Advertisement

ಪುರಾತತ್ವ ಇಲಾಖೆಯಿಂದ ಕಂದಕ ಸ್ವಚ್ಛತೆ

03:22 PM Sep 18, 2019 | Team Udayavani |

ಜಿ.ಎಸ್‌.ಕಮತರ
ವಿಜಯಪುರ:
ತ್ಯಾಜ್ಯಗಳಿಂದಾಗಿ ಕೊಳಕು ನೀರಿನಿಂದ ದುರ್ವಾಸನೆ ಹರಡಿಕೊಂಡಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನಮಹಲ್ ಕಂದಕದ ಕಡೆಗೆ ಕೊನೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಣ್ತೆರೆದಿದೆ. ತ್ಯಾಜ್ಯಗಳಿಂದಾಗಿ ಮಾಲಿನ್ಯ ಸೃಷ್ಟಿಸಿ ಐತಿಹಾಸಿಕ ಗಗನಮಹಲ್ ಕಂದಕದ ಕಸ ತೆಗೆಯವುದಕ್ಕಾಗಿ ಸ್ವಚ್ಛತೆಗೆ ಕೈ ಹಾಕಿದೆ.

Advertisement

ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ದುಸ್ಥಿತಿ ಕುರಿತು ಉದಯವಾಣಿ ಪತ್ರಿಕೆ ಆರಂಭಿಸಿರುವ ಸರಣಿ ವರದಿಗಳ ಪ್ರವಾಸೋದ್ಯಮ ಕಥೆ-ವ್ಯಥೆ ಅಭಿಯಾನಕ್ಕೆ ಸ್ಪಂದನೆ ವ್ಯಕ್ತವಾಗಿದೆ. ಸೆ. 2ರಂದು ಪತ್ರಿಕೆಯಲ್ಲಿ ‘ಸ್ಮಾರಕಗಳ ಮೌಲ್ಯ ಕಳೆಯುತ್ತಿರುವ ಕೊಳಕು’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಕಂದಕದ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಕಂದಕದಲ್ಲಿ ಬೋಟಿಂಗ್‌ ಆರಂಭಿಸುವುಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿರೋಧ ಒಡ್ಡಿರುವ ಭಾರತೀಯ ಪುರಾತತ್ವ ಇಲಾಖೆಯ ವಿಜಯಪುರ ಪೂರ್ವ ವಿಭಾಗದ ಸ್ಮಾರಕ ಸಂರಕ್ಷಣಾಧಿಕಾರಿ ಜಿಲ್ಲಾಡಳಿತಕ್ಕೆ ಬೋಟಿಂಗ್‌ ಆರಂಭಿಸದಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಕರಾರು ತೆಗೆದಿದ್ದಾರೆ.

ಇದರ ಮಧ್ಯೆ ಜಿಲ್ಲಾಡಳಿತದ ನಡೆಗೆ ಸಾರ್ವಜನಿಕರಿಂದ ಸ್ಪಂದನೆ ವ್ಯಕ್ತವಾಗಿದ್ದು, ಬೋಟಿಂಗ್‌ ನಡೆಸಲು ತಕರಾರು ತೆಗೆದಿರುವ ಪುರಾತತ್ವ ಇಲಾಖೆ ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ತನ್ನ ಸ್ಮಾರಕ ಇರುವ ಕಂದಕದಲ್ಲಿ ಬೋಟಿಂಗ್‌ ಆರಂಭಿಸಲು ತಕರಾರು ಮಾಡುವ ಪುರಾತತ್ವ ಇಲಾಖೆ ಅಧಿಕಾರಿಗಳು, ಗಗನಮಹಲ್ ಸುತ್ತಲಿನ ಕಂದಕ ಪ್ರದೇಶದಲ್ಲಿ ಮಾಲಿನ್ಯ ತಡೆಗೆ ಮುಂದಾಗಿಲ್ಲ. ಸದರಿ ಪ್ರದೇಶದಲ್ಲಿ ನಡೆಯುವ ನಿಯಮ ಬಾಹಿರ ಕೆಲಸಗಳಿಗೆ ಕಡಿವಾಣ ಹಾಕಲು ಮುಂದಾಗಿಲ್ಲ. ಕನಿಷ್ಠ ಕಂದಕದಲ್ಲಿನ ಕೊಳೆ ತೆಗೆದು, ದುರ್ವಾಸನೆಗೆ ಮುಕ್ತಿ ಕಂಡುಕೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು.

