Advertisement

Vijayapura: ಸಿ.ಟಿ.ರವಿ ಪ್ರಕರಣ ಹಿಂಪಡೆದ ಬಗ್ಗೆ ಬಿಜೆಪಿಯವರು ಯಾಕೆ ಹೇಳಲ್ಲ: ಎಂಬಿ ಪಾಟೀಲ್

04:50 PM Oct 13, 2024 | keerthan |

ವಿಜಯಪುರ: ಹುಬ್ಬಳ್ಳಿ ಗಲಭೆಯ ಪ್ರಕರಣ ಹಿಂಪಡೆದ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯವರು ಸಿ.ಟಿ.ರವಿ ವಿರುದ್ಧದ ಪ್ರಕರಣ ಹಿಂಪಡೆದಿರುವ ಬಗ್ಗೆ ಯಾಕೆ ಹೇಳುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದರು.

Advertisement

ನಗರದಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗಲಭೆ ಪ್ರಕರಣಗಳನ್ನು ಕಾಲ ಕಾಲಕ್ಕೆ ಎಲ್ಲ ಸರ್ಕಾರಗಳು ಹಿಂಪಡೆದಿವೆ. ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನರ ಹೋರಾಟಗಳ ಕೇಸ್ ಗಳನ್ನು ಎಲ್ಲ ಸರ್ಕಾರಗಳು ಹಿಂಪಡೆದಿರುತ್ತವೆ. ಅದೇ ರೀತಿ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರಬಹುದು ಎಂದರು.

ಅಲ್ಲದೇ, ಗಲಭೆಗಳಾದಾಗ ಅಮಾಯಕರ ಮೇಲೆ ಕೇಸ್ ದಾಖಲಾಗಿರುತ್ತವೆ. ಗಲಭೆ ಮಾಡಿದವರು ಓಡಿ ಹೋಗಿ, ಸಿಕ್ಕಿಹಾಕಿಕೊಂಡಿರಲ್ಲ. ಗಲಭೆ ನೋಡುತ್ತಾ ನಿಂತವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗಾಗಿ ಪ್ರಕರಣಗಳ ಹಿಂಪಡೆಯುವುದು ಸರ್ವೇ ಸಾಮಾನ್ಯ. ಹಾಗೆ, ಸಿ.ಟಿ.ರವಿ ವಿರುದ್ಧದ ಪ್ರಕರಣ ಹಿಂಪಡೆದಿದ್ದೇವೆ. ಅದನ್ನು ಯಾಕೆ ಹೇಳುತ್ತಿಲ್ಲ ಎಂದು ಬಿಜೆಪಿಯವರ ವಿರುದ್ಧ ಕಿಡಿಕಾರಿದರು.

ಇದೇ ವೇಳೆ, ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂಬ ವಿಪಕ್ಷ ನಾಯಕ ಆರ್. ಅಶೋಕ‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹಿಜಾಬ್, ಹಲಾಲ್, ಅಜಾನ್.. ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಆರ್.ಅಶೋಕ್ ಸಹ ಇದನ್ನೇ ಮಾಡಿದ್ದಾರೆ. ಆದರೆ, ನಾವು ಎಲ್ಲ ಜನರನ್ನ ರಕ್ಷಣೆ ಮಾಡುತ್ತೇವೆ. ಹಿಂದೂ, ಮುಸ್ಲಿಂ, ಸಿಖ್, ಬೌದ್ಧ, ಜೈನರು ಸೇರಿ ಎಲ್ಲರನ್ನು ರಕ್ಷಣೆ ಮಾಡುತ್ತೇವೆ. ಎಲ್ಲರಿಗೂ ಪ್ರೋತ್ಸಾಹ ಕೊಡುತ್ತೇವೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ 20 ಗುಂಪುಗಳು ಇವೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿರುವ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್, ಬಿಜೆಪಿಯವರಿಗೆ ತಮ್ಮಲ್ಲೆ ನೆಲೆ ಇಲ್ಲ. ಅವರಲ್ಲಿ 20 ಗುಂಪುಗಳಿವೆ. ಮೊದಲು ತಮ್ಮ ಮನೆ ಸರಿ ಪಡೆಸಿಕೊಳ್ಳಲಿ. ಬೇರೆಯವರದ್ದೇನು ನೋಡುತ್ತಾರೆ. ಶೇ.40 ಭ್ರಷ್ಟಾಚಾರದಿಂದ ಜನರು ಬಿಜೆಪಿಯನ್ನು ಕಿತ್ತೆಸೆದು ಮನೆಗೆ ಕಳಿಸಿದ್ದಾರೆ. ಬಿಜೆಪಿಯಲ್ಲೇ ಹೊಂದಾಣಿಕೆ ಇಲ್ಲ ಎಂದು ಲೇವಡಿ ಮಾಡಿದರು.

