Advertisement

ಫಲಿತಾಂಶ ಹೆಚ್ಚಳಕ್ಕೆ ಮಕ್ಕಳಿಗೆ ಪ್ರೋತ್ಸಾಹಿಸಿ

12:25 PM Jul 21, 2019 | Naveen |

ವಿಜಯಪುರ: ಶಾಲಾ ಮಕ್ಕಳ ಫಲಿತಾಂಶ ಹೆಚ್ಚಿಸಲು ಸಹಾಯ ಹಸ್ತದ ಅವಶ್ಯಕತೆಯಿರುವ ಮಕ್ಕಳಿಗೆ ಪೂರ್ವಭಾವಿಯಾಗಿ ಗುರುತಿಸಿ ಪರೀಕ್ಷೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸನ್ನದ್ಧರನ್ನಾಗಿ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದರು.

Advertisement

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯಪುರ ಜಿಲ್ಲೆಯ ಸುಪ್ರಿಯಾ ಜೋಶಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ ಜಿಲ್ಲೆ ಕೀರ್ತಿ ಹೆಚ್ಚಿಸಿದ್ದಾರೆ. ಇವರನ್ನು ಮಾದರಿಯಾಗಿಸಿಕೊಂಡು ಅಧ್ಯಯನ ನಡೆಸುವಂತೆ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕಳೆದ 2013ರಿಂದ 2018ರವರೆಗೆ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪರಿಶೀಲಿಸಿದಾಗ ಏರು-ಪೇರು ಕಾಣಬಹುದಾಗಿದೆ. ಪರೀಕ್ಷೆಗೆ ಮಕ್ಕಳನ್ನು ಶಿಸ್ತುಬದ್ಧ ಹಾಗೂ ವ್ಯವಸ್ಥಿತ ರೀತಿಯಲ್ಲಿ ಸನ್ನದ್ಧಗೊಳಿಸಿದ್ದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಫಲಿತಾಂಶ ಸುಧಾರಣೆ ಮಾತ್ರವಲ್ಲ ಉತ್ತಮ ಫಲಿತಾಂಶವನ್ನೇ ಪಡೆಯಲು ಸಾಧ್ಯವಿದೆ.

ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ನಕಲು ಸೇರಿದಂತೆ ಯಾವುದೇ ರೀತಿಯ ಪರೀಕ್ಷಾ ಅಕ್ರಮ ನಡೆಸದಂತೆ ಮಾರ್ಗದರ್ಶನ ಮಾಡಬೇಕಿದೆ. ನಿರಂತರ ಓದು ಉತ್ತಮ ಫಲಿತಾಂಶ ತಂದುಕೊಡಲಿದೆ ಎಂಬ ವಿಶ್ವಾಸ ಮೂಡಿಸಬೇಕಿದೆ. ಪಾರದರ್ಶಕ ಪರೀಕ್ಷೆ ಎದುರಿಸಿದಲ್ಲಿ ಉತ್ತಮ ಫಲಿತಾಂಶ ಪಡೆಯುವುದು ಹೇಗೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ನಕಲು ಮುಕ್ತ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರೀಕ್ಷಿತ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ಮನದಟ್ಟು ಮಾಡಿ ಎಂದರು.

