Advertisement

ಕೋವಿಡ್ ಪರೀಕ್ಷಾ ವರದಿ ಫಲಿತಾಂಶ ಬರುವವರೆಗೆ ಕ್ವಾರಂಟೈನ್‌ ಕಡ್ಡಾಯ

05:37 PM Jun 10, 2020 | Naveen |

ವಿಜಯಪುರ: ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಜನರ ಅವಶ್ಯಕತೆ ಸಂದರ್ಭದಲ್ಲಿ ಕಳುಹಿಸಲಾದ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸಬೇಕು. ಅಲ್ಲದೇ ಪರೀಕ್ಷಾ ವರದಿ ಫಲಿತಾಂಶ ಬರುವವರೆಗೆ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಬೇಕು. ಕೋವಿಡ್‌ ಲಕ್ಷಣ ಕಂಡು ಬಂದವರನ್ನು ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್‌-19 ನಿಯಂತ್ರಣ ಕುರಿತು ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾ ಕಾರ್ಯಪಡೆ ಸಮಿತಿ ಮತ್ತು ನಿಗದಿತ ವೈದ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಕೋವಿಡ್‌ -19 ಪಾಸಿಟಿವ್‌ ರೋಗಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಅಗತ್ಯಬಿದ್ದಾಗ ಮಾತ್ರ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು. ಸರ್ಕಾರದ ಪರಿಷ್ಕೃತ ನಿಯಮದಂತೆ ಹೋಂ ಕ್ವಾರಂಟೈನ್‌ ಮಾಡಬೇಕು. ಆಯಾ ಗ್ರಾಮಮಟ್ಟದ ಸಮಿತಿಗಳು ಹೋಂ ಕ್ವಾರಂಟೈನ್‌ ಮಾಡುವ ಬಗ್ಗೆ ಸೂಕ್ತ ಮಾಹಿತಿ ನೀಡುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಲಕ್ಷಣ ಕಂಡು ಬರದಿದ್ದಲ್ಲಿ ಬಿಡುಗಡೆ: ಜಿಲ್ಲೆಯಲ್ಲಿರುವ ಎಲ್ಲ ಸಾಂಸ್ಥಿಕ ಕ್ವಾರಂಟೈನ್‌ ಮಾಡುವ ಸಂದರ್ಭದಲ್ಲಿ ಸೂಕ್ತ ಪರಿಶೀಲನೆ ಮಾಡಿ ಕ್ವಾರಂಟೈನ್‌ ಮಾಡಬೇಕು. ಅನವಶ್ಯಕವಾಗಿ ಗಂಟಲು ದ್ರವ ಮಾದರಿ ಪಡೆಯದಂತೆ ತಿಳಿಸಿರುವ ಅವರು ಕೋವಿಡ್‌ ಪಾಸಿಟಿವ್‌ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ನಂತರ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು ಲಕ್ಷಣ ಕಂಡು ಬರದಿದ್ದಲ್ಲಿ ಸರ್ಕಾರದ ನಿಯಮದಂತೆಯೇ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದರು.

ತೀವ್ರ ಉಸಿರಾಟವಿದ್ದರೇ ತಕ್ಷಣ ಕ್ರಮ ಕೈಗೊಳ್ಳಿ: ಮಹಾರಾಷ್ಟ್ರದಿಂದ ಜಿಲ್ಲೆಗೆ ಮರಳಿರುವ ನಾಗರಿಕರಲ್ಲಿ ಕೋವಿಡ್‌-19 ಲಕ್ಷಣಗಳು ಕಂಡುಬರದಿದ್ದಲ್ಲಿ ವೈದ್ಯಕೀಯ ಪರೀಕ್ಷೆ ಅವಶ್ಯಕತೆ ಇಲ್ಲ. ತೀವ್ರ ಉಸಿರಾಟದ ತೊಂದರೆ ಮತ್ತು ಗಂಭೀರ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರನ್ನು ತಕ್ಷಣ ವೈದ್ಯಕೀಯ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಪರಿಷ್ಕೃತ ನಿಯಮಾವಳಿ ಪಾಲಿಸಿ: ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಕ್ವಾರಂಟೈನ್‌, ಆರೋಗ್ಯ ತಪಾಸಣೆ ಮತ್ತು ಇತರೆ ಕ್ರಮಗಳನ್ನು ಪರಿಷ್ಕೃತ ನಿಯಮಾವಳಿಗಳಂತೆ ಕೈಗೊಳ್ಳಬೇಕು. ಧೂಳಖೇಡ ಚೆಕ್‌ಪೋಸ್ಟ್‌ ಮತ್ತು ರೈಲ್ವೆ ನಿಲ್ದಾಣಗಳಿಗೆ ಮಹಾರಾಷ್ಟ್ರ ಮತ್ತು ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ಸಂಪೂರ್ಣ ನಿರ್ವಹಣೆಗೆ ಗಡಿ ಪ್ರವೇಶ ಕೇಂದ್ರಗಳ ಮೂಲಕ ನಿಗದಿ ಪಡಿಸಿದ ಕ್ರಮ ಕೈಗೊಳ್ಳಬೇಕು. ತರಬೇತುಗೊಂಡ ಕಂಪ್ಯೂಟರ್‌ ಆಪರೇಟರ್‌ಗಳನ್ನು ನಿಯೋಜಿಸಬೇಕು.

Advertisement

ವ್ಯಾಪಾರಕ್ಕಾಗಿ ಬರುವವರ ಮಾಹಿತಿ ನೋಂದಣಿ: ವಾಣಿಜ್ಯ, ವ್ಯಾಪಾರಕ್ಕಾಗಿ ಬರುವವರು ಕಡ್ಡಾಯವಾಗಿ ಸೇವಾ ಸಿಂಧುದಲ್ಲಿ ನೋಂದಣಿ ಮಾಡಬೇಕು. ಎರಡು ದಿನಕ್ಕಿಂತ ಹೆಚ್ಚಿನ ದಿನಗಳಿಗೆ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿದಲ್ಲಿ ಕೋವಿಡ್‌-19 ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚಿನ ದಿನ ವಾಸ್ತವ್ಯ ಮಾಡಿದಲ್ಲಿ ಕ್ವಾರಂಟೈನ್‌ ಹಾಗೂ ಸ್ವಯಂ ಕ್ವಾರಂಟೈನ್‌ ಆಗಬೇಕು. ಇತರೆ ರಾಜ್ಯಗಳ ನಾಗರಿಕರ ತಪಾಸಣೆಯನ್ನು ಹ್ಯಾಂಡ್‌ ಸ್ಟ್ಯಾಂಪಿಂಗ್‌ ಸೇರಿದಂತೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು. ಜಿಲ್ಲಾ ಪ್ರವೇಶ ಕೇಂದ್ರಗಳನ್ನು ನಿಡಗುಂದಿ, ಬಾಗೇವಾಡಿ, ತಿಕೋಟಾ, ವಿಜಯಪುರ, ಮುದ್ದೇಬಿಹಾಳ, ತಾಳಿಕೋಟೆ, ಸಿಂದಗಿ, ಇಂಡಿಗಳಲ್ಲಿ ಸ್ಥಾಪಿಸಿ ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಪಂ ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾ ಧಿಕಾರಿ ಡಾ| ಔದ್ರಾಮ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next