೆ ಯೋಗಗುರು ಶ್ರೀಧರ ಜೋಶಿ ಮಾರ್ಗದರ್ಶನ ನೀಡಿದರು.

ವಿದ್ಯಾವರ್ಧಕ ಸಂಘದ ಸಂಯೋಜನಾಧಿಕಾರಿ ಡಾ| ವಿ.ಬಿ. ಗ್ರಾಮಪುರೋಹಿತ, ಪ್ರಾಚಾರ್ಯ ಜಿ.ಎಚ್. ಮಣ್ಣೂರ, ದೈಹಿಕ ನಿರ್ದೇಶಕ ಮಂಜುನಾಥ ಸಜ್ಜನ, ಎನ್ನೆಸ್ಸೆಸ್‌ ಘಟಕಾಧಿಕಾರಿ ರಾಜು ಕಪಾಳಿ, ಸೀಮಾ ಪಾಟೀಲ, ಆರ್‌.ಎಸ್‌. ಕೋಟ್ಯಾಳ, ಸುನೀಲಕುಮಾರ ಯಾದವ ಇತರರು ಪಾಲ್ಗೊಂಡಿದ್ದರು.

•ಮದಗುಣಕಿ: ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿರುವ ಶಿವಯ್ಯ ಸ್ವಾಮೀಜಿ ಶಾಲೆಯಲ್ಲಿ ಯೋಗ ದಿನಾಚರಣೆ ನಡೆಯಿತು. ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಯೋಗದಿಂದಾಗುವ ಪ್ರಯೋಜನಗಳ ಕುರಿತು ಮಕ್ಕಳಿಗೆ ವಿವವರಿಸಿದರು. ಆಡಳಿತಾಧಿಕಾರಿ ಮುತ್ತು ಅಥರ್ಗಾ, ನಾಗೇಶ ಹಳೆಮನಿ, ಸುನೀಲ ಹೊನ್ನಳ್ಳಿ, ಭಾರತಿ, ಲಕ್ಷ್ಮೀ, ಬಸವರಾಜ ಇದ್ದರು.

•ಸೈನಿಕ ಶಾಲೆ: ವಿಜಯಪುರದ ಸೈನಿಕ ಶಾಲೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಯೋಗಗುರು ಬಸನಗೌಡ ಹರನಾಳ ವಜ್ರಾಸನ, ಸಿದ್ಧಾಸನ, ಸರ್ವಾಂಗಾಸನ, ಭುಜಂಗಾಸನ ಮತ್ತು ವಜ್ರಾಸನಗಳ ಮಹತ್ವ ವಿವರಿಸಿ ವಿದ್ಯಾರ್ಥಿಗಳಿಗೆ ಆಸನ ಪ್ರದರ್ಶಿಸಿದರು.

ಯೋಗದ ಮಹತ್ವ ವಿವರಿಸಿದ ಪ್ರಾಚಾರ್ಯ ಕ್ಯಾ| ವಿನಯ ತಿವಾರಿ ಉಪನ್ಯಾಸ ನೀಡಿದರು. ಯೋಗ ಶಿಕ್ಷಕ ಬಿ.ಬಿ. ಕಲಾಲ್ ಆಗಮಿಸಿದ್ದರು. ಉಪ ಪ್ರಾಚಾರ್ಯ ರವಿಕಾಂತ ಶುಕ್ಲಾ, ವರಿಷ್ಠ ಶಿಕ್ಷಕ ಡಾ| ರಾಮರಾವ್‌ ಪಾಲ್ಗೊಂಡಿದ್ದರು.

•ಎಕ್ಸ್‌ಲೆಂಟ್ ಶಾಲೆ: ಆದರ್ಶನಗರದ ಎಕ್ಸ್‌ಲೆಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.

ಯೋಗ ಶಿಕ್ಷಕಿ ಸುನೀತಾ ಬಿರಾದಾರ ಯೋಗದ ಮಹತ್ವದ ಕುರಿತು ಉಪನ್ಯಾಸ ನೀಡಿ, ಯೋಗದಿಂದ ಹಲವಾರು ಪ್ರಯೋಜನಗಳಿವೆ, ಕಲ್ಪವೃಕ್ಷ ಓಂಕಾರ ಪಠಣೆ ಮಾಡುವುದರಿಂದ ಆಯುಷ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಏಕಾಗ್ರತೆ ವೃದ್ಧಿಸಿಕೊಳ್ಳಲು ಸಾಧ್ಯ ಎಂದರು.

