Advertisement

ನೊಂದ 16 ಸಂತ್ರಸ್ತರಿಗೆ 13.12 ಲಕ್ಷ ರೂ. ಪರಿಹಾರ

11:08 AM Jul 01, 2019 | Naveen |

ವಿಜಯಪುರ: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ 16 ಸಂತ್ರಸ್ತರಿಗೆ ದೌರ್ಜನ್ಯ ಪ್ರಕರಣದಡಿ 13.12 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ ಎಂದು ಜಿಲ್ಲಾದಿಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು.

Advertisement

ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆ 1989ರಡಿ 2019ರ ಜನವರಿ 1ರಿಂದ ಮೇ 31ರ ವರೆಗೆ 28 ಪ್ರಕರಣಗಳು ದಾಖಲಾಗಿವೆ. ಈ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ವಿತರಿಸಲು 2018-19ನೇ ಸಾಲಿನಲ್ಲಿ 57.32 ಲಕ್ಷ ರೂ. ಹಾಗೂ 2019-20ನೇ ಸಾಲಿನಲ್ಲಿ 20 ಲಕ್ಷ ರೂ. ಸೇರಿ 77.32 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ನೊಂದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ 16 ಸಂತ್ರಸ್ತರಿಗೆ 13.12 ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. 12 ಪ್ರಕರಣಗಳಲ್ಲಿ ಪರಿಹಾರ ಧನ ನೀಡಲು ಅಗತ್ಯ ದಾಖಲೆಗಳ ಸಂಗ್ರಹ ಕಾರ್ಯ ನಡೆದಿದೆ. ಸೂಕ್ತ ದಾಖಲೆ ಪಡೆದ ಬಳಿಕ ಪರಿಹಾರ ವಿತರಣೆ ಕ್ರಮ ಕೈಗೊಳ್ಳುವುದಾಗಿ ವಿವರಿಸಿದರು.

ವಿಜಯಪುರ ಮತ್ತು ತಿಕೋಟಾ ತಾಲೂಕಿನಲ್ಲಿ ನೀರಿನಲ್ಲಿ ಸಮಸ್ಯೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ದಲಿತ ಕಾಲೋನಿಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಬಬಲೇಶ್ವರ ತಾಲೂಕಿನ ಗ್ರಾಮಗಳಲ್ಲಿ ನೀರಿನ ಯಾವುದೇ ಸಮಸ್ಯೆ ಇಲ್ಲ. ತೊರವಿ ಗ್ರಾಮದ ಶಾಲೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ದಲಿತ ಕಾಲೋನಿಗಳಲ್ಲಿ ನೀರಿನ ಸಂಪರ್ಕ ಕಡಿತದಿಂದಾಗಿ ಸಮಸ್ಯೆ ಇದ್ದು, ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

170ರಲ್ಲಿ 50 ಕೊಳವೆಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪಂಚಾಯತಿ ವ್ಯಾಪ್ತಿಯ ಕೊಳವೆಬಾವಿಗಳನ್ನು ದುರಸ್ತಿಗೊಳಿಸಿ ವೈಯಕ್ತಿಕ ಬಳಕೆಗೆ ಅವಕಾಶ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ಮಕ್ಕಳ ಪ್ರವೇಶಕ್ಕೆ ಕ್ರಮ ವಹಿಸಲಾಗುವುದು. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಿಂದ ಜಿಲ್ಲೆಯ ಯಾವೊಬ್ಬ ರೈತರು ವಂಚಿತವಾಗದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. ಧದಲಿತ ಕಾಲೋನಿಗಳಲ್ಲಿ 4 ಕೊಳವೆಬಾವಿಗಳಿದ್ದರೂ ಚಾಲ್ತಿಯಲ್ಲಿಲ್ಲ. ಈ ಕುರಿತಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಬರಬಾರದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಸುರಳಕ್‌ ಸೂಚಿಸಿದರು.

Advertisement

ಡಾ| ಬಿ.ಆರ್‌.ಅಂಬೇಡ್ಕರ್‌, ಡಾ| ಬಾಬು ಜಗಜೀವನರಾಂ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ನೀಡುವ ಮನೆಗಳಿಗೆ ಸಕಾಲದಲ್ಲಿ ಜಿಪಿಎಸ್‌ ಅಳವಡಿಸಬೇಕು. ಸಂಬಂಧಪಟ್ಟ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಬಸವನಬಾಗೇವಾಡಿ ತಾಲೂಕು ಸಾಸನೂರ ಗ್ರಾಮದ ಬಸ್‌ ನಿಲ್ದಾಣ ಹತ್ತಿರದ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದ್ಯಾಗ್ಯೂ ದಲಿತರ ಕಾಲೋನಿಯಲ್ಲಿ ಪ್ರತ್ಯೇಕವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಜನಸಂಖ್ಯೆಯಾಧಾರದ ಮೇಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಪಂ ಸಿಇಒ ಸೂಚಿಸಿದರು. ಹಾಲಿಹಾಳ ಗ್ರಾಮದ ಆಶ್ರಯ ಮನೆಗಳಿಗೆ ರಸ್ತೆ ನಿರ್ಮಾಣಕ್ಕೆ ಅಳತೆ ಕಾರ್ಯ ಮುಗಿದಿದೆ. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗ ಖರೀದಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಯಿತು.

ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳಲ್ಲಿ ಪೊಲೀಸ್‌ ಇಲಾಖೆಯಿಂದ ಕುಂದು-ಕೊರತೆ ಸಭೆಗಳನ್ನು ನಿಗದಿತ ದಿನಾಂಕಗಳಲ್ಲಿ ನಡೆಸದಿರುವ ಕುರಿತು ಸಮಿತಿ ಸದಸ್ಯರು ಸಭೆ ಗಮನಕ್ಕೆ ತಂದಾದ ಈ ಕುರಿತಂತೆ 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಜಿಲ್ಲೆಯ ಎಲ್ಲ ಪೊಲೀಸ್‌ ಇಲಾಖೆ ಠಾಣೆ ವ್ಯಾಪ್ತಿಯಲ್ಲಿ ಕುಂದು-ಕೊರತೆ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋದ್ದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next