Advertisement

ಹೆಗಡೆ ಆದರ್ಶ ಮಾರ್ಗವೇ ನನ್ನ ರಾಜಕೀಯ ಶ್ರೀರಕ್ಷೆ: ಜಿಗಜಿಣಗಿ

04:13 PM May 24, 2019 | Team Udayavani |

ವಿಜಯಪುರ: ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗಡೆ ಅವರ
ರಾಜಕೀಯ ಗರಡಿಯಲ್ಲಿ ಬೆಳೆದ ನಾನು, ಜಾತಿ ರಹಿತ ರಾಜಕೀಯ ಮಾಡುವುದಕ್ಕೆ ಹಾಕಿಕೊಟ್ಟಿರುವ ಸಭ್ಯ ರಾಜಕೀಯವೇ ನನ್ನ ಶ್ರೀರಕ್ಷೆ. ಅವರ ಆದರ್ಶ ರಾಜಕೀಯ ಮಾರ್ಗದಲ್ಲೇ ನಾನು ನಡೆಯುತ್ತಿರುವುದೇ ನನ್ನ ವಿಜಯಕ್ಕೆ ಕಾರಣವಾಗಿದೆ. ಇದು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ವಿಜಯ ಸಾಧಿಸಿ, ಹ್ಯಾಟ್ರಿಕ್‌ ಬಾರಿಸಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಪ್ರತಿಕ್ರಿಯೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮಾಡಿರುವ ಸಾಧನೆಗಳು,
ದೇಶವನ್ನು ಬಲಿಷ್ಠಗೊಳಿಸಲು ಮುಂದಾದ ಕ್ರಮಗಳು, ರಾಜಕೀಯದ ಆಧಿಕಾರದಲ್ಲಿದ್ದರೂ ಸಭ್ಯತೆ ಮೆರೆಯದ ನಾನು ಜನತೆಯ ಮಟ್ಟಿಗೆ ಸಾಮಾನ್ಯ
ವ್ಯಕ್ತಿಯಂತೆ ಇದ್ದೇನೆ.

ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕಾಗಿ ಚಿಕ್ಕೋಡಿ ಕ್ಷೇತ್ರಕ್ಕೆ ಕಾಲಿಟ್ಟ ನನಗೆ ಅಲ್ಲಿನ ಜನತೆ ಜನತೆ ಬುನಾದಿ ಹಾಕಿದರು. ನಂತರ ತವರು
ಕ್ಷೇತ್ರ ವಿಜಯಪುರ ಜಿಲ್ಲೆಯ ಮತದಾರ ನನ್ನ ರಾಜಕೀಯ ಜೀವನದ ಬೃಹತ್‌
ವ್ಯಕ್ತಿತ್ವ ರೂಪಿಸುವಲ್ಲಿ ನೆರವಾದರು. ಹೀಗಾಗಿ ನನ್ನ ಗೆಲುವು ಜಿಲ್ಲೆಯ ಜನತೆಯ ಗೆಲುವು, ಕಾರ್ಯಕರ್ತರ ಗೆಲುವು ಎಂದು ಸಮರ್ಪಣಾ ಭಾವ ತೋರಿದರು. ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಗೌರವ ತಂದುಕೊಟ್ಟವರು ಪ್ರಧಾನಿ ನರೇಂದ್ರ ಮೋದಿ. ದೇಶ ಶುದ್ಧ ಹಸ್ತ ಪ್ರಧಾನಿಯನ್ನು ಚೋರ್‌ ಎಂದು ಜರಿದ ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಮಣ್ಣು ಮುಕ್ಕುವ ಮೂಲಕ ಇದೀಗ ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಮತದಾರ ಜನಾದೇಶ ನೀಡಿದ್ದಾನೆ. ಸೋಲಿನ ಸಂಕಷ್ಟ ಅರಗಿಸಿಕೊಳ್ಳಲಾಗದೇ ಮತಯಂತ್ರದ ಲೋಪ-ದೋಷ ಎಂದೆಲ್ಲ ದೂರಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ದೇಶದ ಮಹಾ ಜನತೆ ಜೆಡಿಎಸ್‌ ವರಿಷ್ಠ-ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸತತ 6 ಬಾರಿ ಸಂಸದರಾಗಿದ್ದ ಕೆ.ಎಚ್‌. ಮುನಿಯಪ್ಪ, ಕೇಂದ್ರ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ವೀರಪ್ಪ ಮೋಯ್ಲಿ ಅವರಂಥ ನಾಯಕರನ್ನೆಲ್ಲ ಈ ಚುನಾವಣೆಯಲ್ಲಿ ಮನೆಗೆ ಕಳಿಸುವ ಮೂಲಕ ದೇಶಕ್ಕೆ ಅಭಿವೃದ್ಧಿ ಬೇಕು ಎಂಬುದನ್ನು ಮತ್ತೊಮ್ಮೆ ತೀರ್ಪು ನೀಡಿದ್ದಾರೆ ಎಂದರು.

ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿರಂತರ ಬೆಂಬಲಿಸುತ್ತ ಬಂದಿದ್ದ ಕಬ್ಬಲಿಗರು, ಬಂಜಾರಾ ಹಾಗೂ ಮುಸ್ಲಿಂ ಸಮುದಾಯ ಕೈ ಬಿಡುವ ಮೂಲಕ ತಕ್ಕ ಪಾಠ ಕಲಿಸಿದೆ. ತಮ್ಮ ಸಮುದಾಯವನ್ನು ಎಸ್ಟಿ ಮೀಸಲು ಸೌಲಭ್ಯ ಕಲ್ಪಿಸದ್ದಕ್ಕೆ ಕಬ್ಬಲಿಗರು, ಖಮರುಲ್‌ ಇಸ್ಲಾಂ ಅವರನ್ನು ಸಚಿವರನ್ನಾಗಿ ಮಾಡದ ಕಾರಣ ಅಸಮಧಾನಗೊಂಡ ಮುಸ್ಲಿಂ ಸಮುದಾಯ ಹಾಗೂ ಈ ಬಾರಿ ಬಂಜರಾ ಸಮುದಾಯದ ಪ್ರಭಲ ಅಭ್ಯರ್ಥಿ ಕಣಕ್ಕೆ ಇಳಿದ ಕಾರಣ ಲಂಬಾಣಿಗರು ಕೈಕೊಟ್ಟರು. ಈ ಕಾರಣಗಳಿಂದ ಖರ್ಗೆ ಅವರು ಸೋಲುವ ದುಸ್ಥಿತಿ ಬಂತು ಎಂದು ವಿಶ್ಲೇಷಿದರು.

Advertisement

ಇನ್ನು ಮುಖ್ಯಮಂತ್ರಿ ಅಧಿಕಾರದ ಆಸೆಗೆ ಕಾಂಗ್ರೆಸ್‌ ಜೊತೆ ಕೈ ಜೋಡಿಸಿದ ಜೆಡಿಎಸ್‌ ನಾಯಕರು ಹಾಗೂ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಣ್ಣು
ಮುಕ್ಕಿದರು. ಈ ಹಂತದಲ್ಲಿ ರಾಜ್ಯದ ದುರ್ಬಲ ಸರ್ಕಾರವನ್ನು ಯಾರೂ ಪತನಾ ಮಾಡಲು ಯತ್ನಿಸಬೇಕಿಲ್ಲ. ಈ ಸರ್ಕಾರ ತಾನೇ ತಾನಾಗಿ ಬೀಳಲಿರುವ ಕಾರಣ ಇದನ್ನು ಸೋಲಿಸಲು ಯಾರೂ ಪ್ರಯತ್ನಿಸಬೇಕಿಲ್ಲ ಎಂದರು. ಈಗಾಗಲೇ ನಾನು ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಸಚಿವನಾಗಿ ಸೇವೆ ಸಲ್ಲಿಸಿರುವ ಕಾರಣ ಮತ್ತೆ ಸಚಿವನನ್ನಾಗಿ ಮಾಡಿ ಎಂದು ಕೇಳುವುದಿಲ್ಲ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ. ಹೀಗಾಗಿ ಮತ್ತೆ ಮಂತ್ರಿ ಆಗುವ ಆಸೆ ನನಗಿಲ್ಲ. ಪಕ್ಷ ನನಗೆ ಎಲ್ಲವನ್ನೂ ನೀಡಿದ್ದು, ಸಚಿವ ಸ್ಥಾನ ಕೊಡದಿದ್ದರೆ ಬೇಸರವೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next