ಪತ್ರಿಕೆಯಲ್ಲಿ ವರದಿ ಆಗುತ್ತಲೇ ಎಚ್ಚೆತ್ತಿರುವ ಪುರಾತತ್ವ ಇಲಾಖೆಯ ವಿಜಯಪುರ ಪೂರ್ವ ವಿಭಾಗದ ಅಧಿಕಾರಿಗಳು ತನ್ನ ಇಲಾಖೆಯ ಸ್ವಚ್ಛತಾ ಸಿಬ್ಬಂದಿಯನ್ನು ಸೋಮವಾರ ಏಕಾಏಕಿ ಗಗನಮಹಲ್ ಸ್ಥಳ ಸ್ವಚ್ಛತೆಗೆ ಕರೆ ತಂದಿದೆ. ಗಗನಮಹಲ್ ಸುತ್ತಲಿನ ಮುಳ್ಳುಕಂಟಿ, ಕಸದಂಥ ತ್ಯಾಜ್ಯ ವಿಲೆವಾರಿ ಮಾಡಲು ಆಸಕ್ತಿ ತೋರುವ ಮೂಲಕ ತುಕ್ಕು ಹಿಡಿದಿದ್ದ ಸಲಿಕೆ-ಗುದ್ದಲಿಗೆಗಳಿಗೆ, ಕೊಡಲಿ-ಕುಡಗೋಲುಗಳಿಗೆ ಹೊಳಪು ನೀಡಲು ಮುಂದಾಗಿದ್ದಾರೆ.

Advertisement

ಇಲಾಖೆ 15 ಸಿಬ್ಬಂದಿ ಅಲ್ಲದೇ ದಿನಗೂಲಿಯ 25 ಕಾರ್ಮಿಕರನ್ನು ಬಳಸಿಕೊಂಡು ಸ್ವಚ್ಛತೆಗೆ ಇಳಿದಿದೆ. ಅರೆಕಿಲ್ಲಾ ಕಂದಕ ಮಾತ್ರವಲ್ಲ ಗೋಲಗುಂಬಜ್‌ ಪ್ರದೇಶದಲ್ಲೂ ಬರುವ 15 ದಿನಗಳ ಕಾಲ ನಿರಂತರ ಸ್ವಚ್ಛತೆ ಅಭಿಯಾನ ಹಮ್ಮಿಕೊಂಡಿದ್ದೇವೆ. ಸ್ಮಾರಕಗಳ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಪುರಾತತ್ವ ಇಲಾಖೆ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಉದಯವಾಣಿ ಪತ್ರಿಕೆ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಐತಿಹಾಸಿಕ ಸ್ಮಾರಕಗಳ ದುಸ್ಥಿತಿ ಕುರಿತು ವಿಶೇಷ ಸರಣಿ ವರದಿಗಳ ಮೂಲಕ ಬೆಳಕು ಚೆಲ್ಲುತ್ತಲೇ ಪುರಾತತ್ವ ಇಲಾಖೆ ಮೇಲಧಿಕಾರಿಗಳ ಕಣ್ಣು ಕೆಂಪಾಗಿವೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ಭಾರತೀಯ ಪುರಾತತರ್ವ ಇಲಾಖೆಯ ಧಾರವಾಡ ವಲಯದ ಅಧೀಕ್ಷಕರು, ಇಲಾಖೆಯ ಯಾವುದೇ ಅಧಿಕಾರಿ, ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಕಟ್ಟುನಿಟ್ಟಾಗಿ ತಾಕೀತು ಮಾಡಿ ಬಾಯಿ ಮುಚ್ಚಿಸಿದೆ.

ಧಾರವಾಡ ವಲಯದ ಅಧಿಕಾರಿಗಳು ಸುತ್ತೋಲೆ ಮೂಲಕ ತನ್ನ ಕೆಳ ಹಂತದ ಅಧಿಕಾರಿ-ಸಿಬ್ಬಂದಿಗಳ ಬಾಯಿಗೆ ಬೀಗ ಹಾಕುವುದಕ್ಕೆ ತೋರಿದ ಆಸಕ್ತಿ ಹಾಗೂ ಕಾಳಜಿಯನ್ನು ಸ್ಥಳೀಯವಾಗಿ ಇರುವ ಸಮಸ್ಯೆಗಳ ಪರಿಹಾರಕ್ಕೆ ತೋರಬೇಕು. ಸ್ಮಾರಕಗಳನ್ನು ದುಸ್ಥಿತಿಯಿಂದ ಕಾಪಾಡಲು ಸ್ಥಳೀಯರ ಸಹಕಾರದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರಿಂದ ಆಗ್ರಹಗಳು ಕೇಳಿ ಬರತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next