Advertisement

ಸ್ಮಾರಕ ಹಿರಿಮೆ ಸಾರಲು ಫ‌ಲಕಗಳೇ ಇಲ್ಲ

10:26 AM Aug 28, 2019 | Naveen |

ವಿಜಯಪುರ: ಯಾವುದೇ ದೇಶ-ರಾಜ್ಯದ ಪ್ರವಾಸೋದ್ಯಮ ವಿಷಯದಲ್ಲಿ ಪ್ರಚಾರ ಫ‌ಲಕಗಳು, ಮಾರ್ಗಸೂಚಿ ಫ‌ಲಕಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ವಿಶ್ವವಿಖ್ಯಾತ ಅಪರೂಪದ ನೂರಾರು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆ ಮಾತ್ರ ಪ್ರವಾಸಿಗರಿಗೆ ಮಾಹಿತಿ ಹಾಗೂ ಮಾರ್ಗಸೂಚಿ ಫ‌ಲಕಗಳಿಗೆ ಬರ ಆವರಿಸಿದೆ. ಪರಿಣಾಮ ವಿಜಯಪುರ ಪ್ರವಾಸಿ ತಾಣಗಳ ಕುರಿತು ದೇಶ-ವಿದೇಶಿ ಪ್ರವಾಸಿಗರಿಂದ ದೂರವಾಗುತ್ತಿದೆ.

Advertisement

ಪ್ರವಾಸೋದ್ಯಮ ಇಲಾಖೆ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಕುರಿತು ದೇಶ-ವಿದೇಶಿಗರಿಗೆ ಆಯಾ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಲು ಪ್ರಚಾರ ಫ‌ಲಕಗಳನ್ನು ಹಾಗೂ ಮಾರ್ಗಸೂಚಿ ಫ‌ಲಕಗಳನ್ನು ಅಳವಡಿಸುತ್ತದೆ. ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದಲ್ಲಿ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರಯಾಣದ ಹಂತದಲ್ಲೇ ರಸ್ತೆಗಳ ಪಕ್ಕದಲ್ಲಿ ಮಾರ್ಗರ್ದನಕ್ಕಾಗಿ ಪ್ರಚಾರ ಫ‌ಲಕಗಳು ಇರುತ್ತವೆ. ಸಣ್ಣ ದೇವಸ್ಥಾನ ಇದ್ದರೂ ಪ್ರಯಾಣದಲ್ಲಿ ಅದರ ಅಂತರ, ಛಾಯಾಚಿತ್ರಗಳ ಸಮೇತ ಕನಿಷ್ಠ ಮಾಹಿತಿ ನೀಡುವ ಕೆಲಸವನ್ನಾದರೂ ಈ ಫ‌ಲಕಗಳು ಮಾಡುತ್ತವೆ.

ಆದರೆ ವಿಜಯಪುರ ಜಿಲ್ಲೆಯ ಪ್ರವಾಸದ ವಿಷಯದಲ್ಲಿ ಪ್ರವಾಸಿ ಮಾರ್ಗದರ್ಶನ ಹಾಗೂ ಪ್ರಯಾಣದ ಅಂತರ ನೀಡುವ ಪ್ರವಾಸಿ ಮಾರ್ಗಸೂಚಿಗಳೇ ಇಲ್ಲ. ಅಷ್ಟೇ ಏಕೆ ಗೋವಾದಿಂದ ಬಳ್ಳಾರಿಗೆ ಪ್ರಯಾಣ ಆರಂಭಿಸಿದರೆ ಅಲ್ಲಲ್ಲಿ ನಿಮಗೆ ಹಂಪಿ ಇರುವ ದೂರದ ಕುರಿತು ಮೈಲಿಗಲ್ಲುಗಳು ಮಾಹಿತಿ ನೀಡುತ್ತವೆ. ಆದರೆ ರಾಜ್ಯದಲ್ಲೇ ಇರುವ ಅದರಲ್ಲೂ ಐತಿಹಾಸಿಕ ಸಂಬಂಧ ಹೊಂದಿರುವ ವಿಜಯನಗರದ ರಾಜಧಾನಿ ಹಂಪಿ ಹಾಗೂ ಆದಿಲ್ ಶಾಹಿಗಳ ರಾಜಧಾನಿ ವಿಜಯಪುರ ಹಾಗೂ ಮಧ್ಯದಲ್ಲಿರುವ ಬಾದಾಮಿ ಕುರಿತು ಎಲ್ಲಿಯೂ ನಿಮಗೆ ಕನಿಷ್ಠ ಮಾಹಿತಿ ನೀಡುವ ಮಾರ್ಗಸೂಚಿ ಫ‌ಲಕಗಳು ಕಾಣಸಿಗುವುದಿಲ್ಲ.

