Advertisement

ಪ್ರವಾಸಿಗರಿಗೆ ಮೀನು ಖಾದ್ಯ ಸವಿಯೂಟ

01:07 PM Oct 30, 2019 | Naveen |

„ಜಿ.ಎಸ್‌. ಕಮತರ
ವಿಜಯಪುರ: ಉತ್ತರ ಕರ್ನಾಟಕದಲ್ಲಿ ಕೃಷ್ಣಾ ಹಾಗೂ ಅದರ ಹತ್ತಾರು ಉಪ ನದಿಗಳು ಹರಿದರೂ ಮೀನುಗಾರಿಕೆಗೆ ಅಗತ್ಯ ಪ್ರೋತ್ಸಾಹವಿಲ್ಲ. ಇದೀಗ ರಾಜ್ಯ ಸರ್ಕಾರ ಈ ಭಾಗದ ಜಿಲ್ಲೆಗಳಲ್ಲಿ ಮತ್ಸೋದ್ಯಮ ಬಲವರ್ಧನೆ ಹಾಗೂ ಸಮುದ್ರ ಮೀನು ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆ ಕಂಡುಕೊಳ್ಳಲು ಯೋಜಿಸಿದೆ.

Advertisement

ಇದಕ್ಕಾಗಿ ರಾಜ್ಯದ ಮಹಾನಗರ ಪಾಲಿಕೆ ಇರುವ 11 ಜಿಲ್ಲಾ ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಮತ್ಸ್ಯ ದರ್ಶಿನಿ ಕ್ಯಾಂಟಿನ್‌ ತೆರೆಯಲು
ಮುಂದಾಗಿದೆ. ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ತುಂಗಭದ್ರಾ, ಭೀಮಾ, ಮಲಪ್ರಭಾ, ಘಟಪ್ರಭಾ, ವರದಾ ಸೇರಿದಂತೆ ಹತ್ತಾರು ಪ್ರಮುಖ ನದಿಗಳು, ಹೊಳೆಗಳು ಹರಿಯುತ್ತವೆ. ಆದರೆ ಈ ಭಾಗದಲ್ಲಿ ಮೀನುಗಾರಿಕೆಗೆ ಹೇರಳ ಜಲಸಂಪತ್ತಿದ್ದರೂ ಸಂಪತ್ತಿನ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫ‌ಲವಾಗಿದ್ದೇವೆ.

ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ಅಪೌಷ್ಟಿಕತೆ ತಾಂಡವವಾಡುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಕಡಿಮೆ ಬೆಲೆಯಲ್ಲಿ ಹೆಚ್ಚು ಗುಣಮಟ್ಟದ ಪೌಷ್ಟಿಕ ಆಹಾರ ಎನಿಸಿರುವ ಮೀನು ಖಾದ್ಯ ಬಳಕೆ ಹೆಚ್ಚಾಗಬೇಕಿದೆ. ಈ ವಿಷಯದಲ್ಲೂ ವಿಶೇಷ ಕಾಳಜಿ ವಹಿಸಿಲ್ಲ.

ಮತ್ತೊಂದೆಡೆ ದೇಶದಲ್ಲಿ ಆಹಾರದ ಸಂಸ್ಕೃತಿಯಲ್ಲಿ ಮೀನೂಟವನ್ನು ಹೆಚ್ಚಾಗಿ ಪ್ರೋತ್ಸಾಹಿಸುವ ಅಗತ್ಯವಿದೆ. ಇದಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಮೀನು ಲಭ್ಯತೆ ಇಲ್ಲದಿರುವುದು ಹಾಗೂ ಲಭ್ಯ ಇರುವ ಮೀನು ಕೂಡ ಬೀದಿ ಬದಿಯಲ್ಲಿ ಆರೋಗ್ಯ ಸುರಕ್ಷತೆ ಇಲ್ಲದಿವುರುದು ಮೀನು ಆಹಾರ ಸೇವನೆ ಆಸಕ್ತಿ ಇದ್ದರೂ ಅವಕಾಶ ಇಲ್ಲದ ಸ್ಥಿತಿ ಉತ್ತರ ಕರ್ನಾಟಕದಲ್ಲಿದೆ. ಹೀಗಾಗಿ ಬಿಜೆಪಿ ಸರ್ಕಾರದ ಮೀನುಗಾರಿಕೆ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ಈ ಭಾಗದ ಆಯ್ದ ಜಿಲ್ಲೆಗಳಲ್ಲಿ ಮತ್ಸ್ಯದರ್ಶಿನಿ ಯೋಜನೆ ಜಾರಿಗೆ ಮುಂದಾಗಿದೆ.

