Advertisement

ವಿಧಾನಸೌಧ: 250ಕ್ಕೂ ಹೆಚ್ಚು ನಕಲಿ ಪಾಸ್‌ಗಳು ಪತ್ತೆ

10:04 AM Jul 15, 2023 | Team Udayavani |

ಬೆಂಗಳೂರು: ಇತ್ತೀಚೆಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸಭೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಶಾಸಕರ ಕುರ್ಚಿಯಲ್ಲಿ ಕುಳಿತ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿಧಾನಸೌಧ ಪ್ರವೇಶ ದ್ವಾರದಲ್ಲಿ ಪೊಲೀಸರು ತಪಾಸಣೆ ಚುರುಕುಗೊಳಿಸಿದ್ದು, ಕಳೆದ ನಾಲ್ಕೈದು ದಿನಗಳಲ್ಲಿ 250ಕ್ಕೂ ಹೆಚ್ಚು ನಕಲಿ ಪಾಸ್‌ ಗಳು ಪತ್ತೆಯಾಗಿವೆ. ಅಲ್ಲದೆ, ಶಾಸಕರು, ಸಚಿವರ ಹೆಸರಿನ ಪಾಸ್‌ಗಳನ್ನು ಕಲರ್‌ ಜೆರಾಕ್ಸ್‌ ಮಾಡಿಸಿ ಭದ್ರತಾ ಸಿಬ್ಬಂದಿಗೆ ಯಾಮಾರಿಸುತ್ತಿದ್ದ ಸಂಚು ಬಹಿರಂಗಗೊಂಡಿದೆ.

Advertisement

ವಿಧಾನಸೌಧ ಪ್ರವೇಶಕ್ಕೆ ಶಾಸಕರು, ಸಚಿವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಅದೇ ರೀತಿ ಅವರ ಸಿಬ್ಬಂದಿ ಮತ್ತು ವಾಹನಗಳಿಗೂ ಅಧಿಕೃತ ಪಾಸ್‌ ನೀಡಲಾಗುತ್ತದೆ. ಅದನ್ನು ದುರ್ಬಳಕೆ ಮಾಡಿಕೊಳ್ಳುವ ವಂಚಕರು, ಈ ಪಾಸ್‌ಗಳನ್ನು ದುರ್ಬಳಕೆ ಮಾಡಿಕೊಂಡು ಕಲರ್‌ ಜೆರಾಕ್ಸ್‌ ಮಾಡಿ ಒಳ ಪ್ರವೇಶಿಸುತ್ತಿರುವುದು ಪತ್ತೆಯಾಗಿದೆ. ಹೀಗೆ ಕಳೆದ 4-5 ದಿನಗಳಲ್ಲಿ ಸುಮಾರು 300 ಮಂದಿ ಈ ರೀತಿ ನಕಲಿ ಪಾಸ್‌ಗಳನ್ನು ಬಳಸಿಕೊಂಡು ವಿಧಾನಸೌಧ ಪ್ರವೇಶಿಸಿರುವುದು ಪತ್ತೆಯಾಗಿದೆ.

ನಕಲಿ ಪಾಸ್‌ಗಳು ಮಾತ್ರವಲ್ಲ, ಅವಧಿ ಮೀರಿದ ಪಾಸ್‌ಗಳು ತಪಾಸಣೆ ವೇಳೆ ಸಿಕ್ಕಿವೆ. ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಜನಪ್ರತಿನಿಧಿಗಳು ಮತ್ತು ಅವರ ಸಿಬ್ಬಂದಿಗೂ ಮಾಹಿತಿ ನೀಡಿ ನಕಲಿ ಪಾಸ್‌ಗಳ ಕಡಿವಾಣಕ್ಕೆ ಸಹಾಯ ನೀಡುವಂತೆ ಕೋರಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಜುಲೈ 10ರಂದು ಬಜೆಟ್‌ ಮಂಡನೆ ವೇಳೆ ತಿಪ್ಪೇರುದ್ರಸ್ವಾಮಿ ಎಂಬಾತ ದೇವದುರ್ಗ ಶಾಸಕಿ ಕೆರೆಮ್ಮ ಸ್ಥಾನದಲ್ಲಿ ಕೆಲ ಹೊತ್ತು ಕುಳಿತುಕೊಂಡಿರುವುದು ಪತ್ತೆಯಾಗಿತ್ತು. ಹೀಗಾಗಿ ವಿಧಾನಸೌಧ ಭದ್ರತಾ ಉಸ್ತುವಾರಿ ವಹಿಸಿಕೊಂಡಿದ್ದ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಡಾ ಎಸ್‌ .ಡಿ.ಶರಣಪ್ಪ, ಎಲ್ಲ ಪ್ರವೇಶ ದ್ವಾರದಲ್ಲಿ ತಪಾಸಣೆ ಬಿಗಿಗೊಳಿಸಿದರು.

ಮತ್ತೂಂದೆಡೆ ಅದೇ ದಿನ ಜು. 10ರಂದು ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಉದ್ಯೋಗಿ ಬ್ಯಾಗಿನಲ್ಲಿ ಚಾಕು ಇರುವುದು ಪತ್ತೆಯಾಗಿದ್ದು, ಪೊಲೀಸ್‌ ವಿಚಾರಣೆ ವೇಳೆ ಕ್ರಿಮಿನಲ್‌ ಉದ್ದೇಶವಿಲ್ಲದಿರುವುದು ಕಂಡು ಬಂದಿದ್ದರಿಂದ ಮುಚ್ಚಳಿಕೆ ಪತ್ರ ಬರೆಸಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ಹೀಗಾಗಿ ವಿಧಾನಸೌಧಕ್ಕೆ ಪ್ರವೇಶಿಸುವ ಎಲ್ಲಾ ಗೇಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತಪಾಸಣೆ ಬಿಗಿಗೊಳಿಸುವಂತೆ ಸೂಚಿಸಲಾಗಿದೆ.

Advertisement

ಅಲ್ಲದೆ, ಬ್ಯಾಗ್‌ ಸೇರಿ ಇತರೆ ವಸ್ತುಗಳನ್ನು ಇಟ್ಟುಕೊಂಡು ಅನುಮಾನಸ್ಪದವಾಗಿ ಬರುವ ಎಲ್ಲರನ್ನು ಲೋಹಪರಿಶೋಧಕ ಯಂತ್ರಗಳ ಪರೀಕ್ಷೆ ಒಳಪಡಿಸಬೇಕು. ಅಲ್ಲದೆ, ಬ್ಯಾಗ್‌ಗಳನ್ನು ಕಡ್ಡಾಯವಾಗಿ ಸ್ಕಾನಿಂಗ್‌ಗೆ ಒಳಪಡಿಸಬೇಕು. ಅಧಿಕೃತ ಗುರುತಿನ ಚೀಟಿ ಅಥವಾ ಪಾಸ್‌ ಇದ್ದರೆ ಮಾತ್ರ ಒಳಪ್ರವೇಶಿಸಲು ಬಿಡಬೇಕು ಎಂದು ಮಾರ್ಷಲ್‌ಗ‌ಳಿಗೂ ಖಡಕ್‌ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಡಾ ಎಸ್‌.ಡಿ.ಶರಣಪ್ಪ, ಮುಂದಿನ ದಿನಗಳಲ್ಲಿ ನಕಲಿ ಪಾಸ್‌ ಬಳಸಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next