Advertisement

ಕಾಡುವ ವರ್ತನೆಗಳ ಪರಿವರ್ತನೆಗೆ ಕಲ್ಯಾಣ

10:20 AM Jul 05, 2019 | Naveen |

ವಿಜಯಪುರ: ಪ್ರಸಕ್ತ ಸಮಾಜದಲ್ಲಿ ನಮ್ಮಲ್ಲಿನ ಭಾವನೆಗಳು ಸತ್ತು ಹೋಗಿದ್ದು, ನಮ್ಮ ತಲೆಯನ್ನು ಪರರಿಗೆ ಮಾರಿಕೊಂಡು ನಮ್ಮ ಅಸ್ಮಿತೆ ನಾಶ ಮಾಡಿಕೊಂಡಿದ್ದೇವೆ. ಹೀಗಾಗಿ ಇದೀಗ ದೇಶವನ್ನು ಕಾಡುತ್ತಿರುವ ವರ್ತನೆಗಳನ್ನು ಪರಿವರ್ತನೆ ಮಾಡುವುದು ಇಂದಿನ ಜರೂರಾಗಿದೆ. ಇದಕ್ಕಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಂಡರಗಿಯ ನಿಜಗುಣಪ್ರಭು ಶ್ರೀಗಳು ಅಭಿಪ್ರಾಯಪಟ್ಟರು.

Advertisement

ನಗರದ ಬಿ.ಎಲ್.ಡಿ.ಇ ಹಳಕಟ್ಟಿ ಭವನ-2ರಲ್ಲಿ ಸಾಣೇಹಳ್ಳಿ ಪಂಡಿರಾದ್ಯ ಶಿವಾಚಾರ್ಯ ಶ್ರೀಗಳ ಸಹಮತ ವೇದಿಕೆಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಇಂದು ಇಡೀ ದೇಶಾದ್ಯಂತ ಯುವಕರಲ್ಲಿ ವಿಷಮ ಶೀತ ಜ್ವರ ಆವರಿಸಿ, ಎಲ್ಲರೂ ಬಳಲುತ್ತಿದ್ದಾರೆ. ದೇಶ ಕಟ್ಟುವ ನಿಜವಾದ ವಿಷಯಗಳನ್ನು ಮರೆಮಾಚಿ, ಎಲ್ಲರೂ ಸಾಮಾಜಿಕ ಜಾಲತಾಣಗಳ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

1995ರ ನಂತರದಲ್ಲಿ ಹುಟ್ಟಿದವರು ದೇಶದ ವಾಸ್ತವಿಕ ಚಿತ್ರಣವನ್ನೇ ಮರೆತಿದ್ದಾರೆ. ಮೊದಲು ದೇಶದಲ್ಲಿ ಭಾವೈಕ್ಯತೆ ಎಂಬುದು ಎಲ್ಲರ ನರ-ನಾಡಿಗಳಲ್ಲಿ ಇತ್ತು. ಮುಸ್ಲಿಂ ಕವಿ ಇಕ್ಬಾಲ್ ಬರೆದ ಸಾರೆ ಜಹಾಂಸೆ ಅಚ್ಚಾ, ಹಿಂದೂ ಸಿತಾ ಹಮಾರಾ ಗೀತೆಯನ್ನು ಹಾಡುವಾಗ ಬರೆದ ಕವಿಯನ್ನು ನೆನಪಿಸದ ಸ್ಥಿತಿಗೆ ನಾವು ಬಂದಿದ್ದೇವೆ. ಆ ಕಾರಣಕ್ಕಾಗಿ ಮತ್ತೆ ಕಲ್ಯಾಣ ಅವಶ್ಯಕತೆ ಇದೆ ಎಂದರು.

ಚಿಂತನ ಸಾಂಸ್ಕೃತಿಕ ಬಳಗ ಕಾರ್ಯದರ್ಶಿ ಡಾ| ಮಹಾಂತೇಶ ಬಿರಾದಾರ ಮಾತನಾಡಿ, ಬಸವಾದಿ ಶರಣರ ಆಶಯಗಳಂತೆ ನಡೆದಿರುವ ತರಳಬಾಳು ಮಠ ಹೆಜ್ಜೆ ಹಾಕುತ್ತಿದೆ. ಇದರ ಶಾಖಾ ಮಠವಾದ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲೀಗ ನಾಡಿನ ವಿವಿಧ ಮಠಾಧೀಶರ, ಚಿಂತಕರ, ಸಾಹಿತಿಗಳ, ಕಲಾವಿದರ ಮುಂದಾಳತ್ವದಲ್ಲಿ ಚಳವಳಿ ರೂಪದಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ರೂಪಿಸಲಾಗಿದೆ. ಈ ಚಳವಳಿ ನಾಡಿನ ಮನೆ-ಮನಗಳಿಗೆ ಮುಟ್ಟಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಇದಕ್ಕಾಗಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಜಯಪುರದಲ್ಲಿ ಆಗಸ್ಟ್‌ 28ರಂದು ನಡೆಯಲಿದೆ ಎಂದರು.