ಇದಕ್ಕಾಗಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ 11 ಕೋಟಿ ರೂ. ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಆಹಾರದ ಬೇಡಿಕೆ ತಗ್ಗಿಸಲು ಸಾಧ್ಯವಿದ್ದು, ನದಿ, ಹೊಳೆ, ಹಳ್ಳ, ಕೆರೆಗಳಂಥ ಜಲಮೂಲಗಳನ್ನು ಬಳಸಿಕೊಂಡು ಮೀನುಗಾರಿಕೆ ಮಾಡುವುದರಿಂದ ಸ್ಥಾನಿಕವಾಗಿ ತಾಜಾ ಮೀನುಗಳು ಲಭ್ಯವಾಗುತ್ತವೆ.

Advertisement

ತಾಜಾ ಮೀನು ಸೇವಿಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ಇದನ್ನು ಮನಗಂಡು ಕರ್ನಾಟಕ ಮತ್ಸ್ಯ ಉದ್ಯಮ  ಅಭಿವೃದ್ಧಿ ನಿಗಮದಿಂದ ಮತ್ಸ್ಯದರ್ಶಿನಿ ಯೋಜನೆ ಆರಂಭಿಸಲಾಗುತ್ತಿದೆ.

ಕೃಷ್ಣೆ ಮಡಿಲಲ್ಲಿ ಜಲರಾಶಿ: ಮತ್ತೂಂದೆಡೆ ಉತ್ತರ ಕರ್ನಾಟಕದಲ್ಲಿ ಪ್ರಮುಖ ನದಿ ಎನಿಸಿರುವ ಕೃಷ್ಣಾ ನದಿಗೆ ಅಲಮಟ್ಟಿ ಬಳಿ ಶಾಸ್ತ್ರಿ, ನಾರಾಯಣಪುರ ಬಳಿ ಬಸವಸಾಗರ ಸೇರಿದಂತೆ ಹಲವು ಹಲವು ಜಲಾಶಯಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ ಸೀಮಾಂಧ್ರದಲ್ಲಿ ನಿರ್ಮಿಸಿರುವ ಪ್ರಿಯದರ್ಶಿನಿ ಜುರಾಲಾ ಯೋಜನೆ ಜಲಾಶದ ಹಿನ್ನೀರು ಸೇರಿದಂಂತೆ ಬೆಳಗಾವಿಯಿಂದ ರಾಯಚೂರುವರೆಗೆ ಸುಮಾರು 300 ಕಿ.ಮೀ.ವರೆಗೆ ಕೃಷ್ಣಾ ನದಿ ಜಲಾಶಯಗಳಲ್ಲಿ ನಿರಂತರ ನೀರಿನ ರಾಶಿ ಸಂಗ್ರಹ ಇರುತ್ತದೆ. ಮೀನುಗಾರಿಕೆಗೆ ನಿರ್ವಹಣೆ ವೆಚ್ಚವಿಲ್ಲದೇ ನೈಸರ್ಗಿಕವಾಗಿ ಮೀನುಗಾರಿಕೆಗೆ ಹೆಚ್ಚು ಅವಕಾಶವಿದೆ. ಅಲ್ಲದೇ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಯಿಂದ ನೂರಾರು ಕೆರೆಗಳು ಭರ್ತಿಯಾಗುತ್ತಿವೆ.

