Advertisement

ಮಹಾಮಾರಿಯಿಂದ ರಕ್ಷಣೆಗೆ ಜಾಗೃತಿಯೇ ಮದ್ದು

09:17 PM May 09, 2021 | Shreeraj Acharya |

ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆಯ ಗಂಭೀರ ಪರಿಣಾಮಗಳಿಂದ ರಕ್ಷಿಸಿಕೊಳ್ಳಲು ನಮ್ಮ ಕುಟುಂಬದಿಂದಲೇ ಜಾಗೃತಿ ಪ್ರಾರಂಭಗೊಳ್ಳಬೇಕು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ತಿಳಿಸಿದ್ದಾರೆ.

Advertisement

ಕೊರೊನಾ ಸೋಂಕಿನಿಂದ ಗುಣಮುಖರಾದ ಅವರು ಶನಿವಾರ “ಉದಯವಾಣಿ’ಯೊಂದಿಗೆ ಮಾತನಾಡಿ, ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯರು ಸ್ವಲ್ಪ ದಿನಗಳ ಕಾಲ ದೂರ ದೂರ ಇರೋಣ, ಮಾಸ್ಕ್ ಹಾಕೋಣ, ಉಸಿರಾಟ ನಿಯಂತ್ರಿಸುವ ಶ್ವಾಸಕೋಶಕ್ಕೆ ಸಂಬಂ ಧಿಸಿದ ವ್ಯಾಯಾಮ ಮಾಡೋಣ, ಹೊಲಕ್ಕೆ ಅಥವಾ ಪರಿಸರದಲ್ಲಿ ಹೋಗಿ ದೈಹಿಕ ಶ್ರಮ ಪಡೋಣ ಎನ್ನುವ ಸಂಕಲ್ಪ ತೊಡಬೇಕು ಎಂದರು. ನಮ್ಮ ದೇಹಕ್ಕೆ ಆಕ್ಸಿಜನ್‌ ಸಿಗಬೇಕಾದರೆ ದೈಹಿಕ ಶ್ರಮ ಮಹತ್ವದ್ದಾಗಿದೆ. ನಾವು ದೇಹವನ್ನು ಎಷ್ಟು ದುಡಿಸುತ್ತೇವೆಯೋ ಅಷ್ಟು ಶಕ್ತಿ ನಮಗೆ ಬರುತ್ತದೆ. ಇದರಿಂದ ರೋಗ ನಮ್ಮಿಂದ ದೂರ ಇರುತ್ತದೆ. ಬೆಳಗ್ಗೆ, ಸಂಜೆ ಎರಡು ಗಂಟೆ ನಿಯಮಿತವಾಗಿ ಶ್ರಮದಾಯಕ ಕೆಲಸ ಮಾಡಿದರೆ ಶ್ವಾಸಕೋಶ ಬಲಗೊಳ್ಳುತ್ತವೆ. ಆಕ್ಸಿಜನ್‌ ವ್ಯವಸ್ಥೆ ಸರಿಹೋಗುತ್ತದೆ. ಉಸಿರಾಟ ಏರಿಳಿತಗಳಿಲ್ಲದೆ ನಿಯಮಿತವಾಗುತ್ತದೆ ಎಂದು ಹೇಳಿದರು.

ನಮ್ಮದು ಶೇ.80 ಕೃಷಿ ಅವಲಂಬಿತ ದೇಶ. ಶೇ.80 ಜನ ತಮ್ಮೂರಲ್ಲೇ ಇದ್ದು ಕೆಲಸ ಮಾಡಬೇಕು. ಅನವಶ್ಯಕ ನಗರ, ಪಟ್ಟಣ ವಲಸೆಗೆ ಕಡಿವಾಣ ಹಾಕಬೇಕು. ಸೋಂಕಿನ ಪಾಸಿಟಿವ್‌ ಬಂದರೂ ತೋರಿಸದೆ ಮುಚ್ಚಿಟ್ಟುಕೊಳ್ಳುವುದು ಆತ್ಮಹತ್ಯೆಗೆ ಸಮ. ಸೋಂಕಿತರು ಸ್ವತ್ಛಂದವಾಗಿ ತಿರುಗಾಡಿ ನೂರಾರು ಜನರಿಗೆ ಸೋಂಕು ತಗುಲುವವರೆಗೂ ಸುಮ್ಮನಿದ್ದು ಆಮೇಲೆ ಉಸಿರಾಟಕ್ಕೆ ತೊಂದರೆ ಆದಾಗ ಆಸ್ಪತ್ರೆಗೆ ಓಡುವುದು ಬೇಡ. ನಮ್ಮ ಮನೆಯಿಂದಲೇ ಜಾಗೃತಿ ಶುರುವಾದರೆ ಸರ್ಕಾರ, ಪೊಲೀಸರು, ವೈದ್ಯರು ಯಾರೂ ಬೇಕಾಗಿಲ್ಲ. ಇದನ್ನು ಜನತೆ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗಿನ ಪರಿಸ್ಥಿತಿಯಲ್ಲಿ ಅವಶ್ಯಕ ಸೇವೆ ಹೊರತುಪಡಿಸಿ ದೇಶದ ಒಟ್ಟಾರೆ ಸಂಚಾರ ವ್ಯವಸ್ಥೆಯನ್ನೇ ಬಂದ್‌ ಮಾಡಬೇಕು. ಸಾರಿಗೆ ಸಂಪರ್ಕ ಮೊದಲು ಬಂದ್‌ ಆಗಬೇಕು. ಅವಶ್ಯಕ ಸೇವೆ ಹೊತ್ತು ತರುವ ವಾಹನ ಹೊರತು ಪಡಿಸಿ ಮತ್ಯಾವುದೂ ರಸ್ತೆಗಿಳಿಯಬಾರದು. ಮೋಟಾರ್‌ ಬೈಕ್‌ ಬ್ಯಾನ್‌ ಮಾಡಬೇಕು. ನಡೆದುಕೊಂಡೇ ಎಲ್ಲ ಚಟುವಟಿಕೆ ನಿರ್ವಹಿಸುವ ಪದ್ಧತಿ ಬರಬೇಕು. ಈ ನಿಟ್ಟಿನಲ್ಲಿ ಮೇ 10ರಿಂದ ಸರ್ಕಾರ ಜಾರಿಗೊಳಿಸಲಿರುವ ಲಾಕ್‌ಡೌನ್‌ ಸ್ವಾಗತಾರ್ಹ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next