Advertisement

Vijayapura; ಮಹಿಳಾ ವಿವಿ ಲೈಂಗಿಕ ಹಗರಣ:ರಾಜ್ಯಪಾಲರಿಗೆ ಮುತ್ತಿಗೆ ಎಚ್ಚರಿಕೆ

05:52 PM Mar 10, 2024 | Team Udayavani |

ವಿಜಯಪುರ : ಪಿಎಚ್.ಡಿ.ಸಂಶೋಧನಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರೊಫೇಸರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕರವೇ ನೇತೃತ್ವದಲ್ಲಿ ಮಹಿಳೆಯರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಆರೋಪಿ ವಿರುದ್ಧತ್ವರಿತವಾಗಿ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ರಾಜ್ಯಪಾಲರಿಗೆ ಮುತ್ತಿಗೆಹಾಕುವ ಎಚ್ಚರಿಕೆ ನೀಡಿದರು.

Advertisement

ಭಾನುವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎದುರು ಕರವೇ ಜಿಲ್ಲಾಧ್ಯಕ್ಷ ಮೊಹ್ಮದ್ ಇಸಾಕ್ ಮುಲ್ಲಾ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿದ ಮಹಿಳೆಯರು ಸೇರಿದಂತೆ ಸಂಘಟನೆಯ ಕಾರ್ಯಕರ್ತರು, ನಂತರ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ.ತುಳಸಿಮಾಲಾ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಕುಲಪತಿಗಳು ವಿವಿಯಲ್ಲಿ ಇಂತಹ ಒಂದು ಘಟನೆ ಕೇಳಿ ಬಂದಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಈಗಾಗಲೇ ಆಂತರಿಕ ಸಮಿತಿಗೆ ಶಿಫಾರಸ್ಸು ಮಾಡಲಾಗಿದ್ದು ಈಗಾಗಲೇ  ವಿಚಾರಣೆ ನಡೆದಿದ್ದು ಇನ್ನೆರೆಡು ಸುತ್ತಿನ ವಿಚಾರಣೆ ಬಳಿಕ ಮೇಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುವ ಭರವಸೆ ನೀಡಿದರು.

ಘಟಿಕೋತ್ಸವ ಪ್ರಯುಕ್ತ ನಮ್ಮ ನಿಮ್ಮೆಲ್ಲರ ಮಕ್ಕಳು ಬಹಳ ಖುಷಿಯಿಂದ ಅವರ ಸಾಧನೆಗೆ ಹಲವು ಪದಕಗಳನ್ನು ಪಡೆದಿರುವ ಮಕ್ಕಳ ಸಾಧನೆಯ ವೇದಿಕೆ ಸಿದ್ಧವಾಗಿದ್ದು, ಸದರಿ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಆತಂಕಗಳು ಇಲ್ಲದಂತೆ ಕಾರ್ಯಕ್ರಮ ನಡೆಸಿಕೊಡಲು ಸಹಕರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಅನುರಾಧಾ ಕಲಾಲ, ಗೌರವಾಧ್ಯಕ್ಷೆ ಮಂಜುಳಾ ಅಂಗಡಿ, ಕಳೆದೆರೆಡು ವಾರಗಳ ಹಿಂದೆ ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪದವಿಗಾಗಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿನಿಯರಿಗೆ ಮಲ್ಲಿಕಾರ್ಜುನ ಎನ್.ಎಲ್.ಎಂಬ ಪ್ರೊಫೇಸರ್ ಲೈಂಗಿಕ ಕಿರುಕುಳ ನೀಡಿರುವ ಅಮಾನವೀಯ ಹಾಗೂ ಅಸಹ್ಯಕರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದರು.