ಹೀಗೆ ಲಭ್ಯ ಇರುವ ಜಲ ಸಂಪನ್ಮೂಲವನ್ನು ಕೃಷಿ-ತೋಟಗಾರಿಕೆಯಲ್ಲಿ ನೀರಾವರಿ ಸೇರಿದಂತೆ ಮೀನುಗಾರಿಕೆಗೂ ಬಳಕೆ ಮಾಡಿಕೊಳ್ಳಲು ಅವಕಾಶವಿದೆ.

ನಿರುದ್ಯೋಗ ನಿವಾರಣೆ: ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಸಲು ಪ್ರೋತ್ಸಾಹಿಸುವುದರಿಂದ ನಿರುದ್ಯೋಗ ನಿವಾರಣೆಗೆ ಪರಿಹಾರ ದೊರಕಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಮಂಗಳೂರು, ರತ್ನಗಿರಿ ಹೀಗೆ ಸಮುದ್ರ ತೀರಗಳ ನಗರಗಳಿಗೆ ಗುಳೆ ಹೋಗುವ ಬಹುತೇಕರಿಗೆ ಮೀನುಗಾರಿಕೆ ಅನುಭವ ಇದ್ದು, ಅಂಥವರನ್ನು ಆಯಾ ಜಿಲ್ಲೆಗಳ ನದಿ-ಜಲಾಶಯಗಳ ಹಿನ್ನೀರಿನಲ್ಲಿ ಮತ್ಸ್ಯ ಉದ್ಯಮಕ್ಕೆ ಪ್ರೋತ್ಸಾಹಿಸಬೇಕಿದೆ.

ಮೀನು ಸುರಕ್ಷತೆ: ಬೀದಿ ಬದಿಯಲ್ಲಿ ಹಲವು ದಿನಗಳ ಹಿಂದೆ ಸಂಗ್ರಹಿಸಿದ ಹಾಗೂ ಧೂಳು, ಕ್ರಿಮಿ ಕೀಟಗಳಿಂದ ಕೂಡಿದ ಮೀನುಗಳನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೀದಿ ಬದಿಯಲ್ಲಿ ಮೀನು ಮಾರಾಟದಿಂದಾಗಿ ಮೀನಿನ ತ್ಯಾಜ್ಯದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚುವ ಜೊತೆಗೆ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುತ್ತದೆ.

ಹೀಗೆ ಮೀನುಗಾರಿಕೆ ವಿಷಯದಲ್ಲಿ ಇರುವ ನಕಾರಾತ್ಮಕ ಸಂಗತಿಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಮೀನು ಆಹಾರ ಸುರಕ್ಷತೆಗಾಗಿ ಸರ್ಕಾರವೇ
ಮತ್ಸ್ಯ ಉದ್ಯಮ  ಬಲವರ್ಧನೆ ಜೊತೆಗೆ ಆಧುನಿಕ ಸೌಲಭ್ಯಗಳೊಂದಿಗೆ ಜನರ ಬಳಿಗೆ ಹೋಗಲು ಮುಂದಾಗಿದೆ.

11 ಪಾಲಿಕೆ ವ್ಯಾಪ್ತಿಯಲ್ಲಿ ಮತ್ಸ್ಯದರ್ಶಿನಿ: ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲಿ ಸರ್ಕಾರ ಮತ್ಸ್ಯದರ್ಶಿನಿ ಮೀನು  ಕ್ಯಾಂಟೀನ್‌ ಆರಂಭಕ್ಕೆ ಮುಂದಾಗಿದೆ. ವಿಜಯಪುರ, ಕಲಬುರಗಿ, ಬೆಳಗಾವಿ, ಧಾರವಾಡ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಮೈಸೂರು, ತುಮಕೂರು, ಮಂಗಳೂರು, ಹಾಸನ ಸೇರಿದಂತೆ ಮಹಾನಗರ ಪಾಲಿಕೆ ಹೊಂದಿರುವ 11 ಕಡೆಗಳಲ್ಲಿ ಮತ್ಸ್ಯದರ್ಶಿನಿ ಆರಂಭಕ್ಕೆ ಸರ್ಕಾರ ಯೋಜನೆ ರೂಪಿಸಿದೆ. ಈ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ಸ್ಯದರ್ಶಿನಿ ಕ್ಯಾಂಟೀನ್‌ ತೆರೆಯುವ ಮೂಲಕ ಮೀನು ಅಹಾರ ಸೇವನೆಗೆ ಪ್ರೋತ್ಸಾಹಿಸಲು
ಮುಂದಾಗಿದೆ.

