Advertisement

ರಿಯಾಯ್ತಿ ಕಾರು ಪ್ರವಾಸಿಗರಿಗಿಲ್ಲ!

10:49 AM Aug 16, 2019 | Naveen |

ವಿಜಯಪುರ: ಸರ್ಕಾರ ರಾಜ್ಯದಲ್ಲಿ ಪ್ರವಾಸೋದ್ಯಮ ಬಲಪಡಿಸಲು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಹಾಗೂ ಪ್ರವಾಸಿಗರಿಗೆ ಸುಲಭ ಸಾರಿಗೆ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಕಾರು ಕೊಳ್ಳಲು ನೆರವು ನೀಡುತ್ತದೆ. ಆದರೆ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ನೆರವಿನೊಂದಿಗೆ ನೀಡಿರುವ ಯಾವುದೇ ಕಾರುಗಳು ಪ್ರವಾಸಿಗರಿಗೆ ನ್ಯೆಜವಾಗಿ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿವೆ.

Advertisement

ಪ್ರವಾಸೋದ್ಯಮ ಇಲಾಖೆಯಿಂದ ಪ್ರತಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಕಾರುಕೊಂಡು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಯೋಜನೆಗಾಗಿ ಪ್ರವಾಸಿ ಟ್ಯಾಕ್ಸಿ ಕೊಳ್ಳಲು ರಿಯಾಯ್ತಿ ಹಾಗೂ ಬ್ಯಾಂಕ್‌ ಸಾಲ ಕೊಡಿಸುತ್ತದೆ. ಪ್ರತಿ ವರ್ಷ 40-50 ಕಾರುಗಳನ್ನು ವಿತರಿಸುತ್ತದೆ. ಹಿಂದೆಲ್ಲ ಇಲಾಖೆ ತಾನೇ ಮುಂದಾಗಿ ಎಸ್‌ಬಿಐ ಬ್ಯಾಂಕ್‌ನಿಂದ ಸಾಲ ಕೊಡಿಸಿ, 2 ಲಕ್ಷ ರೂ. ರಿಯಾಯ್ತಿ ಹಣದಲ್ಲಿ ಇಂಡಿಕಾ ಕಾರನ್ನು ಮಾತ್ರ ಕೊಡಿಸುತ್ತಿತ್ತು. ಆದರೆ ಕಳೆದ 2017ರಲ್ಲಿ ಹಲವು ನಿಯಮ ಬದಲಿಸಿದ್ದು, ಫ‌ಲಾನುಭವಿಗಳಿಗೆ 3 ಲಕ್ಷ ರೂ. ರಿಯಾಯ್ತಿ ಕೊಟ್ಟು, ಯಾವುದೇ ಬ್ಯಾಂಕ್‌ನಿಂದ ಯಾವುದೇ ಕಾರು ಕೊಳ್ಳಲು ಅವಕಾಶ ನೀಡಿದೆ. ಪರಿಶಿಷ್ಟ ಜಾತಿ-ಪಂಗಡಕ್ಕೆ ಮಾತ್ರ ಇದ್ದ ಈ ಸೌಲಭ್ಯವನ್ನು ಹಿಂದುಳಿದ ವರ್ಗಕ್ಕೂ ವಿಸ್ತರಿಸಿದೆ. ಈ ಹಿಂದೆ ರಾಜಕೀಯ-ಪ್ರಭಾವಿ ಫ‌ಲಾನುಭವಿಗಳಿಗೆ ಧಕ್ಕುತ್ತಿದ್ದ ಪ್ರವಾಸಿ ಕಾರುಗಳನ್ನು ಎಸ್‌ಎಸ್‌ಎಲ್ಸಿ ಅಂಕ ಹಾಗೂ ವಯೋಮಿತಿಯನ್ನು ಮಾನದಂಡ ಮಾಡಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸರ್ಕಾರ ನಿರುದ್ಯೋಗ ನಿವಾರಣೆಗಾಗಿ ಪ್ರವಾಸಿಗರ ಅನುಕೂಲಕ್ಕೆ 5 ವರ್ಷ ಕಾರು ಮಾರಕೂಡದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿ, 50 ರೂ. ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆಸಿಕೊಂಡು ಅರ್ಜಿಯನ್ನು ಅಂತಿಮಗೊಳಿಸುತ್ತದೆ. ಇಷ್ಟೆಲ್ಲ ಆದಮೇಲೆಯೂ ಪ್ರವಾಸಿಗರ ಹೆಸರಿನಲ್ಲಿ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ವಿತರಿಸಿದ ಕನಿಷ್ಟ 500 ಕಾರುಗಳಲ್ಲಿ ನಾಲ್ಕಾರು ಕಾರುಗಳು ಕೂಡ ಪ್ರವಾಸಿಗರ ಸೌಲಭ್ಯಕ್ಕೆ ದಕ್ಕುತ್ತಿಲ್ಲ.