Advertisement

ಸದರಿ ಲೈಂಗಿಕ  ಕಿರುಕುಳದ ಆರೋಪ ಹೊತ್ತಿರುವ ವಿಶ್ವವಿದ್ಯಾಲಯದ ಮ್ಯಾನೇಜ್ ಮೆಂಟ್ ವಿಭಾಗದ ಮುಖ್ಯಸ್ಥ ಪ್ರೊ.ಮಲ್ಲಿಕಾರ್ಜುನ ಎನ್.ಎಲ್. ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ಮೊಹ್ಮದಿಸಾಕ್ ಮುಲ್ಲಾ ಮಾತನಾಡಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದ್ದು, ಸದರಿ ವಿದ್ಯಾನಿಲಯದಲ್ಲಿ ಬಡ, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಹೆಚ್ಚು ಅನುಕೂಲವಾಗಿದೆ.ಇಂಥ ಘಟನೆಗಳಿಂದ ವಿದ್ಯಾರ್ಥಿನಿಯರ ಅಸುರಕ್ಷತೆ ಹೆಚ್ಚಾಗಿ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಹರಿಹಾಯ್ದರು.
ಶೈಕ್ಷಣಿಕವಾಗಿ ಹಿಂದುಳಿದಿರುವೀ ಭಾಗದಲ್ಲಿ ಮಹಿಳೆಯರನ್ನು ಉನ್ನತ ಶಿಕ್ಷಣಪಡೆಯುವುದಕ್ಕೆಹೆಚ್ಚಿನ ಅವಕಾಶ ನೀಡುವ ಹಾಗೂ ಪ್ರೇರೇಪಿಸುವ ಉದ್ದೇಶದಿಂದ ಸರ್ಕಾರ ಬರಗಾಲ ಪೀಡಿತ ವಿಜಯಪುರ ಜಿಲ್ಲೆಯಲ್ಲಿ ರಾಜ್ಯದ ಎಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಇಂಥ ಘಟನೆಗಳಿಂದ ವಿಶ್ವವಿದ್ಯಾಲಯಕ್ಕೆ ಕಪ್ಪುಚುಕ್ಕೆಯಾಗಿ ಮಹಿಳಾ ಉನ್ನತ ಶಿಕ್ಷಣ ಪಡೆಯುವ ಮಕ್ಕಳಿಗೆ ಹಿನ್ನಡೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸದರಿ ವಿಶ್ವವಿದ್ಯಾನಿಲಯದಲ್ಲಿ ಸಾವಿರಾರು ವಿದ್ಯಾರ್ಥಿನಿಯರು ಹಲವು ಸಂಕಟ ತಾಪತ್ರಯಗಳ ಮಧ್ಯೆ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಸಾಕಷ್ಟು ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇಂಥ ಸಂದರ್ಭದಲ್ಲಿ ಸ್ವಯಂ ಓರ್ವ ಪ್ರೊಫೇಸರ್ ಮೃಗೀಯ ವರ್ತನೆ  ತೋರಿರುವುದು  ದುರಂತದ ಸಂಗತಿ ಎಂದು ಹರಿಹಾಯ್ದರು.

ಸಂತ್ರಸ್ಥ ವಿದ್ಯಾರ್ಥಿನಿ ಕುಲಪತಿಗಳು, ಕುಲಸಚಿವರಿಗೆ ಲಿಖಿತ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕಾರಣ ವಿದ್ಯಾರ್ಥಿನಿಯ ಮೇಲೆ ಪ್ರೊಫೇಸರ್ ಲೈಂಗಿಕ ಕಿರುಕುಳ ಆರೋಪ ವನ್ನು ಗಂಭೀರವಾಗಿ ಪರಿಗಣಿಸಿ, ಶಿಸ್ತು ಕ್ರಮ ಜರುಗಿಸಬೇಕಿದ್ದರೂ,ಅಂಥ ಕ್ರಮ ಕೈಗೊಳ್ಳುವಲ್ಲಿ  ವಿಶ್ವವಿದ್ಯಾಲಯ ವಿಫಲವಾಗಿದೆ ಎಂದು ಹರಿಹಾಯ್ದರು.

ಆರೋಪಿ ಪ್ರೊ.ಮಲ್ಲಿಕಾರ್ಜುನ ವಿರುದ್ಧ ತುರ್ತು  ಕ್ರಮಕೈಗೊಳ್ಳದಿದ್ದರೆ ಘಟಿಕೋತ್ಸವಕ್ಕೆ ಆಗಮಿಸುತ್ತಿರುವ ರಾಜ್ಯಪಾಲರಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಕರವೇ ಮಹಿಳಾ  ಘಟಕದ  ಕಸ್ತೂರಿ ಪೂಜಾರಿ, ನೀಲಮ್ಮ ಕಾಂಬಳೆ, ಸವಿತಾ ಖಂಡೇಕರ, ನೀಲಾಂಬಿಕೆ ಬಿರಾದಾರ, ಸುಜಾತಾ ಜಾಧವ, ರೇಣುಕಾ ಅಗಸರ, ನೀಲಾ ಕಾಳೆ, ಸಾಗರ ಜಾಧವ, ಕೃಷ್ಣಾ ಚವ್ಹಾಣ, ಜಯಶ್ರೀ ಕಾಶೆಟ್ಟಿ, ಸಂಗೀತಾ ಪಾಟೀಲ, ರೇಣುಕಾ ಕಲಾಲ, ಕಸ್ತೂರಿ ರಾಯಚೂರು, ಮಂಜುಳಾ ಜಾಧವ, ಚಂದ್ರವ್ವ ಕಾಂಬಳೆ, ಸುರೇಶ ಬಿಜಾಪುರ, ಮಹಾದೇವ ರಾವಜಿ, ಫಯಾಜ ಕಲಾದಗಿ, ವಿನೋದ ದಳವಾಯಿ, ಮನೋಹರ ತಾಜವ, ಆಸೀಪ್‍ಪೀರ್ ವಾಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next