Advertisement

ದೇಶದ ಅಭಿವೃದ್ಧಿಗೆ ಜನಸಂಖ್ಯೆ ಹೆಚ್ಚಳವೇ ಮಾರಕ: ಬಾಗವಾನ

05:43 PM Jan 19, 2020 | Naveen |

ವಿಜಯಪುರ: ಮಿತಿ ಮೀರಿದ ಜನಸಂಖ್ಯೆಯಿಂದ ಮೊದಲು ಕುಟುಂಬದೊಂದಿಗೆ ಆರಂಭವಾಗುವ ಸಮಸ್ಯೆ ಇಡಿ ದೇಶಕ್ಕೆ ಮಾರಕವಾಗಿ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗಾಗಿ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿ ಕುಟುಂಬದ ಬದ್ಧತೆ ತೋರಬೇಕಿದೆ ಎಂದು ವಿಜಯಪುರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಆರ್‌. ಬಾಗವಾನ ಹೇಳಿದರು.

Advertisement

ಬಬಲೇಶ್ವರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಹಾಗೂ ಬಬಲೇಶ್ವರ ಶಾಂತವೀರ ಕಾಲೇಜು ಎನ್‌ಎನ್ನೆಸ್ಸೆಸ್‌ ಘಟಕದ ಆಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಳದಿಂದ ಎಲ್ಲ ವಿಧದಲ್ಲಿಯೂ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಜನಸಂಖ್ಯೆ ಯಿಂದ ಆರ್ಥಿಕ ಹೊರೆ ಜೀವನ ಶೈಲಿ ಹಾಗೂ ವಿದ್ಯಾಭ್ಯಾಸಕ್ಕೆ, ಬಡತನಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿವರಿಸಿದರು.

ದೇಶದ ಪ್ರಗತಿ ಕುಂಠಿತವಾಗುವುದಲ್ಲದೆ, ಜನದಟ್ಟಣೆಯಿಂದ ಆರ್ಥಿಕತೆ ಕುಸಿತ, ಬೀದಿ ಬೀದಿಗಳಲ್ಲಿ ಕೊಳಚೆ ಪ್ರದೇಶ ಉದ್ಭವಿಸುವುದು ಇದರಿಂದ ಅನಾರೋಗ್ಯ ಹೆಚ್ಚಳ ಮತ್ತು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುತ್ತದೆ. ಕಾರಣ ಜನಸಂಖ್ಯೆಯನ್ನು ನಿಯಂತ್ರಿಸಿ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಸಕ್ತ ವರ್ಷದ ಇಲಾಖೆ ಘೋಷಣೆಯಾದ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ ಎಂಬ ಘೋಷಣೆಯ ಹಿನ್ನಲೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ, ಜನಸಂಖ್ಯೆ ತಡೆಯಲು ಇರುವ ಮಾರ್ಗೊಪಾಯಗಳು, ಜನಸಂಖ್ಯೆ ಹೆಚ್ಚಳದಿಂದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಪ್ರತಿಯೊಬ್ಬರೂ ಅರಿಯಬೇಕು ಎಂದರು.

Advertisement

ತಾಲೂಕು ಆರೋಗ್ಯ ಅಧಿಕಾರಿ ಡಾ| ಕವಿತಾ ಮಾತನಾಡಿ, ಅನಾರೊಗ್ಯದ 10 ಮಕ್ಕಳನ್ನು ಹಡೆಯುವುದಕ್ಕಿಂತ ಆರೊಗ್ಯಯುತ ಒಂದು ಮಗು ದೇಶದ ಸಂಪತ್ತು ಆಗುತ್ತದೆ. ಆರೊಗ್ಯವಂತ ಒಂದು ಮಗುವಿನಿಂದ ದೇಶಕ್ಕೆ ಮಾರಕವಾಗುವ
ಬಡತನ, ನಿರುದ್ಯೋಗ ಇವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಟೋಬೇಕ್ಟಮಿ, ಲೇಪ್ರಸ್ಕೋಪಿಕ್‌, ಎನ್‌ಎಸ್‌ವಿ ವಿಧಾನಗಳನ್ನು ಹಾಗೂ ತಾತ್ಕಾಲಿಕ ವಿಧಾನಗಳಾದ ಐಯುಡಿ, ಒಪಿ, ನಿರೋಧ, ಚುಚ್ಚು ಮದ್ದುಗಳ ಬಗ್ಗೆ ತಿಳಿಸಿ ಇವುಗಳಿಂದ ಜನಸಂಖ್ಯೆ ನಿಯಂತ್ರಣ ಮಾಡಬಹುದು ಎಂದರು.

ಮನೆಗೊಂದು ಮಗು ದೇಶಕ್ಕೆ ನಗು ಇದರಿಂದ ತಂದೆ ತಾಯಿ ಆರೋಗ್ಯದ ಜೊತೆಗೆ ಕುಟುಂಬ ಸಂತೋಷದಿಂದ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಲೇಶ್ವರ ಶಾಂತವೀರ ಕಾಲೇಜು ಪ್ರಾಂಶುಪಾಲ ವಿ.ಆರ್‌. ಚೌಧರಿ, ವಿಶ್ವದ ಜನಸಂಖ್ಯೆಯಲ್ಲಿ ಭಾರತ 2ನೇ ಪ್ರಬಲ ರಾಷ್ಟ್ರ ಎನಿಸಿದೆ. ಈಗಿರುವ ಅಂಕಿ ಅಂಶಗಳ ಏರಿಳಿತದ ಲೆಕ್ಕಾಚಾರಲದಲ್ಲಿ ಭಾರತ ದೇಶ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವು ಅಪಾಯವೂ ಇದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ತುರ್ತು ನಿರ್ಧಾರ ಕೈಗೊಳ್ಳಬೇಕಿದೆ. ಚಿಕ್ಕ ಸಂಸಾರದೊಂದಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಒಳ್ಳೆ ನಾಗರಿಕರನ್ನಾಗಿ ಮಾಡಲು ಪ್ರಯತ್ನ ಪಟ್ಟರೆ ಆ ಮಕ್ಕಳೆ ದೇಶದ ಸಂಪತ್ತು ಆಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಇದಕ್ಕೂ ಮುನ್ನ ನಗದಲ್ಲಿ ಹಮ್ಮಿಕೊಂಡಿದ್ದ ಜನಸಂಖ್ಯೆ ಜಾಗೃತಿ ಜಾಥಕ್ಕೆ ನಡೆಯಿತು. ಡಾ| ಎಂ.ಸಿ.ನಿಗಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next