ಪ್ರವಾಸಿ ಯೋಜನೆಯಲ್ಲಿ ಕಾರು ಪಡೆದವರು ನ್ಯೆಜವಾಗಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸದೇ ಸರ್ಕಾರಿ ಇಲಾಖೆಗೆ ವಾರ್ಷಿಕ-ಮಾಸಿಕ ಬಾಡಿಗೆ ಆಧಾರದಲ್ಲಿ ಬಾಡಿಗೆ ನೀಡಿದ್ದಾರೆ. ಮತ್ತೆ ಕೆಲವರು ಐಶಾರಾಮಿ ಜೀವನಕ್ಕಾಗಿ ವ್ಯಕ್ತಿಗತ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಪ್ರವಾಸಿಗರ ಹೆಸರಿನಲ್ಲಿ ಸರ್ಕಾರ ಲಕ್ಷಾಂತರ ರಿಯಾಯ್ತಿಗಾಗಿ ಕೋಟಿ ಕೋಟಿ ಖರ್ಚು ಮಾಡಿದರೂ ವಿಜಯಪುರ ಜಿಲ್ಲೆಯ ಮಟ್ಟಿಗೆ ಪ್ರವಾಸಿಗರಿಗೆ ಪ್ರವಾಸಿ ಟ್ಯಾಕ್ಸಿ ಸೌಲಭ್ಯ ಶೂನ್ಯ.

ಇನ್ನು ರಿಯಾಯ್ತಿ ಹಣದ ಆಸೆಗೆ ಕಾರು ಖರೀದಿಸಿದ ಫ‌ಲಾನುಭವಿಗಳು ಹಳದಿ ಬೋರ್ಡ್‌ನ ಹೆಚ್ಚಿನ ನೋಂದಣಿಯ ತೆರಿಗೆ ಹಾಗೂ ಇತರೆ ನಿರ್ವಹಣೆ ವೆಚ್ಚ ಭರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೂಂದೆಡೆ ಕಡಿಮೆ ತೆರಿಗೆ ಹಾಗೂ ವೆಚ್ಚದ ಬಿಳಿಬೋರ್ಡ್‌ನ ಕಾರುಗಳು ಸ್ಪರ್ಧಾತ್ಮಕ ದರದಲ್ಲಿ ಬಾಡಿಗೆ ಹೋಗುವ ಕಾರಣ ಪ್ರವಾಸಿ ಟ್ಯಾಕ್ಸಿಗಳು ಓಡಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಯೋಜನೆಯಲ್ಲಿ ರಿಯಾಯ್ತಿ ಹಣದ ಆಸೆಗೆ ಬಿದ್ದು ಕಾರು ಪಡೆದ ಹಲವು ನಿರುದ್ಯೋಗಿಗಳು ಸಾಲ ತೀರಿಸಿಲ್ಲ. ಸಾಲ ತೀರಿಸದ ಪ್ರವಾಸಿ ಟ್ಯಾಕ್ಸಿ ಮಾಲೀಕರಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡಿವೆ.

Advertisement

ಮತ್ತೂಂದೆ ಸರ್ಕಾರದ ಯೋಜನೆಗಳ ಫ‌ಲಾನುಭವಿಗಳು ಸಾಲ ಮರುಪಾವತಿ ಮಾಡದ ಕಾರಣ ಬ್ಯಾಂಕ್‌ಗಳು ಹೊಸ ಫ‌ಲಾನುಭವಿಗಳಿಗೆ ಸಾಲ ನೀಡಲು ನಿರಾಕರಿಸುತ್ತಿವೆ. ಇದರೊಂದಿಗೆ ನಿರುದ್ಯೋಗ ನಿವಾರಣೆ, ಪ್ರವಾಸಿಗರ ಅನುಕೂಲ, ಸರ್ಕಾರದ ಸಹಾಯ ಧನ ಎಂಬೆಲ್ಲ ಹಲವು ದೂರಗಾಮಿ ಚಿಂತನೆಯ ಯೋಜನೆ ಉದ್ದೇಶ ಈಡೇರುವಲ್ಲಿ ವಿಫ‌ಲವಾಗಿದೆ.

ಪ್ರತಿ ವರ್ಷ ಪ್ರವಾಸಿ ಟ್ಯಾಕ್ಸಿ ಯೋಜನೆಯಲ್ಲಿ ಕಾರು ವಿತರಿಸುವ ಪ್ರವಾಸೋದ್ಯಮ ಇಲಾಖೆ ನಂತರ ಫ‌ಲಾನುಭವಿ ಏನಾದ ಎಂದು ತಿರುಗಿ ನೋಡುವುದಿಲ್ಲ. ಜಿಲ್ಲೆಗೆ ನಿತ್ಯ ಸಾವಿರಾರು ಪ್ರವಾಸಿಗರು ಬಂದರೂ ವಿಶ್ವಾಸಾರ್ಹ, ನಿಖರ ಹಾಗೂ ಸೂಕ್ತ ಪ್ರವಾಸಿ ಮಾಹಿತಿ ನೀಡುವ ನಿರ್ದಿಷ್ಟ ಹಾಗೂ ಪ್ರತ್ಯೇಕ ಟ್ಯಾಕ್ಸಿಗಳಿಗೆ ನಿಲ್ದಾಣ ಕಲ್ಪಿಸುವ ಗೋಜಿಗೂ ಹೋಗಿಲ್ಲ. ಪ್ರವಾಸಿ ಟ್ಯಾಕ್ಸಿ ಮಾಲೀಕರು ಅನುಭವಿಸುವ ಸಮಸ್ಯೆ ಆಲಿಸುವ ಸಣ್ಣ ಪ್ರಯತ್ನವೂ ಇಲಾಖೆಯಿಂದ ನಡೆದಿಲ್ಲ. ಏಕೆಂದರೆ ಪ್ರಭಾರಿಗಳ ಕಾರುಬಾರಿನಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಮೂಲ ವಾರಸುದಾರರೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next