ಇನ್ನು ಹಾಗೂ ಹೀಗೂ ವಿಜಯಪುರಕ್ಕೆ ಬಂದರೆ ನಿಮಗೆ ವಿಜಯಪುರ ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ಪ್ರೇಕ್ಷಣಿಯ ಸ್ಥಳಗಳ ಮಾಹಿತಿ ನೀಡಲು ಯಾವುದೇ ಪ್ರಚಾರ ಫ‌ಲಕಗಳು ಸಾರ್ವಜನಿಕವಾಗಿ ಮುಕ್ತವಾಗಿ ಕಾಣಿಸುವುದಿಲ್ಲ. ಪ್ರವಾಸೋದ್ಯಮ ಇಲಾಖೆ ಅಳವಡಿಸಿರುವ ಪ್ರವಾಸಿಗರಿಗೆ ಮಾಹಿತಿ ನೀಡಲು ನಗರದಲ್ಲಿ ಅಳವಡಿಸಿರುವೆರಡು ಫ್ಲೆಕ್ಸ್‌ಗಳು ಅನಾಥ ಪ್ರಜ್ಞೆ ಎದುರಿಸುತ್ತಿವೆ.

ಪ್ರವಾಸೋದ್ಯಮ ಇಲಾಖೆಯ ಕಚೇರಿ ಬಳಿಯೇ ಇರುವ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಅಳವಡಿಸಿರುವ ಒಂದು ಫ್ಲೆಕ್ಸ್‌ ಕೌಂಪೌಂಡ್‌ ಒಳಗಡೆ ಮರೆಯಾಗಿ ಕುಳಿತಿದೆ. ಇನ್ನೊಂದು ಫ್ಲೆಕ್ಸ್‌ ರೈಲ್ವೇ ನಿಲ್ದಾಣ ಮುಂಭಾಗದಲ್ಲಿ ಅಳವಡಿಸಿದ್ದು ಸಾರ್ವಜನಿಕರಿಗೆ ಬಯಲು ಮೂತ್ರಾಲಯಕ್ಕೆ ಮರೆ ಮಾಡುವ ಸಾಧನವಾಗಿ ಬಳಕೆಯಾತ್ತಿದೆ. ಈ ಫ್ಲೆಕ್ಸ್‌ ಕೆಳಗಡೆ ಬಯಲು ಶೌಚದ ಸ್ಥಿತಿಯಿಂದಾಗಿ ಮಾಲಿನ್ಯದಿಂದ ದುರ್ವಾಸನೆ ಹರಡಿಕೊಂಡಿರುವ ಕಾರಣ ಈ ಪ್ರವಾಸಿ ಮಾರ್ಗದರ್ಶಿ ಫ್ಲೆಕ್ಸ್‌ನತ್ತ ಪ್ರವಾಸಿಗರು ತಿರುಗಿಯೂ ನೋಡದ ಸ್ಥಿತಿ ಇದೆ. ಒಂದೊಮ್ಮೆ ಅಪ್ಪಿ ತಪ್ಪಿ ಫ್ಲೆಕ್ಸ್‌ನತ್ತ ಮುಖ ಮಾಡಿದರೆ ಮೂಗು ಹಾಗೂ ಕಣ್ಣು ಎರಡನ್ನೂ ಮುಚ್ಚಿಕೊಳ್ಳದೇ ವಿಧಿ ಇಲ್ಲ ಎಂಬ ಸ್ಥಿತಿಯಲ್ಲೇ ಪ್ರವಾಸಿ ಮಾಹಿತಿ ಫ‌ಲಕಗಳು ನರಳುತ್ತಿದೆ. ಪ್ರವಾಸಿಗರಿಗೆ ವಿಜಯಪುರ ಸ್ಮಾರಕಗಳ ಹಿರಿಮೆ ಸಾರಲು ಇರುವ ಎರಡೇ ಎರಡು ಪ್ರಚಾರ ಫ‌ಲಕಗಳು ಕೂಡ ಹೀಗೆ ಮೂಕವೇದನೆ ಅನುಭವಿಸುತ್ತಿದೆ.

