Advertisement

ಜಲ ಸಂರಕ್ಷಣೆ ಖುದ್ದು ವೀಕ್ಷಿಸಿದ ಕೇಂದ್ರ ತಂಡ

10:49 AM Jul 19, 2019 | Naveen |

ವಿಜಯಪುರ: ನೀರಿನ ಕೊರತೆ ಹಾಗೂ ಜಲಸಂರಕ್ಷಣಾ ಕ್ರಮಗಳ ಕುರಿತು ವಸ್ತುಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರದ ಜಲಶಕ್ತಿ ಅಭಿಯಾನದ ಸಮನ್ವಯ ಅಧಿಕಾರಿ ಅಜಯ ಶ್ರೀವಾಸ್ತವ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧೆಡೆ ಕೈಗೊಂಡಿರುವ ಜಲ ಸಂರಕ್ಷಣೆ ಕ್ರಮಗಳನ್ನು ಖುದ್ದು ವೀಕ್ಷಣೆ ನಡೆಸಿತು.

Advertisement

ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ಜಿಲ್ಲೆಯ ಮತ್ತು ಇಂಡಿ ತಾಲೂಕಿನ ಬರ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಇಂಡಿ ತಾಲೂಕಿನ ಅಥರ್ಗಾ, ತಡವಲಗಾ, ಗಣವಲಗಾ, ರೂಗಿ, ಬಬಲಾದ, ಹಳಗುಣಕಿ ಗ್ರಾಮಗಳಿಗೆ ಭೇಟಿ ನೀಡಿ ಕೃಷಿಹೊಂಡ, ಬಾವಿಗಳು ಹಾಗೂ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ಕೇಂದ್ರದ ವಾಣಿಜ್ಯ ಇಲಾಖೆಯ ಆರ್ಥಿಕ ಸಲಹೆಗಾರರೂ ಆಗಿರುವ ಶ್ರೀವಾಸ್ತವ ಅವರು, ರಾಷ್ಟ್ರದಲ್ಲಿ ತೀವ್ರ ಬರ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಕರ್ನಾಟಕ ರಾಜ್ಯದ ಹಾಸನ, ಬಳ್ಳಾರಿ, ವಿಜಯಪುರ ಜಿಲ್ಲೆಗಳನ್ನು ಜಲಶಕ್ತಿ ಅಭಿಯಾನದಡಿ ಆಯ್ಕೆ ಮಾಡಲಾಗಿದೆ.

ಜಲಶಕ್ತಿ ಅಭಿಯಾನದ ಅನುಷ್ಠಾನಕ್ಕಾಗಿ ಜಿಲ್ಲೆಯ ಪರಿಸ್ಥಿತಿ ಅಧ್ಯಯನ ನಡೆಸಲು ಮುಂದಾಗಿದೆ. ಅಥರ್ಗಾ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕೃಷಿ ಹೊಂಡ ಪರಿಶೀಲನೆ ನಡೆಸಿ, ಅವಶ್ಯಕ ಮಾಹಿತಿ ಪಡೆದರು. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ತಡವಲಗಾ ಗ್ರಾಮದಲ್ಲಿ ಬೇವಿನತೋಪು ವೀಕ್ಷಣೆ ನಡೆಸಿದರು. ಇಂಡಿ ಸೇರಿದಂತೆ ಜಿಲ್ಲಾದ್ಯಂತ 70 ಬೇವಿನತೋಪು ಬ್ಲಾಕ್ಸ್‌ ನಿರ್ಮಿಸಲಾಗಿದೆ. ಕೊಳವೆಬಾವಿ ತೋಡಲು ಅನುದಾನದ ಅವಶ್ಯಕತೆ ಇದೆ. ಇದಲ್ಲದೇ ತಡವಲಗಾ ಗ್ರಾಮದಲ್ಲಿ 27 ಹೆಕ್ಟೇರ್‌ ಜಮೀನಿನಲ್ಲಿ 5,400 ಬೇವಿನ ಸಸಿಗಳನ್ನು ನೆಡಲಾಗಿದೆ. ಅದರಂತೆ ಜಿಲ್ಲಾದ್ಯಂತ ಈ ಸಸಿಗಳನ್ನು ನೆಡಲಾಗುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.

Advertisement

ಅದರಂತೆ ಗಣವಲಗಾ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ನಾಲಾ ಬಂಡಿಂಗ್‌ ಕಾಮಗಾರಿ ಪರಿಶೀಲಿಸಿದರು. ರೂಗಿ ಗ್ರಾಮದಲ್ಲಿ ಕೃಷಿಭಾಗ್ಯ ಯೋಜನೆಯಡಿ ರೈತರಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಬಲಾದ ಗ್ರಾಮದಲ್ಲಿ ಕೆರೆ ವೀಕ್ಷಣೆ ನಡೆಸುವ ಸಂದರ್ಭದಲ್ಲಿ ಭೀಮಾ ನದಿಯಿಂದ ನೀರಿನ ಸರಬರಾಜುವಿನಲ್ಲಿ ತೊಂದರೆ ಉಂಟಾಗುತ್ತಿದ್ದು, ಭೀಮಾ ನದಿ ನೀರಿನ ಕೊರತೆ ಉಂಟಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ರೀತಿ ಬಬಲಾದ ಗ್ರಾಮದಲ್ಲಿ ಅರಣ್ಯ ಸಸಿಗಳ ರಕ್ಷಣೆಗಾಗಿ ನಿರ್ಮಿಸಲಾದ ನೀರಿನ ಹೊಂಡವನ್ನು ಪರಿಶೀಲಿಸಿದರು.

ಈ ವೇಳೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಬರ ನಿರ್ವಹಣಾ ಚಟುವಟಿಕೆಗಳು ಹಾಗೂ ತೀವ್ರ ಬರ ಎದುರಿಸುತ್ತಿರುವ ಇಂಡಿ ತಾಲೂಕಿನ ಬರ ಪರಿಸ್ಥಿತಿ, ಕೈಗೊಂಡಿರುವ ಬರ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು. ಅದರಂತೆ ಕೃಷ್ಣಾ ನದಿಯ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಸೀಮಿತವಾಗಿ ಜಿಲ್ಲೆಯ ಪ್ರತಿ ಮನೆಗೆ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆ ಜಾರಿಗೊಂಡಲ್ಲಿ ಬಹುತೇಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಈ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ವಿವರ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next