ಸೂರು ಒಂದು, ಸೌಲಭ್ಯ ಹಲವು: ರಾಜ್ಯ ಸರ್ಕಾರ 2019-20ನೇ ಸಾಲಿನಲ್ಲಿ ರಾಜ್ಯದ ಆಯ್ದ 11 ಜಿಲ್ಲೆಗಳಲ್ಲಿ ಮತ್ಸ್ಯದರ್ಶಿನಿ ಯೋಜನೆ ಆರಂಭಿಸಲು ಮುಂದಾಗಿದೆ. ಆಯಾ ಜಿಲ್ಲೆಗಳಲ್ಲಿ ದೊರೆಯುವ ಮೀನು ತಳಿಗಳು ಮಾತ್ರವಲ್ಲದೇ ಸಮುದ್ರದಲ್ಲಿ ದೊರೆಯುವ ಸುಮಾರು 25 ವಿವಿಧ ಜಾತಿ-ತಳಿಗಳ ಮೀನುಗಳು ವಿವಿಧ ಜಿಲ್ಲೆಗಳ ಮತ್ಸ್ಯದರ್ಶಿನಿ ಕೇಂದ್ರದಲ್ಲಿ ಮೀನು ಆಹಾರ ಪ್ರಿಯರಿಗೆ ಸುಲಭವಾಗಿ ಲಭ್ಯವಾಗಲಿದೆ. ಮತ್ತೂಂದೆಡೆ ಸಮುದ್ರ ತೀರದ ಮೀನುಗಾರಿಕೆಯಲ್ಲಿ ಲಭ್ಯವಾಗುವ ಮೀನುಗಳಿಗೆ ವ್ಯಾಪಕ ಮಾರುಕಟ್ಟೆ ಕಲ್ಪಿಸಲು ಕೂಡ ನೆರವಾಗಲಿದೆ.

ಮತ್ಸ್ಯದರ್ಶಿನಿಯಲ್ಲಿ ಏನೇನಿರುತ್ತೆ?: ಮತ್ಸ್ಯದರ್ಶಿನಿಯ ಒಂದು ಭಾಗದಲ್ಲಿ ಕ್ಯಾಂಟೀನ್‌ ಸೌಲಭ್ಯ ಇದ್ದು, ಮೀನಿನ ವೈವಿಧ್ಯಮಯ ಆಹಾರ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಇದರಿಂದ ಉತ್ತರ ಭಾಗದ ಜನರಿಗೆ ಸಮುದ್ರ ಮೀನು ಖಾದ್ಯ ಸೇವೆನೆಗೆ ಅವಕಾಶ ದೊರಕುತ್ತದೆ. ಮೀನು ಆಹಾರ ಸೇವನೆಗೆ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರೇರೇಪಿಸಲು ಇದು ಸಹಕಾರಿ ಆಗಲಿದೆ.

