Advertisement

ವಿದ್ವತ್‌ ವಕೀಲರಿಗೆ ಜೀವ ಬೆದರಿಕೆ!

12:56 PM Feb 23, 2018 | Team Udayavani |

ಬೆಂಗಳೂರು: ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಮೊಹಮ್ಮದ್‌ ವಿರುದ್ಧ ವಕಾಲತ್ತು ವಹಿಸಿದ್ದಕ್ಕೆ ಆತನ ಬೆಂಬಲಿಗರಿಂದ ಜೀವ ಬೆದರಿಕೆ ಇದೆ. ಹೀಗಾಗಿ ಸೂಕ್ತ ಭದ್ರತೆ ನೀಡುವಂತೆ ಪ್ರಕರಣದ ವಿಶೇಷ ಅಭಿಯೋಜಕ ಶ್ಯಾಮ್‌ ಸುಂದರ್‌ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

Advertisement

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶ್ಯಾಮ್‌ ಸುಂದರ್‌, ನೇರವಾಗಿ ಯಾರೂ ನನಗೆ ಬೆದರಿಕೆ ಹಾಕಿಲ್ಲ. ಬಲ್ಲ ಮೂಲಗಳಿಂದ ಮತ್ತು ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಹಿನ್ನೆಲೆಯಲ್ಲಿ ದೂರು ನೀಡಿದ್ದೇನೆ. ದೆಹಲಿಯ ನಿರ್ಭಯಾ ಪ್ರಕರಣದಂತೆ ಈ ಪ್ರಕರಣ ಕೂಡ ಗಂಭೀರವಾಗಿದ್ದು, ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದೆ.

ಪ್ರಕರಣದಲ್ಲಿ ನಾನು ವಕೀಲನಾಗಿರುವ ಕಾರಣ ಬುಧವಾರ ಕೋರ್ಟ್‌ ಕಲಾಪ ಮುಗಿಸಿದ ಬಳಿಕ ನನ್ನನ್ನು ಗುರಾಯಿಸಿ ನೋಡುತ್ತಿದ್ದರು. ಈ ವಿಚಾರ ತಿಳಿದು ಸ್ಥಳದಲ್ಲಿದ್ದ ಪೊಲೀಸರು ನನಗೆ ರಕ್ಷಣೆ ನೀಡಿದರು. ಇದೀಗ ನಗರ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇನೆ. ಪ್ರಕರಣ ಮುಗಿಯುವವರಿಗೆ ಭದ್ರತೆ  ನೀಡಲಾಗುತ್ತದೆ ಎಂದು ಆಯುಕ್ತರು ಭರವಸೆ ನೀಡಿದ್ದಾರೆ ಎಂದರು.

ಶಿವಣ್ಣ, ರಾಘಣ್ಣ, ಜನಾರ್ದನರೆಡ್ಡಿ ಭೇಟಿ: ಹಲ್ಲೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‌ನನ್ನು ನಟ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಮಗ ಗುರು, ಸಂಸದ ಶ್ರೀರಾಮುಲು, ಮಾಜಿ ಮಂತ್ರಿ ಜನಾರ್ದನರೆಡ್ಡಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

ಈ ವೇಳೆ ಮಾತನಾಡಿದ ಶಿವರಾಜ್‌ಕುಮಾರ್‌, ಇಂಥ ಸ್ಥಿತಿ ಯಾರಿಗೂ ಬರಬಾರದು. ಮೂಗಿಗೆ, ಕಣ್ಣಿಗೆ ಪಕ್ಕೆಲುಬುಗಳಿಗೆ ಪೆಟ್ಟು ಬಿದ್ದಿದ್ದು, ತೀವ್ರ ಜ್ವರದಿಂದ ವಿದ್ವತ್‌ ಬಳಲುತ್ತಿದ್ದಾನೆ. ತಪ್ಪಿತಸ್ಥರು ಯಾರೇ ಅಗಿರಲಿ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Advertisement

ಮಾಜಿ ಮಂತ್ರಿ ಜನಾರ್ದನರೆಡ್ಡಿ ಮಾತನಾಡಿ, ವಿದ್ವತ್‌ ಕಣ್ಣಿಗೆ ಇನ್‌ಫೆಕ್ಷನ್‌ ಆಗಿರುವುದರಿಂದ ಹೊರಗಡೆಯಿಂದಲೇ ನೋಡಿ ಬಂದೆವು. ಶಾಸಕ ಹ್ಯಾರಿಸ್‌ ಮಗನ ದಿನಚರಿ ಆರಂಭವಾಗುವುದೇ ತಡ ರಾತ್ರಿಯ ನಂತರ ಅವನೊಬ್ಬ ಮಾದಕ ವ್ಯಸನಿಯಾಗಿರಬಹುದು ಎಂದು ಆರೋಪಿಸಿದರು.