Advertisement

ಇತಿಹಾಸದ ಪ್ರಜ್ಞೆ ಇರುವ ಪ್ರವಾಸಿಗರು ಹಾಗೂ ಹೀಗೂ ವಿಜಯಪುರ ನಗರಕ್ಕೆ ಬಂದರೆ ಎಲ್ಲೆಲ್ಲಿ ಯಾವ್ಯಾವ ಸ್ಮಾರಕಗಳಿವೆ, ಅಯಾ ಸ್ಥಳಗಳ ವಿಶೇಷ ಏನು, ಈ ಸ್ಮಾರಕಗಳಿಗೆ ಹೋಗುವ ಮಾರ್ಗ ಯಾವುದು ಎಂಬುದು ಸೇರಿದಂತೆ ಕನಿಷ್ಠ ಸಾಮಾನ್ಯ ಮಾಹಿತಿ ನೀಡುವ ಒಂದೇ ಒಂದು ಫ‌ಲಕಗಳು ಇಲ್ಲ. ಹೀಗಾಗಿ ಬಹುತೇಕ ಪ್ರವಾಸಿಗರು ಗೋಲ ಗುಮ್ಮಟ ನೋಡಲು ತೋರುವ ಆಸಕ್ತಿಯನ್ನು ಇತರೆ ಸ್ಮಾರಕಗಳ ವೀಕ್ಷಣೆಗೆ ತೋರುವುದಿಲ್ಲ. ಪ್ರವಾಸಿಗರು ಸ್ಮಾರಕಗಳ ಮುಂದೆ ಹೋಗಿ ನಿಂತರೂ ಪುರಾತತ್ವ ಇಲಾಖೆ ಇದು ಸಂರಕ್ಷಿತ ಸ್ಮಾರಕ ಎಂಬ ಕೆಲವು ಎಚ್ಚರಿಕೆ ಬರಹ ಬಿಟ್ಟರೆ ಇಡೀ ಸ್ಮಾರಕದ ಕುರಿತು ವಿವರಣೆ ನೀಡುವ ಯಾವುದೇ ಫ‌ಲಕಕಗಳು ಕಂಡು ಬರುವುದಿಲ್ಲ.