ಇದೇ ಕಟ್ಟಡದ ಆವರಣದಲ್ಲಿ ಸಾರ್ವಜನಿಕರಿಗೆ ಹಸಿ ಮೀನು ಮಾರಾಟ ವ್ಯವಸ್ಥೆಯೂ ಇರುತ್ತದೆ. ಪರಿಶುದ್ಧ ಹಾಗೂ ವೈಜ್ಞಾನಿಕ ಸ್ವರೂಪದಲ್ಲಿ ವಿವಿಧ ಬಗೆಯ ತಾಜಾ ಮೀನುಗಳನ್ನು ಕತ್ತರಿಸಿ, ನೇರವಾಗಿ ಮಾರಾಟ ಮಾಡಲಾಗುತ್ತದೆ. ಮನೆಗಳಲ್ಲಿ ಸ್ವಂತ ಮೀನು ತಯಾರಿಕೆ ಮಾಡಿಕೊಳ್ಳುವವರಿಗೆ ಗುಣಮಟ್ಟದ ಮೀನು ಪೂರೈಕೆಗೂ ಅವಕಾಶ ಸಿಗುತ್ತದೆ.
ಈ ಕಟ್ಟಡದ ಮತ್ತೂಂದು ಬದಿಯಲ್ಲಿ ಮೀನುಗಾರಿಕೆಯ ಪ್ರಮುಖ ಭಾಗ ಎನಿಸಿರುವ ಅಲಂಕಾರಿಕ ಮೀನು ಮಾರಾಟ ಹಾಗೂ ಮೀನುಗಾರಿಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

ಒಂದೇ ಸೂರು: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇಂಥ ಎಲ್ಲ ಸೌಲಭ್ಯಗಳು ಒಂದೇ ಸೂರಿನಲ್ಲಿ ದೊರೆಯುವ ಕಾರಣ ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಎಲ್ಲ ಸೌಲಭ್ಯಗಳು ಸರ್ಕಾರಿ ಸ್ವಾಮ್ಯದ ಮೀನುಗಾರಿಕೆ ನಿಗಮದಿಂದ ದೊರೆಯುವ ಕಾರಣ ಸಾರ್ವಜನಿಕರಿಗೂ ವಿಶ್ವಾಸಾರ್ಹತೆ ಹೆಚ್ಚುತ್ತದೆ.

ಕೆಎಂಎಫ್ ಮಾದರಿಯಲ್ಲಿ ಮಳಿಗೆ: ಮತ್ತೂಂದೆಡೆ ಸರ್ಕಾರ ಮೀನು ಅಭಿವೃದ್ಧಿ ನಿಗಮದಿಂದ ಕೆಎಂಎಫ್ ಮಾದರಿಯಲ್ಲಿ ಮೀನು ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಮುಂದಾಗಿದೆ. ಆಯ್ದ ನಗರಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆದು, ಕೇವಲ ನಿಗಮದ ಮೀನು ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ವ್ಯವಸ್ಥೆ ಮಾಡುತ್ತಿದೆ.

ಪ್ರವಾಸ-ಮತ್ಸೋದ್ಯಮಕ್ಕೂ ಪೂರಕ: ವಿಜಯಪುರ ಜಿಲ್ಲೆಯ ಮಟ್ಟಿಗೆ ಮತ್ಸ್ಯ ದರ್ಶಿನಿ ಯೋಜನೆ ಪ್ರವಾಸೋದ್ಯಮಕ್ಕೂ ಪೂರಕವಾಗಿ ಕೆಲಸ ಮಾಡಲಿದೆ. ಜಿಲ್ಲೆಯ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಸರ್ಕಾರಿ ಸ್ವಾಮ್ಯದ ಮೀನು ಆಹಾರದ ಕ್ಯಾಂಟೀನ್‌ಲ್ಲಿ ಮೀನಿನ ವಿಶೇಷ ಖಾದ್ಯಗಳನ್ನು ಸವಿಯುವ ಅವಕಾಶ ದೊರಕುತ್ತದೆ. ಕಾರಣ ಒಂದೆಡೆ ಪ್ರವಾಸೋದ್ಯಮಕ್ಕೆ ಪೂರಕವಾದರೆ, ಮತ್ತೂಂದೆಡೆ ಮತ್ಸ್ಯ ದರ್ಶಿನಿ ಕ್ಯಾಂಟೀನ್‌ಗೆ ಗ್ರಾಹಕರನ್ನು ಆಕರ್ಷಿಸುವಲ್ಲಿ ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next