ಹ್ಯಾರಿಸ್‌ ದಂಪತಿ ಭೇಟಿ: ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಹಾಗೂ ಪತ್ನಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್‌ನ ಆರೋಗ್ಯ ವಿಚಾರಿಸಿದರು. ವಿದ್ವತ್‌ ಸ್ಥಿತಿ ಕಂಡು ಭಾವುಕರಾದ ಹ್ಯಾರಿಸ್‌ ಪತ್ನಿ, ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದರು.

ವಿದೇಶದಲ್ಲಿ ಚಿಕಿತ್ಸೆಗೆ ಚಿಂತನೆ: ಹಲ್ಲೆಗೊಳಗಾದ ದಿನದಿಂದ ಆರೋಗ್ಯದಲ್ಲಿ ಕೊಂಚ ಮಟ್ಟದ ಚೇತರಿಕೆ ಕಂಡುಕೊಳ್ಳುತ್ತಿರುವ ವಿದ್ವತ್‌ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ. ಸದ್ಯ ಮುಖದಲ್ಲಿ ಊತ ಕಡಿಮೆಯಾಗಿದ್ದು, 101 ಡಿಗ್ರಿ ಜ್ವರ ಇದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪೂರ್‌ಗೆ ಕರೆದೊಯ್ಯುವ ಬಗ್ಗೆ ಕುಟುಂಬದವರು ಚಿಂತನೆ ನಡೆಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜೈಲಿನಲ್ಲೂ ಮೊಹಮ್ಮದ್‌ ಆಟಾಟೋಪ?: ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿರುವ ದುಷ್ಕರ್ಮಿ ಮೊಹಮ್ಮದ್‌, ಜೈಲಿನಲ್ಲೇ ತನ್ನ ಸಹಚರರ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೆ, ಇದನ್ನು ಜೈಲಿನ ಅಧಿಕಾರಿಗಳು ನಿರಾಕರಿಸಿದ್ದು, ಸುರಕ್ಷತೆ ದೃಷ್ಟಿಯಿಂದ ಏಳು ಮಂದಿಯನ್ನು ಬೇರೆ ಬೇರೆ ಸೆಲ್‌ಗ‌ಳಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಬುಧವಾರ ರಾತ್ರಿ ಊಟ ಮುಗಿಸಿದ ಬಳಿಕ ಮೊಹಮ್ಮದ್‌ ಮತ್ತು ಮತ್ತೂಬ್ಬ ಆರೋಪಿ ಅಬ್ರಾಸ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಅಬ್ರಾಸ್‌, ನೀನು ಮಾಡಿದ ಕೃತ್ಯಕ್ಕೆ ನಾವೆಲ್ಲ ಜೈಲು ಸೇರಬೇಕಾಯಿತು ಎಂದು ಮೊಹಮ್ಮದ್‌ ಜತೆ ಜಗಳ ತೆಗೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೊಹಮ್ಮದ್‌ ಅಬ್ರಾಸ್‌ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಟಿಕೆಟ್‌ ನಿರಾಕರಣೆ ಪ್ರಸ್ತಾಪವಿಲ್ಲ: ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಮಹಮ್ಮದ್‌ ನಲಪಾಡ್‌ ಪ್ರಕರಣದ ನಂತರ ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ಗೆ ಟಿಕೆಟ್‌ ನೀಡಬಾರದು ಎಂಬ ಬೇಡಿಕೆ ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಹ್ಯಾರಿಸ್‌ಗೆ ಟಿಕೆಟ್‌ ನೀಡುವ ಕುರಿತು ವೀಕ್ಷಕರ ತಂಡ ಅವರ ಕ್ಷೇತ್ರಕ್ಕೆ ತೆರಳಿ ಅಭಿಪ್ರಾಯ ಸಂಗ್ರಹಿಸಲಿದೆ. ವೀಕ್ಷಕರ ತಂಡ ನೀಡುವ ವರದಿ ಆಧರಿಸಿ ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ. ವೀಕ್ಷಕರ ತಂಡ ಟಿಕೆಟ್‌ ನೀಡಬಾರದು ಎಂದು ವರದಿ ನೀಡಿದರೆ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಫೋಟೋಗಳು ಫೇಕ್‌: ಒಂದೆಡೆ ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ಯುವತಿಯರ ಜತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಕೆಲವರು ಉದ್ಯಮಿ ಪುತ್ರ ವಿದ್ವತ್‌ ಕೆಲ ಹುಡುಗಿಯರ ಜತೆ ಕುಳಿತುಕೊಂಡಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ವಿದ್ವತ್‌ ಆ ರೀತಿಯ ಯುವಕ ಅಲ್ಲ. ಮೊಹಮ್ಮದ್‌ ಬೆಂಬಲಿಗರೇ ಇದನ್ನು ಕ್ರಿಯೇಟ್‌ ಮಾಡಿ ಹರಿ ಬಿಡುತ್ತಿದ್ದಾರೆ ಎಂದು ವಿದ್ವತ್‌ ಸ್ನೇಹಿತರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next