ಅಖೀಲ ಭಾರತ ವೀರಶೈವ ಮಹಾಸಭೆಯ ವಿ.ಸಿ. ನಾಗಠಾಣ ಮಾತನಾಡಿ, ಬಸವನಾಡಿನ ನಾವುಗಳು ಅಭಿಮಾನ ಶೂನ್ಯರಾಗಿದ್ದೇವೆ. ಹಿಂದೆ ಬೀದರನ ಮೀರಾಜುದ್ದೀನ್‌ ಪಟೇಲ್ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದಾಗ, ಬಸವ ಜಯಂತಿ ಹಿಂದಿನ ದಿನವೇ ಬಂದು ವಾಸ್ತವ್ಯ ಮಾಡಿದ್ದರು. ಮಾರನೇ ದಿನ ಕಾರ್ಯಕ್ರಮದಲ್ಲಿ ಬಂದವರು ಬೆರಳೆಣಿಕೆಯ ಜನ. ಅವರು ಗಾಬರಿಗೊಂಡು ಬೀದರನಲ್ಲಿ ಬಸವ ಜಯಂತಿಗೆ ಸೇರುವ ಹತ್ತರಷ್ಟು ಜನ ಇಲ್ಲಿ ಸೇರಿಲ್ಲ. ಇದು ಬಸವ ಜನ್ಮಭೂಮಿ. ಇಲ್ಲಿಯೇ ಹೀಗಾದರೇ ಬಸವಣ್ಣನವರನ್ನು ಉಳಿಸುವವರು ಯಾರು ಎಂದು ಪ್ರಶ್ನಿಸಿದ್ದರು ಎಂದು ಸ್ಮರಿಸಿದರು.

Advertisement

ಅಮ್ಮನ ಮಡಿಲು ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ದೇವರಾಜ್‌ ಅರಸು ವಿಚಾರ ವೇದಿಕೆಯ ಸೋಮನಾಥ ಕಳ್ಳಿಮನಿ, ದಲಿತ ಸಂಘಟನೆಗಳ ಒಕ್ಕೂಟದ ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ದಲಿತ ವಿದ್ಯಾರ್ಥಿ ಒಕ್ಕೂಟದ ಶ್ರೀನಾಥ ಪೂಜಾರಿ, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ವಚನಪಿತಾಮಹ ಡಾ| ಫ‌.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ| ಎಂ.ಎಸ್‌.ಮದಭಾವಿ, ಎ.ಬಿ.ಬೂದಿಹಾಳ, ಟಿಪ್ಪು ಸಂಘರ್ಷ ಸಮಿತಿ ಇರ್ಫಾನ್‌ ಶೇಖ ಮಾತನಾಡಿದರು.

ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಶ್ರೀಗಳು, ಬಸವನ ಬಾಗೇವಾಡಿ ಸಿದ್ದಲಿಂಗ ಶ್ರೀಗಳು, ರಾಷ್ಟ್ರೀಯ ಬಸವಸೇನೆ ರವಿಕುಮಾರ ಬಿರಾದಾರ, ಉದ್ಯಮಿ ಎಸ್‌.ಎಚ್. ನಾಡಗೌಡ, ಎನ್‌.ಕೆ. ಕುಂಬಾರ, ಬಿ.ಕೆ. ಗೊಟ್ಯಾಳ, ಬಿ.ಎಂ.ಪಾಟೀಲ, ಶಂಕರ ಬೈಚಬಾಳ, ಭೀಮಣ್ಣ ಹಳೆಮನಿ, ಗಂಗಾಧರ ಜೋಗುರ, ಸರ್ಫಾರಾಜ್‌ ಬೀಳಗಿ, ಮ.ಗು. ಯಾದವಾಡ, ಪ್ರಶಾಂತ ಹಿರೆದೇಸಾಯಿ, ನಿಂಗಪ್ಪ ಸಂಗಾಪುರ, ಅನಿಲ ಸೂರ್ಯವಂಶಿ, ಶಂಕರ ತಳವಾರ, ಶರಣಬಸು ಅವಜಿ, ಬಸವರಾಜ ಬಿರಾದಾರ, ಎ.ಎಸ್‌. ಪಾಟೀಲ, ಡಾ| ವಿ.ಡಿ. ಐಹೊಳ್ಳಿ ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next