ಅಷ್ಟೇ ಏಕೆ ಗೋಲಗುಮ್ಮಟದಂತೆಯೇ ವಿಶಿಷ್ಟ ಇತಿಹಾಸ ಹೇಳುವ ಹಾಗೂ ಆಗ್ರಾ ಬಳಿ ತಾಜಮಹಲ್ ಎಂಬ ಸುಂದರ ಬಿಳಿತಾಜ್‌ ನಿರ್ಮಾಣಕ್ಕೆ ಪ್ರೇರಣೆಯಾದ ಕರಿ ತಾಜ್‌ ಎಂದೇ ಕರೆಸಿಕೊಳ್ಳುವ ಇಬ್ರಾಹಿಂ ರೋಜಾ ವೀಕ್ಷಣೆಗೆ ಪ್ರವಾಸಿಗರು ಹೋಗುವುದಿಲ್ಲ. ಗೋಲಗುಮ್ಮಟ, ಇಬ್ರಾಹೀಂ ರೋಜಾ ಸ್ಮಾರಕಗಳನ್ನು ಮೀರಿಸುವ ಅಪರೂಪದ 12 ಕಮಾನಿನ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿ ವಿಫ‌ಲವಾಗಿ ಅರ್ಧಕ್ಕೆ ನಿಂತಿರುವ ಬಾರಾ ಕಮಾನ್‌ ವೀಕ್ಷಣೆಗೆ ಬರುವುದಿಲ್ಲ. ಈ ಸ್ಮಾರಕ ವೀಕ್ಷಣೆಗೆ ಗೋಲಗುಮ್ಮಟ, ಇಬ್ರಾಹಿಂ ರೋಜಾ ಪ್ರವೇಶಕ್ಕೆ ಇರುವಂತೆ ಯಾವುದೇ ಪ್ರವಾಸಿಗರಿಗೆ ಶುಲ್ಕವೂ ಇಲ್ಲ. ಆದರೂ ಈ ಸ್ಮಾರಕ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ವಿರಳಾತಿ ವಿರಳ. ಕಾರಣ ಬಾರಾಕಮಾನ್‌ ಎಂಬ ಅಪರೂಪದ ಸ್ಮಾರಕ ಎಲ್ಲಿದೆ ಎಂದು ಹೇಳಲು ಪ್ರಚಾರ ಫ‌ಲಕಗಳು, ಮಾರ್ಗದರ್ಶಿ ಫ‌ಲಕಗಳು ಇಲ್ಲದಿರುವುದು.

ಪ್ರವಾಸೋದ್ಯಮ ಇಲಾಖೆ ವಿಜಯಪುರ ಜಿಲ್ಲೆಯನ್ನು ಸಂಪರ್ಕಿಸುವ ನೆರೆ ಜಿಲ್ಲೆ ಹಾಗೂ ರಾಜ್ಯಗಳ ರಸ್ತೆ ಹಾಗೂ ರೈಲು ಸಂಚಾರ ಮಾರ್ಗದಲ್ಲಿ ವಿಜಯಪುರ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ನೀಡುವ ಫ‌ಲಕಗಳನ್ನು ಅಳವಡಿಸಬೇಕು. ಹಂಪಿ, ಬಾದಾಮಿ, ಬೆಂಗಳೂರು, ಮಂಗಳೂರು, ಮೈಸೂರು ಮಾತ್ರವಲ್ಲ ಗೋವಾ, ಮುಂಬೈ ಸೇರಿದಂತೆ ದೇಶದ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸ್ಮಾರಕಗಳ ನಗರಿ ವಿಜಯಪುರ ವಿಶಿಷ್ಟ ವಾಸ್ತು ಶಿಲ್ಪ ಹಾಗೂ ಪಾರಂಪರಿಕ ಹಿನ್ನೆಲೆ ಕುರಿತು ವಿವರಿಸುವ ಹಾಗೂ ಸಮಗ್ರ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ. ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು-ಅಧಿಕಾರಿಗಳು ಇನ್ನಾದರೂ ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಪ್ರಚಾರ ಫ‌ಲಕಗಳನ್ನು ಅಳವಡಿಸುವ ಕೆಲಸ ಮಾಡಬೇಕಿದೆ.

ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಇದ್ದೂ ಇಲ್ಲದಂತಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಯಾ ಸ್ಥಳಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಫ‌ಲಕಗಳು, ಅನ್ಯ ಜಿಲ್ಲೆ ಹಾಗೂ ಸ್ಥಳಗಳಿಂದ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ಮಾರ್ಗಸೂಚಿ ಫ‌ಲಕಗಳಿಲ್ಲ. ಜಿಲ್ಲೆಯ ಪ್ರವೇಶ ಭಾಗದಲ್ಲಿ ಸ್ವಾಗತ ಕೋರುವ ಕಮಾನುಗಳಿಲ್ಲ. ಹೀಗಾಗಿ ವಿಜಯಪುರ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಜಿಲ್ಲೆಯಲ್ಲಿರುವ ಪ್ರವಾಸಿ ಮಾಹಿತಿ ನೀಡಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾಗುತ್ತಿಲ್ಲ.
•ಜಿ.ಗುರುರಾಜ ಗರಸಂಗಿ,
 ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next