Advertisement

ಜಿಲ್ಲೆಯಲ್ಲಿ ಫಾಸ್ಟಾಗ್‌ ಸಂಗ್ರಹ ಶುರು

11:50 AM Nov 23, 2019 | Naveen |

„ಜಿ.ಎಸ್‌.ಕಮತರ
ವಿಜಯಪುರ:
ವಿಜಯಪುರ ನಗರದ ಹೊರ ವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಟೋಲ್‌ ಪ್ಲಾಜಾದಲ್ಲಿ ಈಗಾಗಲೇ ಫಾಸ್ಟಾಗ್‌ ಮೂಲ ಶುಲ್ಕ ಸಂಗ್ರಹ ಆರಂಭಗೊಂಡಿದೆ. ದೇಶಾದ್ಯಂತ ಡಿಸೆಂಬರ್‌ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಫಾಸ್ಟಾಗ್‌ ಕುರಿತು ಜಾಗೃತಿ ಕೂಡ ಆರಂಭಗೊಂಡಿವೆ.

Advertisement

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಶುಲ್ಕ ಭರಿಸಲು ವಿಜಯಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಹೊರ ವಲಯದಲ್ಲಿರುವ ಕೃಷಿ ಮಹಾವಿದ್ಯಾಲಯದ ಬಳಿ ಟೋಲ್‌ ಪ್ಲಾಜ್‌ ನಿರ್ಮಿಸಿದೆ. 2016 ಏಪ್ರಿಲ್‌ನಿಂದ ಟೋಲ್‌ ಸಂಗ್ರಹ ಆಗಂಭಗೊಂಡಿದ್ದು, ಪ್ರಥಮ ವರ್ಷ 10 ಮಾರ್ಗಗಳಲ್ಲಿ 2ಕ್ಕೆ ಮಾತ್ರ ಅಳವಡಿಸಿದ್ದ ಫಾಸ್ಟಾಗ್‌ ವ್ಯವಸ್ಥೆಯನ್ನು ಇದೀಗ ಎಲ್ಲ ಮಾರ್ಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡಿದೆ.

ಕಳೆದ ಜುಲೈ ತಿಂಗಳಲ್ಲಿ ಫಾಸ್ಟಾಗ್‌ ತಂತ್ರಜ್ಞಾನ ಅಳವಡಿಕೆ ಕುರಿತು ಕೇಂದ್ರ ಸಾರಿಗೆ ಮಂತ್ರಾಲಯ ಎಲ್ಲಾ ಹೆದ್ದಾರಿ ಸಂಚಾರಿ ಶುಲ್ಕ ಸಂಗ್ರಹ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಇದೀಗ ಕಳೆದ ಎರಡು ದಿನಗಳ ಹಿಂದೆ ಫಾಸ್ಟಾಗ್‌ ಕಡ್ಡಾಯ ಅಳವಡಿಕೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದ ವಿಜಯಪುರ ಟೋಲ್‌ನಲ್ಲಿ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಧ್ವನಿ ಮುದ್ರಿತ ಮಾಧ್ಯಮದ ಮೂಲಕ ಹಗಲು-ರಾತ್ರಿ ಎನ್ನದೇ ಧ್ವನಿವರ್ಧಕದಲ್ಲಿ ಫಾಸ್ಟಾಗ್‌ ಅಳವಡಿಸುವ ಕುರಿತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ.

ಮತ್ತೊಂದೆಡೆ ಜಿಲ್ಲೆಯಲ್ಲಿ ಕಳೆದ ಜುಲೈನಿಂದ ಹೊಸ ವಾಹನಗಳಿಗೆ ಫಾಸ್ಟಾಗ್‌ ಅಳವಡಿಸಿದ ನಂತರವೇ ನೋಂದಣಿ ಮಾಡಲಾಗುತ್ತಿದೆ. ಈವರೆಗೆ ಸುಮಾರು 7 ಸಾವಿರ ವಾಹನಗಳಿಗೆ ಫಾಸ್ಟಾಗ್‌ ತಂತ್ರಜ್ಞಾನ ಅಳವಡಿಸಲಾಗಿದೆ. ವಿಜಯಪುರ ನಗರದ ಟೋಲ್‌ ಪ್ಲಾಜಾದಲ್ಲಿ ನಿತ್ಯವೂ ಸರಾಸರಿ 2,000 ವಾಹನಗಳು ಓಡಾಡುತ್ತಿದ್ದು, ಇದರಲ್ಲಿ ಶೇ.20 ವಾಹನಗಳಿಗೆ ಫಾಸ್ಟಾಗ್‌ ಸೌಲಭ್ಯ ವ್ಯವಸ್ಥೆ ಅಳವಡಿಸಿಕೊಂಡು ಓಡಾಡುತ್ತಿವೆ. ಇದರಿಂದ ನಿತ್ಯ ಸಂಗ್ರಹದ ಒಟ್ಟು ಶುಲ್ಕದ ಮೊತ್ತದಲ್ಲಿ ಶೇ.30 ಶುಲ್ಕ ಫಾಸ್ಟಾಗ್‌ಮೂಲಕವೇ ಸಂಗ್ರಹವಾಗುತ್ತಿದೆ.

