Advertisement

ವಿಜಯನಗರ ನೂತನ ಜಿಲ್ಲೆ: ಪುತ್ತೂರಿಗೆ ಹೊಸ ನಿರೀಕ್ಷೆ

09:27 PM Nov 22, 2020 | mahesh |

ಪುತ್ತೂರು: ಬಳ್ಳಾರಿಯಿಂದ ವಿಭಜನೆಗೊಂಡು ವಿಜಯನಗರ ನೂತನ ಜಿಲ್ಲಾ ಕೇಂದ್ರವಾಗಿ ರೂಪುಗೊಂಡಿದೆ. ಹೀಗಾಗಿ ಗ್ರಾಮಾಂತರ ಜಿಲ್ಲಾ ಕೇಂದ್ರದ ಬೇಡಿಕೆ ಈಡೇರಿಕೆಗೆ ಕಾಯುತ್ತಿರುವ ಪುತ್ತೂರಿನ ನಿರೀಕ್ಷೆ ಈಡೇರಬೇಕು ಎಂಬ ಆಗ್ರಹಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮೂರು ವರ್ಷಗಳ ಹಿಂದೆ ಪುತ್ತೂರಿನಲ್ಲಿ ಚುನಾವಣ ಪ್ರಚಾರ ಸಂದರ್ಭದಲ್ಲಿ ತಾನು ಮುಖ್ಯಮಂತ್ರಿಯಾದರೆ ಪುತ್ತೂರನ್ನು ಜಿಲ್ಲೆಯನ್ನಾಗಿ ಘೋಷಿಸುವುದಾಗಿ ಹೇಳಿರುವುದು ಕೂಡ ಜಿಲ್ಲಾ ಕೇಂದ್ರದ ನಿರೀಕ್ಷೆಗೆ ಪೂರಕವೆನಿಸಿದೆ. ಅವರು ಮುಖ್ಯಮಂತ್ರಿಯಾಗಿ ವರ್ಷ ಕಳೆದಿದ್ದು, ಜಿಲ್ಲಾ ಕೇಂದ್ರ ರೂಪಿಸಬೇಕು ಎಂಬ ಆಗ್ರಹ ಮತ್ತಷ್ಟು ಕೇಳಿ ಬರುತ್ತಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧ
ಬ್ರಿಟಿಷ್‌ ಕಾಲದ ಸೌತ್‌ ಕೆನರಾ ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಕೇಂದ್ರವಾಗಿತ್ತು. ದಾಖಲೆಗಳ ಪ್ರಕಾರ ನೆರೆ ಭೀತಿಯ ಕಾರಣದಿಂದ 1927ರಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ವರ್ಗಾಯಿಸಲಾಗಿತ್ತು. ಅಂದರೆ ಪುತ್ತೂರು ತಾಲೂಕು ಕೇಂದ್ರವಾಗಿ 93 ವರ್ಷಗಳು ತುಂಬಿವೆ. ದ.ಕ. ಜಿಲ್ಲಾ ಕೇಂದ್ರ ಮಂಗಳೂರಿನಿಂದ 56 ಕಿ.ಮೀ. ದೂರದಲ್ಲಿರುವ ಪುತ್ತೂರು ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಕೃಷಿ, ಶಿಕ್ಷಣ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ.

ಕೇಂದ್ರ ಸ್ಥಾನ
ಕೇರಳದ ಗಡಿ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲ ಗಡಿ ಭಾಗಕ್ಕೆ ಅಂಟಿಕೊಂಡಿರುವ ಪುತ್ತೂರು ತಾಲೂಕು ಮಾಣಿ- ಮೈಸೂರು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತಿದೆ. ಪ್ರಗತಿ ಹಾಗೂ ಸಂಪರ್ಕದ ದೃಷ್ಟಿಯಲ್ಲಿ ಮಂಗಳೂರು ಅನಂತರದ ಸ್ಥಾನದಲ್ಲಿರುವ ಪುತ್ತೂರು ಗ್ರಾಮಾಂತರ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಹೈಟೆಕ್‌ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ವಿಭಾಗೀಯ ಕೇಂದ್ರ, ಮಹಿಳಾ ಠಾಣೆ, ಮಹಿಳಾ ಕಾಲೇಜು, ಮಿನಿ ವಿಧಾನಸೌಧ, ನಗರಸಭೆ, ನ್ಯಾಯಾಲಯ ಕಟ್ಟಡ, ಸರಕಾರಿ ಮೆಡಿಕಲ್‌ ಕಾಲೇಜಿಗೆ 40 ಎಕರೆ ಸ್ಥಳ ಮೀಸಲು, ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪನೆಗೆ ಪ್ರಯತ್ನ ಇತ್ಯಾದಿ ಜಿಲ್ಲಾ ಕೇಂದ್ರದ ಬೇಡಿಕೆಗೆ ಪೂರಕ ಎಂದೇ ಪರಿಭಾವಿಸಲಾಗಿದೆ.

