Advertisement

44 ಸಂತ್ರಸ್ತರಿಗೆ 52 ಲಕ್ಷ ರೂ. ಪರಿಹಾರ ವಿತರಣೆ

01:30 PM Mar 13, 2020 | Naveen |

ವಿಜಯಪುರ: ಜಿಲ್ಲಾದ್ಯಂತ 2019ರ ಜನೆವರಿ 1ರಿಂದ ಡಿಸೆಂಬರ್‌ 31ರ ವರೆಗೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ದೌರ್ಜನ್ಯಕ್ಕೀಡಾದ 44 ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ 52.67 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ವಿವರ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾದ್ಯಂತ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಯಂತ್ರಣದ ಕುರಿತು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ವಿಶೇಷ ಗಮನ ನೀಡಬೇಕು. ಅದರಂತೆ ದೌರ್ಜನ್ಯದಲ್ಲಿ ನೊಂದ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕುರಿತು ಸೂಕ್ತ ಅರಿವು ಮೂಡಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಜನರಿಗೆ ಹೊಸೂರ ಗ್ರಾಮ, ಬ್ಯಾಲ್ಯಾಳ ಗ್ರಾಮ ಸೇರಿದಂತೆ ಅವಶ್ಯಕತೆ ಇರುವ ಕಡೆ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಅಲ್‌ ಆಮೀನ್‌ ಮೆಡಿಕಲ್‌ ಕಾಲೇಜ್‌ ಎದುರು ಇರುವ ಸರ್ಕಾರಿ ಜಮೀನು ಅತಿಕ್ರಮಿಸಿ ಮಳಿಗೆ ನಿರ್ಮಿಸಿರುವ ಕುರಿತಂತೆ ಸದಸ್ಯರಿಂದ ಬಂದ ದೂರಿನ ಹಿನ್ನೆಲೆ ಐವರು ಅಧಿಕಾರಿಗಳನ್ನು ಒಳಗೊಂಡ ಸದಸ್ಯರ ಸಮಿತಿ ರಚಿಸಿ ಪರಿಶೀಲಿಸಬೇಕು. ಹಾಲ್ಯಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ರಸ್ತೆ ಸಮಸ್ಯೆ ನಿವಾರಣೆಗಾಗಿ ಅವಶ್ಯಕವಿರುವ ಜಮೀನಿನ ಕುರಿತು ಮಾ.16ರೊಳಗೆ ಜಮೀನು ದರ ನಿಗದಿಪಡಿಸಿ ಖರೀದಿಗೆ ಪ್ರಯತ್ನಿಸಬೇಕು. ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸಹಕಾರ ನೀಡಬೇಕು. ಅಗತ್ಯ ಇದ್ದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾದ್ಯಂತ 2019ರಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಜನಾಂಗದ ಮೇಲೆ 49 ದೌರ್ಜನ್ಯ ಪ್ರಕರಣಗಳು ನಡೆದಿದ್ದು, 44 ಪ್ರಕರಣಗಳಲ್ಲಿ 52.67 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗಿದೆ. ವಿವಿಧ ಹಂತದಲ್ಲಿರುವ ಬಾಕಿಯಿರುವ 3 ಪ್ರಕರಣಗಳಿಗೆ ಪರಿಹಾರ ಧನ ವಿತರಿಸುವುದು ಬಾಕಿ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ವಿವರಿಸಿದರು.

2020ರ ಜನವರಿ 1ರಿಂದ ಫೆಬ್ರುವರಿ 29ರ ವರೆಗೆ ಪರಿಶಿಷ್ಟರ ಮೇಲೆ ನಡೆದ 13 ದೌರ್ಜನ್ಯ ಪ್ರಕರಣಗಳಲ್ಲಿ 6 ಪ್ರಕರಣಗಳಿಗೆ ಸಂತ್ರಸ್ತರಿಗೆ 2.50 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. ಬಾಕಿಯಿರುವ 7 ಪ್ರಕರಣಗಳಲ್ಲಿ ಪರಿಹಾರ ಧನ ವಿತರಿಸಬೇಕಾಗಿದೆ. ಅದರಂತೆ 2019ರಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1989 ಅಡಿಯಲ್ಲಿ 161 ಪ್ರಕರಣಗಳಲ್ಲಿ 42 ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ. 2020ರಲ್ಲಿ 16 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

Advertisement

ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ ಅಗರವಾಲ್‌, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಡಿವೆಪ್ಪ ಸಾಲಗಲ್‌, ಅರವಿಂದ ಸಾಲವಾಡಗಿ, ರಾಜಶೇಖರ ಕೂಚಬಾಳ, ಮುತ್ತಣ್ಣ ಸಾಸನೂರ, ಮನೋಹರ ಕಾಂಬಳೆ, ಬಸವರಾಜ ಪೂಜಾರಿ, ವಿನಾಯಕ ಗುಣಸಾಗರ, ಪರಶುರಾಮ ಮಾದರ, ಶಿವಾನಂದ ಪಟ್ಟೇದ, ಗಣಪತಿ ಬಾನಿಕೋಲ, ಸುರೇಶ ಮಣೂರ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next