ಇನ್ನು ನಗರ ಪ್ರದೇಶದ 20 ಕಿ.ಮೀ. ವ್ಯಾಪ್ತಿಯ ಬಿಳಿಬೋರ್ಡ್‌ ವಾಹನಗಳಿಗೆ ಟೋಲ್‌ಪ್ಲಾಜಾಗಳು ಮಾಸಿಕ 265 ರೂ. ಮೊತ್ತದ ಪಾಸ್‌ ನೀಡುತ್ತಿದ್ದು, ಸುಮಾರು 300 ವಾಹನಗಳು ಅದರಲ್ಲೂ ಕಾರುಗಳಿಗೆ ಪಾಸ್‌ ನೀಡಿದ್ದು, ಫಾಸ್ಟಾಗ್‌ ಸೇವೆಗೆ ಸುಲಭವಾಗಿದೆ.

Advertisement

ಫಾಸ್ಟಾಗ್‌ ಸ್ಕ್ಯಾನ್ ಮಾಡುವ ಯಂತ್ರದಲ್ಲಿ ದೋಷ ಕಂಡು ಬಂದಲ್ಲಿ ಮಾನವ ಚಾಲಿತವಾಗಿ ಸ್ಕ್ಯಾನ್ ಮಾಡಲು ಕಾರ್ಯನಿರತ 2 ಹಾಗೂ ಕಾಯ್ದಿರಿಸಿದ 2 ಯಂತ್ರಗಳ ಸೇವೆಯೂ ಇದೆ. ಆದರೆ ವಿಜಯಪುರ ಟೋಲ್‌ ಪ್ಲಾಜಾದಲ್ಲಿ 10 ಮಾರ್ಗಗಳಲ್ಲೂ ಫಾಸ್ಟಾಗ್‌ ವ್ಯವಸ್ಥೆ ಇದ್ದು, ಈವರೆಗೆ ಯಾವುದೇ ತಾಂತ್ರಿಕ ದೋಷ ಕಂಡು ಬಂದಿಲ್ಲ. ಆದರೆ ಸರ್ಕಾರ ಪೂರ್ವ ತಯಾರಿ ಇಲ್ಲದೇ, ಫಾಸ್ಟಾಗ್‌ ತಂತ್ರಜ್ಞಾನದಲ್ಲಿ ನಕಾರಾತ್ಮಕ ಸಂಗತಿಗಳ ಕುರಿತು ಇರುವ ಅನುಮಾನಗಳಿಗೆ ಸಮಜಾಯಿಸಿ ನೀಡದೇ ಜಾರಿಗೆ ತರುತ್ತಿರುವ ಕುರಿತು ವಾಹನ ಮಾಲೀಕರು, ಚಾಲಕರು ಗೊಣಗುತ್ತಿದ್ದಾರೆ.

ಫಾಸ್ಟಾಗ್‌ ಕಳ್ಳತನವಾದಲ್ಲಿ ಅಥವಾ ಕಳೆದು ಹೋದಲ್ಲಿ ಮೊಬೈಲ್‌ ಸಿಮ್‌ ಕಳೆದ ಸಂದರ್ಭದಲ್ಲಿ ಸೇವೆ ಸ್ಥಗಿತಗೊಳಿಸುವ ಕುರಿತು ಇರುವ ವ್ಯವಸ್ಥೆ ಕುರಿತಾಗಲಿ, ಸದರಿ ಸೇವೆಗೆ ಕಾರುಗಳ ಮಾಲೀಕರು ಬ್ಯಾಂಕ್‌ ಖಾತೆ ಹಾಗೂ ಖಾಸಗಿ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಇದರ ಸುರಕ್ಷತೆ ಕುರಿತು ಸ್ಪಷ್ಟೀಕರಿಸಿಲ್ಲ.

ಸ್ಕ್ಯಾನ್ ತಾಂತ್ರಿಕ ದೋಷ, ಫಾಸ್ಟಾಗ್‌ಗೆ ಸಂಪರ್ಕ ಕಲ್ಪಿಸಿರುವ ಬ್ಯಾಂಕ್‌ ಖಾತೆಯಲ್ಲಿ ಶುಲ್ಕ ಭರಿಸುವಷ್ಟು ಹಣ ಇಲ್ಲದಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ (ಎನಿಟಿಸಿ) ಕುರಿತು ಸೇವೆ ಸಿಗದೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಕಡಿತವಾಗುವ ಅಪಾಯದಂಥ ಸಂಗತಿಗಳ ಕುರಿತು ಪರ್ಯಾಯ ವ್ಯವಸ್ಥೆ ಇರುವ ಕುರಿತು ಕೇಂದ್ರ ಸರ್ಕಾರ ಸ್ಪಷ್ಟೀಕರಿಸದೇ ಏಕಾಏಕಿ ಡಿಜಿಟಲೀಕರಣಕ್ಕಾಗಿ ಫಾಸ್ಟಾಗ್‌ ಸೇವೆ ಆರಂಭಿಸುತ್ತಿರುವ ಕುರಿತು ಸಾರ್ವಜನಿಕರಲ್ಲಿ ಬೇಸರವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next