ರಾಮನಗರಕ್ಕಿಂತ ಹಿರಿದು
ಈ ಹಿಂದೆ ರಚಿಸಲಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಿಂತ ಅಧಿಕ ವಿಸ್ತೀರ್ಣ, ಜನಸಂಖ್ಯೆಯನ್ನು ಪ್ರಸ್ತಾವಿತ ಪುತ್ತೂರು ಜಿಲ್ಲಾ ವ್ಯಾಪ್ತಿ ಹೊಂದಿದೆ ಎನ್ನುವುದು ಜಿಲ್ಲಾ ಕೇಂದ್ರದ ಬೇಡಿಕೆಗೆ ಇರುವ ಮುಖ್ಯ ಸಂಗತಿ. ರಾಮನಗರ ಜಿಲ್ಲೆಯ ಒಟ್ಟು ವಿಸ್ತೀರ್ಣ 3,575.58 ಚದರ ಕಿ.ಮೀ., ಜನಸಂಖ್ಯೆ 10.5 ಲಕ್ಷ ಇದೆ. ಚಿಕ್ಕಬಳ್ಳಾಪುರ ಜಿಲ್ಲೆ 10 ಲಕ್ಷ ಜನಸಂಖ್ಯೆ ಮತ್ತು 4,100 ಚದರ ಕಿ.ಮೀಟರ್‌ ವಿಸ್ತೀರ್ಣ ಹೊಂದಿದೆ. 2011ರ ಜನಗಣತಿ ಪ್ರಕಾರ ಪುತ್ತೂರು ಜಿಲ್ಲಾ ವ್ಯಾಪ್ತಿಗೆ ಸೇರಬಹುದಾದ ಐದು ತಾಲೂಕುಗಳ ಒಟ್ಟು ಜನಸಂಖ್ಯೆ 10.15 ಲಕ್ಷ ಇದೆ. ಈ ಅಂಕಿ-ಅಂಶವನ್ನು ಪರಿಗಣಿಸಿದರೆ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಸ್ತೀರ್ಣ ಮತ್ತು ಜನಸಂಖ್ಯೆಗಿಂತ ಪ್ರಸ್ತಾವಿತ ಪುತ್ತೂರು ಜಿಲ್ಲೆ ದೊಡ್ಡದಿದೆ. ಪುತ್ತೂರು ತಾಲೂಕನ್ನು ಆವರಿಸಿರುವ ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳವನ್ನು ಸೇರಿಸಿ ಪುತ್ತೂರನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸಬಹುದು.

ಎಸ್‌ಪಿ ಕಚೇರಿ ಸ್ಥಳಾಂತರ ಚುರುಕು
ಮಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಗೆ ಒಳಪಟ್ಟ ಎಸ್‌ಪಿ ಕಚೇರಿ ಯನ್ನು ಪುತ್ತೂರಿಗೆ ಸ್ಥಳಾಂತ ರಿಸಬೇಕೆಂಬ ಕೂಗು ಕೇಳಿ ಬಂದಿತ್ತು. ವಿ.ಎಸ್‌.ಆಚಾರ್ಯ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಈ ಬಗ್ಗೆ ಪ್ರಯತ್ನ ನಡೆದಿತ್ತು. ಕಮಿಷ ನರೇಟ್‌ ವ್ಯಾಪ್ತಿ ಇರುವುದು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಡಬ, ಸುಳ್ಯದಲ್ಲಿ. ಹಾಗಾಗಿ ಪುತ್ತೂರಿಗೆ ವರ್ಗಾಯಿ ಸಬೇಕು ಎನ್ನುವ ಬೇಡಿಕೆ ಇದ್ದು, ಶಾಸಕ ಸಂಜೀವ ಮಠಂದೂರು ಅವರ ಪ್ರಯತ್ನಕ್ಕೆ ಪೂರಕ ಸ್ಪಂದನೆ ವ್ಯಕ್ತವಾಗಿದೆ.

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next