Advertisement

ಯಾವುದೇ ಪರೀಕ್ಷೆ ಇದ್ದರೂ ಸಮರ್ಥವಾಗಿ ಎದುರಿಸುವ ವಿಧಾನಗಳ ಕುರಿತು ಮಕ್ಕಳಿಗೆ ತಿಳಿಸಿ ಹೇಳಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವದಲ್ಲೇ ಶೈಕ್ಷಣಿಕವಾಗಿ ಹಿಂದಿರುವ ಮಕ್ಕಳಿಗೆ ಹೆಚ್ಚಿನ ಮಾರ್ಗದರ್ಶನ ಅಗತ್ಯ ಇರುವ ವಿಷಯಗಳ ಕುರಿತು ಹೆಚ್ಚಿನ ತರಬೇತಿ ನೀಡಬೇಕು. ಪರೀಕ್ಷೆ ಎದುರಿಸುವ ಸಾಮರ್ಥ್ಯ ಕಡಿಮೆ ಇರುವ ಮಕ್ಕಳನ್ನು ಗುರುತಿಸಿ, ಪ್ರತಿ ಶಿಕ್ಷಕರು ಅಂಥ ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆದು ವಿಶೇಷ ಪಾಠಗಳನ್ನು ಮಾಡಿ ಶೈಕ್ಷಣಿಕ ಪ್ರಗತಿಯಲ್ಲಿ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಇದಲ್ಲದೇ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಶೂನ್ಯ ಫಲಿತಾಂಶ ಪಡೆದ ಹಾಗೂ ಕಡಿಮೆ ಫಲಿತಾಂಶ ಹೊಂದಿರುವ ಶಾಲೆಗಳನ್ನು ಗುರುತಿಸಿ, ಸಿಆರ್‌ಪಿ-ಬಿಆರ್‌ಪಿಗಳು ಕೂಡ ಫಲಿತಾಂಶದಲ್ಲಿ ಹಿಂದಿರುವ ಶೈಕ್ಷಣಿಕ ದತ್ತು ಪಡೆದು ಫಲಿತಾಂಶ ಸುಧಾರಣೆಗೆ ಗಮನ ನೀಡಬೇಕು. ಈ ವಿಷಯವಾಗಿ ಎಲ್ಲ ಬಿಇಒಗಳು ಹಾಗೂ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಮೂಲಕ ಅಧಿಕೃತ ಆದೇಶ ಹೊರಡಿಸುವಂತೆ ಸೂಚಿಸಿದರು. ಪವಿತ್ರ ವೃತ್ತಿ ಎನಿಸಿರುವ ಶಿಕ್ಷಕ ವೃತ್ತಿಯಲ್ಲಿರುವ ಶಿಕ್ಷಕರು ಇತರೆ ವಿಷಯಗಳತ್ತ ಗಮನ ಹರಿಸದೇ ಮಕ್ಕಳ ಶಿಕ್ಷಣ ಪ್ರಗತಿ ಬಗ್ಗೆ ತಮ್ಮ ಗಮನ ಕೇಂದ್ರಿಕರಿಸಬೇಕು. ಶಾಲೆಯಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ವಿಶ್ವಾಸಕ್ಕೆ ತೆಗೆದುಕೊಂಡು ಮಕ್ಕಳಿಗೆ ಮನವರಿಕೆ ಆಗುವಂತೆ ಪಾಠ ಮಾಡಿ ಉತ್ತಮ ಫಲಿತಾಂಶ ಪಡೆಯಲು ಪ್ರೋತ್ಸಾಹಿಸಬೇಕು.

ಶೂನ್ಯ ಹಾಗೂ ಕಡಿಮೆ ಫಲಿತಾಂಶ ಪಡೆದರೂ ಅದರ ಅಪಕೀರ್ತಿಗಾಗಲಿ, ಉತ್ತಮ ಫಲಿತಾಂಶ ಪಡೆಯುವ ಸಾಧನೆಯ ಕೀರ್ತಿಗೂ ಶಿಕ್ಷಕರೇ ಹೊಣೆಗಾರರು. ಹೀಗಾಗಿ ಈ ವಿಷಯವಾಗಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರು ಉತ್ತರದಾಯಿ ಆಗಿರಬೇಕು ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಪ್ರಿಯಾ ಜೋಶಿ, ಡಿಡಿಪಿಐ ಪ್ರಸನ್ನಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಸಿ.ಬಿ. ಕುಂಬಾರ, ಬಿಇಒ ಮುಜಾವರ, ಡಯಟ್ ಪ್ರಾಂಶುಪಾಲ ಸಾಯಿರಾಬಾನು ಖಾನ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಸಾಧನೆ ಮಾಡಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next