Advertisement

5 ವರ್ಷನೂ ಸಿದ್ದರಾಮಯ್ಯ ಸಿಎಂ: ಪ್ರಸ್ತುತ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರೇ 5 ವರ್ಷ ಮುಂದುವರೆಯುತ್ತಾರೆ. ಕೆಲ ನಾಯಕರ ಅಭಿಮಾನಿಗಳು ತಮ್ಮ ನಾಯಕರು ಸಹ ಸಿಎಂ ಆಗಲಿ ಎಂದು ಘೋಷಣೆ ಕೂಗುತ್ತಾರೆ. ಹಾಗೆ ಘೋಷಣೆ ಕೂಗುವುದರಲ್ಲಿ ತಪ್ಪೆನಿಲ್ಲ ಎಂದು ಅವರು ತಿಳಿಸಿದರು.

ಜನತೆಯೊಂದಿಗೆ ಸಚಿವರ ಬನ್ನಿ ವಿನಿಮಯ: ದಸರಾ ಹಬ್ಬ ಹಿನ್ನೆಲೆಯಲ್ಲಿ ಸಚಿವ ಎಂ.ಬಿ. ಪಾಟೀಲ್ ತಮ್ಮ ನಿವಾಸದಲ್ಲಿ ಹಿತೈಷಿಗಳು, ಬೆಂಬಲಿಗರು ಮತ್ತು ಕ್ಷೇತ್ರದ ಜನತೆಯೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭ ಹಾರೈಸಿದರು.

ವಿದೇಶ ಪ್ರವಾಸದಲ್ಲಿದ್ದ ಅವರು ಇಂದು ನಸುಕಿನ ಜಾವ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿ, ಅಲ್ಲಿಂದ ನೇರವಾಗಿ ರಸ್ತೆ ಮಾರ್ಗವಾಗಿ ವಿಜಯಪುರಕ್ಕೆ ಬಂದರು. ತಮ್ಮ ನಿವಾಸದಲ್ಲಿ ಬೆಳಗ್ಗೆಯಿಂದಲೇ ಪತ್ನಿ ಆಶಾ ಪಾಟೀಲ್, ಪುತ್ರ ಬಸನಗೌಡ ಪಾಟೀಲ್ ಅವರೊಂದಿಗೆ ಸೇರಿಕೊಂಡು ಬನ್ನಿ ವಿನಿಮಯದಲ್ಲಿ ಭಾಗಿಯಾದರು. ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರ ಮನೆಗೆ ಆಗಮಿಸಿ ಬನ್ನಿ ವಿನಿಮಯದಲ್ಲಿ ತೊಡಗಿಸಿಕೊಂಡರು.

ಈ ವೇಳೆ ಮಾತನಾಡಿದ ಎಂ.ಬಿ.ಪಾಟೀಲ್, ತಾಯಿ ಚಾಮುಂಡೇಶ್ವರಿ ಕೆಟ್ಟದನ್ನು ಹೋಗಲಾಡಿಸಲಿ. ಒಳ್ಳೆಯದನ್ನು ತರಲಿ. ಹಾಗೆ ದುಷ್ಟರನ್ನು ಸಂಹಾರ ಮಾಡಿ, ಒಳ್ಳೆಯದನ್ನು ಚಾಮುಂಡೇಶ್ವರಿ ರಕ್ಷಿಸುತ್ತಾಳೆ ಎಂಬ ಪ್ರತೀತಿ ಇದೆ. ವಿಜಯದಶಮಿ ಹಬ್ಬದ ಅಂಗವಾಗಿ ಬನ್ನಿ ವಿನಿಮಯ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ನಮ್ಮ ಕ್ಷೇತ್ರದ ಜನರೊಂದಿಗೆ ನೇರವಾಗಿ ಬೆರೆಯುವಂತಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next