ಯೋಗ ಶಿಕ್ಷಕ ಶ್ರೀಧರ ಜೋಶಿ ಮಾತನಾಡಿದರು. ವಿಕಾಸ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ರಾಜಶೇಖರ ಕೌಲಗಿ ಅಧ್ಯಕ್ಷತೆ ವಹಿಸಿದ್ದರು. ಎಂ.ಐ. ಬಿರಾದಾರ, ಮೇಲ್ವಿಚಾರಕ ಎಂ.ಎಚ್. ಹುಗ್ಗೇನವರ, ದೈಹಿಕ ಶಿಕ್ಷಕ ಆರ್‌.ಕೆ. ದೇಶಪಾಂಡೆ, ರೇಖಾ ಮಾಳಿ, ಪಿ.ಬಿ. ಖೇಡಗಿ, ಆರ್‌.ಎಸ್‌. ಪಾಟೀಲ, ಜಯಶ್ರೀ ಗುಡ್ಡದ ಇದ್ದರು.

•ಅಲ್ಲಮಪ್ರಭು ಶಾಲೆ: ಅಲ್ಲಮಪ್ರಭು ಕನ್ನಡ ಮತ್ತು ಬ್ರೀಲಿಯಂಟ್ ಆಂಗ್ಲ ಮಾಧ್ಯಮ ಪೂರ್ವ- ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಸಿದ್ದು ಒಡೆಯರ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು. ಸುನೀಲ ಭೈರವಾಡಗಿ, ಎಂ.ಒ. ಶಿರೂರ, ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿವೇಕ್‌ ಹುಂಡೇಕಾರ ಇದ್ದರು.

•ವೆಂಕಟಗಿರಿ ಕಾಲೋನಿ: ನಗರದ ವೆಂಕಟಗಿರಿ ಕಾಲೋನಿಯ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಯೋಗ ಶಿಬಿರ ನಡೆಯಿತು. ಬಡಾವಣೆಯ ನೂರಾರು ಮಹಿಳೆಯರು ಯೋಗ ಶಿಬಿರದಲ್ಲಿ ಭಾಗವಹಿಸಿ ಯೋಗಾಭ್ಯಾಸದಲ್ಲಿ ನಿರತರಾದರು. ಪದ್ಮಜಾ ಪಾಟೀಲ, ಶಶಿಕಲಾ ಇನಾಮದಾರ, ಪ್ರಭಾ ರೇವಡಿಗಾರ, ಬಾಳಾಬಾಯಿ ದೈಗೊಂಡ, ಸುನೀತಾ ಕೊರಚಗಾಂವ, ಗದಗ, ಕೋಟ್ಯಾಳ, ಸೌಮ್ಯಾ ಪಾಟೀಲ ಇದ್ದರು.

•ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ: ವಿಜಯಪುರ ತಾಲೂಕಿನ ಕವಲಗಿ ಗ್ರಾಮದಲ್ಲಿರುವ ಸಂಗನಬಸವ ಅಂತಾರಾಷ್ಟ್ರೀಯ ವಸತಿಯ ಶಾಲೆ ಆವರಣದಲ್ಲಿ ಸಾಮೂಹಿಕ ಯೋಗಾಸನಗಳ ಪ್ರದರ್ಶನ ಜರಗಿತು. ಪ್ರಾಚಾರ್ಯ ಪಿ.ಎಂ. ಸತೀಶಕುಮಾರ, ಪ್ರಾಚಾರ್ಯರಾದ ಎ.ನಾಗರಾಜಬಾಬು ಯೋಗದ ಮಹತ್ವದ ಬಗ್ಗೆ ವಿವರಿಸಿದರು.

•ಬಿಜೆಪಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ನಗರದ ನಾಗೂರ ಕಾಲೇಜ್‌ ಆವರಣದಲ್ಲಿ ಬಿಜೆಪಿಯಿಂದ ಯೋಗ ದಿನ ಆಚರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರು, ವಿಜುಗೌಡ ಪಾಟೀಲ, ಪಾಲಿಕೆ ಉಪ ಮೇಯರ್‌ ಗೋಪಾಲ ಘಟಕಾಂಬಳೆ ಪಾಲ್ಗೊಂಡಿದ್ದರು.

•ಬಿಎಲ್ಡಿಇ ಎಸ್ಬಿ ಕಲಾ-ಕೆಸಿಪಿ ವಿಜ್ಷಾನ ಕಾಲೇಜು: ನಗರದ ಬಿಎಲ್ಡಿಇ ಸಂಸ್ಥೆ ಎಸ್‌.ಬಿ. ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಪ್ರಾಚಾರ್ಯ ಡಾ| ಕೆ.ಜಿ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕಿ ಸುಮನ ಕುಲಕರ್ಣಿ ಯೋಗಾಭ್ಯಾಸದ ಮಹತ್ವದ ಬಗ್ಗೆ ವಿವರಿಸಿ, ತಮ್ಮ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ನಡೆಸಿಕೊಟ್ಟರು. ಜಿ.ಆರ್‌. ಅಂಬಲಿ, ಡಾ| ಯು.ಎಸ್‌. ಪೂಜೇರಿ, ಪ್ರೊ| ಎ.ಎಸ್‌. ಪೂಜಾರಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next